Advertisement

ಬಡದೇಶಗಳಿಗೆ ಲಸಿಕೆ ಬೆಂಬಲ; ಜಿ-20 ಶೃಂಗಸಭೆಯ ಮೊದಲ ದಿನ ಸದಸ್ಯ ರಾಷ್ಟ್ರಗಳ ಒಪ್ಪಿಗೆ

01:12 AM Oct 31, 2021 | Team Udayavani |

ರೋಮ್‌: “ವಿಶ್ವದ ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಬಡರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದು ಜಿ20 ಶೃಂಗಸಭೆಯ ಹೊಣೆ ಹೊತ್ತಿರುವ ಇಟಲಿ, ವಿಶ್ವ ಸಮುದಾಯಕ್ಕೆ ಕರೆ ನೀಡಿದೆ.

Advertisement

ಇಟಲಿ ರಾಜಧಾನಿ ರೋಮ್‌ನಲ್ಲಿ ಶನಿವಾರ­ದಿಂದ ಆರಂಭಗೊಂಡ ಜಿ-20 ಶೃಂಗದಲ್ಲಿ ಇಟಲಿ ಪ್ರಧಾನಿ ಮರಿಯೊ ಡ್ರಾ , ಜಾಗತಿಕ ಸಮು­ದಾಯಕ್ಕೆ ಈ ಮನವಿ ಮಾಡಿದ್ದಾರೆ.

ಸಭೆ ಉದ್ಘಾಟಿಸಿ ಮಾತನಾಡಿದ ಅವರು, “ಅಭಿವೃದ್ಧಿ­­ಶೀಲ ಹಾಗೂ ಅಭಿವೃದ್ಧಿಗೊಂಡ ರಾಷ್ಟ್ರಗ­ಳಲ್ಲಿ ಶೇ.70 ಜನರು ಲಸಿಕೆ ಪಡೆದಿದ್ದಾರೆ. ಆದರೆ ಬಡರಾಷ್ಟ್ರಗಳಲ್ಲಿ ಶೇ.3ರಷ್ಟು ಜನರಿಗೆ ಮಾತ್ರ ಲಸಿಕೆ ಸಿಕ್ಕಿದೆ. ಸಮಾನತೆ ಎಂಬ ನೈತಿಕ ದೃಷ್ಟಿ­ಯಿಂದ ಇದು ಸಮಂಜಸವಲ್ಲ. ಈ ಕೊರತೆಯನ್ನು ನಾವೆಲ್ಲರೂ ನೀಗಬೇಕಿದ್ದು, ಇದಕ್ಕೆ ಹಲವು ಸ್ತರಗಳಲ್ಲಿ ಎಲ್ಲ ರಾಷ್ಟ್ರಗಳ ಸಹಕಾರ ಬೇಕಿದೆ’ ಎಂದು ಆಗ್ರಹಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೊ ಬೈಡೆನ್‌, ಜರ್ಮನ್‌ ಚಾನ್ಸ­ಲರ್‌ ಏಂಜೆಲಾ ಮರ್ಕೆಲ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾ­ನ್ಯು­ಯೆಲ್‌ ಮ್ಯಾಕ್ರನ್‌, ಯು.ಕೆ. ಪ್ರಧಾನಿ ಬೋರಿಸ್‌ ಜಾನ್ಸನ್‌ ಸಭೆಯಲ್ಲಿ ಭಾಗವಹಿಸಿದ್ದರು. ಡ್ರಾ ಯವರ ಮಾತಿಗೆ ಹಲವು ವಿಶ್ವ ನಾಯಕರು ಸಹಮತ ವ್ಯಕ್ತಪಡಿಸಿದರು.

ಇದೇ ವೇಳೆ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, “ನಮ್ಮ ದೇಶದಲ್ಲಿ ಉತ್ಪಾದನೆ­ಯಾಗುವ ಆಸ್ಟ್ರಾ ಜೆನೆಕಾ ಲಸಿಕೆಯು ವಿಶ್ವದಲ್ಲಿ ಲಸಿಕೆ ಕೊರತೆ­ಯಿರುವ ರಾಷ್ಟ್ರಗಳಿಗೂ ಸಿಗುವಂತೆ ಮಾಡುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ’ ಎಂದರು.

ಶೇ. 15ರಷ್ಟು ಕಾರ್ಪೋರೆಟ್‌ ತೆರಿಗೆಗೆ ಒಪ್ಪಿಗೆ:
ಕೊರೊನೋತ್ತರ ಕಾಲಘಟ್ಟದಲ್ಲಿ ಜಿ-20 ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ತಾವು ಅನುಭವಿ­ಸಿರುವ ನಷ್ಟವನ್ನು ಸರಿದೂಗಿಸುವ ಪ್ರಮುಖ ತೀರ್ಮಾನವೊಂದಕ್ಕೆ ಬಂದಿವೆ. ಜಿ-20 ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರಕ್ಕೆ ಸೇರಿದ ಬಹುರಾಷ್ಟ್ರೀಯ ಕಂಪೆನಿಯ ಮೇಲೆ ಶೇ.15ರಷ್ಟು ಕಾರ್ಪೋರೆಟ್‌ ತೆರಿಗೆಯನ್ನು ಮಾತ್ರ ವಿಧಿಸುವ ಪ್ರಸ್ತಾವನೆಗೆ ಜಿ-20ಯ ಎಲ್ಲ ರಾಷ್ಟ್ರಗಳೂ ಸಭೆಯ ಮೊದಲ ದಿನವೇ ಒಪ್ಪಿಗೆ ನೀಡಿವೆ.

“ವಸುದೈವ ಕುಟುಂಬಕಂ’: ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಭಾರತ ಸಮರ್ಪಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ, ವಿಶ್ವ ಸಮುದಾಯಕ್ಕೆ ತಿಳಿಸಿದ್ದಾರೆ.

Advertisement

ಹಸುರು ಜಲಜನಕ: ಮರುನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ಯೋಜನೆಯಡಿ ಪರಸ್ಪರ ಕೈಜೋಡಿಸಿರುವ ಭಾರತ ಮತ್ತು ಇಟಲಿ,
ಹಸುರು ಜಲಜನಕದ ಅಭಿವೃದ್ಧಿಗೆ ಸಹಕಾರ ನೀಡುವ ಕುರಿತಾದ ಒಪ್ಪಂದಕ್ಕೆ ರೋಮ್‌ನಲ್ಲಿ ಬುಧವಾರ ಸಹಿ ಹಾಕಿವೆ.

ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ

ಪೋಪ್‌ರನ್ನು ಭೇಟಿ ಮಾಡಿದ ಮೋದಿ
ಪ್ರಧಾನಿ ಮೋದಿ ಶನಿವಾರ ವ್ಯಾಟಿಕನ್‌ ಸಿಟಿಗೆ ತೆರಳಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ರನ್ನು ಭೇಟಿ ಮಾಡಿದರು. ಇದು ಭಾರತದ ಪ್ರಧಾನಿಯೊಬ್ಬರು ಸುಮಾರು 2 ದಶಕಗಳ ಅನಂತರ ಕ್ರೈಸ್ತ ಧರ್ಮಗುರುವನ್ನು ಭೇಟಿ ಮಾಡಿದ ಗಳಿಗೆ ಎನಿಸಿತು.

2000ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಆಗಿನ ಪೋಪ್‌ ಆಗಿದ್ದ 2ನೇ ಜಾನ್‌ ಪಾಲ್‌ರನ್ನು ಭೇಟಿಯಾಗಿದ್ದರು. ಶನಿವಾರದ ಭೇಟಿಯ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮೋದಿ, “ಪೋಪ್‌ರೊಂದಿಗಿನ ಭೇಟಿ ಉಲ್ಲಾಸಕರವಾಗಿತ್ತು. ಅವರ ಜತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿತು. ಭಾರತಕ್ಕೆ ಭೇಟಿ ನೀಡುವಂತೆ ನಾನು ಪೋಪ್‌ ಅವರಿಗೆ ಆಮಂತ್ರಣ ನೀಡಿದ್ದೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಬೆಳ್ಳಿಯಿಂದ ತಯಾರಿಸಲಾದ ಕ್ಯಾಂಡಲ್‌ ಹೋಲ್ಡರ್‌ ಹಾಗೂ ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮ ತಡೆಗಟ್ಟಲು ಭಾರತ ಕೈಗೊಂಡಿರುವ ಕ್ರಮಗಳುಳ್ಳ ಪುಸ್ತಕವೊಂದನ್ನು ಮೋದಿ, ಪೋಪ್‌ ಅವರಿಗೆ ಉಡುಗೊರೆಯಾಗಿ ನೀಡಿದರು.

ಪೋಪ್‌ ಭೇಟಿ ತಪ್ಪಲ್ಲ: ಹೊಸಬಾಳೆ
ಧಾರವಾಡ: ಪ್ರಧಾನಿ ಮೋದಿ ಅವರು ರೋಮ್‌ನಲ್ಲಿ ಪೋಪ್‌ ಅವರನ್ನು ಭೇಟಿ ಮಾಡಿದ್ದು ತಪ್ಪಲ್ಲ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮೋದಿ-ಪೋಪ್‌ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ನಗರದ ರಾಷ್ಟ್ರೋ ತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಅಖೀಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ನ ಕೊನೆಯ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ವಸುದೈವ ಕುಟುಂಬಕಂ’ ಎನ್ನುವ ತಣ್ತೀ ನಮ್ಮದು. ಒಂದು ದೇಶದ ಮುಖ್ಯಸ್ಥ ಇನ್ನೊಂದು ದೇಶದ ಮುಖ್ಯಸ್ಥರನ್ನು ಭೇಟಿ ಮಾಡುವುದು ನಾಗರಿಕ ಸಮಾಜದ ಲಕ್ಷಣ. ಎಲ್ಲ ಧರ್ಮದ ಜನರನ್ನು ಭೇಟಿಯಾಗುವುದರಲ್ಲಿ ತಪ್ಪಿಲ್ಲ. ಇಷ್ಟಕ್ಕೂ ಪ್ರಧಾನಿ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನು
ಭೇಟಿ ಮಾಡಿ ನಮ್ಮ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next