Advertisement

Urwa: ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಜೀವಬೆದರಿಕೆ, ಕೊಲೆಗೆ ಯತ್ನ: ಪ್ರಕರಣ ದಾಖಲು

01:07 AM Oct 02, 2024 | Team Udayavani |

ಮಂಗಳೂರು: ಉರ್ವ ಠಾಣೆಯ ಕಾನ್‌ಸ್ಟೆಬಲ್‌ ವೆಂಕಟೇಶ್‌ ಅವರನ್ನು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯನ್ನೊಡ್ಡಿ ಕೊಲೆ ಮಾಡಲು ಪ್ರಯತ್ನಿಸಲಾಗಿದ್ದು, ಈ ಬಗ್ಗೆ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.

Advertisement

ಸೆ. 29ರಂದು ವೆಂಕಟೇಶ್‌ ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ಪುಷ್ಪರಾಜ್‌ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರನ್ನು ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್‌ ಅವರು ಬೀಟ್‌ ಕರ್ತವ್ಯ ಸಿಬಂದಿಯವಾದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ. ರೋಹಿದಾಸ್‌ ಅವರಿಗೆ ಈ ವಿಚಾರ ತಿಳಿಸಿ, ತಾನು ಬೈಕ್‌ನಲ್ಲಿ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. 10.40ರ ವೇಳೆಗೆ ಸ್ಥಳಕ್ಕೆ ತಲುಪಿದಾಗ ಪಿಜಿಯ ಎದುರುಗಡೆ ಏಳೆಂಟು ಮಂದಿ ಯುವಕರು ಬೈದಾಡುತ್ತಾ ಪಿಜಿಯ ಕಿಟಕಿಯ ಗಾಜಿಗೆ ಕಲ್ಲು ಹೊಡೆಯುತ್ತಿದ್ದರು. ಸಮವಸ್ತ್ರದಲ್ಲಿದ್ದ ವೆಂಕಟೇಶ್‌ ಅವರು ಅಲ್ಲಿಗೆ ತಲುಪುತಿದ್ದಂತೆ ಆ ಯುವಕರ ಗುಂಪು ಅವರನ್ನು ನೋಡಿ ಅವಾಚ್ಯ ಶಬ್ಧಗಳಿಂದ ಬೈದು ಜೀವಂತ ವಾಪಸ್‌ ಹೋಗಲು ಬಿಡುವುದಿಲ್ಲ ಎಂದು ತುಳುವಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ.

ವೆಂಕಟೇಶ್‌ ಅವರಿಗೆ ನೋಡಿ ಪರಿಚಯವಿದ್ದ ಯುವಕರ ಗುಂಪಿನಲ್ಲಿದ್ದ ಅವಿನಾಶ್‌ ಎಂಬಾತ ಕಲ್ಲೊಂದನ್ನು ಬಲವಾಗಿ ಬಿಸಾಡಿದ್ದು, ಒಮ್ಮೆಲೆ ತಲೆಯನ್ನು ಹಿಂದಕ್ಕೆ ಸರಿಸಿದ ಪರಿಣಾಮ ಕಲ್ಲು ವೆಂಕಟೇಶ್‌ ಅವರು ಬಲಗಣ್ಣಿನ ಹಣೆಯ ಬಳಿ ಬಿದ್ದು ರಕ್ತ ಗಾಯವಾಗಿದೆ. ಅಲ್ಲಿದ್ದ ಇನ್ನಿಬ್ಬರಾದ ಸುಮನ್‌ ಮತ್ತು ರೋಹನ್‌ ಅವರು ಕೂಡಾ ಕಲ್ಲು ಹೊಡೆದಿದ್ದು, ವೆಂಕಟೇಶ್‌ ಅವರು ಒಮ್ಮೆಲೆ ಬಗ್ಗಿ ನೆಲದಲ್ಲಿ ಕುಳಿತ ಪರಿಣಾಮ ಕಲ್ಲುಗಳು ಅವರ ತಲೆಯ ಮೇಲಿಂದ ಹಾದುಹೋಗಿದೆ. ಅಲ್ಲಿದ್ದ ಇತರರು ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ವೇಳೆ ಸ್ಥಳಕ್ಕೆ ಬಂದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ. ರೋಹಿದಾಸ್‌ ಹಾಗೂ ಸ್ಥಳೀಯರಾದ ಚಂದ್ರು ಅವರನ್ನು ಕಂಡು ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ.

ಘಟನೆಗೆ ಸಂಬಂಧಿಸಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next