ಕುಂದಾಪುರ: ಕಲಿಯುಗದಲ್ಲಿ ನಾಗಾರಾಧನೆಯಿಂದ ಸಂಪತ್ತು, ಆರೋಗ್ಯ, ಸಂತಾನ ಪ್ರಾಪ್ತಿಯಾಗುತ್ತದೆ. ಸಂಪತ್ತನ್ನು ಧರ್ಮ ಕಾರ್ಯಗಳಿಗೆ ಹೆಚ್ಚು ಉಪಯೋಗಿಸುವುದರಿಂದ ಭಗವಂತನ ಇಚ್ಛೆಯಂತೆ ನಮಗೆ ಫಲ ದೊರೆಯುತ್ತದೆ. ಧರ್ಮವನ್ನು ನಾವು ರಕ್ಷಿಸುವುದರಿಂದ ನಮ್ಮನ್ನು ಧರ್ಮ ರಕ್ಷಿಸುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ನೂಜಾಡಿ ಗ್ರಾಮದ ಮಂತಾರು ನಾಗಬನದಲ್ಲಿ ಫೆ. 10ರಂದು ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವೇ| ಮೂ| ನೂಜಾಡಿ ಕೃಷ್ಣ ಭಟ್, ವಿದ್ವಾನ್ ನೂಜಾಡಿ ರಮಾನಂದ ಭಟ್, ಬಗ್ವಾಡಿ ರಾಜೀವ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ, ಎಸ್. ದಯಾನಂದ ಶೆಟ್ಟಿ, ಕೆ. ಬಾಬು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಬಗ್ವಾಡಿ ರಾಜೀವ ಶೆಟ್ಟಿ ಸ್ವಾಗತಿಸಿದರು, ಶಿಕ್ಷಕರಾದ ರವಿರಾಜ್ ಶೆಟ್ಟಿ ಚಿತ್ತೂರು, ಸಂಜೀವ ಬಿಲ್ಲವ ಕುಂದಬಾರಂದಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ| ಕಿಶೋರ್ ಕುಮಾರ್ ಶೆಟ್ಟಿ ನೂಜಾಡಿ ವಂದಿಸಿದರು. ಮಹಾ ಅನ್ನಸಂತರ್ಪಣೆಯಲ್ಲಿ 10,000ಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು. ಬೃಹತ್ ವೇದಿಕೆಯಲ್ಲಿ ರಾತ್ರಿ ಡಮರು ಸೇವೆ, ಅಷ್ಟಪವಿತ್ರ ನಾಗಮಂಡಲ ಸೇವೆ, ಪ್ರಸಾದ ವಿತರಣೆ ಜರಗಿತು.