Advertisement

Vachana Darshan: ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ

11:03 PM Sep 22, 2024 | Team Udayavani |

ಗದಗ: ಬಸವ ತತ್ವ ಒಪ್ಪದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ವಚನ ದರ್ಶನ ಕೃತಿ ಒಂದು ನಿದರ್ಶನ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಆರೋಪಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರಿಂದ ಬರೆಸಿ, ಸಂಪಾದಿಸಿದ ಪುಸ್ತಕವನ್ನು ಆರೆಸ್ಸೆಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, ರಾಣೆಬೆನ್ನೂರ, ಕಲಬುರ್ಗಿ, ಬೆಳಗಾವಿ ಸೇರಿ 9 ಸ್ಥಳಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯದವರೇ ಆದ ಆರೆಸ್ಸೆಸ್‌ನ ಪ್ರಮುಖ ಹೊಸಬಾಳೆ ಸೇರಿ ನಾಗ್ಪುರದಿಂದ ಮೂವರು ಆರೆಸ್ಸೆಸ್‌ನವರು ಬಂದಿದ್ದರು ಎಂದರು.

ಸಂಸ್ಕೃತ ಶ್ಲೋಕ ಸೇರ್ಪಡೆ: 
ಗದಗಿನವರಾದ ಸದಾಶಿವಾನಂದ ಸ್ವಾಮೀಜಿ ವಚನ ದರ್ಶನ ಕೃತಿ ಸಂಪಾದಿಸಿದವರು. ಆದರೆ, ಈ ಕೃತಿ ಶರಣರ ಮೂಲ ಆಶಯಕ್ಕೆ ಧಕ್ಕೆ ತರುವಂತಹದಾಗಿದೆ. ಹಿಂದುತ್ವ ಎಂಬುದು ರಾಷ್ಟ್ರದ ಸಂಕೇತ ಹೊರತು ಧರ್ಮದ ಸಂಕೇತವಲ್ಲ ಎಂದರು. ವಚನ ದರ್ಶನ ಕೃತಿ ಬರೆದವರು ಲಿಂಗಾಯತ ತತ್ವ ಒಪ್ಪದವರು. 237 ಶರಣರು ಬರೆದಿರುವ ವಚನಗಳು ಕಸುಬಿನ, ಕಾಯಕದ ಅನುಭಾವದಡಿ ಬಂದಂತವು. 23,000 ವಚನಗಳು ಅನುಭವ ಮಂಟಪದ 787 ಜನರ ಮುಂದೆ ಚರ್ಚೆಯಾಗಿ ಒಪ್ಪಿದಂತವು. ವಚನಗಳು ಕನ್ನಡ ಉಪನಿಷತ್‌ಗಳು ಎಂದು ಹೋಲಿಕೆ ಮಾಡಿದ್ದಾರೆ ಹೊರತು ಇವ್ಯಾವೂ ಉಪನಿಷತ್‌ಗಳ ತರ್ಜುಮೆಯಲ್ಲ. ವಚನ ದರ್ಶನ ಪುಸ್ತಕದಲ್ಲಿ 648 ವಚನಗಳಲ್ಲಿ ಸಂಸ್ಕೃತ ಶ್ಲೋಕ ಸೇರಿಸಿದ್ದಾರೆ. ಇವು ಬಂದಿದ್ದು ಎಲ್ಲಿಂದ? 250 ವಚನಗಳಲ್ಲಿ ವೀರಶೈವ ಶಬ್ದ ಬಳಸಿದ್ದಾರೆ. ಬಸವಣ್ಣ ವೈದಿಕ, ಅವನು ಲಿಂಗಾಯತ ಆಗಲಿಲ್ಲ ಎಂಬೆಲ್ಲ ಹಸಿಸುಳ್ಳು ಹೇಳುವ ಪ್ರಯತ್ನ ಈ ವಚನ ದರ್ಶನದ ಹಿಂದಿದೆ ಎಂದು ಹೇಳಿದರು.

ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಂಕರಾನಂದ ಭಾರತಿ ಸ್ವಾಮೀಜಿ ‘ವಚನಗಳನ್ನು ಯಾರೂ ಬರೆದಿಲ್ಲ, 237 ಶರಣರ ಅಸ್ತಿತ್ವವೇ ಇಲ್ಲ. ವಚನ ಚಳವಳಿ ನಡೆದಿಲ್ಲ, ಕಲ್ಯಾಣ ಕ್ರಾಂತಿ ಆಗಿಲ್ಲ ಎಂಬ ಹೇಳಿಕೆಯಿಂದ ನೋವಾಗಿದ್ದು, ಇದನ್ನು ಮಹಾಸಭಾ ಉಗ್ರವಾಗಿ ಖಂಡಿಸಿದೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಂಪಗೌಡ್ರ ಮಾತನಾಡಿ, ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಸವಣ್ಣನ ಮುಖವನ್ನೇ ವಿರೂಪಗೊಳಿಸಿದ್ದಾರೆ. ಭಾವಚಿತ್ರದಲ್ಲಿ ಲಿಂಗವನ್ನೂ ಕಟ್ಟಿಲ್ಲ. ಅಂತಹ ಚಿತ್ರ ಇತಿಹಾಸದಲ್ಲೇ ಇಲ್ಲ. ಇತಿಹಾಸದ ಸತ್ಯವನ್ನು ಪೌರಾಣಿಕಗೊಳಿಸುವ ಹುನ್ನಾರ ಅವರದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಜೆ.ಬಿ. ಪಾಟೀಲ, ಕೇಂದ್ರ ಸಮಿತಿ ಸದಸ್ಯ ಅಶೋಕ ಬರಗುಂಡಿ, ಬಸವರಾಜ ಬುಳ್ಳಾ, ರೊಟ್ಟಿ ಬಸವರಾಜ, ಧನ್ನೂರ ಬಸವರಾಜ, ಗೊಂಗಡಶೆಟ್ಟಿ, ಪ್ರಭುಲಿಂಗ, ಜಾಗತಿಕ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಪ್ರಮುಖರಾದ ಶೇಖಣ್ಣ ಕವಳಿಕಾಯಿ, ಡಾ| ಜಿ.ಬಿ. ಪಾಟೀಲ, ಪ್ರಕಾಶ ಅಸುಂಡಿ, ಬಸವರಾಜ ಹಡಗಲಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀದೇವಿ ಶೆಟ್ಟರ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next