Advertisement

ಕಾರ್ತಿಕ ಹಬ್ಬದ ವಿವಿಧ ಖಾದ್ಯಗಳು

07:04 PM Nov 07, 2019 | mahesh |

ಈಗ ಕಾರ್ತಿಕ ಮಾಸ. ಕಾರ್ತಿಕದ ಚಳಿಗೆ ಎಣ್ಣೆ , ತುಪ್ಪದ ಖಾದ್ಯದಿಂದ ಚರ್ಮಕ್ಕೆ ಕಾಂತಿ ಬರುವುದು. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.

Advertisement

ಉಬ್ಬು ನೆವರಿ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- ಒಂದೂವರೆ ಕಪ್‌, ತೆಂಗಿನತುರಿ- 2 ಕಪ್‌, ಬೆಲ್ಲ- 1 ಕಪ್‌, ಅರಳುಹುಡಿ- 1/2 ಕಪ್‌, ಏಲಕ್ಕಿ ಹುಡಿ, ಚಿಟಿಕೆ ಉಪ್ಪು , ಕರಿಯಲು ಎಣ್ಣೆ, ಹುರಿದ ಕರಿ ಎಳ್ಳು.

ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ನಂತರ ಗೋಧಿಹಿಟ್ಟು ಹಾಕಿ ಕಲಸಿ. ಅದಕ್ಕೆ ಎರಡು ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಪೂರಿ ಹಿಟ್ಟಿನಂತೆ ಕಣಕ ತಯಾರಿಸಿಡಿ. ಹೂರಣ ಮಾಡಲು ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಪಾಕಮಾಡಿ ತೆಂಗಿನತುರಿ, ಅರಳುಹುಡಿ, ಎಳ್ಳು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿಡಿ. ಕಣಕದಿಂದ ಚಿಕ್ಕ ಚಿಕ್ಕ ಪೂರಿ ಲಟ್ಟಿಸಿ. ಒಂದು ಪೂರಿಯಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಇನ್ನೊಂದು ಪೂರಿ ಅದರ ಮೇಲಿಟ್ಟು ಅಂಚನ್ನು ಕೈಯಿಂದ ಮಡಚಿ (ಎಡೆ ಇಲ್ಲದಂತೆ ನೋಡಿ) ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಒಂದೆರಡು ನೆವರಿ ಹಾಕಿ ಎರಡೂ ಬದಿ ಕಾಯಿಸಿರಿ.

ಉಂಡ್ಲುಕ
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು- 1 ಕಪ್‌, ಜೀರಿಗೆ- 1 ಚಮಚ, ಕಾಳುಮೆಣಸು 5-6, ಮೈದಾ- 2 ಚಮಚ, ಕರಿಯಲು ಎಣ್ಣೆ , ಬೆಲ್ಲ- 1/2 ಕಪ್‌, ತೆಂಗಿನತುರಿ- 1 ಕಪ್‌, ಏಲಕ್ಕಿ ಹುಡಿ ಸ್ವಲ್ಪ , ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅರ್ಧ ಕಪ್‌ ನೀರು ಹಾಕಿ ಉಪ್ಪು , ಬಿಸಿ ಮಾಡಿದ ತುಪ್ಪ, ಕುಟ್ಟಿದ ಕಾಳುಮೆಣಸು, ಜೀರಿಗೆ ಹಾಕಿ ಕೆದಕಿ ಅಕ್ಕಿಹಿಟ್ಟು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ಮೈದಾ ಹಾಕಿ ಪುನಃ ಚೆನ್ನಾಗಿ ನಾದಿ ಕೈಗೆ ಎಣ್ಣೆ ಸವರಿ ನೆಲ್ಲಿಕಾಯಿ ಗಾತ್ರದ ಉಂಡೆ ಕಟ್ಟಿಡಿ. ಬಾಣಲೆಯಲ್ಲಿ ಎಣ್ಣೆ ಕಾದಮೇಲೆ ಐದಾರು ಉಂಡೆ ಬಿಡಿ. ಹೊಂಬಣ್ಣ ಬರುವವರೆಗೆ ಕಾಯಿಸಿರಿ. ಬೆಲ್ಲದ ಪಾಕ ಮಾಡಿ ತೆಂಗಿನ ತುರಿ, ಏಲಕ್ಕಿ ಹುಡಿ ಹಾಕಿ ಕಲಸಿ. ಕಾಯಿಸಿಟ್ಟ ಉಂಡ್ಲುಕ ಹಾಕಿ ಚೆನ್ನಾಗಿ ಬೆರೆಸಿ ಸವಿಯಿರಿ. ಸಿಹಿ ಇಲ್ಲದೆಯೂ ಉಂಡ್ಲುಕ ಮೆಲ್ಲಬಹುದು.

Advertisement

ಗೇರುಬೀಜ -ಅರಳುಹುಡಿ ಉಂಡೆ
ಬೇಕಾಗುವ ಸಾಮಗ್ರಿ: ಅರಳುಹುಡಿ- 2 ಕಪ್‌, ಅಂಟಿನ ಬೆಲ್ಲ- 1 ಕಪ್‌, ಸ್ವಲ್ಪ ಏಲಕ್ಕಿ ಹುಡಿ, ಕರಿ ಎಳ್ಳು- 1/2 ಕಪ್‌, ಗೇರುಬೀಜ- 10, ತುಪ್ಪ ಉಂಡೆ ಕಟ್ಟಲು.

ತಯಾರಿಸುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಪಾಕ ಮಾಡಿ ಏಲಕ್ಕಿ ಹುಡಿ ಹಾಕಿ. ಎಳ್ಳು ತೊಳೆದು ಒಣಗಿಸಿ ಪಸೆ ಇಲ್ಲದೆ ಬಾಣಲೆಯಲ್ಲಿ ಹುರಿದು ತೆಗೆದಿಡಿ. ಗೇರುಬೀಜ ಚೂರನ್ನು ತುಪ್ಪದಲ್ಲಿ ಹುರಿಡಿದಿ. ಎಳ್ಳು, ಗೇರುಬೀಜ, ಅರಳುಹುಡಿ, ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಮಗುಚಿರಿ. ಅಂಗೈಗೆ ತುಪ್ಪ ಸವರಿ ಸ್ವಲ್ಪ ಬಿಸಿಯಾಗಿರುವಾಗಲೆ ಉಂಡೆ ಕಟ್ಟಿ ಸ್ಟೀಲ್‌ ಡಬ್ಬಿಯಲ್ಲಿಡಿ. ಒಂದು ತಿಂಗಳಾದರೂ ಸ್ವಾದಿಷ್ಟವಾಗಿರುವುದು.

ಬೇಳೆಗಳ ಪಂಚಕಜ್ಜಾಯ
ಬೇಕಾಗುವ ಸಾಮಗ್ರಿ: ಅರಳುಹುಡಿ- 2 ಕಪ್‌, ಬೆಲ್ಲ- 1 ಕಪ್‌, ಏಲಕ್ಕಿಹುಡಿ, ಎಳ್ಳು- 1/4 ಕಪ್‌, ಗೇರುಬೀಜದ ಚೂರು ಸ್ವಲ್ಪ, ಒಣದ್ರಾಕ್ಷೆ- 10, ಕಡಲೆಬೇಳೆ- 4 ಚಮಚ, ಹೆಸರುಬೇಳೆ- 4 ಚಮಚ, ತುಪ್ಪ- 2 ಚಮಚ, ಕಾಯಿತುರಿ- ಒಂದೂವರೆ ಕಪ್‌.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ದ ಪಾಕ ಮಾಡಿ ಕಾಯಿತುರಿ, ಅರಳು ಹುಡಿ, ಏಲಕ್ಕಿ ಹಾಕಿ ಚೆನ್ನಾಗಿ ಮಗುಚಿಡಿ. ಕಡಲೆಬೇಳೆ, ಹೆಸರುಬೇಳೆ ಬಾಣಲೆಯಲ್ಲಿ ಬೇರೆ ಬೇರೆಯಾಗಿ ಹುರಿದು ತರಿ ತರಿ ಹುಡಿ ಮಾಡಿ. ಎಳ್ಳು ಹುರಿದಿಡಿ. ತುಪ್ಪದಲ್ಲಿ ಗೇರುಬೀಜ, ದ್ರಾಕ್ಷಿ, ಹುರಿದಿಟ್ಟ ಎಲ್ಲವನ್ನೂ ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಮಗುಚಿರಿ. ಆರೋಗ್ಯದಾಯಕ ಘಮಘಮ ಪಂಚಕಜ್ಜಾಯ ಸವಿಯಿರಿ.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next