Advertisement

ಉತ್ತರ ಕನ್ನಡ: ಒಂದನೇ ತರಗತಿಗೆ ಮಕ್ಕಳ ಸಂಖ್ಯೆ ಇಳಿಮುಖ!

05:00 PM Jun 07, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ಪ್ರವೇಶಾತಿ ಇಳಿಮುಖ ಕಂಡು ಬಂದಿದೆ. ಬಹುತೇಕ ಕಾರ್ಮಿಕರ ಹಾಗೂ ಬಡವರ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿದ್ದು, ಸ್ಥಿತಿವಂತರ, ಮಧ್ಯಮ ವರ್ಗದವರ ಹಾಗೂ ಸರ್ಕಾರಿ ನೌಕರರ ಮಕ್ಕಳು ಖಾಸಗಿ ಶಾಲೆಗಳಿಗೆ, ಅದರಲ್ಲೂ ನಗರ, ಪಟ್ಟಣದ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇದು ಶಿಕ್ಷಕರ ವಲಯದಲ್ಲಿ ಆತಂಕ ಸೃಷ್ಟಿಸಿದೆ.

Advertisement

ಶಿಕ್ಷಣ ಇಲಾಖೆ ಸಹ ಧೃತಿಗೆಡದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರಲು, ಸರ್ಕಾರಿ ಶಾಲೆಯ ಉಪಯೋಗವನ್ನು ಮಜಿರೆ, ಹೊಬಳಿ ಮಟ್ಟದಲ್ಲಿ ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಿಸುತ್ತಿದೆ. ಉಚಿತ ಪುಸ್ತಕ, ಉಚಿತ ಸಮವಸ್ತ್ರ, ಸೈಕಲ್‌, ಮಧ್ಯಾಹ್ನದ ಬಿಸಿಯೂಟದ ಬಗ್ಗೆ ತಿಳಿಸಿ ಹೇಳುತ್ತಿದೆ.

ಅಲ್ಲದೆ ನುರಿತ ಅನುಭವಿ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಇರುವ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಇಲ್ಲ ಎಂಬ ಸತ್ಯವನ್ನು ಹೇಳುತ್ತಿದೆ. ಶುಲ್ಕ, ಡೊನೇಶನ್‌ ಇಲ್ಲದ ಉಚಿತ ಶಿಕ್ಷಣ ಸೌಲಭ್ಯದ ಬಗ್ಗೆ ಮಾಹಿತಿ ಗ್ರಾಮ ಸಭೆಗಳ ಮೂಲಕ ಹಾಗೂ ಶಾಲಾ ಕಾರ್ಯಕ್ರಮದಲ್ಲಿ ತಿಳಿಸುವ ಯತ್ನವನ್ನು ಶಿಕ್ಷಕರೇ ಮಾಡತೊಡಗಿದ್ದಾರೆ.

ಪ್ರವೇಶಾತಿ ಇಳಿಮುಖ: ಕರಾವಳಿ ಗ್ರಾಮಾಂತರ ಭಾಗದ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶಾತಿ ಕಡಿಮೆಯಾ ಗಿದೆ. ಸೌಕರ್ಯ ಇಲ್ಲದ ಕುಗ್ರಾಮಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆ ಒಟ್ಟು ಹತ್ತು ದಾಟುತ್ತಿಲ್ಲ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 600 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಒಂದನೇ ತರಗತಿ ಪ್ರವೇಶಕ್ಕೆ ಕೆಲವು ಕಡೆ 5, ಹಲವು ಕಡೆ 3 ರಿಂದ 4 ಮಕ್ಕಳ ಪ್ರವೇಶ ಆಗಿದೆ. ಕೆಲ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳೇ ಪ್ರವೇಶ ಪಡೆದಿಲ್ಲ. ಕಾರಣ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಉಳ್ಳವರು ಖಾಸಗಿ ಶಾಲೆಗೆ ಪ್ರವೇಶ ಪಡೆದರೆ, ವಲಸೆ ಬಂದ ಕಾರ್ಮಿಕರು ಗ್ರಾಮ ಇರಲಿ, ನಗರ ಪ್ರದೇಶ ಇರಲಿ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ.

ಕಳೆದ ವರ್ಷ ಒಂದನೇ ತರಗತಿಗೆ 9800 ಮಕ್ಕಳು ಶಿರಸಿ ಶೈಕ್ಷಣಿಕ ಜಿಲ್ಲೆಯ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದರು. ಈ ಸಲವೂ ಇಷ್ಟೇ ಮಕ್ಕಳ ಪ್ರವೇಶ ಆಗಬಹುದು ಎಂಬ ನಿರೀಕ್ಷೆ ಇದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಸಹ ಈ ವರ್ಷ 8000 ಮಕ್ಕಳು ಒಂದನೇ ತರಗತಿಗೆ ಪ್ರವೇಶದ ನಿರೀಕ್ಷೆ ಇದೆ. ಇಲ್ಲೂ ಸಹ 550 ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಹತ್ತು ಶಾಲೆಗಳಲ್ಲಿ ಓರ್ವ ವಿದ್ಯಾರ್ಥಿ ಸಹ ಒಂದನೇ ತರಗತಿಗೆ ಪ್ರವೇಶ ಪಡೆದಿಲ್ಲ. ಉಳಿದ ಶಾಲೆಗಳಲ್ಲಿ 5 ರಿಂದ 10 ಮಕ್ಕಳ ಪ್ರವೇಶ ಆಗಿದೆ. ಜುಲೈ ಕೊನೆಯತನಕ ಪ್ರವೇಶಾತಿಗೆ ಅವಕಾಶ ಇದೆ. ಹಾಗಾಗಿ ಶಿಕ್ಷಕರು ಆಶಾವಾದಿಗಳಾಗಿದ್ದಾರೆ.

Advertisement

ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿರೀಕ್ಷೆ: ಸರ್ಕಾರ ಹೆಚ್ಚು ವಿದ್ಯಾರ್ಥಿಗಳು ಇರುವಲ್ಲಿ ಎಲ್ಲಾ ಸೌಕರ್ಯಗಳಿರುವ ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಲು 2018 ರಿಂದ ಆರಂಭಿಸಿತು. ಶಿರಸಿ ಜಿಲ್ಲೆಗೆ 6, ಕಾರವಾರ ಜಿಲ್ಲೆಗೆ 6 ಶಾಲೆಗಳನ್ನು ನೀಡಿತ್ತು. ಈ ಶಾಲೆಗಳು ಸರ್ಕಾರಿ ಪಿಯು ಕಾಲೇಜು ಇರುವಲ್ಲಿ ಆರಂಭಿಸಿತ್ತು. ಈ ಶಾಲೆಗಳು ಹೆಚ್ಚು ಮೂಲ ಸೌಕರ್ಯ, ಹೆಚ್ಚು ಶಿಕ್ಷಕರನ್ನು ಹೊಂದಿದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗೆ ಕಳಿಸಲು ಆಸಕ್ತರಾಗುತ್ತಿದ್ದರು.

ಇದನ್ನು ಮನಗಂಡ ಸರ್ಕಾರ ಹೋಬಳಿಗೆ ಒಂದು ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಲು ಮುಂದಾಗಿದೆ. ಶಿರಸಿ ಜಿಲ್ಲೆಗೆ 9, ಕಾರವಾರ ಶೈಕ್ಷಣಿಕ ಜಿಲ್ಲೆಗೆ 9 ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಲು ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ಸರ್ಕಾರ ಇದಕ್ಕೆ ಕೆಲ ನಿಯಮ ಹಾಕಿದೆ. ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯುವ ಸ್ಥಳ, ಹೊಬಳಿಯಲ್ಲಿ ಸರ್ಕಾರಿ ಪಿಯು ಕಾಲೇಜು ಇರಬೇಕು ಅಥವಾ ಕರ್ನಾಟಕ ಪಬ್ಲಿಕ್‌ ಶಾಲೆಯಿಂದ ನೂರು ಮೀ. ದೂರದಲ್ಲಿ ಪಿಯು ಕಾಲೇಜು ಇರಬೇಕು. ಪ್ರಾಥಮಿಕ, ಪ್ರೌಢಶಾಲೆ ಇರಬೇಕು. ಸಾಕಷ್ಟು ಕೊಠಡಿ ಸೌಲಭ್ಯ ಹಾಗೂ ಮೈದಾನ ಇರಬೇಕು. ಅಂಥ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ
ಪರಿವರ್ತಿಸಿ, ಹೆಚ್ಚಿನ ಸೌಕರ್ಯ ನೀಡಲು ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಮುಂದೆ ಬಂದಿದೆ. ಇಂತಹ ಶಾಲೆ ಹೊಬಳಿ ಮಟ್ಟದಲ್ಲಿ ಬಂದರೆ, ಹಳ್ಳಿಗಳ ಮಕ್ಕಳು ಪಬ್ಲಿಕ್‌ ಶಾಲೆಗೆ ಬರುವ ಸಾಧ್ಯತೆ ಹೆಚ್ಚು. ಪರಿಣಾಮ ಸರ್ಕಾರ ಶಾಲೆ ಸಂಖ್ಯೆ ಕೊಂಚ ಕಡಿಮೆಯಾದರೂ ಎಲ್ಲಾ ಸೌಕರ್ಯ ಇರುವ ಶಾಲೆಗಳು ಸದೃಢವಾಗುವ ಲಕ್ಷಣಗಳಿವೆ.

ಸಮವಸ್ತ್ರ ಪೂರೈಕೆ ಪೂರ್ಣ: ಕಾರವಾರ ಶೈಕ್ಷಣಿಕ ಜಿಲ್ಲೆಯ 53690 ಮಕ್ಕಳ ಪೈಕಿ 53544 ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ವಿತರಣೆಯಾಗಿದೆ. ಇದರಲ್ಲಿ 26,689 ಹುಡುಗರು, 26,855 ಹುಡುಗಿಯರು ಸಮವಸ್ತ್ರ ಪಡೆದಿದ್ದಾರೆ. ಒಂದನೇ ತರಗತಿ ಪ್ರವೇಶ ಪಡೆದ ಮಕ್ಕಳಿಗೆ ಜುಲೈನಲ್ಲಿ ಸಮವಸ್ತ್ರ ವಿತರಣೆಯಾಗಲಿದೆ. ಸಮವಸ್ತ್ರ ಬಹುತೇಕ ಎಲ್ಲಾ ಶಾಲೆಗಳಿಗೆ ತಲುಪಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 70346 ವಿದ್ಯಾರ್ಥಿಗಳು ಸಮವಸ್ತ್ರ ಪಡೆದಿದ್ದಾರೆ. ಶೇ.99 ಮಕ್ಕಳಿಗೆ ಈಗಾಗಲೇ ಸಮವಸ್ತ್ರ ತಲುಪಿದೆ. ಒಂದನೇ ತರಗತಿ ಮಕ್ಕಳಿಗೆ ಪ್ರವೇಶಾತಿ ಮುಗಿದ ತಕ್ಷಣ ಸಮವಸ್ತ್ರ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಖ್ಯೋಪಾಧ್ಯಾಯರಿಗೆ ಸೂಚಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ನಗರ ಇರಲಿ, ಗ್ರಾಮಾಂತರ ಇರಲಿ ಕೃಷಿ, ಕಟ್ಟಡ ಕಾರ್ಮಿಕರ ಮಕ್ಕಳೇ ಬರುವುದು. ಜುಲೈ ತನಕ ಪ್ರವೇಶಕ್ಕೆ ಸಮಯವಿದೆ. ಪ್ರತಿ ಶಾಲೆಗೆ 5 ರಿಂದ 10 ಮಕ್ಕಳು ಬಂದರೂ ಆಶಾದಾಯಕ ಬೆಳೆವಣಿಗೆ. ಇನ್ನೂ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಇಲಾಖೆ ನಿಯಮಗಳನ್ನು ಅನುಸರಿಸಿ ಜಿಲ್ಲೆಯ 9 ಕಡೆ ಕರ್ನಾಟಕ ಪಬ್ಲಿಕ್‌ ಶಾಲೆ ಕೇಳಿದ್ದೇವೆ.
ಪಿ.ಬಸವರಾಜ್‌, ಡಿಡಿಪಿಐ, ಶಿರಸಿ ಶೈಕ್ಷಣಿಕ ಜಿಲ್ಲೆ

*ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next