Advertisement

ಕೇಂದ್ರ ಸಚಿವರಿಗೆ ಸಂತ್ರಸ್ತರ ಮುತ್ತಿಗೆ

02:18 PM Apr 17, 2022 | Team Udayavani |

ದಾವಣಗೆರೆ: ಆಶ್ರಯ ಮನೆ ನಿರ್ಮಿಸಲು ಮೀಸಲಿಟ್ಟಿದ್ದ ಭೂಮಿಯನ್ನು ಬೇರೆ ಉದ್ದೇಶಕ್ಕೆ ನೀಡಿರುವುದನ್ನು ಖಂಡಿಸಿ ಸಂತ್ರಸ್ತರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಶನಿವಾರ ನಡೆಯಿತು.

Advertisement

ವಿಕಲಚೇತನರ ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಪುನರ್ವಸತಿ ಸಂಯುಕ್ತ ಪ್ರಾದೇಶಿಕ ಕೇಂದ್ರದ ನೂತನ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ ವೇಳೆ ಈ ಘಟನೆ ನಡೆಯಿತು. ಹಳೆಯ ಚಿಕ್ಕನಹಳ್ಳಿಯ ಹರಳಯ್ಯನಗರದ ಸಂತ್ರಸ್ತರು ಸಚಿವರಿಗೆ ಮುತ್ತಿಗೆ ಹಾಕಿ, ತಮಗೆ ಜಿಲ್ಲಾಡಳಿತ ಅನ್ಯಾಯ ಮಾಡಿದ್ದು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಹರಳಯ್ಯನಗರದ ಸಂತ್ರಸ್ತರಿಗೆ ಆಶ್ರಯ ಮನೆ ನಿರ್ಮಾಣಕ್ಕಾಗಿ 2016ರಲ್ಲಿ ಗುರುತಿಸಿ ಕಾಯ್ದಿರಿಸಿದ್ದ ನಾಲ್ಕು ಎಕರೆ ಭೂಮಿಯನ್ನು ಜಿಲ್ಲಾಡಳಿತ ವಿಕಲಚೇತನರ ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಪುನರ್ವಸತಿ ಸಂಯುಕ್ತ ಪ್ರಾದೇಶಿಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನೀಡಿದೆ. ವಿಕಲಚೇತನರಿಗಾಗಿ ಭೂಮಿ ಕೊಟ್ಟಿದ್ದಕ್ಕೆ ಅಭ್ಯಂತರವಿಲ್ಲ. ಆದರೆ, ನಮಗೆ ನಗರ ಸಮೀಪ ಪರ್ಯಾಯ ಭೂಮಿ ಗುರುತಿಸಿ ಕೊಟ್ಟಿಯೇ ಕಟ್ಟಡ ಕಟ್ಟಲು ಆರಂಭ ಮಾಡಲಿ. ಅಲ್ಲಿಯವರೆಗೆ ಕಟ್ಟಡ ಕಟ್ಟಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆಶ್ರಯ ಮನೆಗಾಗಿ ಕಾಯ್ದಿರಿಸಿರುವ ಭೂಮಿ ಬೇರೆ ಉದ್ದೇಶಕ್ಕೆ ನೀಡದಂತೆ ಹಲವಾರು ಬಾರಿ ಮನವಿ ಕೊಟ್ಟರೂ ಜಿಲ್ಲಾಧಿಕಾರಿಯವರು ಮನವಿಗೆ ಸ್ಪಂದಿಸಿಲ್ಲ. ಸಂತ್ರಸ್ತರ ಮೇಲೆ ಮಾನವೀಯತೆ ತೋರದೆ ಅನ್ಯಾಯ ಮಾಡಿದ್ದಾರೆ. ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಗೆ ತರಾಟೆ

ಆಗ ಸಚಿವರು, ಸ್ಥಳದಲ್ಲೇ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ತರಾಟೆ ತೆಗೆದು ಕೂಡಲೇ ಪರ್ಯಾಯ ಭೂಮಿ ಗುರುತಿಸಲು ಸೂಚಿಸಿದರು. ಇದರಿಂದ ಜಿಲ್ಲಾಧಿಕಾರಿ ಅವರು ತೀವ್ರ ಮುಜುಗರ ಅನುಭವಿಸುವಂತಾಯಿತು. ಸಂತ್ರಸ್ತರು ಜಿಲ್ಲಾಧಿಕಾರಿಯವರ ವಿರುದ್ಧ ಆರೋಪ ಮಾಡಿದ್ದು, ಸಚಿವರು ಜಿಲ್ಲಾಧಿಕಾರಿಯವರನ್ನು ತರಾಟೆ ತೆಗೆದುಕೊಂಡಿದ್ದನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ ಮೂಕಪ್ರೇಕ್ಷಕರಂತೆ ಗಮನಿಸಿದರು.

Advertisement

ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಬಿ. ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ಬಾಬು ಅಳಗವಾಡಿ, ಜಯಪ್ಪ, ಕೆಟಿಜೆ ನಗರ ರಾಜಣ್ಣ ಇನ್ನಿತರರು ಸಂತ್ರಸ್ತರ ಪ್ರತಿಭಟನೆಗೆ ಬೆಂಬಲ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next