Advertisement

ಕಾಶಿ, ಮಥುರಾಕ್ಕೆ ಲಷ್ಕರ್‌ ಟಾರ್ಗೆಟ್‌

07:05 AM Jun 07, 2018 | Karthik A |

ಲಕ್ನೋ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇಗುಲ ಮತ್ತು ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಾನ ಸ್ಥಳಕ್ಕೆ ದಾಳಿ ನಡೆಸುವುದಾಗಿ ಉಗ್ರ ಸಂಘಟನೆ ಲಷ್ಕರ್‌ – ಎ – ತೊಯ್ಬಾ ಸಂಘಟನೆ ಬೆದರಿಕೆ ಹಾಕಿದೆ. ಅದನ್ನು ಪುಷ್ಟೀಕರಿಸುವಂಥ ಪತ್ರ ಮೇ 29ರಂದು ನವದೆಹಲಿಯಲ್ಲಿರುವ ಉತ್ತರ ರೈಲ್ವೆಯ ಕಚೇರಿಗೆ ಬಂದಿದೆ. ಇದರ ಜತೆಗೆ ಸಹರಾನ್ಪುರ ಮತ್ತು ಹಾಪುರ್‌ ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆಯ ಕಮಾಂಡರ್‌ ಮೌಲಾನಾ ಅಂಬು ಶೇಖ್‌ ಹೆಸರಿನಲ್ಲಿ ಪತ್ರ ಬರೆಯಲಾಗಿದೆ.

Advertisement

ಈ ಮಾಹಿತಿಯನ್ನು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆನಂದ ಕುಮಾರ್‌ ಖಚಿತಪಡಿಸಿದ್ದಾರೆ. ಜೂ.8-10ರ ಒಳಗಾಗಿ ಕಾಶಿ ವಿಶ್ವನಾಥ ದೇಗುಲ ಮತ್ತು ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಸ್ಥಾನದಲ್ಲಿರುವ ದೇಗುಲಕ್ಕೆ ಬಾಂಬ್‌ ಹಾಕುವುದಾಗಿ ಅದರಲ್ಲಿ ಬರೆಯಲಾಗಿದೆ. ಇದರ ಜತೆಗೆ ಹರ್ಯಾಣ, ಪಂಜಾಬ್‌, ರಾಜಸ್ಥಾನಗಳಲ್ಲಿಯೂ ಸ್ಫೋಟಗಳನ್ನು ನಡೆಸುವ ಮುನ್ಸೂಚನೆಯನ್ನು ನೀಡಲಾಗಿದೆ. ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಪ್ರಕಾರ ಲಷ್ಕರ್‌ ಕಮಾಂಡರ್‌ ಅಂಬು ಶೇಖ್‌ ಎಂಬಾತನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಇದೊಂದು ಹುಸಿ ಬೆದರಿಕೆಯೂ ಆಗಿರುವ ಸಾಧ್ಯತೆ ಇದೆ. ಅದೇನೇ ಇದ್ದರೂ, ಪ್ರಮುಖ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆನಂದ ಕುಮಾರ್‌ ಹೇಳಿದ್ದಾರೆ. 
ಈ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಆಗ್ರಾದಲ್ಲಿರುವ ತಾಜ್‌ ಮಹಲ್‌ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್‌ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next