Advertisement

ಗದಗ: ಅತಿವೃಷ್ಟಿಯಿಂದ ಬತ್ತಿದ ಕೆರೆಗಳಿಗೆ ಆಸರೆಯಾದ ತುಂಗಭದ್ರೆ!

02:30 PM Sep 13, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಎರಡು ವರ್ಷಗಳಿಂದ ಮಳೆ ಇಲ್ಲದೇ ಬತ್ತಿದ್ದ ಕೆರೆಗಳಿಗೆ ಮತ್ತೆ ಜೀವಕಳೆ ಬಂದಿದೆ. ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ನಗರದ ಭೀಷ್ಮ ಕೆರೆ ಸೇರಿ ಬಹುತೇಕ ಕೆರೆಗಳಿಗೆ ಸಿಂಗಟಾಲೂರು ಎಡದಂಡೆ ಕಾಲುವೆ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಕೆರೆಗಳಿಗೆ ಜೀವಕಳೆ ಬಂದಂತಾಗಿದೆ.

Advertisement

ಕಳೆದ ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಕೆರೆಗಳನ್ನೇ ಅವಲಂಬಿಸಿದ್ದ ಗ್ರಾಮಗಳು ತೊಂದರೆ ಅನುಭವಿಸಿದ್ದವು. ಅಲ್ಲದೇ, ಕೃಷಿಗೆ ನೆರವಾಗಿದ್ದ ಕೆರೆಗಳು ಬತ್ತಿದ್ದರಿಂದ ರೈತರು ಪರದಾಡಿದ್ದರು. ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಅಷ್ಟಾಗಿ ಮಳೆಯಾಗದಿದ್ದರೂ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಜಿಲ್ಲೆ ಕಳೆದ ಕೆಲ ವರ್ಷಗಳಿಂದ ಅತೀವೃಷ್ಟಿ, ಅನಾವೃಷ್ಟಿ ಸೇರಿ ನೆರೆ ಹಾಗೂ ಬರಗಾಲದಂತಹ ಪರಿಸ್ಥಿತಿ ಎದುರಿಸಿತ್ತು. ಇದರಿಂದ ಕೆಲ ಕೆರೆಗಳು ಭರ್ತಿ ಯಾಗಿ ಕೋಡಿ ಹರಿದಿದ್ದರೆ, ಇನ್ನು ಕೆಲವು ಕೆರೆಗಳು ನೀರಿಲ್ಲದೇ ಬತ್ತಿಹೋದ ಉದಾಹರಣೆಗಳಿದ್ದವು.

ಆದರೆ, ಪ್ರಸಕ್ತ ವರ್ಷ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ಗದಗ ಭೀಷ್ಮ ಕೆರೆ, ಮುಂಡವಾಡ, ಹಿರೇವಡ್ಡಟ್ಟಿ, ಶಿರೋಳ, ತಾಮ್ರ ಗುಂಡಿ, ಜಂತ್ಲಿಶಿರೂರು, ಸಿಂಗಟರಾಯನಕೆರೆ, ಬಾಲೆ ಹೊಸೂರಿನ ಎರಡು ಕೆರೆಗಳು ಸೇರಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ಅವಶ್ಯಕತೆಗನುಸಾರವಾಗಿ ನೀರು ಹರಿಸುತ್ತಿರುವುದರಿಂದ ಕೆರೆ ಭರ್ತಿಯಾಗುತ್ತಿವೆ. ಇದರಿಂದ ಅಂತರ್ಜಲ ಮರುಪೂರ್ಣ ಗೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 22 ಕುಡಿಯಲು ಯೋಗ್ಯ ಕೆರೆಗಳು, 192 ಬಳಕೆಗೆ ಸೀಮಿತವಾದ ಕೆರೆಗಳು ಸೇರಿ ಒಟ್ಟು 214 ಕೆರೆಗಳಿದ್ದು, ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಡಂಬಳ, ಶಿರೋಳ, ತಾಮ್ರಗುಂಡಿ, ನಾಗರಳ್ಳಿ, ಜಂತ್ಲಿ ಶಿರೂರು ಸೇರಿ 15 ಕೆರೆಗಳು, 20ಕ್ಕೂ ಹೆಚ್ಚು ಚೆಕ್‌ಡ್ಯಾಂ ಗಳಿಗೆ ನೀರು ಹರಿಸಲಾಗುತ್ತಿದ್ದು, ಗದಗ ತಾಲೂಕಿನ ಲಕ್ಕುಂಡಿ, ಸಂಭಾಪುರ, ಕಳಸಾಪುರ, ಕಣಗಿನಹಾಳ ಸೇರಿದಂತೆ 8 ಗ್ರಾಮದ ಕೆರೆಗಳಿಗೆ ನೀರು ಹರಿಸುವುದು ಬಾಕಿಯಿದೆ.

Advertisement

ಸಣ್ಣ ನೀರಾವರಿ ವ್ಯಾಪ್ತಿ ಕೆರೆಗಳು 32: ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 9, ಶಿರಹಟ್ಟಿ ತಾಲೂಕಿನಲ್ಲಿ 5, ಗದಗ ತಾಲೂಕಿನಲ್ಲಿ 4 ಹಾಗೂ ಲಕ್ಷೇ¾ಶ್ವರ ತಾಲೂಕಿನಲ್ಲಿ 3 ಸೇರಿ ಜಿಲ್ಲಾದ್ಯಂತ 32 ಕೆರೆಗಳಿದ್ದು, ಅವುಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ, ಜಂತ್ಲಿಶಿರೂರ, ಪೇಠಾಲೂರ ಹಾಗೂ ಶಿರೋಳ ಕೆರೆಗಳಿಗೆ ಮಾತ್ರ ನದಿ ಮೂಲಕ ನೀರು ಹರಿಸಲಾಗುತ್ತಿದೆ.

ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನ 11 ಕೆರೆಗಳ 776.76 ಹೆಕ್ಟೇರ್‌ ಪ್ರದೇಶದಲ್ಲಿ 4,330.88 ಹೆಕ್ಟೇರ್‌ ಅಚ್ಚು ಪ್ರದೇಶವಿದೆ. ಶಿರಹಟ್ಟಿ ತಾಲೂಕಿನ 5 ಕೆರೆಗಳ 243.50 ಹೆಕ್ಟೇರ್‌ ಪ್ರದೇಶದಲ್ಲಿ 1,294.70 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಗಜೇಂದ್ರಗಡ-ರೋಣ ತಾಲೂಕಿನ 9 ಕೆರೆಗಳ 170.78 ಹೆಕ್ಟೇರ್‌ ಪ್ರದೇಶವಿದ್ದು, 905.31 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಗದಗ ತಾಲೂಕಿನ 4 ಕೆರೆಗಳ 126.97 ಹೆಕ್ಟೇರ್‌ ಪ್ರದೇಶವಿದ್ದು, 967 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಲಕ್ಷ್ಮೇಶ್ವರ ತಾಲೂಕಿನ 3 ಕೆರೆಗಳ 61.92 ಹೆಕ್ಟೇರ್‌ ಪ್ರದೇಶವಿದ್ದು, 222.69 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಜಿಲ್ಲೆಯಲ್ಲಿ ಒಟ್ಟಾರೆ 32 ಕೆರೆಗಳ ವಿಸ್ತೀರ್ಣ 1,379.93 ಹೆಕ್ಟೇರ್‌ ಪ್ರದೇಶ ಹೊಂದಿದ್ದು, ಅದರಲ್ಲಿ 7,520.58 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಡಂಬಳ ವಿಕ್ಟೋರಿಯಾ ಕೆರೆ, ಗದುಗಿನ ಭೀಷ್ಮ ಕೆರೆ ಸೇರಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ಸಿಂಗಟಾಲೂರು ಎಡದಂಡೆ ಕಾಲುವೆ
ಮೂಲಕ ನೀರು ಹರಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಸಿಂಗಟರಾಯನಕೆರೆ ಹಾಗೂ ಬಾಲೆಹೊಸೂರಿನ ಎರಡು ಕೆರೆಗಳಿಗೆ ವರದಾ ನದಿ ನೀರು ನೀರು ತುಂಬಿಸಲಾಗುತ್ತಿದೆ. ನೀರು ಹರಿಸುತ್ತಿರುವುದರಿಂದ ಕೆರೆಗಳಿಗೆ ಮರುಜೀವ
ಬಂದಂತಾಗಿದೆ.

ಮುರಳೀಧರ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಣ್ಣ ನೀರಾವರಿ

■ ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next