ಲಕ್ನೋ :ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮಂಗಳವಾರ ತಮ್ಮ ಸಚಿವ ಸಂಪುಟದ ಮೂರನೇ ಸಭೆಯನ್ನು ಕರೆಯುವ ಸಾಧ್ಯತೆ ಇದೆ. ಲೋಕಭವನದಲ್ಲಿ ಈ ಮಹತ್ವದ ಸಭೆಯು ಸಂಜೆ ಐದು ಗಂಟೆಗೆ ನಡೆಯಲಿದೆ.
ಈ ಮಹತ್ತರ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಅವರು ರಾಜ್ಯದಲ್ಲಿ ಹೊಸ ವರ್ಗಾವಣೆ ನೀತಿ ಹಾಗೂ ಕೆಲವೊಂದು ಪ್ರಮುಖ ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ನೂತನ ವರ್ಗಾವಣೆ ಹಾಗೂ ಸರಕಾರಿ ಗುತ್ತಿಗೆಗಳನ್ನು ಮಂಜೂರು ಮಾಡುವ ನೀತಿಯು ಗರಿಷ್ಠ ಪಾರದರ್ಶಕತೆಯದ್ದಾಗಿರುತ್ತದೆ ಎಂದು ಗೊತ್ತಾಗಿದೆ.
ಹೊಸ ವರ್ಗಾವಣೆ ನೀತಿಯ ಪ್ರಕಾರ ರಾಜ್ಯದ ವಿಭಾಗೀಯ ಅಧಿಕಾರಿಗಳ ಕರ್ತವ್ಯ ಅವಧಿಯು ಏಳು ವರ್ಷದ್ದಾಗಿರುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳ ಅವಧಿಯು ಐದು ವರ್ಷದ್ದಾಗಿರುತ್ತದೆ. ಈ ಅವಧಿ ಪೂರೈಸದೇ ಅಧಿಕಾರಿಗಳಿಗೆ ಬೇರೆಡೆಗೆ ವರ್ಗಾಯಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ.
ಇದೇ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಅವರು ತಮ್ಮ ಸಂಪುಟ ಸಚಿವರು ತಮ್ಮ ತಮ್ಮ ಖಾತೆಯಲ್ಲಿ ಈ ವರೆಗೆ ಮಾಡಿರುವ ಕೆಲಸ ಕಾರ್ಯಗಳ ವರದಿಯನ್ನು ಕೇಳಲಿದ್ದಾರೆ ಎಂದು ಗೊತ್ತಾಗಿದೆ.