Advertisement

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

12:06 PM Oct 13, 2024 | Team Udayavani |

ಯುದ್ಧ, ಸೈನಿಕ ಕಾರ್ಯಾಚರಣೆಗಳಲ್ಲಿ ಯೋಧರು ಹುತಾತ್ಮರಾದರೆ ಅದರಿಂದ ದೇಶಕ್ಕೆ ನಷ್ಟ, ಅವರ ಕುಟುಂಬಕ್ಕೆ ಅದೊಂದು ದೊಡ್ಡ ಆಘಾತ. ದುಃಖತಪ್ತ ಯೋಧರ ಕುಟುಂಬಗಳನ್ನು ಮತ್ತೆ ಸಹಜ ಜೀವನ ಸ್ಥಿತಿಗೆ ತರುವುದು ಸುಲಭದ ಮಾತಲ್ಲ. ಇಂಥ ಕುಟುಂಬಗಳನ್ನು ಒಗ್ಗೂಡಿಸಿ, ಅವರ ನಡುವೆ ಕಳೆದ ಒಂದೂವರೆ ದಶಕದಿಂದ ಕಾರ್ಯನಿರ್ವಹಿಸುತ್ತಿದೆ ಬೆಂಗಳೂರಿನ ವೀರ ರತ್ನ ಫೌಂಡೇಶನ್‌. ಅವರ ಕಾರ್ಯ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ…

Advertisement

ವೀರ ರತ್ನ ಫೌಂಡೇಶನ್‌, ಹುತಾತ್ಮ ಸೈನಿಕರ ಕುಟುಂಬದವರಿಗೆ ನೆರವಾಗುವ ಸಂಘಟನೆ. ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ ಎಫ್) ಹಾಗೂ ಸೇನಾ ಪಡೆಗಳ ಸೈನಿಕರು ಹುತಾತ್ಮರಾದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಆಸರೆಯಾಗುತ್ತ ಕಳೆದ 17 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದೆ.

ಸದ್ಯ ಕರ್ನಾಟಕದ ಎಲ್ಲ ಜಿಲ್ಲೆಗಳ ಹುತಾತ್ಮ ಯೋಧರ ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವೀರ ರತ್ನ ಫೌಂಢೇಶನ್‌ನ ಸಿಇಒ ಅರ್ಚನಾ ಚಕ್ರವರ್ತಿ, ತಮ್ಮ ಸಂಸ್ಥೆಯ ಕಾರ್ಯವೈಖರಿ ಕುರಿತು ವಿವರಿಸುವುದು ಹೀಗೆ:

ಪ್ರತಿ ರಾಜ್ಯದಲ್ಲಿ ಸೈನಿಕ ಕಲ್ಯಾಣ ಮಂಡಳಿ ಇದೆ. ಅವರ ಮೂಲಕ ಹುತಾತ್ಮ ಯೋಧರ ಕುಟುಂಬದ ವಿವರ ಪಡೆಯುತ್ತೇವೆ. ಈ ಮಾಹಿತಿಗಳು ಅತ್ಯಂತ ಸೂಕ್ಷ್ಮ. ಎಲ್ಲರಿಗೂ ಸಿಗುವಂತದ್ದಲ್ಲ. ಯಾವುದೇ ಸೈನಿಕ ಯುದ್ಧದಲ್ಲಿ ಅಸುನೀಗಿದಾಗ ಅವರ ಕುಟುಂಬದವರು ಮಾತ್ರವಲ್ಲ, ಇಡೀ ದೇಶ ಅವರ ಸಾವಿಗೆ ಮರುಗುತ್ತದೆ. ಅಂಥ ಸಮಯದಲ್ಲಿ ಮುಖ್ಯವಾಗಿ ಯೋಧನ ಪತ್ನಿ ಹಾಗೂ ಮಕ್ಕಳು ಭಾವನಾತ್ಮಕವಾಗಿ ಕುಗ್ಗಿರುತ್ತಾರೆ. ಅವರ ಜೀವನಪಯಣ ಏಕಾಏಕಿ ಸ್ತಬ್ಧವಾಗಿರುತ್ತದೆ. ಮಡದಿಗೆ ತನ್ನ ಬದುಕು ಮತ್ತು ಮಕ್ಕಳ ಭವಿಷ್ಯದ ಚಿಂತೆ,

ಮಕ್ಕಳಿಗೆ ಅಪ್ಪನ ಅಗಲಿಕೆಯ ಕೊರಗು… ಹೀಗಿರುವಾಗ ಮುಂದಿನದನ್ನೆಲ್ಲ ಎದುರಿಸುವ, ಪರಿಸ್ಥಿತಿಗಳನ್ನು ನಿಭಾಯಿಸುವ ಶಕ್ತಿ ಅವರಿಗೆ ಬೇಕಾಗಿರುತ್ತದೆ. ಆ ಸಮಯದಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ.

Advertisement

ಧನ ಸಹಾಯ ಮಾಡುವುದಿಲ್ಲ…

ಮುಖ್ಯವಾದ ಸಂಗತಿಯೆಂದರೆ, ವೀರ ರತ್ನ ಫೌಂಡೇಶನ್‌ ವತಿಯಿಂದ ನಾವು, ಹುತಾತ್ಮ ಯೋಧರ ಕುಟುಂಬಗಳಿಗೆ ಯಾವ ರೀತಿಯೂ ಧನ ಸಹಾಯ ಮಾಡುವುದಿಲ್ಲ, ಅವರಿಂದಲೂ ಹಣ ಪಡೆಯುವುದಿಲ್ಲ. ಬದಲಾಗಿ, ದೃಢವಾಗಿ ಜೀವನ ಸಾಗಿಸಲು ಅವರಿಗೆ ಹಲವು ಬಗೆಯ ಕೌಶಲ್ಯ ತರಬೇತಿಗಳನ್ನು ನೀಡುತ್ತೇವೆ. 45 ವರ್ಷ ವಯಸ್ಸಿನ ಹುತಾತ್ಮ ಯೋಧರ ಪತ್ನಿಯರು, ಅವರ ಮಕ್ಕಳ ಏಳಿಗೆಗಾಗಿ ಹಲವು ಕಾರ್ಯ ಯೋಜನೆಗಳನ್ನು ರೂಪಿಸುತ್ತೇವೆ. “ನಾನೀಗ ವಿಧವೆ, ಬಾಳು ಶೂನ್ಯ, ಮಕ್ಕಳ ಬದುಕು ಹೇಗೆ?’ ಎಂಬ ಮನಸ್ಥಿತಿಯಲ್ಲಿರುವ ಯೋಧರ ಪತ್ನಿಯರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ, ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದೇ ನಮ್ಮ ಮೊದಲ ಗುರಿ. ಇದಕ್ಕಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಆಪ್ತ ಸಮಾಲೋಚನೆ ನಡೆಯುತ್ತದೆ. ಜೊತೆಗೆ ಮಕ್ಕಳನ್ನು ಪೋಷಿಸುವಲ್ಲಿ ಸಲಹೆ, ಸಮಾಜದಲ್ಲಿ ಇತರರೊಂದಿಗೆಬೆರೆತು ಬಾಳುವುದು ಹೇಗೆ ಎಂದೆಲ್ಲ ಅವರಿಗೆ ತಿಳಿವಳಿಕೆ ನೀಡಲಾಗುತ್ತದೆ.

ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ನೆರವು, ಮಕ್ಕಳು ಹರೆಯದವರಾಗಿದ್ದರೆ ಅವರಿಗಾಗಿ ಉದ್ಯೋಗ ಕೌಶಲ್ಯ, ಸ್ವಂತ ಉದ್ದಿಮೆ ಆರಂಭಕ್ಕೆ ಮಾರ್ಗದರ್ಶನ ನೀಡುತ್ತೇವೆ. ಪ್ರತಿ ವರ್ಷ ಎರಡು ಬಾರಿ ನಡೆಯುವ ಕಾರ್ಯಾಗಾರದಲ್ಲಿ ಆಯ್ದ ಪ್ರದೇಶಗಳಿಂದ ಸುಮಾರು 30 ಕುಟುಂಬಗಳು ಭಾಗವಹಿಸುತ್ತವೆ.

ಆರ್ಥಿಕ ವಿಚಾರದಲ್ಲಿ ಆಪ್ತ ಸಲಹೆ:  ಹುತಾತ್ಮ ಯೋಧರ ಕುಟುಂಬಗಳು ಹೆಚ್ಚಾಗಿ ಗ್ರಾಮೀಣ ಭಾಗದವರು. ಯೋಧರ ನಿಧನದ ನಂತರ ಆ ಕುಟುಂಬಕ್ಕೆ ದೊಡ್ಡ ಮೊತ್ತದಲ್ಲಿ ಆರ್ಥಿಕ ಸಹಾಯ ಒದಗಿ ಬರುತ್ತದೆ. ಸರ್ಕಾರದಿಂದ ಲಕ್ಷಾಂತರ ಹಣ, ಭೂಮಿ, ಮನೆ, ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ, ಶಿಷ್ಯವೇತನ, ಮಕ್ಕಳ ಮದುವೆಗೆ ಆರ್ಥಿಕ ನೆರವು ಸಿಗುವುದಲ್ಲದೇ, ಅನೇಕ ಖಾಸಗಿ ಸಂಘ-ಸಂಸ್ಥೆಗಳು ಹಣ ನೀಡಲು ಮುಂದಾಗುತ್ತವೆ. ನಾವು ಗಮನಿಸಿದ ಹಾಗೆ, ಒಮ್ಮೆಲೆ ಇಷ್ಟು ದೊಡ್ಡ ಮೊತ್ತದ ಹಣ ಕೈಗೆ ಬಂದಾಗ ಅದನ್ನು ಸರಿಯಾಗಿ ನಿಭಾಯಿಸುವುದು ಕಷ್ಟ, ಮೇಲಾಗಿ ಅದನ್ನು ದುರುಪಯೋಗ ಪಡಿಸಿಕೊಳ್ಳುವವರು ಅನೇಕರಿರುತ್ತಾರೆ. ಇಂಥ ಸಮಯದಲ್ಲಿ ಅವರ ಆರ್ಥಿಕ ವ್ಯವಸ್ಥೆಗೆ ಸೂಕ್ತ ಮಾರ್ಗದರ್ಶನ ಒದಗಿಸುತ್ತೇವೆ. ಯೋಧನ ಕುಟುಂಬ ಹಾಗೂ ಸಮಾಜದ ನಡುವಿನ ಕೊಂಡಿಯಾಗಿರುವುದೇ ನಮ್ಮ ಮುಖ್ಯ ಉದ್ದೇಶ.

ಯೋಧನ ಹೆಸರು ಅಜರಾಮರ:

ಯಾವುದೇ ಯೋಧ ಹುತಾತ್ಮರಾದಾಗ ಅವರ ಹೆಸರು ಕೆಲ ಕಾಲ ಮಾತ್ರ ಪ್ರಚಲಿತದಲ್ಲಿರುತ್ತದೆ. ಕಾಲಕ್ರಮೇಣ ಅವರನ್ನು ಮರೆಯುವುದು ಸಹಜ. ಹಾಗಾಗಬಾರದು. ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ ಆ ವೀರರ ಹೆಸರು ಅಜರಾಮರವಾಗಬೇಕು. ಅದಕ್ಕಾಗಿ “ಮೆಮೊರಿಯಲ್‌ ಅವಾರ್ಡ್‌’ ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತೇವೆ. ಪ್ರತಿ ವರ್ಷ ಹುತಾತ್ಮ ಯೋಧರು ಕಲಿತ ಶಾಲೆ, ಕಾಲೇಜಿನಲ್ಲಿ ಆ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಆ ಯೋಧನ ಹೆಸರಿನಲ್ಲಿ ಪ್ರಶಸ್ತಿ, ಪ್ರಮಾಣ ಪತ್ರವನ್ನು ಸ್ವತಃ ಅವರ ಕುಟುಂಬದವರೇ ನೀಡುತ್ತಾರೆ. ಪ್ರಮಾಣಪತ್ರದಲ್ಲಿ ಯೋಧನ ಹೆಸರು, ಫೋಟೋ ಇರುತ್ತದೆ. ಈ ಮೂಲಕ ಮುಂದಿನ ಪೀಳಿಗೆಗೂ ಆ ಯೋಧನ ಹೆಸರು, ತ್ಯಾಗ, ಸೇವೆ ಮನದಟ್ಟಾಗುತ್ತದೆ. ನಾಡಿನ ಹುತಾತ್ಮ ಯೋಧರಾದ ನಾರಾಯಣ ಭೋಂಡೆ, ಮಂಜುನಾಥ್‌, ಬಸವಂತರಾಯ, ರಾಜಕುಮಾರ್‌ ಹೀಗೆ 70 ಮಂದಿಯ ಹೆಸರನ್ನು ಶಾಶ್ವತಗೊಳಿಸಿದ್ದೇವೆ.

ಮುಂದಿನ ಹೆಜ್ಜೆ…

ಕಾರ್ಗಿಲ್, ಉರಿ, ಪುಲ್ವಾಮಾ ದಾಳಿಗಳು ಹಾಗೂ ವಿವಿಧ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ವೀರರತ್ನ ಫೌಂಡೇಶನ್‌ ಸದ್ಯ ನೆರವಾಗಿದೆ. ಕರ್ನಾಟಕ ದಲ್ಲಿ ಆರಂಭವಾದ ನಮ್ಮ ಸೇವಾ ಕಾರ್ಯಗಳು ಈಗ ಮಹಾರಾಷ್ಟ್ರಕ್ಕೂ ವ್ಯಾಪಿಸಿವೆ. ಗುಜರಾತ್‌ನಲ್ಲಿ ಈಗಷ್ಟೇ ವೀರ ರತ್ನ ಫೌಂಡೇಶನ್‌ ಕಾರ್ಯಾರಂಭ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಸುಮಾರು 2000 ಹುತಾತ್ಮ ಕುಟುಂಬಗಳಿವೆ. ಅವರಿಗಾಗಿ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ. ತೆಲಂಗಾಣದಲ್ಲೂ ವೀರ ರತ್ನ ಫೌಂಡೇಶನ್‌ ಆರಂಭಿಸುವುದು ನಮ್ಮ ಮುಂದಿನ ಹೆಜ್ಜೆ.

ಇವರನ್ನು ಮರೆಯಲಾಗದು!:

ಅದು 2007, ಕಾಶ್ಮೀರದಲ್ಲಿ ಹುತಾತ್ಮ ಯೋಧರೊಬ್ಬರ ಪತ್ನಿಯನ್ನು ಭೇಟಿಯಾಗಿದ್ದೆ. ಆಗ ಅವರಿಗಿನ್ನೂ ಸಣ್ಣ ಪ್ರಾಯ. ಮೇಲಾಗಿ ಹೊರಗಿನ ಪ್ರಪಂಚ ಅರಿಯದವರು. ಅಂಥಾ ಸಾಕಷ್ಟು ವೀರನಾರಿಯರಿದ್ದರು. ಅವರಿಗಾಗಿ ಏನಾದರೂ ಮಾಡಬೇಕೆಂಬ ವಿಚಾರ ಆಗಲೇ ಹೊಳೆದಿತ್ತು. ಮುಂದೆ ನನ್ನ ಪತಿ ಕರ್ನಲ್‌ ವಸಂತ್‌ ಅವರು ಹುತಾತ್ಮರಾದ ನಂತರ ಈ ವಿಚಾರ ಇನ್ನಷ್ಟು ಬಲವಾಯಿತು. ಅಕ್ಟೋಬರ್‌ 15, 2007 ರಲ್ಲಿ “ವಸಂತ ರತ್ನ ಫೌಂಡೇಶನ್‌’ ಆರಂಭವಾಗಿ, ಮುಂದೆ 2022ರಲ್ಲಿ “ವೀರ ರತ್ನ’ ಎಂದು ಮರುನಾಮಕರಣಗೊಂಡಿತು. ಅನೇಕ ಸವಾಲುಗಳ ನಡುವೆಯೇ ಸಂಸ್ಥೆ ಆರಂಭವಾಯಿತು. ಹುತಾತ್ಮ ಯೋಧರ ಮಾಹಿತಿಗಳು ನಮಗೆ ಸಿಗುತ್ತಲೇ ಇರಲಿಲ್ಲ. ಜೊತೆಗೆ ಯಾರೂ ಸಂಸ್ಥೆಗೆ ಆರ್ಥಿಕವಾಗಿ ಸಹಾಯಹಸ್ತ ಚಾಚುತ್ತಿರ ಲಿಲ್ಲ. ಆಗ ನಮ್ಮನ್ನು ಕರೆದು- “ನಿಮ್ಮ ಉದ್ದೇಶ ಚೆನ್ನಾಗಿದೆ’ ಎಂದು ಹೇಳಿ ಆರು ಲಕ್ಷ ರೂ.ಗಳ ಚೆಕ್‌ ನೀಡಿ ಬೆನ್ನೆಲುಬಾಗಿ ನಿಂತವರು ಡಾ. ಸುಧಾ ಮೂರ್ತಿ. ಆಗಿನ ಸಮಯಕ್ಕೆ ನಮಗದು ದೊಡ್ಡ ಬೆಂಬಲ ವಾಗಿತ್ತು. ಅವರ ಆ ಸಹಾಯವನ್ನು ನಾನೆಂದಿಗೂ ಮರೆಯಲಾರೆ… ಸುಭಾಷಿಣಿ ವಸಂತ್‌,  ಸಂಸ್ಥಾಪಕಿ, ವೀರ ರತ್ನ ಫೌಂಡೇಶನ್‌

ಸವಾಲುಗಳನ್ನೇ ಮೆಟ್ಟಿಲಾಗಿಸಿಕೊಂಡೆ…

2019ರಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನನ್ನ ಪತಿ ಶ್ರೀಶೈಲಪ್ಪ ಬಲಬತ್ತಿ ಪ್ರಾಣ ಕಳೆದುಕೊಂಡರು. ಆಗ ನನ್ನ

ವಯಸ್ಸು ಕೇವಲ 26. ಜೊತೆಗೆ 10 ವರ್ಷದ ಮಗಳು ವೇದಶ್ರೀ ಹಾಗೂ 8 ವರ್ಷದ ಮಗ ವಿಶ್ವನಾಥ. ಇನ್ನು ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದು ಹತಾಶಳಾಗಿ,ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಭಾವನಾತ್ಮಕವಾಗಿ ಕೊರಗುತ್ತಿದ್ದೆ. ಕುಟುಂಬದಲ್ಲೂ ಹಣದ ವಿಚಾರವಾಗ ಒಂದಿಷ್ಟು ಕಲಹಗಳಿದ್ದವು. ಜೀವನದ ಅಭದ್ರತೆ ಕಾಡುತ್ತಿತ್ತು. ಮಕ್ಕಳ ಭವಿಷ್ಯದ ಬಗ್ಗೆ ಗೊಂದಲವೆದ್ದಿತ್ತು. ನಂತರ, ವೀರ ರತ್ನ ಸಂಸ್ಥೆಯೊಂದಿಗೆ ಸಂಪರ್ಕಕ್ಕೆ ಬಂದೆ. ಅದು ನನ್ನ ಬಾಳಿಗೆ ಆಶಾಕಿರಣವಾಯಿತು. ಅವರು ನಡೆಸುವ ಕಾರ್ಯಾಗಾರದಲ್ಲಿ ಮಕ್ಕಳ ಸಮೇತ ಭಾಗವಹಿಸಿದೆ. ಕ್ರಮೇಣ, ನನ್ನಲ್ಲಿ ಆತ್ಮವಿಶ್ವಾಸ ಚಿಗುರಿತು. ಕುಟುಂಬ, ಸಮಾಜವನ್ನು ಎದುರಿಸುವ ಆತ್ಮಸ್ಥೈರ್ಯ ಬಂತು. ಈಗ ಎಲ್ಲ ಪರಿಸ್ಥಿತಿಗಳನ್ನೂ ನಾನೊಬ್ಬಳೇ ನಿಭಾಯಿಸಬಲ್ಲೆ. ನನ್ನ ಇಬ್ಬರು ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ನಾನು ಖುಷಿಯಿಂದ ಜೀವನ ನಡೆಸುತ್ತಿದ್ದೇನೆ. ಹೊಸ ಉದ್ಯೋಗ ಮಾಡುವ ಬಯಕೆಯೂ ಇದೆ. ಅದಕ್ಕಾಗಿ ಪ್ರಯತ್ನಿಸುತ್ತಿರುವೆ. ಗೀತಾ ಬಲಬತ್ತಿ, ಬಾಗಲಕೋಟೆ  ಅರ್ಚನಾ ಚಕ್ರವರ್ತಿ ಸಿಇಒ, ವೀರ ರತ್ನ ಫೌಂಡೇಶನ್‌

-ಅರ್ಚನಾ ಚಕ್ರವರ್ತಿ, ಸಿಇಒ, ವೀರ ರತ್ನ ಫೌಂಡೇಶನ್‌

Advertisement

Udayavani is now on Telegram. Click here to join our channel and stay updated with the latest news.

Next