Advertisement

ಮನಃ ಪರಿವರ್ತನೆಗೆ ವಚನಗಳು ಸಹಕಾರಿ; ಡಾ|ಚನ್ನವೀರ ದೇವರು

06:19 PM Aug 15, 2022 | Nagendra Trasi |

ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು.

Advertisement

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್‌, ಬಸವನಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿ, ಕುಂಟೋಜಿ ಯಶಸ್ವಿನಿ ಮಹಿಳಾ ಬಳಗದ ಸಹಯೋಗದಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ರುದ್ರಾಕ್ಷಿ ದೀಕ್ಷೆ, ವಿಭೂತಿ ವಿತರಣೆ, ವಚನ ಪುಸ್ತಕಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಪ್ಪು ಮಾಡುವುದು ತಪ್ಪಲ್ಲ. ತಪ್ಪು ಅಂತಾ ತಿಳಿದ ಮೇಲೂ ಮಾಡುವ ತಪ್ಪೇ ತಪ್ಪು. ಮಹಾತ್ಮ ಗಾಂಧಿಜಿ ಜೈಲಿನಲ್ಲಿ ಇದ್ದುಕೊಂಡೇ ಆತ್ಮ ಕಥನ ಬರೆದರು. ಸುಭಾಷ್‌ಚಂದ್ರ ಬೋಸ್‌, ಭಗತಸಿಂಗ್‌ ಅವರ ಆದರ್ಶಗಳು, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಿದಲ್ಲಿ ಜೀವನದಲ್ಲಿ ಮಹಾ ಮಾನವರಾಗಲು ಸಾಧ್ಯವಿದೆ ಎಂದು ಮಾರ್ಗದರ್ಶನ ಮಾಡಿದರು.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಜೆ.ಐ. ಮ್ಯಾಗೇರಿ ಮಾತನಾಡಿ, ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆದರದ ಮೇಲೆ ಕೆಲವರು ಈ ವರ್ಷ ಬಿಡುಗಡೆ ಆಗಲಿದ್ದಾರೆ. ಇತರೆ ಕೈದಿಗಳು ಸಹ ಸನ್ನಡನೆ ಮೂಲಕ ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವಿವಿಧ ಕಾರಣಗಳಿಂದಾಗಿ ಜೈಲುಗಳಲ್ಲಿ ಬಂಧಿಗಳಾಗಿರುವ ಕೈದಿಗಳು ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ. ಅಂಥ ಬಂಧಿಗಳು ನೈತಿಕ ಮೌಲ್ಯಗಳ ಧಾರ್ಮಿಕ ಮಾರ್ಗ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೈದಿಗಳು ಸನ್ನಡತೆ ಮೈಗೂಡಿಸಿಕೊಳ್ಳಲು ಧಾರ್ಮಿಕ ಮಾರ್ಗಗಳ ಸರಳ ಸೂತ್ರಗಳನು ಹೇಳಿಕೊಟ್ಟಿದ್ದಾರೆ. ಇದನ್ನು ಕೈದಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

Advertisement

ಮನುಷ್ಯ ಬದಲಾವಣೆಯ ಬದುಕಿಗಾಗಿ ವಚನಗಳನ್ನು ಅರಿತು ಬಾಳುವುದು ಮುಖ್ಯ. ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದಯೆ, ತಾಳ್ಮೆ, ಸಹನೆ ಹೀಗೆ ಸದ್ಗುಣಗಳು ನಿಮ್ಮದಾಗಲಿವೆ. ಸದರಿ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೈಲು ಬಂಧಿಗಳು ಭವಿಷ್ಯದಲ್ಲಿ ಸಮಾಜದ ಉತ್ತಮ ನಾಗರಿಕರಾಗಿ ಜೀವಿಸಬೇಕು ಎಂದು ವಿಶ್ವ ಬಸವ ಬಂಧು ಸಮಿತಿಯ ಡಾ| ಅಮರೇಶ ಮಿಣಜಿಗಿ ಸಲಹೆ ನೀಡಿದರು.

ಉಪನ್ಯಾಸಕ ರಾಜೇಂದ್ರಕುಮಾರ ಮಾತನಾಡಿ, ಮನುಷ್ಯನಿಗೆ ಕ್ಷಮಾಗುಣ ಅವಶ್ಯ. ದಯೆ ಕರುಣೆ ತ್ಯಾಗದಿಂದಲೇ ಎಲ್ಲವನ್ನು ಗೆಲ್ಲಬೇಕು ಎಂದರು. ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ಡಾ| ಅಮರೇಶ ಮಿಣಜಗಿ ಪ್ರಾಸ್ತಾವಿಕ ಮಾತನಾಡಿದರು.

ಐ.ಎಸ್‌. ಹಿರೇಮಠ, ಸುರೇಶ ಪೂಜಾರಿ ವೇದಿಕೆಯಲ್ಲಿದ್ದರು. ಬಂಧಿಖಾನೆಯಲ್ಲಿರುವ ಕೈದಿಗಳಿಗೆ ಹಣೆಗೆ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿ ವಚನ ಪುಸ್ತಕ ನೀಡಿ ಪ್ರಸಾದ ವಿತರಿಸಲಾಯಿತು. ಯಶಸ್ವಿನಿ ಮಹಿಳಾ ಸಂಘದವರು ಎಲ್ಲ ಕೈದಿಗಳಿಗೆ ರಾಖಿ ಕಟ್ಟಿ ಸಿಹಿ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಂಗಮೇಶ ಗುತ್ತೇದಾರ, ದೇವೇಂದ್ರ ಪತ್ತಾರ, ಶಿವಪುತ್ರ ಯಶರದಾ, ಶಂಕ್ರಮ್ಮ ಹೂಗಾರ, ಸ್ನೇಹಾ ಹಿರೇಮಠ, ಸಿದ್ದಮ್ಮ ಒಣರೊಟ್ಟಿ, ರೇಖಾ ಹೂಗಾರ, ಶಿವಮ್ಮ ಹೂಗಾರ ಇದ್ದರು. ಬಿ.ಆರ್‌. ಬನಸೋಡೆ ಪ್ರಾರ್ಥಿಸಿದರು. ಶಕೀಲಾ ಬೇಗಂ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next