ಮೇ -10 ರಂದು ಬಸವೇಶ್ವರ ಜಯಂತಿ ಮತ್ತು ಅಕ್ಷಯ ತೃತೀಯ ದಿನ. ಶುಭಕಾರ್ಯಗಳಿಗೆ ಶುಭ ಹಾಡುವ ಶುಭದಿನ ಅಕ್ಷಯ ತೃತೀಯ ಮತ್ತು ಅಕ್ಷಯ ತದಿಗೆಯನ್ನು ಸಡಗರದಿಂದ ಆಚರಿಸಲು ಚಿನ್ನದಂಗಡಿಗಳು ಶೃಂಗಾರಗೊಂಡಿದ್ದನ್ನು ನಾವೆಲ್ಲರೂ ಕಾಣುತ್ತೇವೆ. ಈ ದಿನದಂದು ಚಿನ್ನಕೊಂಡರೆ ಲಕ್ಷ್ಮೀ ಮನೆಗೆ ಬರುತ್ತಾಳೆ ಎಂಬ ನಂಬಿಕೆಯೂ ಇದೆ.
ಅಕ್ಷಯ ತೃತೀಯ ಸಂದರ್ಭದಲ್ಲಿ ಗ್ರಾಹಕರು ಕಸಾಮಾನ್ಯವಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ಈ ದಿನಕ್ಕಾಗಿಯೇ ಕಾದು ಖರೀದಿ ಮಾಡುವವರು ಇದ್ದಾರೆ ಅದೇ ರೀತಿ ಇದೆ ದಿನ ಹಣ ವ್ಯಯಿಸಿ ದುಬಾರಿ ವಸ್ತು ನಿಮ್ಮಿಂದ ಕೊಳ್ಳಲು ಸಾಧ್ಯವಾಗದಿದ್ದರೆ ಉತ್ತಮ ಧನಾತ್ಮಕ ಯೋಚನೆಯೊಂದಿಗೆ ಇತರರಿಗೆ ಕೇಡು ಮಾಡದಂತೆ ಬದುಕಿದರೆ ಜೀವನ ಸಾರ್ಥಕ ಎನಿಸಲಿದೆ.
ಒಡವೆಗಳು ಎಷ್ಟಿದ್ದರೂ ಅದು ಕಡಿಮೆ ಎನ್ನುವ ಭಾವನೆ ಅನೇಕರಲ್ಲಿ ಇದ್ದೇ ಇರುತ್ತದೆ. ಪ್ರತಿ ವರ್ಷ ಅಕ್ಷಯ ತೃತೀಯದ ದಿನ ಖರೀದಿಸಿದ ಚಿನ್ನದ ಒಡವೆಗಳನ್ನೆಲ್ಲ ದೇವರ ಮುಂದೆ ಇಟ್ಟು ನಾಣ್ಯ ನೋಟುಗಳಿಗೂ ಕೂಡ ಪೂಜೆ ಮಾಡುತ್ತಾರೆ. ಆದರೆ ನಮ್ಮ ಜೀವನ ಇಂತಹ ವಸ್ತುವಿನಿಂದ ಸಮೃದ್ಧವಾಗದು ಎಂಬ ಅರಿವು ನಮಗೆ ಇರಬೇಕಿದೆ. ಮನೆ ಸ್ವಚ್ಛವಾಗಿ ಇರಿಸಬೇಕು ಆಗ ಮನಸ್ಸು ಸ್ವಚ್ಛವಾಗಲಿದೆ. ಕೂಡಿಟ್ಟ ಹೊನ್ನು ಕಾಯುವುದಕ್ಕಿಂತಲೂ ನಮ್ಮ ಬುದ್ಧಿಯನ್ನು ಹೊನ್ನಿನಷ್ಟೆ ಶುಭ್ರವಾಗಿ ಇಡುವ ಗುಣ ಬೆಳೆಸಿಕೊಳ್ಳಬೇಕು.
ಅಕ್ಷಯ ತೃತೀಯದಂದು ಚಿನ್ನಾಭರಣ ವಾಹನ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದರೆ. ಅದೃಷ್ಟ ದೊರೆಯುತ್ತದೆ ಎಂಬುದು ನಂಬಿಕೆ ಇದು ಕೆಲವರ ಬದುಕಿನಲ್ಲಿ ನಿಜ ಆಗಿರಬಹುದು ಅದೇ ರೀತಿ ಈ ದಿನ ಚಿನ್ನ ಖರೀದಿ ಮಾಡಿದರೆ ಮತ್ತಷ್ಟು ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಗ ಬರುತ್ತದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೂ ಪೂಜೆ ಪುನಸ್ಕಾರಗಳನ್ನು ಮಾಡುವ ಜತೆಗೆ ನಮ್ಮಿಂದ ಆದಷ್ಟು ಚಿಕ್ಕ ಮಟ್ಟಿಗಾದರೂ ಪರೋಪಕಾರ ಮಾಡುವ, ಇತರರ ಬಳಿ ಸ್ನೇಹ, ಪ್ರೀತಿಯಿಂದ ವರ್ತಿಸುವ ಗುಣ ಬೆಳೆಸಿಕೊಂಡಾಗ ನಮ್ಮ ಬದುಕು ಬಂಗಾರವಾಗಲಿದೆ.
ವಿ.ಎಂ.ಎಸ್.ಗೋಪಿ
ಬೆಂಗಳೂರು