Advertisement

ನಿರ್ದಿಷ್ಟ ಉದ್ದೇಶಕ್ಕೆ ಸಾಲದ ಹಣ ಬಳಸಿ

07:27 AM Jun 27, 2019 | Lakshmi GovindaRaj |

ಬೆಂಗಳೂರು: ರೈತರು ಬ್ಯಾಂಕ್‌ ಅಥವಾ ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಂಡರೆ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೋಳಿ ಅಭಿಪ್ರಾಯಪಟ್ಟರು.

Advertisement

ತೋಟಗಾರಿಕೆ ಇಲಾಖೆಯು ನಬಾರ್ಡ್‌ ಸಹಯೋಗದಲ್ಲಿ ನಗರದ ಐಐಎಸ್ಸಿಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಉತ್ಪಾದಕರ ಸಂಸ್ಥೆಯ (ಎಫ್ಪಿಒ) ಗ್ರಾಹಕರ ಮತ್ತು ಮಾರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಲ ಮಾಡಿದ ಉದ್ದೇಶ ಮರೆತು ಬೇರೆ ಅವಶ್ಯಕತೆಗಳಿಗೆ ಖರ್ಚು ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ಎಂದರು.

ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡುವ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ವ್ಯವಸ್ಥೆಯೂ ಆಗಬೇಕು. ಮಣ್ಣಿನ ಫ‌ಲವತ್ತತೆಗೆ ಅನುಗುಣವಾಗಿ ಬೆಳೆ ಬೆಳೆಯಲು ಬೇಕಾದ ಮಾಹಿತಿ ಮತ್ತು ಅರಿವನ್ನು ರೈತರಿಗೆ ನೀಡಬೇಕು. ದೇಶದಲ್ಲಿ ಶೇ.75ರಷ್ಟು ರೈತರಿದ್ದರೂ ಅಗತ್ಯ ಪ್ರಮಾಣದ ಆಹಾರ ಪೂರೈಕೆ ಸಾಧ್ಯವಾಗುತ್ತಿಲ್ಲ. ವಿದೇಶದಲ್ಲಿ ಶೇ.25ರಷ್ಟು ರೈತರಿದ್ದರೂ ಶೇ.75ರಷ್ಟು ಜನರಿಗೆ ಬೇಕಾದ ಆಹಾರ ಪದಾರ್ಥ ಪೂರೈಸಿ ಬೇರೆ ದೇಶಕ್ಕೂ ರಫ್ತು ಮಾಡುತ್ತಾರೆ ಎಂದರು.

ರೈತರ ಅಭಿವೃದ್ಧಿಗೆ ಭೂಮಿ, ಕೃಷಿ ಕಾರ್ಮಿಕರು, ಬಂಡವಾಳ ಹಾಗೂ ಸಂಘಟನೆ ಅತಿ ಮುಖ್ಯ. ಭೂಮಿ ಇಲ್ಲದೆ ಬೆಳೆ ಬೆಳಯಲು ಸಾಧ್ಯವಿಲ್ಲ. ಬೆಳೆಯ ಕಟಾವು ಇತ್ಯಾದಿಗೆ ಕೃಷಿ ಕಾರ್ಮಿಕರು ಅತಿ ಅಗತ್ಯ ಹಾಗೆಯೇ ಬಂಡವಾಳ ಮತ್ತು ಸಂಘಟನೆಯೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ 300 ಎಫ್ಪಿಒಗಳು ಸೇವೆ ಸಲ್ಲಿಸುತ್ತಿವೆ. ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬೆಳೆ ಬೆಳಯಬಹುದಾದ ಹೊಸ ಕಲ್ಪನೆಯನ್ನು ಎಫ್ಪಿಒಗಳು ನೀಡಬೇಕು ಎಂದು ಹೇಳಿದರು.

ರೈತರು ವಾಣಿಜ್ಯ ಬೆಳೆಯ ಜತೆಗೆ ವಾಣಿಜ್ಯೇತರ ಬೆಳೆಯನ್ನು ಬೆಳೆಯಬೇಕು. ಆರ್ಥಿಕ ಸುಸ್ಥಿರತೆಯ ಜತೆಗೆ ಆಹಾರ ಪದಾರ್ಥವೂ ಅಷ್ಟೇ ಮುಖ್ಯವಾಗಿರುತ್ತದೆ. ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ಆಗುತ್ತದೆ. ಬೆಳೆಗೆ ಉತ್ತಮ ಬೆಲೆ ಸಿಕ್ಕಾಗ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.

Advertisement

ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ಉಪಕರಣಗಳ ಬಳಕೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ಎಫ್ಪಿಒಗಳನ್ನು ಆರಂಭಿಸಿದ್ದೇವೆ. 99 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದು, 22 ಲಕ್ಷ ರೂ.ಗಳಂತೆ 19 ಕೋಟಿ ರೂ.ಗಳನ್ನು ಎಫ್ಪಿಒಗಳ ಅಭಿವೃದ್ಧಿಗೆ ನೀಡಿದ್ದೇವೆ. ಮಾರ್ಕೆಟ್‌ ಲಿಂಕಿಂಗ್‌ ವ್ಯವಸ್ಥೆಗೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಬಾರ್ಡ್‌ ಡಿಜಿಎಂ ಸಿ.ವಿ.ರೆಡ್ಡಿ ಮಾತನಾಡಿ, ನಬಾರ್ಡ್‌ ಸಹಾಯಧನದಡಿ 230 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದೇವೆ. ಎಫ್ಪಿಒಗಳ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲು ಬೇಕಾದ ಚಿಂತನೆಯೂ ನಡೆಯುತ್ತಿದೆ ಎಂದರು.

ರಸಾಯನಿಕ ಗೊಬ್ಬರ ಬಳಸುವ ಜತೆಗೆ ಮಣ್ಣಿನ ಫ‌ಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಹಾಕಬೇಕು. ಇದಕ್ಕಾಗಿ ಹಸು, ಮೇಕೆ ಸಾಕಬೇಕು. ಭೂಮಿ ಫ‌ಲವತ್ತಾಗಿದ್ದಾರೆ ಮಾತ್ರ ಉತ್ತಮ ಬೆಳೆ ಸಾಧ್ಯ.
-ಎಂ.ಸಿ.ಮನಗೋಳಿ, ತೋಟಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next