Advertisement

ವರ್ಣಾಶ್ರಮ ಪದ್ಧತಿ ಮಹಾಪರಾಧ

06:02 AM Feb 25, 2019 | |

ದಾವಣಗೆರೆ: ಐದು ಸಾವಿರ ವರ್ಷದ ಹಿಂದೆ ಸೃಷ್ಟಿಸಿದ ವರ್ಣಾಶ್ರಮ ಪದ್ಧತಿ ಮಹಾಪರಾಧ ಎಂದು ಉಪಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ್‌ ಬಣ್ಣಿಸಿದ್ದಾರೆ. ಭಾನುವಾರ, ಜಿಲ್ಲಾ ಛಲವಾದಿ ಮಹಾಸಭಾ ಶ್ರೀಶಿವಯೋಗಿ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಮತ್ತು ಜನಜಾಗೃತಿ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಇಡೀ ವಿಶ್ವದ ಯಾವುದೇ ಸಮಾಜದಲ್ಲಿ ವರ್ಗೀಕರಣ ಆಗಿಲ್ಲ. ಜಾತಿ ಹೆಸರಲ್ಲಿ ಮೇಲು-ಕೀಳು ಎಂಬ ವರ್ಗೀಕರಣ ಅಕ್ಷಮ್ಯ ಅಪರಾಧ ಎಂದರು.

Advertisement

ಆಧುನಿಕ ಜಗತ್ತಿಗೆ ಮೊದಲು ಬದಲಾವಣೆಯ ಮುನ್ನುಡಿ ಬರೆದವರು ಭಗವಾನ್‌ ಬುದ್ಧ. ಸಮಾಜದಲ್ಲಿನ ಶೋಷಿತರ ಸಂಕಷ್ಟ ಗುರುತಿಸಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. 

12ನೇ ಶತಮಾನದಲ್ಲಿ ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣನವರು ಮೊದಲ ಬಾರಿಗೆ ಅನುಭವ ಮಂಟಪವೆಂಬ ಸಂಸತ್‌ನಲ್ಲಿ ಶೋಷಿತರಿಗೆ ಸಮಾನತೆ ಪ್ರತಿಪಾದಿಸಿದರು. ಆಧುನಿಕ ಭಾರತದಲ್ಲಿ ಮಹಾತ್ಮ ಗಾಂಧೀಜಿ ಶೋಷಿತರನ್ನು ಹರಿಜನರೆಂದು ಕರೆದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಾಬಾಸಾಹೇಬ್‌ ಅಂಬೇಡ್ಕರ್‌ ಶೋಷಿತರ ಧ್ವನಿಯಾಗಿ ಹೋರಾಟ ಮಾಡಿದರು. ಶೋಷಿತರ ಅದೃಷ್ಟವೇನೋ ಎಂಬಂತೆ ಅವರಿಗೆ ಸಂವಿಧಾನ ರಚನೆ ಅವಕಾಶ ದೊರೆಯಿತು. ಅಂಬೇಡ್ಕರ್‌ ಅವರಿಗೆ ಆ ಅವಕಾಶ ಸಿಗದಿದ್ದರೆ ಯಾವ ಸಮಾಜ ನಿರ್ಮಾಣ ಆಗುತ್ತಿತ್ತೋ ಎಂಬುದನ್ನು ಯೋಚಿಸಿ ಎಂದು ಹೇಳಿದರು.

ಸಂವಿಧಾನಕ್ಕೆ ಅಪಮಾನ ಮಾಡುವ ಹಾಗೂ ಅದರ ವಿರುದ್ಧ ನಡೆಯುವವರಿಗೆ ಈ ದೇಶದಲ್ಲಿ ಗೌರವ ಇಲ್ಲ. ಸಂವಿಧಾನ ತಿದ್ದಲು ಮುಂದಾಗುವವರಿಗೆ ಈ ದೇಶದ ಹಿತಾಸಕ್ತಿ ಇಲ್ಲ ಎಂದು ಟಾಂಗ್‌ ನೀಡಿದರು.

ದೇಶದ ಅಭಿವೃದ್ಧಿ ಆಗಬೇಕಿದ್ದಲ್ಲಿ ಮೊದಲು ಜಾತಿ ನಾಶವಾಗಬೇಕು. ಶೋಷಿತರು, ದಲಿತರು ಎಂದೇಳಿಕೊಳ್ಳಲು ನಾವು ಅಂಜಬಾರದು. ನಮಗೆ ಅಂಬೇಡ್ಕರ್‌ ದೇವರು, ಸರ್ವಸ್ವ. ಅವರು ತೋರಿಸಿದ ಹೋರಾಟದ ದಾರಿ ಬದಲಾಗಬಾರದು. ದಾರಿ ಬದಲಿಸಿದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಆ ನಿಟ್ಟಿನಲ್ಲಿ ಸಮಾಜದವರು ಮೊದಲು ವಿದ್ಯಾವಂತರಾಗಬೇಕು. ಸಮಾಜದ ಪೋಷಕರು ತಮ್ಮ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಶಪಥ ಮಾಡಬೇಕು. ನಾನು ಎಲ್ಲೇ ಇರಲಿ, ಸಮಾಜದ ಜೊತೆಗಿರುತ್ತೇನೆ. ಸಮಾಜ ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಹಾಸಭಾದವರು ಸಲ್ಲಿಸಿದ ಬೇಡಿಕೆಗಳಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವುಗಳ ಈಡೇರಿಕೆಗೆ ಭರವಸೆ ನೀಡಿದರು. 

Advertisement

ಭಿನ್ನವತ್ತಲೆ…
ಛಲವಾದಿ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ, ದಾವಿವಿಯಲ್ಲಿ ದಿ.ಬಸವಲಿಂಗಪ್ಪ ಅಧ್ಯಯನ ಪೀಠ ಸ್ಥಾಪನೆ, 5 ಎಕರೆ ಜಮೀನು ಖರೀದಿಗೆ ಧನಸಹಾಯ, ಡಾ|ಬಿ.ಆರ್‌.ಅಂಬೇಡ್ಕರ್‌ ಕಂಚಿನ ಪ್ರತಿಮೆ ನಿರ್ಮಾಣ, ವಿದ್ಯಾರ್ಥಿನಿಲಯ ಹಾಗೂ ಮಹಾಸಭಾದ ಕಟ್ಟಡಕ್ಕೆ 5 ಕೋಟಿ ರೂ. ನೆರವು, ವೀರವನಿತೆ ಒನಕೆ ಓಬವ್ವನ ಜಯಂತಿ ಸರ್ಕಾರದಿಂದಲೇ ಆಚರಣೆ, ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಛಲವಾದಿ ಸಮುದಾಯ ಭವನ ನಿರ್ಮಾಣಕ್ಕೆ ಕೋರಿ ಇದೇ ಸಂದರ್ಭದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಉಪ ಮುಖ್ಯಮಂತ್ರಿಗಳಿಗೆ ಭಿನ್ನವತ್ತಲೆ ಸಲ್ಲಿಸಲಾಯಿತು.

ಸ್ವಲ್ಪಮಟ್ಟಿಗೆ ಅಸ್ಪೃಶ್ಯತೆ ನಿವಾರಣೆ
 ದಾವಣಗೆರೆ: ಅಸ್ಪೃಶ್ಯತೆಗೆ 5 ಸಾವಿರ ವರ್ಷಗಳ ಇತಿಹಾಸ ಇದೆ. ಸ್ವಾತಂತ್ರ್ಯಾ ನಂತರ ಸ್ವಲ್ಪಮಟ್ಟಿನ ಬದಲಾವಣೆ ಆಗುತ್ತಿದೆ. ಆದರೆ, ಸಂಪೂರ್ಣ ಬದಲಾವಣೆ ಆಗಬೇಕಿದ್ದರೆ ಜನರ ಮನಪರಿವರ್ತನೆ ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಳಕಿಗೆ ಬರುತ್ತಿರುವ ಅಸ್ಪೃಶ್ಯತೆ ಪ್ರಕರಣಗಳ ಬಗ್ಗೆ ಮಾಧ್ಯಮದವರ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಸ್ಪೃಶ್ಯತೆ ಅಷ್ಟು ಬೇಗ ನಿರ್ಮೂಲನೆ ಆಗುವುದು ಕಷ್ಟ. ದೇಶಕ್ಕೆ ಸ್ವಾತಂತ್ರ್ಯಾ ಸಿಕ್ಕ ಬಳಿಕ ಸಂವಿಧಾನ ಜಾರಿಯಾಗಿ ತಕ್ಕಮಟ್ಟಿಗೆ ಬದಲಾವಣೆ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next