Advertisement

ಉತ್ತರ ಕನ್ನಡ ಗಲಾಟೆಗೆ ಬಿಜೆಪಿಯಿಂದ ಕುಮ್ಮಕ್ಕು

06:00 AM Dec 16, 2017 | Team Udayavani |

ಬೆಂಗಳೂರು: ಹೊನ್ನಾವರದ ಪರೇಶ್‌ ಮೇಸ್ತಾ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿದ್ದರೂ, ಪ್ರತಿಪಕ್ಷ ಬಿಜೆಪಿ ರಾಜಕೀಯ ಲಾಭಕ್ಕಾಗಿ ಪ್ರಕರಣ ಜೀವಂತ ಇರಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

Advertisement

ಪರೇಶ್‌ ಮೇಸ್ತಾ ಅವರದ್ದು ಹತ್ಯೆಯೇ ಅಥವಾ ಅಸಹಜ ಸಾವೇ ಎಂಬುದು ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಕೈಸೇರಿದ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಹೇಳುವ ಮೊದಲೇ ಹೊನ್ನಾವರ ಪೊಲೀಸರು ಇದೊಂದು ಕೊಲೆ ಪ್ರಕರಣ ಎಂದು ಎಫ್ಐಆರ್‌ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಡಿ. 8ರಂದು ಹೊನ್ನಾವರ ಪೊಲೀಸರು ಪರೇಶ್‌ ಮೇಸ್ತಾ(18) ಕೊಲೆಯಾಗಿದೆ ಎಂಬ ಬಗ್ಗೆ ಅವರ ತಂದೆ ಕಮಲಾಕರ ಮೇಸ್ತಾ ದೂರಿನ ಅನ್ವಯ ಕೊಲೆ ಪ್ರಕರಣ (ಅಪರಾಧ ಸಂಖ್ಯೆ 592/2017, ಐಪಿಸಿ ಸೆಕ್ಷನ್‌ 302, 143, 147, 148, 201) ದಾಖಲಿಸಿಕೊಂಡಿರುವುದು ಗುಪ್ತಚರ ಇಲಾಖೆ ಸಲ್ಲಿಸಿರುವ ವರದಿಯಲ್ಲಿದೆ.

ಮೇಸ್ತಾ ಹತ್ಯೆ ಖಂಡಿಸಿ ಪ್ರತಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌ ಮತ್ತು ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಹೊನ್ನಾವರದಲ್ಲಿ ಡಿ.18ರಂದು ಬೃಹತ್‌ ಪ್ರತಿಭಟನೆಗೆ ಈಗಾಗಲೇ ಬಿಜೆಪಿ ನಿರ್ಧರಿಸಿದೆ. ಅಂದಿನ ಪ್ರತಿಭಟನೆ ವೇಳೆ ನಾಯಕರು ನೀಡುವ ಸೂಚನೆಯಂತೆ ಡಿ.20ರಿಂದ ಬಿಜೆಪಿ ತನ್ನ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆಯೆಂದು ತಿಳಿದು ಬಂದಿರುವುದಾಗಿ ವರದಿಯಲ್ಲಿ ಉಲ್ಲೇಖೀಸಿರುವುದು “ಉದಯವಾಣಿ’ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪರಿಸ್ಥಿತಿ ಶಾಂತಗೊಂಡಂತೆ ಕಂಡುಬರುತ್ತಿದೆಯಾದರೂ ಪರೇಶ್‌ ಮೇಸ್ತಾನನ್ನು ಚಿತ್ರಹಿಂಸೆ ನೀಡಿ ಭೀಕರವಾಗಿ ಹತ್ಯೆಗೈಯಲಾಗಿದೆ ಎಂಬ ವದಂತಿಗಳು ಸಾರ್ವಜನಿಕರ ಮನಸ್ಸಿನಿಂದ ಇನ್ನು ದೂರವಾಗಿಲ್ಲ. ಪ್ರಕರಣ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿದ ನಂತರ ಸಾರ್ವಜನಿಕರು ಸ್ವಲ್ಪ ಸಮಾಧಾನಗೊಂಡಿದ್ದಾರೆ. ಆದರೆ, ಸರ್ಕಾರ ಹೇಳುವಂತೆ ಇದು ಸಹಜ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ಪ್ರಚಾರ ಮುಂದುವರಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಪರೇಶ್‌ ಮೇಸ್ತಾ ಡಿ. 6ರಂದು ಹತ್ಯೆಯಾಗಿದ್ದು, ಡಿ. 8ರಂದು ಆತನ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಪತ್ತೆಯಾದ ಶವ ವಿರೂಪಗೊಂಡಿದ್ದು, ಇದೊಂದು ಹತ್ಯೆ ಎಂದು ಆರೋಪಿಸಿ ಬಿಜೆಪಿ ಹೋರಾಟ ಆರಂಭಿಸಿತ್ತು. ಹೀಗಾಗಿ ಮೇಸ್ತಾ ಸಾವಿನ ಫೊರೆನ್ಸಿಕ್‌ ವರದಿಯನ್ನು ಬಿಡುಗಡೆ ಮಾಡಿದ್ದ ಸರ್ಕಾರ, ಆತನನ್ನು ಹತ್ಯೆ ಮಾಡಿದ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿತ್ತು. ಆದರೆ, ಫೊರೆನ್ಸಿಕ್‌ ವರದಿಯನ್ನೇ ಸರ್ಕಾರ ತಿರುಚಿದೆ ಎಂದು ಬಿಜೆಪಿ ಆರೋಪಿಸಿತ್ತು.

ಇದರಿಂದ ಪ್ರತಿಭಟನೆಗಳು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣ ಗೋಚರಿಸಿದ್ದರಿಂದ ಹಿಂದೂ ಕಾರ್ಯಕರ್ತರ ಒತ್ತಾಯದಂತೆ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಆದರೂ ಬಿಜೆಪಿ ಪ್ರಕರಣದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆಯೇ ವರದಿ ನೀಡಿರುವುದು ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ

ಸಿಬಿಐ ವರದಿ ಹಸ್ತಾಂತರ
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ ಮೇಸ್ತಾನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಆದರೆ, ವಿಸರಾ ಮತ್ತು ಹೈಯಾಯ್ಡ ಬೋನ್‌ ವರದಿಗಳು ಬರಬೇಕಾಗಿದ್ದು, ಅವು ಮೇಸ್ತಾ ಸಾವಿನ ನಿಜ ಕಾರಣವನ್ನು ಬಯಲು ಮಾಡಲಿದೆ. ಈ ವರದಿ ಸಿದ್ಧಗೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ  ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಈ ವರಿದಿಗಳನ್ನು ಸಿಬಿಐಗೆ ಸರ್ಕಾರ ಹಸ್ತಾಂತರಿಸಲಿದೆ.

ಉತ್ತರ ಕನ್ನಡ ಸಹಜ ಸ್ಥಿತಿಗೆ 
ಹೊನ್ನಾವರ: ಕಳೆದ 8 ದಿನಗಳಿಂದ ಕೋಮು ಜ್ವಾಲೆಯಿಂದ ಹೊತ್ತಿ ಉರಿ ದಿದ್ದ ಉತ್ತರ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಮರಳಿದೆ. ಶಾಲೆ, ಕಾಲೇಜುಗಳು ಪುನಾರಂಭಗೊಂಡಿವೆ. ಆದರೆ, ಮುಂಜಾ ಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಮುಂದು ವರಿಸಲಾಗಿದೆ. ಇದೇ ವೇಳೆ, ವದಂತಿಗಳು ಹಬ್ಬುತ್ತಿದ್ದು, ಎಷ್ಟೊತ್ತಿಗೆ ಏನಾಗು ತ್ತದೆಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಈ ನಡುವೆ, ಗಲಭೆಗೆ ಕಾರಣರಾದವರು, ಹಿನ್ನೆಲೆಯಲ್ಲಿ ಕೆಲಸ ಮಾಡಿದವರು ಎಂಬ ಅನುಮಾನದ ಮೇಲೆ ಪೊಲೀಸರು ದಿನಕ್ಕೆ ಒಬ್ಬಿಬ್ಬರನ್ನು
ಬಂಧಿಸತೊಡಗಿದ್ದಾರೆ.

ಪೊಲೀಸರಿಗೆ ಆತಂಕದ ಸ್ಥಿತಿ 
ಈ ಮಧ್ಯೆ, ಮುಖ್ಯಮಂತ್ರಿ ಭೇಟಿ ವೇಳೆ ಬಂದೋಬಸ್ತ್ ಕರ್ತವ್ಯದ ಮೇಲೆ ಡಿ.1ರಂದು ಮನೆ ಬಿಟ್ಟು ಬಂದಿದ್ದ ಪೊಲೀಸರು ಇನ್ನೂ ಮನೆ ಸೇರಿಲ್ಲ. ಸೇವಾ ಸಂಸ್ಥೆಗಳ ಕಟ್ಟಡದಲ್ಲಿ ಅವರಿಗೆ ವಸತಿ ಕಲ್ಪಿಸಲಾಗಿದೆ. ಇಲ್ಲಿ 200 ಪೊಲೀಸರಿಗೆ ಒಂದೇ ಶೌಚಾಲಯವಿದೆ. ನೀರಿನ ಸಮಸ್ಯೆ ಇದೆ. ಎಷ್ಟೊತ್ತಿಗಾದರೂ ಎದ್ದು ಕರ್ತವ್ಯಕ್ಕೆ ಹೋಗಬೇಕಾದ ಆತಂಕದಲ್ಲಿ ನಿದ್ದೆ ಕೂಡ ಬರುವುದಿಲ್ಲ.ತಮ್ಮ ಮೇಲೆಯೇ ಕಲ್ಲು ಬಿದ್ದರೂ ಪ್ರತಿಯಾಗಿ ಆದೇಶ ಇಲ್ಲದೆ ಲಾಠಿ ಚಲಾಯಿಸುವಂತಿಲ್ಲ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next