Advertisement

UV Fusion: ಬದುಕು ಇದ್ದಂತೆ ಸಂಭ್ರಮಿಸಬೇಕು

10:43 AM May 31, 2024 | Team Udayavani |

ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುವುದೇ ಜೀವನ ಪ್ರೀತಿಯೇ? ಸಾಮಾಜಿಕ ಬದುಕಿನಿಂದ ತನ್ನ ವೈಯಕ್ತಿಕವನ್ನು ಹೊರಗಿಟ್ಟವರು ಜೀವನವನ್ನು ಪ್ರೀತಿಸುವುದಿಲ್ಲವೇ? ಈ ಎರಡು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಕಾಡಲು ಆರಂಭಿಸಿ ತುಂಬಾ ದಿನಗಳಾಗಿತ್ತು. ಆದರೆ ಈ ಜಗತ್ತು ಸಹಾ ಅದಕ್ಕೆ ಪೂರಕ ಎಂಬಂತೆ ಮುಕ್ತತೆಯನ್ನೇ ವೈಭವೀಕರಿಸುವಾಗ  ಅದು ಹಾಗೆಯೇ ಇರಬಹುದು ಎಂದುಕೊಂಡುಬಿಟ್ಟಿದ್ದೆ. ಬದುಕು ಇದ್ದಂತೆ ಸಂಭ್ರಮಿಸಬೇಕು ಎಂಬ ಭಾವನೆ ನನ್ನದಾಗಿದ್ದರೂ, ಜಗ ನಿಯಮಕ್ಕೆ ಅನುಗುಣವಾಗಿ ಸಾಗಬೇಕಾದ ಅನಿವಾರ್ಯತೆಯೂ ಕಾಣಿಸುತ್ತಿತ್ತು.

Advertisement

ಇತ್ತೀಚೆಗೆ ಒಬ್ಬರು ಹಿರಿಯರ ಜೊತೆ ಕೆಲ ಹೊತ್ತು ಮಾತನಾಡುವ ಅವಕಾಶ ಸಿಕ್ಕಿದಾಗ ಈ ವಿಷಯ ಮುನ್ನೆಲೆಗೆ ಬಂತು. ಹಾಗೆಯೇ  ಅವರೊಡನೆ ಮಾತನಾಡುತ್ತಾ ಮಾತಿನ ಮಧ್ಯೆ “ನೀವು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇಲ್ವಾ?” ಅಂದೆ. ಅರೆ ಕ್ಷಣ ನಕ್ಕ ಅವರು “ನಂದೂ ಒಂದು ಫೇಸುºಕ್‌ ಅಕೌಂಟ್‌ ಇದೆಯಪ್ಪಾ ಒಬೆರಾಯನ ಕಾಲದ್ದು, ಆಗಾಗ ತೆಗೆದು ಏನಾದ್ರೂ ಓದ್ತಾ ಇರ್ತೀನಿ” ಅಂದ್ರು. ಅವರ ಬದುಕು, ಜೀವನಶೈಲಿ ಎಲ್ಲದರ ಬಗ್ಗೆ ಅರಿವಿದ್ದ ನನಗೆ ಅದನ್ಯಾಕೆ ಅವರು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಅನ್ನೋ ಕುತೂಹಲ.

ಇಷ್ಟೊಂದು ಶ್ರೇಷ್ಠವಾಗಿ ಬದುಕುವ ಅವರ ಜೀವನ ಸಾಕಷ್ಟು ಜನರಿಗೆ ಸ್ಪೂರ್ತಿ ನೀಡಬಲ್ಲದು ಎಂಬ ಯೋಚನೆಯೂ ಮನಸ್ಸಿನಲ್ಲಿ ಬಂತು. ಹಾಗೆ ಫೋನ್‌ ತೆಗೆದು ಅವರಂತೆಯೇ ಬದುಕುತ್ತಿರುವ ಮತ್ತು ಅದನ್ನು ಸಾಮಾಜಿಕವಾಗಿ ತೋರ್ಪಡಿಸುವ ಒಬ್ಬರನ್ನು ತೋರಿಸಿ “ನೋಡಿ ಇಲ್ಲಿ ಇವರೆಲ್ಲ ಹೇಗೆ ತಮ್ಮ ಜೀವನದ ಪ್ರತೀ ಕ್ಷಣವನ್ನೂ ಇಲ್ಲಿ ತೋರ್ಪಡಿಸುತ್ತಾರೆ ಅಂತ, ಅವರದ್ದು ನಿಜವಾದ ಜೀವನ ಪ್ರೀತಿ ಅಲ್ವಾ?

ಜನರೂ ಅಷ್ಟೇ ಹೇಗೆ ಹೊಗಳುತ್ತಾರೆ ನೋಡಿ, ಎಷ್ಟೋ ಜನ ಅವರ ಜೀವನವನ್ನೇ ಶ್ರೇಷ್ಠ ಎಂದು ತಾವೂ ಹಾಗಾಗುವ ಕನಸು ಕಾಣುತ್ತಿದ್ದಾರೆ. ನೀವೂ ಹೀಗೆ ಆಗ್ತೀರಿ ನಿಮ್ಮ ಬದುಕನ್ನು ಹಂಚಿಕೊಂಡರೆ” ಅಂದೆ. ಅವರು ಹೆಚ್ಚೇನೂ ಹೇಳದೇ ಒಂದೇ ಒಂದು ಮಾತಂದ್ರು “Life is not others see, life is what we live”. ಅಷ್ಟೇ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ನಾನು ಮರು ಮಾತನಾಡಲಿಲ್ಲ.

ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವವರಿಗೆ ಇದೊಂದು ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಅಲ್ಲಿ ಒಂದು ವಾಡಿಕೆಯಿದೆ. ಯಾರು ತಮ್ಮನ್ನು ತಾವು ಮುಕ್ತವಾಗಿ ತೋರಿಸಿಕೊಳ್ಳುತ್ತಾರೋ, ಹೊಗಳಿಕೊಳ್ಳುತ್ತಾರೋ ಅವರೇ ಹೆಚ್ಚು ಬೆಳೆಯುತ್ತಾರೆ ಎಂಬುದು ಅಲ್ಲಿನ ವಾಸ್ತವ. ತಮ್ಮ ಕುರಿತಾಗಿ ತಾವು ಹೇಳಿಕೊಳ್ಳುವುದು, ತಮ್ಮ ಸಾಧನೆಗಳನ್ನು ವೈಭವೀಕರಿಸುವುದು ಎಲ್ಲವೂ ಅಲ್ಲಿನ ಅಗತ್ಯ. ಕಾಂಪಿಟೇಶನ್‌ ಎದುರಿಸಲು ಅದೊಂದು ಅನಿವಾರ್ಯದ ದಾರಿ ಸಹಾ.

Advertisement

‘ನಮಗೆ ನಾವೇ ಹೊರತು ಇನ್ಯಾರು?’ ಅನ್ನೋ ನಿಯಮ ಆ ಜಗತ್ತಿನದ್ದು. ಆದರೆ ಅದನ್ನೇ ಎಲ್ಲ ಕಡೆಯೂ ಮಾಡಿದರೆ! ಪ್ರಾಪಂಚಿಕ ಬದುಕಿನಲ್ಲಿ ನಾವು ನಮಗಿಂತ ಹೆಚ್ಚು ಬದುಕುವುದು ಇತರರಿಗಾಗಿ. ಇತರರನ್ನು ತೃಪ್ತಿ ಪಡಿಸಲು ಕಷ್ಟಗಳನ್ನು ಸಹಿಸಿ ಹೋರಾಡುವ ಪರಿಸ್ಥಿತಿಯೂ ಇಲ್ಲಿದೆ. ಅಂದಾಗ ನಮ್ಮ ಬದುಕು ಹೇಗಿದ್ದರೂ ಪರೋಪಕಾರಿಯಾಗಿದ್ದರೆ ಮಾತ್ರವೇ ಶ್ರೇಷ್ಠವಾಗಲು ಸಾಧ್ಯ.

ಹಾಗಂತ ಇಲ್ಲಿ ತಮ್ಮ ಬಗ್ಗೆ ತಾವು ಹೇಳಿಕೊಳ್ಳುವುದು, ದೈನಂದಿನ ಚಟುವಟಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ತಪ್ಪು ಎಂದೇನು ಹೇಳುತ್ತಿಲ್ಲ. ಅದು ಅವರವರ ಆಸಕ್ತಿ. ಪ್ರತಿಯೊಬ್ಬರಿಗೂ ಈ ದೇಶದ ಕಾನೂನು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ ಅದನ್ನು ಉಪಯೋಗಿಸುವ ಕಲೆ ತಿಳಿದಿರಬೇಕು. ಕೆಲವರ ಜೀವನ ಎಷ್ಟೋ ಜೀವಗಳಿಗೆ ಸ್ಪೂರ್ತಿ ನೀಡಬಹುದು, ನೋವುಂಡ ಮನಸ್ಸಿನಲ್ಲಿ ನಗು ತರಿಸಬಹುದು.

ಅದನ್ನು ಸೀಮೀತ ಚೌಕಟ್ಟಿನಲ್ಲಿ ಹಂಚಿಕೊಳ್ಳಬಹುದು. ಆದರೆ ಅಂತಹವರದ್ದು ಮಾತ್ರವೇ ಜೀವನ ಪ್ರೀತಿ ಎಂಬಂತೆ ಬಿಂಬಿಸುವುದು ತಪ್ಪಾಗುತ್ತದೆ. ಬದುಕು ಎಲ್ಲರನ್ನೂ ಒಂದೊಂದು ದಾರಿಯಲ್ಲಿ ನಡೆಸುತ್ತದೆ, ಒಬ್ಬರದು ಕಾಡು ಹಾದಿಯಾದರೆ ಇನ್ನೊಬ್ಬರದು ಹೈವೇ ರಸ್ತೆ. ಪ್ರತಿಯೊಬ್ಬರೂ ತಮ್ಮ ಪಯಣವನ್ನು ಪ್ರೀತಿಸಿದವರು, ಪ್ರೀತಿಸುವವರು, ಮತ್ತು ಸದಾ ಪ್ರೀತಿಸುತ್ತಲೇ ಇರುವವರು.

-ಸುದರ್ಶನ್‌ ಪ್ರಸಾದ್‌

ಕೊಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next