Advertisement

ಮತದಾನ ಹಕ್ಕು ವಿವೇಚನೆಯಿಂದ ಬಳಸಿ

11:53 AM Jan 31, 2019 | Team Udayavani |

ಸುರಪುರ: ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿ ಅಡಗಿದೆ. ದೇಶದ ಅಭಿವೃದ್ಧಿಗಾಗಿ ಮತದಾನದ ಹಕ್ಕು ಸಂವಿಧಾನದತ್ತವಾಗಿ ಕೊಡಮಾಡಲ್ಪಟ್ಟಿದೆ. ಈ ಮತದಾನ ಹಕ್ಕನ್ನು ಯುವಕರು ವಿವೇಚನೆಯಿಂದ ಬಳಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಡಿ. ನಾಗರಾಜೇಗೌಡ ಹೇಳಿದರು.

Advertisement

ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಬಲ ಅಸ್ತ್ರ. ಈ ಅಸ್ತ್ರದ ಮೂಲಕ ನಾಗರಿಕರು ತಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ದೇಶದ ಅಭಿವೃದ್ಧಿ ಹಾಗೂ ಸ್ಥಿತಿಗತಿಗಳು ನಿಮ್ಮ ಮತವನ್ನು ಅವಲಂಬಿಸಿದೆ. ಇಲ್ಲಿ ಪ್ರತಿ ಮತಕ್ಕೂ ಮೌಲ್ಯವಿದೆ. ಹೀಗಾಗಿ ಯುವಕರು ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವ ಜತೆಗೆ ಪ್ರತಿ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು. ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು. ಶ್ರೀಮಂತ, ಬಡವನ ಮತಕ್ಕೆ ಮೌಲ್ಯ ಒಂದೇ. ಮತ ಎಂಬುದು ದೇಶದ ಭವಿಷ್ಯ ಬದಲಿಸುವ ಪ್ರಬಲ ಅಸ್ತ್ರ ಇದ್ದಂತೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜೊತೆಗೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಸಿವಿಲ್‌ ನ್ಯಾಯಾಧಿಧೀಶ ವಿನೋದ ಬಾಳನಾಯ್ಕ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. 18 ವರ್ಷ ತುಂಬಿದ ಯುವಕ-ಯುವತಿಯರು ತಪ್ಪದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸಂವಿಧಾನ ಕಲ್ಪಿಸಿರುವ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ಹೆಚ್ಚುವರಿ ನ್ಯಾಯಾಧೀಶ ಅಮರನಾಥ ಬಿ.ಎನ್‌. ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನ ನಾಯಕ ಚುನಾಯಿಸುವ ಅಧಿಕಾರವನ್ನು ಪ್ರಜೆಗಳಿಗೆ ನೀಡಿದ್ದು, ಇದಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕ. ಯುವ ಜನತೆ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಹೊಂದಿದ್ದು, ದೇಶದ ಎಲ್ಲ ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಮತದಾನ ಮಾಡಿದಲ್ಲಿ ಸುಭದ್ರ, ಸುಸ್ಥಿರ, ಬಲಿಷ್ಟ ಸರ್ಕಾರ ಮತ್ತು ಉತ್ತಮ ಪ್ರಜಾಪ್ರಭುತ್ವಕ್ಕೆ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ನುಡಿದರು.

ವಕೀಲರಾದ ವಿಶ್ವಮಿತ್ರ ಕಟ್ಟಿಮನಿ ಮತ್ತು ಗೋಪಾಲ ತಳವಾರ ಉಪನ್ಯಾಸ ನೀಡಿದರು. ನ್ಯಾಯವಾದಿಗಳಾದ ದೇವಿಂದ್ರಪ್ಪ ಬೇವಿನಕಟ್ಟಿ, ಬಸವರಾಜ ಕಿಲ್ಲೇದಾರ್‌, ಎಪಿಪಿ ಮಹಾಂತೇಶ ಮಸಳಿ, ಬಸಲಿಂಗಪ್ಪ ಪಾಟೀಲ ದೇವಿಂದ್ರಪ್ಪ ಭೇವಿನಕಟ್ಟಿ, ಬಸವರಾಜ ಕಿಲ್ಲೇದಾರ ಇದ್ದರು. ಹಿರಿಯ-ಕಿರಿಯ ವಕೀಲರು ಕಕ್ಷಿದಾರರು ಇದ್ದರು. ಯಂಕಾರಡ್ಡಿ ಹವಲ್ದಾರ್‌ ಸ್ವಾಗತಿಸಿದರು. ಅಪ್ಪಣ್ಣ ಗಾಯಕವಾಡ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next