ಹುಬ್ಬಳ್ಳಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಸಂಸದ ಬಸವರಾಜ ಬೊಮ್ಮಾಯಿಯವರ ಪುತ್ರ ಭರತ ಬೊಮ್ಮಾಯಿಗೆ ಟಿಕೆಟ್ ನೀಡಬೇಕೆಂಬುದು ಅಲ್ಲಿನ ಜನತೆ ಅನಿಸಿಕೆಯಾಗಿದ್ದು, ಪಕ್ಷದ ಹೈಕಮಂಡ್ ತೀರ್ಮಾನವೇ ಅಂತಿಮ. ಚನ್ನಪಟ್ಟಣಕ್ಕೆ ಸಿ.ಪಿ.ಯೋಗೀಶ್ವರ ಅವರು ಎನ್ ಡಿಎ ಅಭ್ಯರ್ಥಿಯಾದರೆ ಗೆಲುವು ಸಾಧ್ಯ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ( Arvind Bellad) ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಅವರ ಕುಟುಂಬದವರು ಸ್ಪರ್ಧೆ ಮಾಡಿದರೆ ಸೂಕ್ತ ಎಂಬುದು ಅಲ್ಲಿನ ಮತದಾರರ ಅನಿಸಿಕೆಯಾಗಿದೆ. ಬಸವರಾಜ ಬೊಮ್ಮಯಿ ಅವರಿಗೆ ಪುತ್ರನಿಗೆ ಟಿಕೆಟ್ ದೊರಕಿಸಲು ಅಸಕ್ತಿ ಇಲ್ಲ ಆದರೆ ಜನರ ಅಭಿಪ್ರಾಯವಾಗಿದೆ ಎಂದರು.
ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೀಶ್ವರ್ ಅವರು ಎನ್ ಡಿಎ ಅಭ್ಯರ್ಥಿಯಾದರೆ ಗೆಲುವು ಸಾಧ್ಯವಾಗಲಿದೆ ಎಂಬ ಅನಿಸಿಕೆ ನಮ್ಮದಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಒಪ್ಪಬೇಕಿದೆ. ಯೋಗೀಶ್ವರ ಅಭ್ಯರ್ಥಿಯಾಗದಿದ್ದರೆ ಅಲ್ಲಿನ ಗೆಲುವು ಸಮಸ್ಯೆಯಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಕರ್ನಾಟವನ್ನು ಬಿಹಾರ, ಪಂಜಾಬ್ ಮಾಡಲು ಹೊರಟಿದೆ. ಮತ ಬ್ಯಾಂಕ್ ರಾಜಕಾರಕ್ಕೆ ರಾಜ್ಯದ ಹಿತ ಬಲಿಕೊಡುತ್ತಿದೆ ಎಂದ ಬೆಲ್ಲದ್, ಹಳೇ ಹುಬ್ಬಳ್ಳಿ ಪ್ರಕರಣ ಹಿಂಪಡೆಯುವ ನಿರ್ಧಾರ ಖಂಡಿಸಿ ಅ.25 ರಂದು ಪಕ್ಷದಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಮಂಡಲ ಉಭಯ ಸದನಗಳ ವಿಪಕ್ಷ ನಾಯಕರಾದ ಆರ್.ಅಶೋಕ, ಚಲವಾದಿ ನಾರಾಯಣಸ್ವಾಮಿ , ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇನ್ನಿತರ ನಾಯಕರು ಪಾಲ್ಗೊಳ್ಳಲಿದ್ದು, ಸುಮಾರು 20-25 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಮುಡಾ, ವಾಲ್ಮೀಕಿ ನಿಗಮ ಹಗರಣದ ಹೋರಾಟ ಮುಂದುವರೆಯಲಿದೆ ಎಂದರು.
ತಪ್ಪಾಗಿದ್ದರೆ ಕ್ರಮ
ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ದೊರಕಿಸಲು ಹಣ ನೀಡಿದ ಬಗ್ಗೆ ಕೇಂದ್ರ ಸಚಿವ ಜೋಶಿ ಸಹೋದರನ ವಿರುದ್ದ ದೂರು ದಾಖಲು ಆಗಿದೆ. ಪಕ್ಷಕ್ಕೆ ಇದು ಸಂಬಂಧವಿಲ್ಲ. ಜೋಶಿಯವರಿಗೂ ಅವರ ಸಹೋದರನಿಗೆ ರಾಜಕೀಯವಾಗಿ ಯಾವುದೇ ಸಂಪರ್ಕ ಇಲ್ಲವಾಗಿದೆ. ತಪ್ಪಾಗಿದ್ದರೆ, ಜೋಶಿ ಅವರ ಸಹೋದರನ ವಿರುದ್ದ ಕ್ರಮ ಕೈಗೊಳ್ಳಲಿ ಎಂದರು.