Advertisement

ವಿ.ಕೃ.ಗೋಕಾಕ್‌ ಪ್ರಶಸ್ತಿ ಪುರಸ್ಕೃತ ಎಂ. ಬಸವಣ್ಣ  

09:43 PM Sep 07, 2019 | Sriram |

ಭಾರತದ ಮೊದಲ ಸೈಕಾಲಜಿ ಪ್ರೊಫೆಸರ್‌ ಎಂದೇ ಪ್ರಸಿದ್ಧರಾದ ಮೈಸೂರು ಮಹಾರಾಜ ಕಾಲೇಜಿನ ಗೋಪಾಲಸ್ವಾಮಿ ಅಯ್ಯರ್‌ ಅವರ ಶಿಷ್ಯ, ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಸೈಕಾಲಜಿಯನ್ನು ಪರಿಚಯಿಸಿದ ಎಂ. ಬಸವಣ್ಣ ಅವರಿಗೆ ವಿನಾಯಕ ವಾಞಯ ಟ್ರಸ್ಟ್‌ ನೀಡುವ ಈ ವರ್ಷದ ಪ್ರತಿಷ್ಠಿತ ವಿ.ಕೃ.ಗೋಕಾಕ್‌ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.

Advertisement

ಬಸವಣ್ಣ ಹುಟ್ಟಿದ್ದು 1933ರಲ್ಲಿ, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಕ್ಲಿನಿಕಲ್‌ ಮನಃಶಾಸ್ತ್ರದಲ್ಲಿ ನಿಮ್ಹಾನ್ಸ್‌ನಿಂದ ಡಿಪ್ಲೊಮೊವನ್ನು ಗಳಿಸಿದರು. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಗಳಿಸಿದರು. ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿ 1993ರಲ್ಲಿ ನಿವೃ ತ್ತರಾದರು.

ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿ ರುವ ಅವರಿಗೆ ಈಗ 86ರ ಹರೆಯ.

ಕನ್ನಡದಲ್ಲಿ ಅವರ ಪ್ರಕಟಿತ ಕೃತಿಗಳು : ಈಡಿಪಸ್‌ ಕಾಂಪ್ಲೆಕ್ಸ್‌ (ಮನೋವೈಜ್ಞಾನಿಕ ಲೇಖನಗಳು-2007), ಕಾರ್ಲ್ಯೂಂಗ್‌ (2011), ಕನಸಿನ ಕಥೆ (2012), ಅರ್ಧನಾರೀಶ್ವರ (2013), ಲೂಸಿಫ‌ರ್‌ ಎಫೆಕ್ಟ್ (2015), ಸೈಕಲಾಜಿಕಲ್‌ ಕಾಂಪ್ಲೆಕ್ಸ್‌, ಸಿಗ¾ಂಡ್‌ ಫ್ರಾಯ್ಡ ಮುಂತಾದವು. ಇಂಗ್ಲಿಷ್‌ನಲ್ಲಿಯೂ ಹಲವಾರು ಪುಸ್ತ ಕಗಳು, ಲೆೇಖನಗಳು ಪ್ರಕಟಗೊಂಡಿವೆ.

ಬಸವಣ್ಣನವರ ಬರಹದ ಒಂದು ಭಾಗ
ನಾನೊಬ್ಬ ಮನೋವಿಜ್ಞಾನದ ವಿದ್ಯಾರ್ಥಿ. ಕಳೆದ 60 ವರ್ಷಗಳಿಂದ ಮನೋವಿಜ್ಞಾನದ ಅಧ್ಯಯನ, ಅಧ್ಯಾಪನ, ಸಂಶೋಧನೆಗಳಲ್ಲಿ ಕಾಲ ಕಳೆದಿದ್ದೇನೆ. ಬೇರೆ ವಿಷಯಗಳ ಪರಿಚಯ ನನಗೆ ಅಷ್ಟಾಗಿ ಇಲ್ಲ. ಮನೋವಿಜ್ಞಾನದ ವಿಷಯವೂ ಅಷ್ಟಕ್ಕಷ್ಟೆ ಎಂದರೂ ತಪ್ಪಲ್ಲ. ಕೆಲಕಾಲದ ಹಿಂದೆ, ಒಂದು ಮನೋವಿಜ್ಞಾನದ ಸಮಾವೇಶದಲ್ಲಿ ನನ್ನನ್ನು ಅತಿಥಿಯಾಗಿ ಕರೆದು ಭಾಷಣ ಮಾಡಲು ಕೇಳಿದ್ದರು. ಅಲ್ಲಿ ನಾನು ಮಾತನಾಡಲು ಆರಿಸಿಕೊಂಡ ವಿಷಯ ಮನೋವಿಜ್ಞಾನದಲ್ಲಿ ಇನ್ನೂ ಉತ್ತರಿಸಲಾಗಿಲ್ಲದ ಪ್ರಶ್ನೆಗಳು ಎನ್ನುವುದಾಗಿತ್ತು. ಆ ಭಾಷಣಕ್ಕೆ ನಾನು ಸಿದ್ಧನಾಗುತ್ತಿದ್ದಾಗ ಗೊತ್ತಾಯ್ತು- ನಮಗೆ ಮನೋವಿಜ್ಞಾನದ ಬಗ್ಗೆ ತಿಳಿದಿರುವುದು ಬಹಳ ಕಡಿಮೆ ಎಂದು. ಅಂದ ಮಾತ್ರಕ್ಕೆ ಮನೋವಿಜ್ಞಾನದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಅರ್ಥವಲ್ಲ ; ಬೇರೆ ವೈಜ್ಞಾನಿಕ ಶಿಸ್ತುಗಳೊಡನೆ ಹೋಲಿಸಿದರೆ ಕಡಿಮೆ ಅಷ್ಟೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ಬೇರೆ ಶಿಸ್ತುಗಳೊಡನೆ ಹೋಲಿಸಿದರೆ ಮನೋವಿಜ್ಞಾನ ಇನ್ನೂ ಶಿಶು. ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಖಗೋಳ ವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನಗಳೊಡನೆ ಹೋಲಿಸಿದರೆ ಕೇವಲ 150 ವರ್ಷಗಳ ಹಿಂದೆ ಉದಯಿಸಿದ ಮನೋವಿಜ್ಞಾನ ಶಿಶುವಲ್ಲದೆ ಮತ್ತೇನು?

Advertisement

ಇಂದು ಪ್ರಸಿದ್ಧಿಯಾಗಿರುವ ಬೇರೆಲ್ಲ ಅಧ್ಯಯನ ವಿಷಯಗಳಂತೆ, ಮೊದಲಿಗೆ ಮನಃಶಾಸ್ತ್ರವೂ ತತ್ವಶಾಸ್ತ್ರದ ಒಂದು ಭಾಗವಾಗಿತ್ತು. ಅದು ಒಂದು ವೈಜ್ಞಾನಿಕ ಶಿಸ್ತಾಗಿ ಆರಂಭವಾದದ್ದು 1879ರಲ್ಲಿ, ಜರ್ಮನಿಯ ಲೈಪ್‌ಜಿಗ್‌ ನಗರದಲ್ಲಿ, ವಿಲ್‌ಹೆಲ್ಮ್ ವುಂಟ್‌ (Wilhelm Wundt, 1832 -1920) ಎನ್ನುವ ದಾರ್ಶನಿಕ ಸ್ಥಾಪಿಸಿದ ಮೊತ್ತಮೊದಲ ಪ್ರಯೋಗಶಾಲೆಯೊಡನೆ. ಅಂದು ಲೈಪ್‌ಜಿಗ್‌ ಪ್ರಯೋಗಶಾಲೆ ಮನಃಶಾಸ್ತ್ರದ ಮೆಕ್ಕಾ ಎನಿಸಿಕೊಂಡಿತು. ವಿಶ್ವದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ, ವುಂಟ್‌ನಿಂದ ಡಿಗ್ರಿ ಪಡೆದು, ಅವರವರ ದೇಶಗಳಿಗೆ ಹಿಂತಿರುಗಿ ಅಲ್ಲಿ ಮನೋವಿಜ್ಞಾನದ ಪ್ರಯೋಗಶಾಲೆಗಳನ್ನು ಆರಂಭಿಸಿದುದು ಈಗ ಇತಿಹಾಸ. ಹೀಗೆ ಆರಂಭಗೊಂಡ ಮನೋವಿಜ್ಞಾನದ ಬಗ್ಗೆ ಇಂದು ಕೂಡ ತಪ್ಪು ಕಲ್ಪನೆಗಳೇ ಹೆಚ್ಚು. ನಿಮಗೆ ಆಶ್ಚರ್ಯವಾಗಬಹುದು; ಕೆಲವರಿಗೆ ನನ್ನೊಡನೆ ವ್ಯವಹರಿಸಲು ಕೊಂಚ ಅಳುಕು. ಕಾರಣವೇನೆಂದರೆ, ಅವರ ಮನಸ್ಸಿನಲ್ಲಿರುವುದೆಲ್ಲ ನನಗೆ ತಿಳಿದುಬಿಡುತ್ತದೆ ಎನ್ನುವ ಆತಂಕ ಅವರಿಗೆ. ಅವರ ಪ್ರಕಾರ, ಮನೋವಿಜ್ಞಾನವೆಂದರೆ ಮನಸ್ಸನ್ನು ಓದುವ ವಿದ್ಯೆ. ಅವರ ಮನಸ್ಸಿನಲ್ಲಿರುವುದು ಅವರಿಗೇ ಸರಿಯಾಗಿ ತಿಳಿದಿರುವುದಿಲ್ಲ; ನನಗೆ ತಿಳಿಯುವುದಾದರೂ ಹೇಗೆ ಹೇಳಿ!

Advertisement

Udayavani is now on Telegram. Click here to join our channel and stay updated with the latest news.

Next