ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ)ಯಡಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ, ಬಂಧನ ಹಾಗೂ ಆಸ್ತಿ ಜಪ್ತಿ ಅಧಿಕಾರವನ್ನು ಸುಪ್ರೀಂಕೋರ್ಟ್ ಬುಧವಾರ (ಜುಲೈ 27) ಎತ್ತಿಹಿಡಿಯುವ ಮೂಲಕ ನಿರ್ಣಾಯಕ ತೀರ್ಪನ್ನು ನೀಡಿದೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ:ಪುತ್ತೂರು ಸುಳ್ಯ ಹಾಗೂ ಕಡಬ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ
ಪಿಎಂಎಲ್ ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ತನಿಖೆಗೊಳಪಡಿಸುವ, ಬಂಧಿಸುವ, ಆಸ್ತಿ ಜಪ್ತಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠ ಈ ತೀರ್ಪನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ ಬೆದರಿಕೆಯನ್ನೊಡ್ಡುತ್ತಿರುವುದಾಗಿ ಅರ್ಜಿದಾರರು ಆರೋಪಿಸಿದ್ದರು.
ಪಿಎಂಎಲ್ ಎ ಕಾಯ್ದೆಯು ಸಾಂವಿಧಾನಿಕ ಮಾನ್ಯತೆ ಹೊಂದಿರುವುದಾಗಿ ಹೇಳಿರುವ ಸುಪ್ರೀಂ ಪೀಠ, ಪಿಎಂಎಲ್ ಎ ಕಾಯ್ದೆಯ ಸೆಕ್ಷನ್ ಗಳಾದ 5, 8(4), 15, 17 ಮತ್ತು 19ರಡಿ ಜಾರಿ ನಿರ್ದೇಶನಾಲಯ ಬಂಧಿಸುವ, ಶೋಧಿಸುವ, ವಶಪಡಿಸಿಕೊಳ್ಳುವ ಮತ್ತು ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಅಧಿಕಾರ ಹೊಂದಿರುವುದಾಗಿ ಹೇಳಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಬರುವ ಪೊಲೀಸ್ ಅಧಿಕಾರಿಗಳಲ್ಲ. ಇ.ಡಿ ಅಧಿಕಾರಿಗಳ ಮುಂದೆ ದಾಖಲಾದ ಹೇಳಿಕೆಗಳು ಸಾಕ್ಷಿಯಾಗಿ ಪರಿಗಣಿಸಲ್ಪಡುತ್ತದೆ ಎಂದು ಸುಪ್ರೀಂಕೋರ್ಟ್ ಪೀಠ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರಣವನ್ನು ಬಹಿರಂಗಪಡಿಸುವುದು ಕಡ್ಡಾಯವಲ್ಲ. ಅದೇ ರೀತಿ ಆರೋಪಿಗೆ ಇಸಿಐಆರ್ (ದೂರಿನ ಪ್ರತಿ) ಪ್ರತಿ ಕೊಡಬೇಕಾದ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.