ಉಪ್ಪಿನಂಗಡಿ: ಚಿಲ್ಲರೆ ತೆಗೆಸಿ ಕೊಡುತ್ತೇನೆಂದು ನಂಬಿಸಿ ಜ್ಯೂಸ್ ಅಂಗಡಿ ಮಾಲಕನಿಂದ 2, 000 ರೂ. ಕೊಂಡು ಹೋದ ಅಪರಿಚಿತ ಮತ್ತೆ ಬಾರದೆ ವಂಚಿಸಿರುವ ಪ್ರಕರಣ ಉಪ್ಪಿನಂಗಡಿಯಲ್ಲಿ ರವಿವಾರ ಸಂಭವಿಸಿದೆ.
ವಿಠಲ ಶೆಟ್ಟಿ ಅವರು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಕಬ್ಬಿನ ಹಾಲಿನ ಅಂಗಡಿಯಿ ಟ್ಟಿದ್ದು, ಅವರ ಬಳಿಗೆ ರವಿವಾರ ಮಧ್ಯಾಹ್ನ ಅಪರಿಚಿತ ನೋರ್ವ ಬಂದು ತಾನು ಉಪ್ಪಿನಂಗ ಡಿಯ ಸಹಸ್ರಲಿಂಗೇಶ್ವರ- ಮಹಾಕಾಳಿ ದೇಗುಲ ದಿಂದ ಬಂದಿದ್ದು, ಅಲ್ಲಿಗೆ 150 ಗ್ಲಾಸ್ ಕಬ್ಬಿನ ಹಾಲು ಬೇಕೆಂದು ತಿಳಿಸಿದ.
ಕಬ್ಬಿನ ಹಾಲು ಒಯ್ಯಲು ರಿಕ್ಷಾದಲ್ಲಿ ದೇಗುಲ ದಿಂದಲೇ ಪಾತ್ರೆ ಕಳುಹಿಸುತ್ತೇವೆ ಎಂದಿದ್ದ. ಅಲ್ಲದೇ ದೇಗುಲದಲ್ಲಿ ಕಾಣಿಕೆ ಹುಂಡಿಯ ಹಣ ಲೆಕ್ಕ ಮಾಡುತ್ತಿದ್ದು, ಅಲ್ಲಿ ಐದು ರೂ. ನಾಣ್ಯಗಳು ಬೇಕಾದಷ್ಟಿವೆ. ನಿಮಗೆ 2,000 ರೂ. ಚಿಲ್ಲರೆ ತೆಗೆಸಿಕೊಡುತ್ತೇನೆ ಎಂದಿದ್ದ. ಆತನ ಮಾತನ್ನು ನಂಬಿದ ವಿಠಲ ಶೆಟ್ಟಿಯವರು ಅಂಗಡಿಯ ಕೆಲಸಗಾರ ನಾಗರಾಜನ ಕೈಯಲ್ಲಿ 2,000 ರೂ. ನೋಟು ಕೊಟ್ಟು ಚಿಲ್ಲರೆ ಹಾಗೂ ಜ್ಯೂಸ್ಗೆ ಪಾತ್ರೆ ತರಲು ಹೇಳಿ ಕಳುಹಿಸಿದ್ದರು.
ಈ ಅಪರಿಚಿತ ಹಾಗೂ ನಾಗರಾಜ ಬಾಡಿಗೆ ರಿಕ್ಷಾವೊಂದರಲ್ಲಿ ದೇಗುಲಕ್ಕೆ ಬಂದರು. ರಿಕ್ಷಾವನ್ನು ದೇಗುಲದ ವಠಾರದಲ್ಲಿ ನಿಲ್ಲಲು ಹೇಳಿ ಒಳಗೆ ಹೋಗಿದ್ದರು. ಈ ಸಂದರ್ಭ ಅಪರಿಚಿತ ದೇಗುಲದ ಹೊರಾಂಗಣದಲ್ಲಿರುವ ಕೊಡಿಮರದ ಬಳಿ ನಾಗ ರಾಜನಿಗೆ ಕುರ್ಚಿಯೊಂದನ್ನು ತಂದು ಕೊಟ್ಟು ಇಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳಿದ. ಆತನಿಂದ 2,000ರೂ. ಪಡೆದು ಚಿಲ್ಲರೆ ಹಾಗೂ ಜ್ಯೂಸ್ಗೆ ಪಾತ್ರೆ ತರುತ್ತೇನೆ ಎಂದು ಹೇಳಿ ದೇಗುಲದ ಒಳಾಂಗಣ ಪ್ರವೇಶಿಸಿದ್ದ.
ಬಹಳ ಹೊತ್ತು ಕಾದರೂ ಆತ ಬಾರದಿದ್ದಾಗ ಸಂಶಯಗೊಂಡ ನಾಗರಾಜ ಹುಡುಕಾಡಿದರೂ ಅವನ ಪತ್ತೆಯಾಗಲಿಲ್ಲ. ಬಳಿಕ ನಾಗರಾಜ ದೇಗುಲದ ಕಚೇರಿಯಲ್ಲಿ ವಿಚಾರಿಸಿದಾಗ, ನಾವು ಕಬ್ಬಿನ ಹಾಲಿಗೆ ಹೇಳಿಲ್ಲ. ಇಲ್ಲಿ ಚಿಲ್ಲರೆಯನ್ನೂ ಲೆಕ್ಕ ಮಾಡುತ್ತಿಲ್ಲ ಎಂದು ಹೇಳಿದಾಗ ಆತ ಬೇರೊಂದು ಬಾಗಿಲ ಮೂಲಕ ಹಣದೊಂದಿಗೆ ಪರಾರಿಯಾಗಿರುವುದು ತಿಳಿಯಿತು. 4-5 ತಿಂಗಳ ಹಿಂದೆಯೂ ಇದೇ ರೀತಿಯ ವಂಚನೆ ಪ್ರಕರಣ ನಡೆದಿದ್ದು, ಇಲ್ಲಿನ ಅಯ್ಯಂಗಾರ್ ಬೇಕರಿಗೆ ಬಂದಿದ್ದ ಅಪರಿಚಿತ ನೋರ್ವ ದೇವಸ್ಥಾನದಿಂದ 5, 000 ರೂ. ಗಳಿಗೆ ಚಿಲ್ಲರೆ ತೆಗೆಸಿಕೊಡುತ್ತೇನೆ ಎಂದು ನಂಬಿಸಿದ್ದ. ಅಂಗಡಿಯ ಕೆಲಸದವನೊಂದಿಗೆ ದೇಗುಲಕ್ಕೆ ಬಂದು ಅವನನ್ನು ಹೊರಗೆ ನಿಲ್ಲಿಸಿ 5,000 ರೂ. ಪಡೆದು ದೇಗುಲ ಪ್ರವೇಶಿಸಿದ್ದ. ಗಂಟೆಗಟ್ಟಲೆ ಕಾದರೂ ಆತ ಬಂದಿರಲೇ ಇಲ್ಲ. ಆತ ಹಣದೊಂದಿಗೆ ಹಿಂಬಾಗಿಲಿನಿಂದ ಪರಾರಿಯಾಗಿದ್ದ.