Advertisement

ನಗರ ಮಹಾಯೋಜನೆ: ಸರಕಾರದ ಅನುಮೋದನೆ ಬಾಕಿ

11:32 PM Jul 28, 2019 | Sriram |

ಸುಳ್ಯ: ನಗರ ಮಹಾಯೋಜನೆ ಕರಡು ಪ್ರತಿ ಸರಕಾರಕ್ಕೆ ಸಲ್ಲಿಸಲಾಗಿದ್ದು ಅಲ್ಲಿ ಅನುಮೋದನೆಗಾಗಿ ಕಾಯುತ್ತಿದೆ. ಈ ಹಿಂದಿನ ಆಡಳಿತ ಅವಧಿಯಲ್ಲಿ ಸಭೆ ನಡೆದು, ಸಭೆಯ ಸಲಹೆ ಆಧರಿಸಿ ಪರಿಷ್ಕೃತ ನಗರ ಮಹಾ ಯೋಜನೆ ಕರಡುಪ್ರತಿಯನ್ನು ಸರಕಾರಕ್ಕೆ ಕಳುಹಿ ಸಲಾಗಿತ್ತು. ಅಲ್ಲಿಂದ ಅನುಮೋದನೆ ಸಿಕ್ಕಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.

Advertisement

ನಗರ ಮಹಾಯೋಜನೆ
ಹಿಂದಿನ ಆಡಳಿತ ಅವಧಿಯಲ್ಲಿ ನ.ಪಂ. ಸದಸ್ಯರಿಗೆ ಮೊದಲು ಸೂಡಾ ಅಧಿಕಾರಿಗಳು ನಗರ ಮಹಾಯೋಜನೆ ನೀಲ ನಕಾಶೆಯ ಬಗ್ಗೆ ಮಾಹಿತಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದರು. ಆಗ ಹಲವು ಅಂಶಗಳ ಬದಲಾವಣೆಗೆ ಅಭಿಪ್ರಾಯ ವ್ಯಕ್ತವಾಗಿತ್ತು. ಸಾಮಾನ್ಯ ಸಭೆಯಲ್ಲಿಯು ವಿಷಯ ಪ್ರಸ್ತಾವವಾಗಿತ್ತು. ಮಹಾಯೋಜನೆ ಅನುಷ್ಠಾನ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದ್ದರು. ಸದಸ್ಯರ ಸಲಹೆಯಂತೆ ಹಲವು ತಿದ್ದುಪಡಿಗಳೊಂದಿಗೆ ಕರಡು ಪ್ರತಿ ಅನುಮೋದನೆಗೆ ಸರಕಾರಕ್ಕೆ ಸಲ್ಲಿಸಲಾಗಿತ್ತು.

ಮುಂದೇನು?
ಸರಕಾರದಿಂದ ಒಪ್ಪಿಗೆ ಸಿಕ್ಕಿದ ಬಳಿಕ ಕರಡು ಪ್ರತಿಯನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಳ್ಳಬೇಕು. ಬಳಿಕ 60 ದಿನಗಳ ಕಾಲ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭ ಜನರ ಅಥವಾ ಜನಪ್ರತಿ ನಿಧಿಗಳು ಪ್ರಶ್ನೆಗಳಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಮಾಸ್ಟರ್‌ ಪ್ಲ್ಯಾನ್‌ ಅಂತಿಮ ಗೊಳಿಸಲು ಸಾರ್ವಜನಿಕರ ಅಭಿಪ್ರಾಯವೇ ಆಧಾರವಾಗಿರುತ್ತದೆ. 60ನೇ ದಿನ ಸಲಹೆ, ಆಕ್ಷೇಪಗಳನ್ನು ಪರಿಗಣಿಸಿ ಅಂತಿಮ ಪ್ರತಿ ಯನ್ನು ಸರಕಾರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಟೌನ್‌ ಪ್ಲ್ಯಾನಿಂಗ್‌ ಅನುಷ್ಠಾನಕ್ಕೆ ಬರುತ್ತದೆ.

ಅನುಷ್ಠಾನಕ್ಕೆ ಪರ- ವಿರೋಧ
ಮಹಾಯೋಜನೆ ಜಾರಿಗೆ ಪರ ವಿರೋಧ ಅಭಿಪ್ರಾಯಗಳು ಇವೆ. ನಗರ ಪ್ಲ್ಯಾನಿಂಗ್‌ ಇಲ್ಲದಿರುವ ಕಾರಣ 33 ಕೆ.ವಿ., 110 ಕೆ.ವಿ. ಮೊದಲಾದ ಯೋಜನೆ ಅನುಷ್ಠಾನಕ್ಕೆ ಅಡ್ಡಿ ಆಗಬಹುದು. ಒಳಚರಂಡಿ ವೈಫಲ್ಯಕ್ಕೂ ಅದೇ ಕಾರಣ. ವಲಯ ಗುರುತಿಸದೆ ಇದ್ದಲ್ಲಿ ಎಲ್ಲೆಂದರಲ್ಲಿ ವಾಣಿಜ್ಯ, ಗೃಹ, ಕೈಗಾರಿಕೆ ಸ್ಥಾಪಿಸಿ ಭವಿಷ್ಯದ ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಆಗಲಿದೆ ಅನ್ನುವುದು ಅಧಿಕಾರಿಗಳು ಅಭಿಪ್ರಾಯ.

ಮಾಸ್ಟರ್‌ ಪ್ಲ್ಯಾನ್‌ ಅಂಗೀಕಾರವಾದಲ್ಲಿ ನಿರ್ದಿಷ್ಟ ರಸ್ತೆಗಳ ಉದ್ದೇಶಿತ ವಿಸ್ತೀರ್ಣದ ಒಳಗೆ ಹೊಸ ಕಟ್ಟಡ, ಕಟ್ಟಡ ವಿಸ್ತರಣೆ, ಭೂ ಪರಿವರ್ತನೆಗೆ ಸೂಡಾ ಅನುಮತಿ ನೀಡದು. ಮಾಸ್ಟರ್‌ ಪ್ಲ್ಯಾನ್‌ ಅನ್ವಯದಂತೆ ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿ ಆಗಬೇಕು. ನಿರ್ದಿಷ್ಟ ಯೋಜನೆ ಕಾರ್ಯಗತಕ್ಕೆ ನಿರ್ದಿಷ್ಟ ವಲಯ (ಪ್ರದೇಶ) ಎಂದು ಗುರುತಿಸಿದ್ದಲ್ಲಿ ಭವಿಷ್ಯದಲ್ಲಿ ಮನೆ, ವಾಣಿಜ್ಯ ಕಟ್ಟಡ ಕಟ್ಟುವಾಗ ಅಥವಾ ಇತರೆ ಯೋಜನೆ ಅನುಷ್ಠಾನಿಸುವಾಗ ಅಡ್ಡಿ ಉಂಟಾಗದು. ಪ್ರಸ್ತುತ ಎಲ್ಲೆಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ರೂಪುರೇಷೆ ಮಾಡದ ಕಾರಣ ಸರಕಾರದಿಂದ ವಿಶೇಷ ಅನುದಾನಗಳನ್ನು ಕೇಳಲು ಸಾಧ್ಯವಾಗುತ್ತಿಲ್ಲ. ಪ್ಲ್ಯಾನ್ ಇದಲ್ಲಿ ಅನುದಾನ ಕೇಳಬಹುದು ಅನ್ನುತ್ತಾರೆ ನ.ಪಂ. ಅಧಿಕಾರಿಗಳು.

Advertisement

ಸುಳ್ಯದಂತಹ ಪ್ರಾಕೃತಿಕ ನಗರಕ್ಕೆ ಪೂರಕ ಅಲ್ಲ. ವಸತಿ, ನಿವೇಶನಗಳಿಗೆ ಸಂಚಕಾರ ಉಂಟಾಗಲಿದೆ ಎಂಬ ಆತಂಕ ಜನಪ್ರತಿನಿಧಿಗಳದ್ದು. ಸೂಡಾ ಆರಂಭ ಗೊಳ್ಳುವ ಮೊದಲು ಮನೆ, ಕಟ್ಟಡ ನಿರ್ಮಿಸಿ ದವರಿಗೆ ನಿಯಮ ಅನ್ವಯ ವಾದಲ್ಲಿ ಕಷ್ಟ. ಈಗ ನೀಲ ನಕಾಶೆಯಲ್ಲಿ ಫಾರೆಸ್ಟ್‌ ಎಂದು ತೋರಿಸಿರುವ ಜಾಗ ದಲ್ಲಿ ಮನೆಗಳಿವೆ. 3 ಸೆಂಟ್ಸ್‌ ಜಾಗ ಹೊಂದಿ ರುವವರೂ ರಸ್ತೆಗೆ ಜಾಗ ಬಿಡಬೇಕು ಎಂಬ ನಿಯಮಗಳಿಂದ ತೊಂದರೆ ಉಂಟಾಗಲಿದೆ ಎನ್ನುವುದು ಅನುಷ್ಠಾನದ ವಿರೋಧಕ್ಕಿರುವ ಕಾರಣ.

ಏನಿದು ಟೌನ್‌ ಪ್ಲ್ಯಾನ್ ?
ಮಂಡಲ ಪಂಚಾಯತ್‌ನಿಂದ ನಗರ ಪಂಚಾಯತ್‌ ಆಗಿ ಮೇಲ್ದ ರ್ಜೆಗೆ ಏರಿದ ತತ್‌ಕ್ಷಣ ಆ ನಗರಕ್ಕೆ ಟೌನ್‌ ಪ್ಲ್ಯಾನಿಂಗ್‌ ಆ್ಯಕ್ಟ್ ಅನ್ವಯಗೊಳ್ಳುವುದು ನಿಯಮ. ಅದರಂತೆ ಅಭಿವೃದ್ಧಿ ಯೋಜನೆ ಅನುಷ್ಠಾನಿಸಬೇಕು. ಕೈಗಾರಿಕೆ, ವಾಣಿಜ್ಯ ಹೀಗೆ ಬೇರೆ-ಬೇರೆ ವಲಯ ಗುರುತಿಸಿ, ಅದಕ್ಕೆ ಪೂರಕ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕೈಗಾರಿಕೆ ವಲಯದಲ್ಲಿ ವಾಣಿಜ್ಯ ಚಟುವಟಿಕೆಗೆ, ವಾಣಿಜ್ಯ ವಲಯದಲ್ಲಿ ಕೈಗಾರಿಕೆಗಳಿಗೆ ಅವಕಾಶ ಕೊಡುವಂತಿಲ್ಲ. ಇಂತಹ ಹಲವು ನಿಯಮಗಳ ವ್ಯಾಪ್ತಿಗೆ ನಗರ ಒಳಪಡುತ್ತದೆ.

ಸರಕಾರದ ಒಪ್ಪಿಗೆ ಅಗತ್ಯ
ಕರಡು ಪ್ರತಿ ಸರಕಾರದ ಹಂತದಲ್ಲಿದೆ. ಅಲ್ಲಿ ಅದಕ್ಕೆ ಒಪ್ಪಿಗೆ ಸಿಗಬೇಕು. ಆ ಬಳಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಸಾರ್ವಜನಿಕ ಆಕ್ಷೇಪಣೆ ಕೇಳಲಾಗುವುದು. ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಪ್ಲ್ಯಾನಿಂಗ್‌ ಅನ್ನು ಸರಕಾರಕ್ಕೆ ಕಳುಹಿಸಿದ ಮೇಲೆ ಮಹಾಯೋಜನೆ ಜಾರಿಗೆ ಬರುತ್ತದೆ.
-ಶಿವಕುಮಾರ್‌, ಎಂಜಿನಿಯರ್‌, ನ.ಪಂ. ಸುಳ್ಯ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next