Advertisement

ನಟಿ ವಸುಂಧರಾ ದಾಸ್‌ ನಿಂದನೆ: ಚಾಲಕ ಸೆರೆ

12:17 PM Nov 03, 2018 | Team Udayavani |

ಬೆಂಗಳೂರು: ನಟಿ, ಗಾಯಕಿ ವಸುಂಧರಾ ದಾಸ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ ಕಾರು ಚಾಲಕನನ್ನು ಮಲ್ಲೇಶ್ವರ ಪೊಲೀಸರ ಬಂಧಿಸಿದ್ದಾರೆ. ಹೆಬ್ಬಗೋಡಿ ನಿವಾಸಿ ಮುನಾವರ್‌ ಪಾಷಾ ಬಂಧಿತ ಆರೋಪಿ.  ಘಟನೆ ಸಂಬಂಧ ನಟಿ ವಸುಂಧರಾ ದಾಸ್‌ ಅ.30ರಂದು ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

ಅ.29ರಂದು ಸಂಜೆ 5 ಗಂಟೆ ಸುಮಾರಿಗೆ ನಟಿ ವಸುಂಧರಾ ದಾಸ್‌ ಸಂಬಂಧಿಕರ ಜತೆ ಮಲ್ಲೇಶ್ವರ ಕಡೆ ಹೋಗಲು ಕಾರಿನಲ್ಲಿ ಬಂದಿದ್ದು, ಭಾಷ್ಯಂ ವೃತ್ತದ ಸಿಗ್ನಲ್‌ನಲ್ಲಿ ಸಂಚಾರ ದಟ್ಟಣೆ ನಡುವೆ ಕಾರು ನಿಲ್ಲಿಸಿದ್ದಾರೆ. ಇದೇ ವೇಳೆ ಟೊಯೋಟೋ ಇಟಿಯೊಸ್‌ ಕಾರಿನಲ್ಲಿ ಬಂದ ಆರೋಪಿ ಸದಾಶಿವನಗರ ಕಡೆ ಹೋಗಲು ಬಲಕ್ಕೆ ತಿರುಗಲು ಸಿಗ್ನಲ್‌ನಲ್ಲಿಯೇ ಸ್ಪಲ್ಪ ಮುಂದೆ ಕಾರು ನಿಲ್ಲಿಸಿದ್ದಾನೆ.

ಸಿಗ್ನಲ್‌ ಬಿಡುತ್ತಿದ್ದಂತೆ ವಸುಂಧರಾ ದಾಸ್‌ ಮಲ್ಲೇಶ್ವರ ಕಡೆ ನೇರವಾಗಿ ಕಾರು ಚಲಾಯಿಸಿದ್ದಾರೆ. ಹೀಗಾಗಿ ಆರೋಪಿಗೆ ಬಲಗಡೆ ತಿರುಗಲು ಅವಕಾಶವಾಗಿಲ್ಲ. ಇದಕ್ಕೆ ಆಕ್ರೋಶಗೊಂಡ ಆರೋಪಿ ಕೂಡಲೇ ಬ್ರೇಕ್‌ ಹಾಕಿ ಕಾರು ನಿಲ್ಲಿಸಿ, ಕೈ ತೋರಿಸಿ ನಿಂದಿಸಿದ್ದಾನೆ.

ಅಲ್ಲದೆ, ಕಾರು ಹಿಂಬಾಲಿಸಿಕೊಂಡು ಬಂದು ಪದೇ ಪದೆ ಹಾರ್ನ್ ಮಾಡಿ ತೊಂದರೆ ಕೊಡುತ್ತಿದ್ದ. ಮಲ್ಲೇಶ್ವರ 18ನೇ ಕ್ರಾಸ್‌ನ ಸಂಪಿಗೆ ರಸ್ತೆ ಸಿಗ್ನಲ್‌ ಬಳಿ ಬಂದು ವಸುಂದರಾಗೆ ಕಾರು ನಿಲ್ಲಿಸುವಂತೆ ಸೂಚಿಸಿದಲ್ಲದೆ, ಕಾಲಿನಿಂದ ಕಾರನ್ನು ಒದ್ದು, ಕೈತೋರಿಸಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ವಸುಂಧರಾ ಮಲ್ಲೇಶ್ವರದ ಮಾರ್ಗೋಸಾ ರಸ್ತೆ ಕಡೆ ಹೋಗುತ್ತಿದ್ದರು.

ಆದರೂ ಆರೋಪಿ ಮತ್ತೂಮ್ಮೆ ಹಿಂಬಾಲಿಸಿ ಅವರ ಕಾರನ್ನು ಅಡ್ಡಗಟ್ಟಿ ಕಾರಿನ ಬಾಗಿಲನ್ನು ತೆಗೆಯಲು ಯತ್ನಿಸಿದ್ದಾನೆ. ಬಳಿಕ ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ವಸುಂಧರಾ ದಾಸ್‌ ಹಾಗೂ ಕಾರಿನಲ್ಲಿದ್ದ ಇತರರಿಗೂ ಬೈಯ್ದಿದ್ದಾನೆ. ಈ ಸಂಬಂಧ ನಟಿ ವಸುಂಧರಾ ದಾಸ್‌ ಮರುದಿನ(ಅ.30)ರಂದು ದೂರು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next