Advertisement

ಆರಗದ ದೊಡ್ಡ  ವೀರಾಂಜನೇಯಸ್ವಾಮಿ

12:25 PM Jan 20, 2018 | |

ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ ಶ್ರೀಆಂಜನೇಯ ದೇವರ ಮುಖ ಉತ್ತರಾಭಿಮುಖವಾಗಿದೆ. ದೇವರ ಮೂರ್ತಿ ಪಾಣಿಪೀಠದಿಂದ ಕೆಳಭಾಗದಲ್ಲಿ 6 ಅಡಿ ಆಳವಿದೆ. ಮೇಲ್ಭಾಗದಲ್ಲಿ 8 ಅಡಿ ಎತ್ತರದ ಮೂರ್ತಿ ಇದಾಗಿದೆ. ಇಲ್ಲಿನ ಪರಿವಾರದೇವತೆಗಳಾಗಿ ಶ್ರೀಗರುಡ ಮತ್ತು ಶ್ರೀನಾಗ ದೇವರ ವಿಗ್ರಹವಿದ್ದು ನಿತ್ಯ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಪಂಚಾಮೃತಾಭಿಷೇಕ ಮತ್ತು ವಿಶೇಷಾಲಂಕಾರ ಪೂಜೆ, ನವರಾತ್ರಿಯಲ್ಲಿ ದಸರಾ ಉತ್ಸವ, ಕಾರ್ತಿಕದಲ್ಲಿ ದೀಪೋತ್ಸವ, ಶಿವರಾತ್ರಿಯಂದು ಜಾಗರಣೆ, ರಾಮನವಮಿಯ ಸಂದರ್ಭದಲ್ಲಿ 9 ದಿನಗಳ ಕಾಲ ರಾಮೋತ್ಸವ ,ದಶಮಿಯಂದು ಹನುಮೋತ್ಸವ ನಡೆಸಲಾಗುತ್ತದೆ.

Advertisement

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ 10.ಕಿಮೀ ದೂರದಲ್ಲಿರುವ ಆರಗ, ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ. ಇಲ್ಲಿ ಪ್ರಾಚೀನ ಕಾಲದ ಶಿಲಾ ದೇಗುಲಗಳು, ಅಗ್ರಹಾರ, ಶಿಥಿಲ ಕೋಟೆ ಇತ್ಯಾದಿಗಳಿವೆ. ಆರಗ-ಹೊಸನಗರ ಸಂಪರ್ಕ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ.ದೂರದಲ್ಲಿರುವ ದೊಡ್ಡ ವೀರಾಂಜನೇಯ ದೇವಾಲಯ ಅತ್ಯಂತ ಆಕರ್ಷಕವಾಗಿದೆ. ಸ್ಥಳೀಯ ಗ್ರಾಮಸ್ಥರಷ್ಟೆ, ಅಲ್ಲ, ಬಹು ದೂರದ ಊರುಗಳಿಂದ ಸಹ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ,ಹರಕೆ, ಸಮರ್ಪಿಸುತ್ತಾರೆ. 

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅತಿ ವಿಶಿಷ್ಟ ವೆನಿಸುವ ಊರು ಆರಗ.  ವಿಜಯನಗರ, ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ  ಮಲೆರಾಜ್ಯ, ಆರಗವೇರಿ, ಆರಗ ಮಹಾನಾಡು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಮಹಾಭಾರತ ಕಾಲದಲ್ಲಿ ಪಾಂಡವರ ವಾಸಕ್ಕಾಗಿ ನಿರ್ಮಿಸಿದ್ದ ಅರಗಿನ ಮನೆ ಇಲ್ಲಿತ್ತು. ಅರಗಿನ ಮನೆಯ ಕಾರಣದಿಂದ ಈ ಊರಿಗೆಆರಗ ಎಂಬ ಹೆಸರು ಉಳಿದುಕೊಂಡಿತು ಎಂಬ ಪ್ರತೀತಿ ಇದೆ. 

ಇಲ್ಲಿರುವ ಶ್ರೀರಾಮಾಂಜನೇಯ ದೇವಾಲಯದಲ್ಲಿ, 8 ಅಡಿ ಎತ್ತರದ  ಅಭಯ ನೀಡುತ್ತಾ ನಿಂತ ಭಂಗಿಯಲ್ಲಿರುವ ವಿಗ್ರಹವಿದೆ. ಇದು ಏಕಶಿಲಾ ಮೂರ್ತಿಯಾಗಿದ್ದು ವಿಜಯನಗರ ಮತ್ತು ಕೆಳದಿ ಅರಸರುಗಳಿಂದ ಪೂಜೆಗೊಂಡಿದೆ.

Advertisement

ವಿಜಯನಗರದ ಕೊನೆಯ ಅರಸು  ಅರವೀಡು ವಂಶದ 2 ನೇ ರಂಗರಾಯ, ಸುಲ್ತಾನರ ದಬ್ಟಾಳಿಕೆಯಿಂದ ತನ್ನ ರಾಜ್ಯ ಕಳೆದುಕೊಂಡು,  ಕೆಳದಿಯ ಅರಸು ಶಿವಪ್ಪನಾಯಕನ ಬಳಿ ಆಶ್ರಯ ಅರಸಿಕೊಂಡು ಬರುತ್ತಾನೆ.  ಶಿವಪ್ಪನಾಯಕನು ರಂಗರಾಯನನ್ನು ಕವಲೇ ದುರ್ಗದಲ್ಲಿ ಉಳಿಸಿಕೊಂಡು ರಕ್ಷಣೆ ನೀಡುತ್ತಾನೆ.  ರಂಗರಾಯನು ಕವಲೇದುರ್ಗದಲ್ಲಿ ಚಿಕ್ಕ ವೀರಾಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ ,ಆರಗದಲ್ಲಿ ದೊಡ್ಡ ವೀರಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. 

ಆರಗದಲ್ಲಿ ಹತ್ತು ಹಲವು ದೇವಾಲಯಗಳಿವೆ. ಅವುಗಳ ಪೈಕಿ ಶ್ರೀ ಕಲಾನಾಥೇಶ್ವರ. ಶ್ರೀ ಅಖಂಡೇಶ್ವರ, ಶ್ರೀಅಮೃತೇಶ್ವರ, ಶ್ರೀನೀಲಕಂಠೇಶ್ವರ, ಶ್ರೀದುರ್ಗಾಪರಮೇಶ್ವರಿ ಮುಖ್ಯವಾದವು.  ಎಲ್ಲವೂ ಶಿಲಾಮಯ ಆಕರ್ಷಕ ದೇವಾಲಯಗಳು.  ಕೆಲವು ಶಿಥಿಲವಾಗಿವೆ. ಇಡೀ ಊರಿಗೆ ಕಲಶ ಪ್ರಾಯವಾಗಿ ಕಂಗೊಳಿಸುವುದು ಇಲ್ಲಿನ ಶ್ರೀ ದೊಡ್ಡ ವೀರಾಂಜನೇಯ ಶಿಲಾ ಮೂರ್ತಿ.

ರಸ್ತೆಯ ಪಕ್ಕದಲ್ಲಿ ಎತ್ತರದ ದಿಣ್ಣೆಯಲ್ಲಿದ್ದ ಈ ದೇವರ ಗುಡಿ ಶಿಥಿಲವಾಗಿತ್ತು. 2009ರಲ್ಲಿ ಗ್ರಾಮಸ್ಥರೆಲ್ಲ ಚರ್ಚಿಸಿ, ದೇವಾಲಯ ಜೀರ್ಣೋದ್ದಾರಕ್ಕೆ ಮುಂದಾದರು.  ಅಷ್ಟಮಂಗಲ ಪ್ರಶ್ನಾ ಚಿಂತನ ನಡೆಸಿದಾಗ ಮಾರ್ಗದರ್ಶನ ದೊರೆತಿತು 2013ರ ಮೇ ತಿಂಗಳಿನಲ್ಲಿ ಕ್ರೇನ್‌ಗಳನ್ನು ಬಳಸಿ ದೇವರ ಮೂರ್ತಿ ಸ್ಥಳಾಂತರಿಸಿ ಪುನರ್‌ ಪ್ರತಿಷ್ಠಾಪನೆ, ಅಷ್ಟಬಂಧ ಕಲಶಾಭಿಷೇಕ ಮಹೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಆಗಮೋಕ್ತ ರೀತಿಯಲ್ಲಿ 5 ದಿನಗಳ ಕಾಲ ಪ್ರತಿಷ್ಠಾಪನಾ ಮಹೋತ್ಸವ ನಡೆದಿತ್ತು.

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next