Advertisement

ಶಾಸಕ ಮಹದೇವ್‌ರಿಂದ ವಸೂಲಿ ಧಂದೆ

08:47 PM Jan 12, 2020 | Lakshmi GovindaRaj |

ಪಿರಿಯಾಪಟ್ಟಣ: ವಸೂಲಿ ಧಂದೆಯಲ್ಲಿ ಮುಳುಗಿರುವ ಶಾಸಕ ಕೆ.ಮಹದೇವ್‌ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವಿಲ್ಲ ಎಂದು ಮಾಜಿ ಸಚಿವ ಕೆ.ವೆಂಕಟೇಶ್‌ ಹರಿಹಾಯ್ದರು. ಪಟ್ಟಣದ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Advertisement

ಶಾಸಕ ಕೆ.ಮಹದೇವ್‌ಗೆ ಸಾಮಾನ್ಯ ಜ್ಞಾನವಿಲ್ಲ: ಕಳೆದ ಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್‌ ಅವರನ್ನು ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮಕ್ಕೆ ಕರೆತಂದು 300 ಕೋಟಿ ರೂ. ವೆಚ್ಚದಲ್ಲಿ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಕೆಲಸ ಪ್ರಾರಂಭಿಸಲು ಗುತ್ತಿಗೆದಾರನಿಗೆ ಶೇ.10 ಹಣ ನೀಡಿ ಕೆಲಸ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರ ಫ‌ಲವಾಗಿ ಇಂದು ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಇದರ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದ ಕ್ಷೇತ್ರದ ಶಾಸಕ ಕೆ.ಮಹದೇವ್‌ ತಾಲೂಕಾದ್ಯಂತ ಸಾರ್ವಜನಿಕರ ಮುಂದೆ ಹೋಗಿ ಕೆರೆ ತುಂಬಿಸುವ ಕಾರ್ಯಕ್ಕೆ ಸಿದ್ಧರಾಮಯ್ಯ ಹಣ ನೀಡಲಿಲ್ಲ, ಕುಮಾರಸ್ವಾಮಿ ಕೈ ಕಾಲಿಡಿದು ನಾನು ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಛೇಡಿಸಿದರು.

ಕಾರ್ಯಕರ್ತರನ್ನು ವಂಚಿಸುವ ಕೆಲಸ ಮಾಡಬೇಡಿ: ತಾವು ಶಾಸಕರಾಗಿದ್ದ ಅವಧಿಯಲ್ಲಿ ಸಾಮಾನ್ಯ ವರ್ಗದ ಜನರಿಗೆ ಮನೆ ನೀಡಬೇಕೆಂಬ ಆಶಯದಿಂದ 2 ಸಾವಿರ ಮನೆಗಳನ್ನು ತಂದು ಬಡವರು ಹಾಗೂ ಸಾಮಾನ್ಯ ಜನರಿಗೆ ಅನುಕೂಲ ಸೂರು ಕಲ್ಪಿಸಲಾಗಿತ್ತು. ಇವರು ಶಾಸಕರಾದ ನಂತರ ಒಂದು ಮನೆಯೂ ತರಲು ಸಾಧ್ಯವಾಗಿಲ್ಲ ಹಾಗೂ ಶಾಸಕನಾಗಿದ್ದ ಸಂದರ್ಭದಲ್ಲಿ 2 ಸಾವಿರ ಕೋಟಿಗೂ ಅಧಿಕ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೆ ಆದರೆ ಇಂದಿನ ಶಾಸಕ ಕೆ.ಮಹದೇವ್‌ ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ತಾಲೂಕಿಗೆ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಅವರ ಅನುದಾನದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಅದನ್ನು ಬಿಟ್ಟು ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಎರಡೆರಡು ಬಾರಿ ಗುದ್ದಲಿಪೂಜೆ ಮಾಡುತ್ತ ಸಾರ್ವಜನಿಕರನ್ನು ಹಾಗೂ ಕಾರ್ಯಕರ್ತರನ್ನು ವಂಚಿಸುವ ಕೆಲಸ ಬಿಡಲಿ ಎಂದು ಸವಾಲೆಸೆದರು.

ವಸೂಲಿ ದಂಧೆಯಲ್ಲಿ ಮುಳುಗಿರುವ ಶಾಸಕ: ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಪಕ್ಷಭೇದ ಮರೆತು ಎಲ್ಲರಿಗೂ ಸವಲತ್ತುಗಳನ್ನು ಒದಗಿಸಿದ್ದೇನೆ, ತಾನು ಶಾಸಕನಾಗಿ ರುವವರೆಗೂ ತಾಲೂಕಿನ ಜನತೆಗೆ ಹೆಮ್ಮೆ ತರುವ ಕೆಲಸ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ, ಆದರೆ ಇಂದಿನ ಶಾಸಕರಿಗೆ ಮತ್ತು ಅವರ ಮಗನಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇಲ್ಲ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಸರ್ಕಾರದ ಅನುದಾನ ವಾಪಾಸಾದರೆ ಅದು ಎಲ್ಲಿ ಹೋಗುತ್ತದೆ, ಹೇಗೆ ತರಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲದ ಇವರು ಅಭಿವೃದ್ಧಿ ಬಗ್ಗೆ ಚಿಂತಿಸುವುದನ್ನು ಬಿಟ್ಟು ಕೇವಲ ಹಣ ನೀಡಿದರವರಿಗೆ ಕೆಲಸ ಮತ್ತು ಚೀಟಿ ನೀಡಿದವರಿಗೆ ಟಾರ್ಪಾಲ್‌ ನೀಡುತ್ತಿದ್ದಾರೆ. ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ತಂದು ಸಮಗ್ರ ಅಭಿವೃದ್ಧಿಯ ಹಾಗೂ ಶ್ರೀ-ಸಾಮಾನ್ಯರ ಬಗ್ಗೆ ಚಿಂತಿ ಸಬೇಕಾದ ಶಾಸಕರ ತಮ್ಮ ಮಗನೊಡನೆ ಸೇರಿ ವಸೂಲಿ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಕೆಲಸ ಆರಂಭಿಸಲು ಕಮಿಷನ್‌ ನೀಡಬೇಕು: ನನ್ನ ಅವಧಿಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 57 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು ಆದರೆ ಗುತ್ತಿಗೆದಾರ ಕಮಿಷನ್‌ ನೀಡಲಿಲ್ಲ ಎಂದು ಅವನ್ನು ಕೆಲಸ ಮಾಡಲು ಬಿಡಲಿಲ್ಲ ಕಮಿಷನ್‌ ಹಣ ಕೊಟ್ಟ ನಂತರ ಕೆಲಸ ಮಾಡಲು ಅವಕಾಶ ಕೊಟ್ಟರು ಹೀಗಾಗಿ 2 ವರ್ಷ ಕಳೆದರೂ ಯುಜಿಡಿ ಕೆಲಸ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದ ಅವರು, ತಾಲೂಕಿನಲ್ಲಿ ಯಾವುದೇ ಗುತ್ತಿಗೆದಾರ ಕೆಲಸ ಪ್ರಾರಂಭಿಸುವ ಮೊದಲು ಇವರಿಗೆ ಕಮಿಷನ್‌ ಹಣ ನೀಡಬೇಕು ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಇದಕ್ಕಾಗಿಯೇ ತಾಲೂಕಿಗೆ ಯಾವ ಗುತ್ತಿಗೆದಾರರು ಕಾಲು ಹಾಕುತ್ತಿಲ್ಲ ಎಂದರು.

Advertisement

ಚುನಾವಣೆಗೆ ಸಿದ್ಧರಾಗಿ:  ಕೆಲವೇ ದಿನಗಳಲ್ಲಿ 11 ಸಹಕಾರ ಸಂಘ ಹಾಗೂ ಪಿಎಲ್‌ಡಿ ಬ್ಯಾಂಕ್‌ ಸೇರಿದಂತೆ ಹಲವು ಚುನಾವಣೆಗಳು ಬರುತ್ತಿರುವುದರಿಂದ ಕಾರ್ಯಕರ್ತರು ಸನ್ನದ್ಧರಾಗುವಂತೆ ಸೂಚಿಸಿದರು.

ಮಹದೇವ್‌ ಸುಳ್ಳು ಹೇಳುವುದ ನಿಲ್ಲಿಸಲಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಮಾತನಾಡಿ, ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಗಟ್ಟಿಯಾಗಿದೆ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್‌ ಪುಟಿದೇಳಲಿದೆ ಇದಕ್ಕೆ ಹುಣಸೂರು ಚುನಾವಣೆಯಲ್ಲಿ ಗಳಿಸಿದ ಅಭೂತ ಪೂರ್ವ ಗೆಲುವೇ ಸಾಕ್ಷಿ, ಬಿಜೆಪಿ ಸರ್ಕಾರ ತಮ್ಮ ವಿಫ‌ಲತೆಗಳ ವಿರುದ್ಧ ಹೋರಾಟ ನಡೆಸುವ ಚಳವಳಿಗಾರರನ್ನು ಜೈಲಿಗಟ್ಟುವ ಕೆಲಸದಲ್ಲಿ ನಿರತವಾಗಿದೆ. ತಂಬಾಕು ನಿಷೇಧದ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಒಂದು ಹೇಳಿಕೆ ನೀಡಿದರೆ ಅವರದೆ ಪಕ್ಷದ ಡಾ.ಹರ್ಷವರ್ಧನ್‌ ತದ್ವಿರುದ್ಧ ಹೇಳಿಕೆ ನೀಡುತ್ತಾರೆ ಇನ್ನು ಶಾಸಕ ಕೆ.ಮಹದೇವ್‌ ತಾವು ಸರ್ಕಾರದಿಂದ ತಂದಿರುವ ಅನುದಾನ ಮತ್ತು ತಾಲೂಕಿನಲ್ಲಿ ಮಾಡಿರುವ ಕಾಮಗಾರಿ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಅದನ್ನು ಬಿಟ್ಟು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದರು.

ಮುಖಂಡರಾದ ಬಿ.ಎಸ್‌.ರಾಮಚಂದ್ರ, ಸೀಗೂರು ವಿಜಯಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್‌ ಜಾನ್‌ ಬಾಬು, ತಾಪಂ ಅಧ್ಯಕ್ಷೆ ಕೆ.ಆರ್‌.ನಿರೂಪ, ಸದಸ್ಯರಾದ ಶಿವಮ್ಮ, ಶ್ರೀನಿವಾವ್‌, ಪುರಸಭಾ ಸದಸ್ಯರಾದ ಅಬ್ದುಲ್‌ ಅರ್ಷದ್‌, ಶ್ಯಾಮ…, ಮಂಜುನಾಥ್‌, ರವಿ, ಮುಖಂಡರಾದ ಚಂದ್ರಶೇಖರ್‌, ರಾಜಯ್ಯ, ಮೋಹನ್‌ ಕುಮಾರ್‌, ಡಿ.ಎ.ಜವರಪ್ಪ, ಪಿ.ಮಹದೇವ್‌, ಹೊಲದಪ್ಪ, ಲಕ್ಷ್ಮಣೇಗೌಡ, ತೆಲುಗಿನಕುಪ್ಪೆ ನಾಗಣ್ಣ, ವಿಷಕಂಠಯ್ಯ, ಜಯಲಕ್ಷ್ಮಮ್ಮ ಇತರರು ಇದ್ದರು.

ಬಹಿರಂಗ ಚರ್ಚೆಗೆ ಸವಾಲ್‌: ರಾಜ್ಯದಲ್ಲಿಯೇ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ ಎಂದರೆ, ಅದು ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್‌, ಇವರು ಮತ್ತು ಇವರ ಮಗ ಸೇರಿಕೊಂಡು ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುವುದರಲ್ಲಿ ನಿರತರಾಗಿದ್ದಾರೆ. ನಾನು ಬಿಡುಗಡೆ ಮಾಡಿಸಿದ ಕೆಲಸಗಳಿಗೆ ಎರೆಡೆರಡು ಬಾರಿ ಗುದ್ದಲಿಪೂಜೆ ಮಾಡಿಸುತ್ತಿದ್ದಾರೆ, ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಹಾಗೂ ನನ್ನ ಅವಧಿಯಲ್ಲಿ ನಾನು ಏನು ತಂದಿದ್ದೇನೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಕೆ.ವೆಂಕಟೇಶ್‌ ಸವಾಲ್‌ ಎಸೆದರು.

Advertisement

Udayavani is now on Telegram. Click here to join our channel and stay updated with the latest news.

Next