Advertisement

Cauvery: ಮಾತು ತಪ್ಪಿದ ಊಸರವಳ್ಳಿ ಸರಕಾರ: ಬೊಮ್ಮಾಯಿ

11:00 PM Sep 16, 2023 | Team Udayavani |

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರಕಾರ ಕೊಟ್ಟ ಮಾತನ್ನು ಬದಲಾಯಿಸುತ್ತಿದ್ದು, ಇದೊಂದು “ಊಸರವಳ್ಳಿ ಸರಕಾರ’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರದ ಮೇಲೆ ತಮಿಳುನಾಡಿನ ಪ್ರಭಾವ ವಿಪರೀತವಾಗಿದೆ. ಸುಪ್ರೀಂಕೊರ್ಟ್‌ ಆದೇಶವೂ ಆಗಿಲ್ಲ, ಸಿಡಬ್ಲುಎಂಎ ಸಭೆಯೂ ಆಗಿಲ್ಲ. ಆದರೂ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಮಾಡಿ ನಾಡಿನ ಜನತೆಗೆ ಮೋಸ ಮಾಡಿದೆ. ಇದರ ವಿರುದ್ಧ ನಮ್ಮ ಪಕ್ಷದ ವತಿಯಿಂದ ತೀವ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.

ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮರುದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್‌ ನೀರು ಬಿಡುತ್ತಾರೆ. ಸರಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು? ರಾಜ್ಯದ ಜನತೆಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಡುತ್ತಿರುವುದು ಕರಾಳ ನಿರ್ಣಯ ಎಂದು ವಾಗ್ಧಾಳಿ ನಡೆಸಿದರು.

ನೀರು ಬಿಡದೆ ವಾದ ಮಾಡಲಿ
ಬಿಜೆಪಿಯವರಿಗೆ ಪ್ರಧಾನಿಯನ್ನು ಭೇಟಿ ಮಾಡಿ ಮಾತನಾಡುವ ಧಮ್‌ ಇಲ್ಲ ಎಂಬ ಡಿಸಿಎಂ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಸರಕಾರಕ್ಕೆ ನಿಜವಾದ ತಾಕತ್ತು, ಧಮ್‌ ಇದ್ದರೆ ನೀರು ಬಿಡುತ್ತಿರಲಿಲ್ಲ. ನೀರು ಬಿಟ್ಟು ತಾಕತ್ತು, ಧಮ್ಮಿನ ಬಗ್ಗೆ ಮಾತನಾಡುತ್ತಾರೆ. ನಿಮಗೆ ತಾಕತ್ತು ಧಮ್‌ ಇದ್ದರೆ ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿ, ರಾಜ್ಯದ ಹಿತವನ್ನು ಕಾಪಾಡಲಿ ಎಂದರು.

ಕದ್ದುಮುಚ್ಚಿ ನೀರು ಹರಿಸುತ್ತಿರುವ ಸರಕಾರ: ಪ್ರತಾಪಸಿಂಹ ಆರೋಪ
ಮೈಸೂರು: ರಾಜ್ಯ ಸರಕಾರ ತಮಿಳುನಾಡಿಗೆ ಈಗಲೂ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಮೈಸೂ ರು-ಕೊಡಗು ಸಂಸದ ಪ್ರತಾಪ ಸಿಂಹ ಆರೋಪಿಸಿದರು. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಲೂ ಜಲಾಶಯಗಳಿಗೆ ಹೋಗಿ ನೋಡಿ. ಹೊರಹರಿವು ಪ್ರಮಾಣ ಪರೀಕ್ಷೆ ಮಾಡಿ. ಪ್ರತಿನಿತ್ಯ ಐದು ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಸೆ.13ರಿಂದ ನೀರು ಹರಿಸಲಾಗುತ್ತಿದೆ ಎಂದ ರು.

Advertisement
Advertisement

Udayavani is now on Telegram. Click here to join our channel and stay updated with the latest news.

Next