ಲಖನೌ: ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಜನರು ತಮ್ಮ ಹೊಲಗಳಲ್ಲಿ ತೊಂದರೆ ನೀಡುತ್ತಿರುವ ಗೋವುಗಳನ್ನು ಅಟ್ಟಿಸಿಕೊಂಡು ಬಂದು ಶಾಲೆಯ ಕಾಂಪೋಂಡಿನಲ್ಲಿ ಕಟ್ಟಿ ಹಾಕಿಹೋಗುತ್ತಿದ್ದಾರೆ. ಇದರಿಂದಾಗಿ ಶಾಲೆ ಹಾಗೂ ಇತರ ಸರಕಾರ ಕಟ್ಟಡಗಳೇ ಈಗ ಗೋಶಾಲೆಯಾಗಿ ಪರಿವರ್ತನೆಯಾಗುತ್ತಿವೆ. ಅದರಲ್ಲೂ ಇಗ್ಲಾಸ್, ಖೇರ್ ಭಾಗದಲ್ಲಿ ಜನರು ಈ ರೀತಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ.
ಮೂಲಗಳ ಪ್ರಕಾರ ಕೆಲವು ಶಾಲೆಗಳನ್ನೂ ಈಗಾಗಲೇ ಬಂದ್ ಮಾಡಲಾಗಿದೆ. ಈ ಮಧ್ಯೆಯೇ, ಬೀಡಾಡಿ ದನಗಳನ್ನು ಆರೈಕೆ ಮಾಡುವುದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಿಎಂ ಯೋಗಿ ಆದಿತ್ಯನಾಥ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಹೆಚ್ಚಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, ಸರಕಾರಿ ಕಟ್ಟಡಕ್ಕೆ ದನಗಳನ್ನು ತರುವಂತಿಲ್ಲ ಎಂದು ಸೂಚಿಸಲಾಗಿದೆ.ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗೋಶಾಲೆ ನಿರ್ಮಾಣ ಪ್ರಕ್ರಿಯೆ ಅತ್ಯಂತ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ಅಷ್ಟೇ ಅಲ್ಲ, ಹಾಲು ನೀಡುವುದನ್ನು ನಿಲ್ಲಿಸಿದ ನಂತರ ಜಾನುವಾರುಗಳನ್ನು ಬೀದಿಗೆ ಬಿಡುವವರ ವಿರುದ್ಧ ದೂರು ದಾಖಲಿಸಿ ಕೊಳ್ಳಲಾಗುತ್ತಿದೆ.
ಅಷ್ಟೇ ಅಲ್ಲ,ಕಳೆದ ಕೆಲವು ದಿನಗಳಿಂದ ದನಗಳ ಸಾಗಾಟದ ಮೇಲೆ ಗೋರಕ್ಷಕ ಪಡೆಗಳು ದಾಳಿ ನಡೆಸುತ್ತಿರುವ ಪ್ರಕರಣ ದಾಖಲಾಗಿರುವುದರಿಂದ,ರಾಜ್ಯಾದ್ಯಂತ ಹೆಚ್ಚುವರಿ ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.