Advertisement

ಸುಂದರ ಪುಣೆಯಲ್ಲಿ ಇನ್ನು ಎಲ್ಲಿ ಕಂಡರೂ ವಾಹನಗಳೇ !

07:00 AM Apr 14, 2018 | Team Udayavani |

ಪುಣೆ ನಗರ ಜನರಿಂದ ತುಂಬಿಕೊಂಡಿಲ್ಲ; ಬದಲಾಗಿ ವಾಹನಗಳಿಂದ ತುಂಬಿಕೊಳ್ಳುತ್ತಿದೆ ಎಂದರೆ ಏನೆನಿಸಬಹುದು? ನಿಜವಾಗಿಯೂ ಆಗುತ್ತಿರುವುದು ಅದೇ. ವಿಚಿತ್ರವೆಂದರೆ ನಮ್ಮ ಎಲ್ಲ ನಗರಗಳೂ ಸಾಗುತ್ತಿರುವುದು ಅದೇ ಹಾದಿಯಲ್ಲಿ.

Advertisement

ಒಂದು ವಾರದ ಹಿಂದೆ ಒಂದು ಸುದ್ದಿಯನ್ನು ಓದಿರಬಹುದು. ಪುಣೆ ನಗರದಲ್ಲಿನ ವಾಹನ ಸಂಖ್ಯೆ ಅಲ್ಲಿನ ಜನಸಂಖ್ಯೆಗೆ ಸಮಾನವಾಗಿ ದೆಯಂತೆ. ಅದೇ ವಾರವಿಡೀ ಸುದ್ದಿಯಾಗಿದ್ದು. ಅದರಲ್ಲೂ ನಮ್ಮ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಆತಂಕ ಪಡುವ ಸಂಗತಿಯೇ ಹೊರತು ಸಂತೋಷ ಪಡುವಂಥದ್ದಂತೂ ಅಲ್ಲ. 

ಪುಣೆ ಮುನ್ಸಿಪಲ್‌ ಕಾರ್ಪೋರೇಷನ್‌ ಇತ್ತೀಚೆಗಷ್ಟೇ ಎನ್‌ವಾಯಿರ್‌°ಮೆಂಟ್‌ ಸ್ಟೇಟಸ್‌ ರಿಪೋರ್ಟ್‌ನ್ನು ತನ್ನ ಸಾಮಾನ್ಯ ಸಭೆಯಲ್ಲಿ ಮಂಡಿಸಿತು. ಇದು 2016-17ನೇ ವರ್ಷಕ್ಕೆ ಸಂಬಂಧಪಟ್ಟಿದ್ದು. “ನಗರದಲ್ಲಿ ವಾಹನಗಳ ಸಂಖ್ಯೆ ಜನಸಂಖ್ಯೆಯಷ್ಟೇ ಇದೆ. ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿರುವವರ ಸಂಖ್ಯೆಯೂ ಸಾಕಷ್ಟಿದೆ’ ಎಂಬ ಅಂಶ ಅದರಿಂದ ತಿಳಿದದ್ದು. ಇನ್ನು ಜೀವನಶೈಲಿಗೆ ಹೋಲಿಸಿದರೆ ಜನರ ಜೀವನಮಟ್ಟದಲ್ಲೂ ಏರಿಕೆಯಾಗುತ್ತಿದೆಯಂತೆ. 

ಪ್ರಸ್ತುತ ಪುಣೆಯ ಜನಸಂಖ್ಯೆ ಸುಮಾರು 32 ಲಕ್ಷ. ವರದಿಯ ಪ್ರಕಾರ ವಾಹನಗಳ ಸಂಖ್ಯೆ 33 ಲಕ್ಷ. ಹಾಗೆ ಹೇಳುವುದಾದರೆ ಒಂದು ಲಕ್ಷ ಹೆಚ್ಚೇ. ಅದರಲ್ಲೂ ಆತಂಕದ ಸಂಗತಿಯೆಂದರೆ ಒಂದು ವರ್ಷದಲ್ಲಿ (ಮಾರ್ಚ್‌ 2016ರಿಂದ ಮಾರ್ಚ್‌ 2017) ಸುಮಾರು 2. 7 ಲಕ್ಷ ವಾಹನಗಳು ನೋಂದಣಿಯಾಗಿವೆ. ಇದು ಬಹಳ ಹೆಚ್ಚಿನದು. ಹಾಗಾಗಿ ನಮ್ಮ ನೀತಿಗಳ ಕುರಿತು ಪುನರ್‌ ವಿಮರ್ಶೆ ಮಾಡಬೇಕಿದೆ ಎಂದು ಸ್ವತಃ ಅಧಿಕಾರಿಗಳೇ ತಿಳಿಸಿದರು. ಪ್ರತಿ ದಿನವೂ ಸುಮಾರು 727 ವಾಹನಗಳು ರಸ್ತೆಗಿಳಿಯುತ್ತಿವೆ. 

ಆತಂಕಕಾರಿ ಸಂಗತಿ
ಈ ವರದಿ ಬಹಿರಂಗಗೊಳಿಸಿರುವ ಮತ್ತೂಂದು ಆತಂಕದ ಸಂಗತಿಯೆಂದರೆ, ಸಾರ್ವಜನಿಕ ಸಾಮೂಹಿಕ ಸಾರಿಗೆಯಾದ ಬಸ್‌ ಮತ್ತು ರೈಲುಗಳ ಬೇಡಿಕೆ ಕುಸಿಯುತ್ತಿರುವುದು. ಮಹಾರಾಷ್ಟ್ರ ಸರಕಾರ ನಡೆಸುವ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಹತ್ತುವವರ ಸಂಖ್ಯೆ ಗಮನಾರ್ಹವಾಗಿ ಕುಸಿಯುತ್ತಿದೆ. ಅದರ ವಿವರ ಕಂಡರೆ ಗಾಬರಿ ಹುಟ್ಟಿಸುತ್ತದೆ. 2015-16 ರಲ್ಲಿ ಸುಮಾರು 1.18 ಲಕ್ಷ ಜನ ಸಾರಿಗೆ ವ್ಯವಸ್ಥೆ ಬಳಸಿದ್ದರೆ, 2016-17ರಲ್ಲಿ ಸುಮಾರು ಎಂಟು ಲಕ್ಷ ಜನರು ಬಸ್‌ನಿಂದ ದೂರವುಳಿದಿದ್ದಾರೆ. ಉಪನಗರ ರೈಲು ಪ್ರಯಾಣಿಕರ ಸಂಖ್ಯೆ ಇದೇ ಅವಧಿಯಲ್ಲಿ 2.18 ಲಕ್ಷದಿಂದ 2.17 ಲಕ್ಷಕ್ಕೆ ಕುಸಿದಿದೆ. ಇಲ್ಲಿ ಒಂದು ಲಕ್ಷ ಬಹಳ ದೊಡ್ಡದು ಎಂದೆನಿಸಬಹುದು. ನಿಜವಾದ ಅರ್ಥದಲ್ಲಿ ಇಂದು ಆತಂಕಕಾರಿ ಬೆಳವಣಿಗೆಯೇ. ಇದು ವಿಚಿತ್ರವಲ್ಲದೇ ಮತ್ತೇನು? ಆದರೆ ಒಂದು ಒಳ್ಳೆಯ ವಸತಿ ಯೋಗ್ಯ ನಗರವೆಂಬ ಅಭಿದಾನ ಹೊತ್ತುಕೊಂಡಿರುವ ಪುಣೆಯಂಥ ನಗರದ ಭವಿಷ್ಯದ ದೃಷ್ಟಿಯಿಂದ ಈ ಬೆಳವಣಿಗೆ ಖಂಡಿತಾ ಆರೋಗ್ಯಕರವಾದುದಲ್ಲ. 

Advertisement

ನಮ್ಮ ಬೆಂಗಳೂರಿನ ಕಥೆಯೇನು?
2017ರ ಲೆಕ್ಕಾಚಾರದಂತೆ ಬೆಂಗಳೂರಿನಲ್ಲಿ 1.23 ಕೋಟಿ ಜನಸಂಖ್ಯೆಯಿದೆ. 70 ಲಕ್ಷ ವಾಹನಗಳಿವೆ. ನಿಜ, ಕೊಂಚ ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ನಿತ್ಯವೂ ವಾಹನ ನೋಂದಣಿಯಾಗು ತ್ತಿರುವ ವೇಗ ಕಂಡರೆ (ಅಂದಾಜು ವಾರ್ಷಿಕ ಶೇ. 10 ರಷ್ಟು ಹೆಚ್ಚಳ) 2022ರ ವೇಳೆಗೆ ಸುಮಾರು ಒಂದು ಕೋಟಿ ವಾಹನಗಳು ನಮ್ಮ ನಗರದ ರಸ್ತೆಗಳನ್ನು ತುಂಬಬಹುದು. ಆಗ ನಮ್ಮ ಸ್ಥಿತಿ ಏನಿರಬಹುದು? ಎಲ್ಲೆಲ್ಲೂ ಹೊಗೆ, ಅದರ ಮಧ್ಯೆ ನಾವು ದಾರಿ ಹುಡುಕುತ್ತಾ ಸಾಗಬೇಕಾದ ಸ್ಥಿತಿ.

ಈಗಾಗಲೇ ಬಹಳಷ್ಟು ಪ್ರದೇಶಗಳನ್ನು ಫ್ಲೈ ಓವರ್‌ಗಳು ತುಂಬಿಕೊಂಡಿವೆ. ಎಲ್ಲೆಂದರಲ್ಲಿ ಎಲಿವೇಟೆಡ್‌ ಫ್ಲೈ ಓವರ್‌ ಇತ್ಯಾದಿ ಆವರಿಸಿವೆ. ಇನ್ನಷ್ಟು ಮೇಲ್ಸೇತುವೆಗಳು ಅಭಿವೃದ್ಧಿಯ ಹಂತದಲ್ಲಿವೆ. ಬೃಹತ್‌ ಬೆಂಗಳೂರಿನ ಮಾಸ್ಟರ್‌ ಪ್ಲ್ರಾನ್‌ ನಲ್ಲಿರುವ ಯೋಜನೆಗಳಿಗೂ ಕಡಿಮೆ ಇಲ್ಲ. ಆದರೆ ಸುಸ್ಥಿರ ಜಗತ್ತಿನ ಪರಿಕಲ್ಪನೆಯಲ್ಲಿ ಇವುಗಳನ್ನು ನೋಡಿದರೆ, ನಾವೆಲ್ಲಾ ವಾಪಸ್ಸು ಶಿಲಾಯುಗಕ್ಕೆ ಹೊರಟಿದ್ದೇವೆಯೇನೋ ಎನ್ನಿಸುವುದುಂಟು.

ಜಗತ್ತಿನಲ್ಲಿ ಹೇಗಿದೆ?
ಇಡೀ ಜಗತ್ತು, ಅದರಲ್ಲೂ ಅಭಿವೃದ್ಧಿಗೊಂಡ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿಯ ಜಪ ಮಾಡುತ್ತಿವೆ. ಸಿಂಗಾಪುರವಂತೂ ಜನರಿಗೆ “ನೀವು ಖಾಸಗಿ ವಾಹನ ಖರೀದಿ ನಿಲ್ಲಿಸಿ’ ಎಂದು ಹೇಳುತ್ತಿದೆ. ಒಂದು ರೀತಿಯಲ್ಲಿ ನೇರವಾಗಿಯೇ. ಈ ಸಂಬಂಧವೇ ಪರವಾನಗಿಯಿಂದ ಹಿಡಿದು ಎಲ್ಲ ಹಂತದ ನಿಯಂತ್ರಣವನ್ನೂ ಹೇರಿದೆ. ಈ ಹಿಂದೆ ಒಮ್ಮೆ ಹೇಳಿದಂತೆ ಅಲ್ಲಿ ನಮಗಿಷ್ಟವಾದ ಕಾರು ಖರೀದಿಸುವ ಮುನ್ನ ಸರಕಾರದ ಅನುಮತಿ ಬೇಕು. ಸರಕಾರವು ತನ್ನಲ್ಲಿರುವ ವಾಹನಗಳ ಸಂಖ್ಯೆಯ ಒತ್ತಡ ಹಾಗೂ ಅವುಗಳು ಬಳಸುವ ರಸ್ತೆಗಳ ಧಾರಣಾ ಸಾಮರ್ಥಯ, ನಿಲುಗಡೆ ಇರಬಹುದಾದ ಸ್ಥಳ- ಇತ್ಯಾದಿ ಅಂಶಗಳನ್ನು ಕೂಲಂಕಷವಾಗಿ ಗಮನಿಸಿ, ಅಳೆದೂ ತೂಗಿ ಪರವಾನಗಿ ನೀಡುತ್ತದೆ. ಅದೂ ಹೇಗೆಂದರೆ, ಪ್ರತಿ ವರ್ಷ ಇಂತಿಷ್ಟು ಪರವಾನಗಿಯೆಂದು ಘೋಷಿಸುತ್ತದೆ. 

ಅಲ್ಲಿಯ ಸರಕಾರ ನಮ್ಮ ಹಾಗೆ ಒಂದಿಷ್ಟು ವಾಹನಗಳಿಗೆ ಪ್ರತಿ ದಿನವೂ ಅನುಮತಿ ಕೊಟ್ಟು, ಅವುಗಳಿಗೆ ರಸ್ತೆ ನಿರ್ಮಿಸಲು ಕೋಟ್ಯಂತರ ರೂ. ಗಳನ್ನು ಸುರಿಯುವುದಿಲ್ಲ. ಅದರ ಬದಲು ಇರುವ ರಸ್ತೆಗಳ ನಿರ್ವಹಣೆಗೆ ಹೆಚ್ಚು ಹಣ ವಿನಿಯೋಗ ಮಾಡುತ್ತದೆ. ಹಾಗಾಗಿ ಫೆಬ್ರವರಿಯಿಂದಲೇ ಕಾರು ಹಾಗೂ ಬೈಕ್‌ಗಳಿಗೆ ಪರವಾನಗಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನಮ್ಮ ರಾಜ್ಯ ಹಾಗೂ ದೇಶಗಳಿಗೆ ಹೋಲಿಸಿಕೊಂಡರೆ ಇದು ಬಹಳ ವಿಚಿತ್ರವೆನಿಸಬಹುದು. ಅಲ್ಲಿ ಪ್ರತಿ ತಿಂಗಳೂ ಇಂತಿಷ್ಟೇ ಎಂದು ಸೀಮಿತ ಪರವಾನಗಿ ನೀಡುತ್ತದೆ. ಅದರಲ್ಲೂ ಕಳೆದ ವರ್ಷ ಚಿಕ್ಕ ವಾಹನಗಳು (ಬೈಕ್‌ ಇತ್ಯಾದಿ) ಗಳಿಗೆ ಪರವಾನಗಿ ಶುಲ್ಕ ವಿಧಿಸಿದ್ದು ಎಷ್ಟಿರಬಹುದು ಎಂದುಕೊಂಡಿದ್ದೀರಿ? ಬರೀ 41 ಸಾವಿರ ಸಿಂಗಾಪೂರ್‌ ಡಾಲರ್‌ಗಳು. ಇವೆಲ್ಲವೂ ಒಳ್ಳೆಯ ಉದ್ದೇಶದಿಂದ ಕೈಗೊಳ್ಳುತ್ತಿರುವ ಕಠಿನ ಕ್ರಮಗಳು. ನಮ್ಮಲ್ಲಿ ಆರೋಗ್ಯಕ್ಕಾಗಿ ಕಹಿಯಾದರೂ ಸೇವಿಸಿ ಎನ್ನುತ್ತೇವಲ್ಲಾ, ಹಾಗೆಯೇ ಇದೂ ಸಹ. ಈ ಮೂಲಕ ಜನರು ಅನಗತ್ಯವಾಗಿ ವಾಹನಗಳನ್ನು ಕೊಳ್ಳುವ ಆಸಕ್ತಿ ಮತ್ತು ಅಭ್ಯಾಸವನ್ನು ತಪ್ಪಿಸುವ ಪ್ರಯತ್ನ. ಜತೆಗೇ ಸಾರ್ವಜನಿಕ ಸಾಮೂಹಿಕ ಸಾರಿಗೆಯತ್ತ ಒಲವು ಬೆಳೆಸಿಕೊಳ್ಳಲಿ ಎನ್ನುವ ದೂರದೃಷ್ಟಿ. ಈ ಎರಡೂ ನಿಲುವುಗಳೇ ಸಿಂಗಾಪುರದ ಇಂಥ ಪ್ರಯತ್ನಕ್ಕೆ ಸುಸ್ಥಿರ ಅಭಿವೃದ್ಧಿಯ ನೆಲೆಯನ್ನು ಒದಗಿಸಿವೆ ಎಂದರೆ ತಪ್ಪಾಗಲಾರದು.

ಇದರ ಮಧ್ಯೆ ಅಲ್ಲಿಯ ಸರಕಾರವು ತನ್ನ ಈ ಕ್ರಮಕ್ಕೆ ನೀಡುವ ಸಮಜಾಯಿಷಿ ಏನೆಂದರೆ, “ಇರುವ ಜಾಗವನ್ನೆಲ್ಲಾ ವಾಹನಗಳ ನಿಲುಗಡೆಗೆ, ವಾಹನಗಳ ಓಡಾಟಕ್ಕೆ ಅನುಕೂಲವಾಗುವ ರಸ್ತೆಗಳನ್ನಾಗಿ ನಿರ್ಮಿಸುವುದಕ್ಕಲ್ಲ. ಈಗಾಗಲೇ ಶೇ. 12 ರಷ್ಟು ಭಾಗವನ್ನು ರಸ್ತೆ ಮತ್ತು ಇತರೆ ಉದ್ದೇಶಗಳಿಗೆ ಬಳಸಲಾಗಿದೆ’. ನಾವು ಎಂದಾದರೂ ಹೀಗೆ ಯೋಚಿಸುತ್ತೇವೆಯೇ? ಎಂದು ಲೆಕ್ಕ ಹಾಕೋಣ. 

ಹಾಗಾಗಿಯೇ ಸಿಂಗಾಪುರ ಮುಂದಿನ ಐದು ವರ್ಷಗಳಲ್ಲಿ ಸುಮಾರು 28 ಬಿಲಿಯನ್‌ ಸಿಂಗಾಪೂರ್‌ ಡಾಲರ್‌ಗಳಷ್ಟು ಹಣವನ್ನು ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಹೂಡುತ್ತಿದೆ. ರೈಲು ಹಾಗೂ ಬಸ್‌ ಸಾರಿಗೆ ವ್ಯವಸ್ಥೆಯನ್ನು ಸದೃಢಗೊಳಿಸಲು ಬಳಸುತ್ತಿದೆ. ಇಷ್ಟಕ್ಕೂ ಜಗತ್ತಿನಲ್ಲಿ ಪ್ರಸ್ತುತ ಅತ್ಯುತ್ತಮ ಸಾಮೂಹಿಕ ಸಾರಿಗೆ ವ್ಯವಸ್ಥೆ ಇರುವ ಕೆಲವೇ ರಾಷ್ಟ್ರಗಳ ಪೈಕಿ ಸಿಂಗಾಪುರ ಸಹ ಅಗ್ರಸ್ಥಾನದಲ್ಲಿದೆ. ಆದಾಗ್ಯೂ ಇಷ್ಟೊಂದು ಹಣವನ್ನು ಆ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥೆಗೊಳಿಸಲು ವಿನಿಯೋಗಿಸುತ್ತಿದೆ ಎಂದರೆ ಎಷ್ಟು ವಿಚಿತ್ರವಲ್ಲವೇ? ದಿಲ್ಲಿ ಸರಕಾರ ಬಸ್ಸುಗಳ ವ್ಯವಸ್ಥೆಗೆ ವಿನಿಯೋಗಿಸಿರುವ ಹಣವನ್ನು ಕಂಡರೆ ಅಚ್ಚರಿ ಹುಟ್ಟಬಹುದು. ನಮ್ಮ ಎಲ್ಲ ಸರಕಾರಗಳಿಗೂ ವಾಹನಗಳ ನೋಂದಣಿ ಒಂದು ಆದಾಯದ ಮೂಲವಾಗಿಯಷ್ಟೇ ಕಾಣುತ್ತಿರುವುದು ದುರಂತ.

Advertisement

Udayavani is now on Telegram. Click here to join our channel and stay updated with the latest news.

Next