Advertisement

ಅಂತಾರಾಜ್ಯ ಗಡಿ ಹಳಿಗಳಲ್ಲಿ ಲಸಿಕೆ ಅಭಿಯಾನ

04:30 PM Aug 04, 2021 | Team Udayavani |

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಅಂತಾರಾಜ್ಯ ಗಡಿಭಾಗಗಳ ಗ್ರಾಮಗಳಲ್ಲಿ 10 ದಿನಗಳ ಕೋವಿಡ್‌ ಲಸಿಕಾ ಕಾರ್ಯವನ್ನು 10 ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಅಂತಾರಾಜ್ಯ ಗಡಿ ಭಾಗದಲ್ಲಿರುವ ಚಾಮರಾಜನಗರ ತಾಲೂಕಿನ ಬೇಡಗುಳಿ, ಅರಕಲವಾಡಿ,ಬಿಸಲವಾಡಿ, ಗುಂಡ್ಲುಪೇಟೆ ತಾಲೂಕಿನ ಮಂಗಲ, ಕಗ್ಗಳದಹುಂಡಿ, ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟ, ಕೂಡ್ಲೂರು,ಮೀಣ್ಯಂ, ಪಿ.ಜಿ.ಪಾಳ್ಯ ಸೇರಿ ಒಟ್ಟು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ(ಪಿಎಚ್‌ಸಿ) ವ್ಯಾಪ್ತಿಗೆ ಬರುವ 170 ಗ್ರಾಮಗಳಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ.

ಈ 9ಪಿಎಚ್‌ಸಿಗಳ ವ್ಯಾಪ್ತಿಯ, 170 ಗ್ರಾಮಗಳಲ್ಲಿ 1,09,323 ಜನಸಂಖ್ಯೆಯಿದೆ. ಇವರಲ್ಲಿ 18 ವರ್ಷ ಮೇಲ್ಪಟ್ಟ 80,822 ಜನರು ಲಸಿಕಾ ಫ‌ಲಾನುಭವಿಗಳಾಗಿದ್ದಾರೆ. ಈ ಪೈಕಿ ಮಂಗಳವಾರದವರೆಗೆ26,699 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು 54,123 ಜನರಿಗೆ ಲಸಿಕೆ ನೀಡಬೇಕಾಗಿದೆ. ಪ್ರತಿದಿನ 6 ಸಾವಿರ ಜನರಂತೆ ಇನ್ನು 10 ದಿನಗಳೊಳಗೆ ಗ್ರಾಮದ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಜಿಲ್ಲೆಯ ನೆರೆ ರಾಜ್ಯವಾದ ಕೇರಳದಲ್ಲಿ ಪ್ರತಿ ದಿನದ ಕೋವಿಡ್‌ ಪ್ರಕರಣಗಳ ಸಂಖ್ಯೆ 20 ಸಾವಿರವನ್ನು ದಾಟಿದ್ದು, ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಅಂತಾರಾಜ್ಯ ಗಡಿ ಪ್ರವೇಶದ ವಿಷಯದಲ್ಲಿ ತೀವ್ರ ಕ್ರಮಕೈಗೊಂಡಿದೆ. ಅಲ್ಲದೇ ಜಿಲ್ಲೆಯಲ್ಲಿ ಅನೇಕ ನಿರ್ಬಂಧ ಕ್ರಮಗಳನ್ನು
ಜಾರಿಗೊಳಿಸಿದೆ. ಜಿಲ್ಲೆಯ ದೇವಾಲಯಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ಮದುವೆ ದಿಬ್ಬಣ ಹೊರಟ ವೇಳೆ ಮಿಂಚು ಹೊಡೆದು 16 ಮಂದಿ ಸಾವು, ವರನಿಗೆ ಗಂಭೀರ ಗಾಯ

Advertisement

ವಾರಾಂತ್ಯದಲ್ಲಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ವಾರಾಂತ್ಯ ಪ್ರವೇಶ ರದ್ದುಪಡಿಸಲಾಗಿದೆ. ಪ್ರವಾಸಿ ತಾಣಗಳು, ಅರಣ್ಯ ಇಲಾಖೆ ವಸತಿ ಗೃಹಗಳು, ಲಾಡ್ಜ್ ಗಳು, ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳುವವರು, ಸಫಾರಿಯಲ್ಲಿ ಭಾಗವಹಿಸುವವರು 72 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿಯನ್ನು ಹೊಂದಿರ ಬೇಕಾದ್ದು ಕಡ್ಡಾಯವಾಗಿದೆ. ಇದರ ಮುಂದುವರಿದ ಭಾಗವಾಗಿ ಈಗ ಗಡಿ ಪ್ರದೇಶದ ಗ್ರಾಮಗಳಲ್ಲಿ ಲಸಿಕಾಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡವರು ನಿಗದಿ ಪಡಿಸಿದ ಅರ್ಹತಾ ದಿನಗಳು ಪೂರ್ಣಗೊಳಿಸಿದ್ದಲ್ಲಿ ನೇರವಾಗಿ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಬಹುದು. ಕೋವಿಶೀಲ್ಡ್‌ ಮೊದಲ ಡೋಸ್‌ ಲಸಿಕೆ ಪಡೆದಿರುವವರು 84 ದಿನಗಳನ್ನು ‌ಪೂರೈಸಿದ್ದಲ್ಲಿ ಎರಡನೇ ಡೋಸ್‌ ಪಡೆಯಬಹುದು. ಕೋವ್ಯಾಕ್ಸಿನ್‌ ಮೊದಲ ಡೋಸ್‌ ಲಸಿಕೆ ಪಡೆದಿರುವವರು 28 ರಿಂದ 40 ದಿನಗಳನ್ನು ಪೂರ್ಣಗೊಳಿಸಿದ್ದಲ್ಲಿ ಎರಡನೇ ಡೋಸ್‌ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ

ಜಿಲ್ಲೆಯಲ್ಲಿ ಕೊವಿಶೀಲ್ಡ್‌,
ಕೊವ್ಯಾಕ್ಸಿನ್‌ ಲಸಿಕೆ ಲಭ್ಯ
ಚಾಮರಾಜನಗರ ಗಡಿ ಜಿಲ್ಲೆಯಾದ್ದರಿಂದ ಗಡಿ ಭಾಗದಲ್ಲಿರುವ ಗ್ರಾಮಗಳ ಜನರಿಗೆ ಲಸಿಕೆ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಕೊವಿಶೀಲ್ಡ್‌,ಕೊವ್ಯಾಕ್ಸಿನ್‌ ಲಸಿಕೆಗಳಿಗೆ ಕೊರತೆಯಿಲ್ಲ. ಸಾಕಷ್ಟು ದಾಸ್ತಾನು ಲಭ್ಯವಿದೆ. ಜನರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಆರ್‌ಸಿಎಚ್‌ ಅಧಿಕಾರಿ ಡಾ|ವಿಶ್ವೇಶ್ವರಯ್ಯ ತಿಳಿಸಿದ್ದಾರೆ.

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next