Advertisement

ವಚನ ಸಂಪನ್ನೆ ಲಾಲ್‌ಬಿ

12:49 AM May 18, 2017 | Karthik A |

ಎಪ್ಪತ್ತು ವರ್ಷ ವಯಸ್ಸಿನ ಲಾಲ್‌ಬಿ ಅವರದು ಸುಶ್ರಾವ್ಯ ವಚನ ಗಾಯನದಲ್ಲಿ ಎತ್ತಿದ ಕೈ. ವಚನಗಳನ್ನು ಹಾಡುವುದು ಮಾತ್ರವಲ್ಲದೆ, ಅದರ ಅರ್ಥ ವಿಶ್ಲೇಷಣೆಯನ್ನೂ ಸೊಗಸಾಗಿ ಮಾಡುವರು…

Advertisement

ಇಮಾಂ ಸಾಬಿಗೂ ಗೋಕುಲಾಷ್ಠಮಿಗೂ ಎತ್ತಣಿಂದೆತ್ತ ಸಂಬಂಧ ಎನ್ನುವ ಗಾದೆ ಹಳತೇ. ಆದರೆ, ಅದನ್ನು ನೆನಪಿಸುವ ದೃಷ್ಟಾಂತಗಳು ಸಮಾಜದಲ್ಲಿ ಸಿಗುತ್ತಲೇ ಇರುತ್ತವೆ. ನಮ್ಮಲ್ಲಿ ವಿವಿಧ ಕೋಮುಗಳ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಮಂದಿಯ ಮಧ್ಯೆ ಅಲ್ಲಲ್ಲಿ ಸೌಹಾರ್ದತೆಯನ್ನು ಸಾರುವ ಮಂದಿಯೂ ಕಾಣಸಿಗುತ್ತಾರೆ. ಮರುಭೂಮಿಯಲ್ಲಿ ಸಿಹಿನೀರ ಒರತೆ ಸಿಕ್ಕಂತೆ. ಅದಕ್ಕೊಂದು ಉದಾಹರಣೆ ಧಾರವಾಡದ ಗುಲಗಂಜಿಕೊಪ್ಪದ ಮಹಿಳೆ ಲಾಲ್‌ಬಿ ಹುಲಕೋಟಿ. ಮುಸಲ್ಮಾನರಾದರೂ ಹಿಂದೂ ಧರ್ಮ ಶ್ರದ್ಧೆಯನ್ನು ಬೆಳೆಸಿಕೊಂಡಿರುವುದು ಅವರ ಹೆಗ್ಗಳಿಕೆ.

ಎಪ್ಪತ್ತು ವರ್ಷ ವಯಸ್ಸಿನ ಲಾಲ್‌ಬಿ ಅವರು ಗುಲಗಂಜಿಕೊಪ್ಪ ಬಸವ ಕೇಂದ್ರದ ಉಪಾಧ್ಯಕ್ಷರು. ಸುಶ್ರಾವ್ಯ ವಚನಗಾಯನದಲ್ಲಿ ಅವರದು ಎತ್ತಿದ ಕೈ. ವಚನಗಳನ್ನು ಹಾಡುವುದು ಮಾತ್ರವಲ್ಲದೆ ಅದರ ಅರ್ಥ ವಿಶ್ಲೇಷಣೆಯನ್ನೂ ಅವರು ಮಾಡಬಲ್ಲರು. ಮಹಮ್ಮದ್‌ ಪೈಗಂಬರರು, ಬಸವಣ್ಣನವರು ಸೇರಿದಂತೆ ಎಲ್ಲಾ ಧಾರ್ಮಿಕ ಮುಖಂಡರ ಸಂದೇಶಗಳನ್ನು ಜನರಿಗೆ ತಲುಪಿಸುವುದರಲ್ಲಿಯೇ ಈಕೆ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿದ್ದಾರೆ.

ಮಹಾನ್‌ ಗಾಂಧಿವಾದಿ ಲಾಲ್‌ಬಿ ಅವರ ಪತಿ ತೀರಿಕೊಂಡು ಬಹಳ ವರ್ಷಗಳೇ ಕಳೆದಿವೆ. ಅವರೊಬ್ಬ ಆದರ್ಶ ಗಾಂಧಿವಾದಿಯಾಗಿದ್ದರು. ಸ್ವಾರಸ್ಯವೆಂದರೆ ತಮ್ಮ ಜೀವನದುದ್ದಕ್ಕೂ ಅವರು ಸಸ್ಯಾಹಾರವನ್ನು ಪಾಲಿಸುತ್ತಾ ಬಂದರು. ಇಂಥ ಮಹನೀಯರಿಗೆ ಲಾಲ್‌ಬಿಯವರ ವಿವಾಹ ನೆರವೇರಿದಾಗ ಅವರು ತುಂಬಾ ಓದಿಕೊಂಡವರೇನೂ ಆಗಿರಲಿಲ್ಲ. ಪತಿ ಉತ್ತಮ ಹುದ್ದೆಯನ್ನು ಹೊಂದಿದ್ದರೆ, ಲಾಲ್‌ಬಿಯವರು ಓದಿದ್ದು ಬರಿಯ 6ನೇ ತರಗತಿಯಷ್ಟೇ. ಅಷ್ಟೇ ಓದಿದ್ದರೂ ಅವರ ಜ್ಞಾನದಾಹ ಮಾತ್ರ ಬಹಳವೇ ಇತ್ತು. ಸಮಾಜಕ್ಕೆ ಏನನ್ನಾದರೂ ಕೊಡಬೇಕೆಂಬ ಮಹದಾಸೆ ಆಗಿನಿಂದಲೇ ಅವರಲ್ಲಿ ಮನೆ ಮಾಡಿತ್ತು. ಹೀಗೆ ಅವರು ಶುರುಮಾಡಿದ್ದು ಅಕ್ಕಮಹಾದೇವಿ ಮಹಿಳಾ ಮಂಡಳಿ. ಆದರೆ ಅದೇಕೋ ಮಹಿಳಾ ಮಂಡಳಿಯನ್ನು ಬಹಳ ದಿನಗಳ ಕಾಲ ನಡೆಸಿಕೊಂಡು ಹೋಗಲಾಗಲಿಲ್ಲ.

ಮುರುಘಾ ಶರಣರ ಭೇಟಿ
ಮಹಿಳಾ ಮಂಡಳಿ ನಿಂತು ಹೋದರೂ ಲಾಲ್‌ಬಿಯವರ ಆಸೆ ಮಾತ್ರ ಕಮರಿರಲಿಲ್ಲ. ಸಮಾಜಕ್ಕೆ ಒಳ್ಳೆಯದನ್ನೇನಾದರೂ ಮಾಡಬೇಕೆಂಬ ತುಡಿತ ಅವರಲ್ಲಿ ದಿನದಿನಕ್ಕೂ ಹೆಚ್ಚುತ್ತಿತ್ತು. ಇದೇ ಸಂದರ್ಭದಲ್ಲಿ ಗುಲಗಂಜಿಕೊಪ್ಪಕ್ಕೆ ಮುರುಘ ರಾಜೇಂದ್ರ ಶರಣರು ಬಂದರು. ಅವರ ಮಾತುಗಳಿಂದ ಲಾಲ್‌ಬಿಯವರು ಪ್ರಭಾವಿತರಾದರು. ಅದರ ಫ‌ಲವೇನೋ ಎಂಬಂತೆ ಆ ಸಮಯದಲ್ಲೇ ಅವರು ಬಸವ ಕೇಂದ್ರವನ್ನು ಸ್ಥಾಪಿಸಿದರು.

Advertisement

ಸ್ಫೂರ್ತಿಯ ಚಿಲುಮೆ
ಈ ವಯಸ್ಸಿನಲ್ಲಿಯೂ ಅವರ ಬತ್ತದ ಸ್ಫೂರ್ತಿ, ಆತ್ಮವಿಶ್ವಾಸವನ್ನು ಕಂಡರೆ ಯುವಕ – ಯುವತಿಯರೂ ನಾಚಬೇಕು. ಕವನ- ಚುಟುಕು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ವಾರ್ಷಿಕೋತ್ಸವ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕವಿತೆ ವಾಚಿಸುತ್ತಾರೆ. ಹಲವು ಸ್ಪರ್ಧೆಗಳಲ್ಲಿ ಬಹುಮಾನವನ್ನೂ ಪಡೆದಿದ್ದಾರೆ. 

ಬಾಣಂತಿಯರಿಗೆ ಸಹಾಯ
ಲಾಲ್‌ಬಿಯವರ ಸಮಾಜಸೇವೆ ಬಸವ ಕೇಂದ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಊರಲ್ಲಿ ಶಿಶುಗಳ ತಾಯಂದಿರು ಯಾರಾದರೂ ಒಂದು ಮಾತು ಹೇಳಿಕಳಿಸಿದರೆ ಸಾಕು, ಕೂಡಲೇ ಅವರ ಸಹಾಯಕ್ಕಾಗಿ ಲಾಲ್‌ಬಿಯವರು ಹಾಜರ್‌. ಎಳೆಗೂಸಿನ ಸ್ನಾನ, ಬಾಣಂತಿಯ ಸ್ನಾನ, ಆರೈಕೆ ಮಾಡುತ್ತಾ ಅದರಲ್ಲಿ ಸಂತಸವನ್ನು ಹೊಂದುತ್ತಾರೆ. ಕಾಯಕವೇ ಕೈಲಾಸವೆಂಬ ಮಾತಿನಂತೆ ನಡೆಯುತ್ತಾ ನಿಸ್ವಾರ್ಥ ಸೇವೆಗಾಗಿ ಊರೆಲ್ಲಾ ಮಾತಾಗಿದ್ದಾರೆ ಲಾಲ್‌ಬಿ ಅಮ್ಮ.

– ಮನೋಹರ ಯಡವಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next