Advertisement

ನಾಯಕತ್ವ ಇಲ್ಲದೇ ಉಕ ಅನಾಥ!

04:38 PM Dec 10, 2018 | Team Udayavani |

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗೆ ಹಾಗೂ ಆಸಮಾಧಾನಕ್ಕೆ ಕಾರಣವಾಗುತ್ತಿರುವ ಉತ್ತರ ಕರ್ನಾಟಕದಲ್ಲಿ ರಾಜಕೀಯ ನಾಯಕತ್ವದ ದಿವಾಳಿತನ ಆಗುತ್ತಿದೆಯೇ? ಇಂತಹ ಗಂಭೀರ ಚರ್ಚೆ ಈಗ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಕಾಂಗ್ರೆಸ್‌ ಆಡಳಿತದಲ್ಲಿದ್ದರೂ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಪರ ಬಲವಾದ ವಾದ ಮಾಡುವ, ಸಮರ್ಥಿಸಿಕೊಳ್ಳುವ ಮತ್ತು ಈ ಭಾಗಕ್ಕೆ ಯೋಜನೆಗಳನ್ನು ತರಬಲ್ಲ ನಾಯಕರು ಇಲ್ಲದಿರುವುದು ಈ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಉತ್ತರ ಕರ್ನಾಟಕದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಯುದ್ಧಕ್ಕೆ ಬನ್ನಿ ಎಂದರೆ ಹೇಗೆ ಎಂಬುದು ಇಲ್ಲಿಯ ಜನರ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್‌ ನಾಯಕರ ಪ್ರಶ್ನೆ. ಸರ್ಕಾರದ ಬಗ್ಗೆ ಏನೇ ಅಸಮಾಧಾನ ಇದ್ದರೂ ಉತ್ತರ ಕರ್ನಾಟಕದ ಶಾಸಕರು ಹಾಗೂ ಸಚಿವರು ನೇರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಹೋಗುತ್ತಿರುವುದು ಇಲ್ಲಿಯ ರಾಜಕೀಯ ನಾಯಕತ್ವದ ದಿವಾಳಿತನಕ್ಕೆ ಸಾಕ್ಷಿ ಎಂಬುದು ಈ ಚರ್ಚೆಗೆ ಪುಷ್ಟಿ ನೀಡುತ್ತಿದೆ.

Advertisement

ಉತ್ತರ ಕರ್ನಾಟಕದ ರಾಜಕಾರಣದ ಮಟ್ಟಿಗೆ ಎಚ್‌.ಕೆ. ಪಾಟೀಲ, ಎಸ್‌.ಆರ್‌. ಪಾಟೀಲ, ಎಂ.ಬಿ. ಪಾಟೀಲ ಹಾಗೂ ಬಸವರಾಜ ಹೊರಟ್ಟಿ ಬಹಳ ಪ್ರಭಾವಿ ನಾಯಕರು. ಸರ್ಕಾರದ ಕಿವಿಹಿಂಡಿ ಈ ಭಾಗಕ್ಕೆ ಯೋಜನೆ ಹಾಗೂ ಅನುದಾನ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದವರು. ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕವನ್ನು ಬಲವಾಗಿ ಸಮರ್ಥಿಸಿಕೊಳ್ಳಬಲ್ಲವರು. ಆದರೆ ಇದರಲ್ಲಿ ಯಾವ ನಾಯಕರೂ ಸಚಿವ ಸಂಪುಟದಲ್ಲಿಲ್ಲ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಯಾವುದೇ ಯೋಜನೆ ಹಾಗೂ ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಇಲ್ಲಿಯ ನಾಯಕರಲ್ಲಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ. ಪಾಟೀಲ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಸಂಪುಟದಲ್ಲಿ ಸೇರ್ಪಡೆಯಾಗದಿರುವುದು ಮುಂಬೈ ಕರ್ನಾಟಕಕ್ಕೆ ಧ್ವನಿಯೇ ಇಲ್ಲದಂತಾಗಿದೆ. ಈಗಾಗಲೇ ಆಸಮಾಧಾನ ಹಾಗೂ ಆಕ್ರೋಶವನ್ನು ಅದುಮಿಟ್ಟುಕೊಂಡಿರುವ ಕಾಂಗ್ರೆಸ್‌ ಶಾಸಕರಿಗೆ ಸಿದ್ದರಾಮಯ್ಯ ಅವರೇ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಸಮ್ಮಿಶ್ರ ಸರ್ಕಾರ ಬಂದಾನಿಗಿಂದ ಇದು ಮೈಸೂರು ಭಾಗದ ಐದು ಜಿಲ್ಲೆಗಳಿಗೆ ಸೀಮಿತವಾದ ಸರ್ಕಾರ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಜನರ ಮನಸ್ಸಿನಲ್ಲಿ ಸಹ ಇದೇ ಭಾವನೆ ಇದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಉತ್ತರ ಕರ್ನಾಟಕದಿಂದ ಪ್ರಶ್ನೆ ಮಾಡಲು ಪ್ರಬಲ ನಾಯಕರು ಇಲ್ಲದೆ ಇರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ.

ಪ್ರತಿ ಬಾರಿ ಸಂಪುಟ ಸಭೆಯಲ್ಲಿ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ಆದರೆ ಇದೇ ಉತ್ತರ ಕರ್ನಾಟಕದ ಒಂದೂ ಯೋಜನೆಗೆ ಅನುಮೋದನೆ ಸಿಗುತ್ತಿಲ್ಲ ಎಂಬುದು ಇಲ್ಲಿಯ ನಾಯಕರ ಆಸಮಾಧಾನ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಶಾಸಕರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಸತೀಶ ಜಾರಕಿಹೊಳಿ ಸೇರಿದಂತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದ ಸರ್ಕಾರ ಕೆಆರ್‌ ಎಸ್‌ ಜಲಾಶಯದಲ್ಲಿ 1200 ಕೋಟಿ ವೆಚ್ಚದಲ್ಲಿ ಕಾವೇರಿ ಪ್ರತಿಮೆ ಸ್ಥಾಪಿಸಲು ನಿರ್ಧಾರ ಮಾಡಿರುವ ಸರ್ಕಾರದ ಕ್ರಮವನ್ನು ಸಚಿವ ಸಂಪುಟದಲ್ಲಿ ಪ್ರಶ್ನಿಸಲು ಉಕ ಭಾಗದ ಹಿರಿಯ ಸಚಿವರು ಸಂಪುಟದಲ್ಲಿಲ್ಲ. ಇದು ಈ ಭಾಗಕ್ಕೆ ಮತ್ತೊಂದು  ಅನ್ಯಾಯ ಎಂಬ ಆರೋಪವಿದೆ.

Advertisement

ಕಾವೇರಿ ಪ್ರತಿಮೆ ಜೊತೆಗೆ ಕೆಆರ್‌ಎಸ್‌ ಆವರಣದಲ್ಲಿ 1436 ಕೋಟಿ ರೂ. ವೆಚ್ಚದಲ್ಲಿ ಡಿಸ್ನಿಲ್ಯಾಂಡ್‌ ಮಾಡಲು ಸರ್ಕಾರ ನಿರ್ಧರಿಸಿ ಅದಕ್ಕೆ ಈಗಾಗಲೇ ಸಮಗ್ರ ಕ್ರಿಯಾ ಯೋಜನೆ ಸಹ ಸಿದ್ಧಪಡಿಸಲಾಗಿದೆ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಬಹಳ ಆಗತ್ಯವಾಗಿ ಬೇಕಾಗಿರುವ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ಮಾತೇ ಇಲ್ಲ. ಇದು ಸಹಜವಾಗಿಯೆ ಈ ಭಾಗದ ಜನರಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಅದೇ ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯದ ಬಳಿ ಕೃಷ್ಣರಾಜಸಾಗರ ಜಲಾಶಯ ಇಲ್ಲವೇ ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ಮಾಡಬೇಕು. ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಆದರೆ ಯಾವ ಸರ್ಕಾರವೂ ಇದಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ಈಗ ಸಮ್ಮಿಶ್ರ ಸರ್ಕಾರದಲ್ಲೂ ಸಹ ಇದೇ ರೀತಿ ನಿರ್ಲಕ್ಷ್ಯ 
ಕಾಣುತ್ತಿದೆ ಎಂಬ ಆಭಿಪ್ರಾಯ ವ್ಯಕ್ತವಾಗಿದೆ.

ಮೂಲಗಳ ಪ್ರಕಾರ ಕರ್ನಾಟಕ ನೀರಾವರಿ ನಿಗಮ ಇತ್ತೀಚೆಗೆ 500 ಕೋಟಿ ರೂ. ಸಾಲ ಪಡೆದುಕೊಂಡಿದ್ದು, ಅದರಲ್ಲಿ 200 ಕೋಟಿ ರೂ. ಹಣವನ್ನು ಕಾವೇರಿ ನಿಗಮಕ್ಕೆ ಹಂಚಿಕೆ ಮಾಡಲಾಗಿದೆ. ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಖರ್ಚು ವೆಚ್ಚದ ಮಾತು ಬಂದಾಗ ಉತ್ತರ ಕರ್ನಾಟಕದ ಯೋಜನೆಗಳಿಗೆ ಕಡಿತ ಮಾಡಲಾಗುತ್ತದೆ ಎಂಬುದು ಇಲ್ಲಿಯ ನಾಯಕರ ಹಾಗೂ ಹೋರಾಟಗಾರರ ಆರೋಪ. ನೀರಾವರಿ ನಿಗಮದಲ್ಲಿ ಈಗ ಕಡಿತ ಪ್ರಕ್ರಿಯೆ ನಡೆದಿದೆ. ಈ ಭಾಗದ ಪ್ರಮುಖ ಯೊಜನೆಗಳಾದ ಹಿಡಕಲ್‌ ಹಾಗೂ ಅಥಣಿ ಭಾಗದ ನೀರಾವರಿ ಯೋಜನೆಗಳಿಗೆ ಮಂಜೂರಾಗಿದ್ದ ಅನುದಾನವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

„ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next