Advertisement

ಕೊನೆಗೂ ಬದುಕುಳಿಯಲಿಲ್ಲ ಉನ್ನಾವೋ ರೇಪ್ ಸಂತ್ರಸ್ತೆ

09:53 AM Dec 07, 2019 | Hari Prasad |

ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾಳೆ.

Advertisement

24 ವರ್ಷದ ಯುವತಿಯನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಲಾಗಿತ್ತು ಮತ್ತು ಮೊನ್ನೆ ಗುರುವಾರದಂದು ಈ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಮತ್ತು ಇತರೇ ಮೂವರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿದ್ದರು.

ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಬೆಂಕಿ ಇಟ್ಟ ಐವರ ಪೈಕಿ ಒಬ್ಬಾತ ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಸಂತ್ರಸ್ತೆ ತನ್ನ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಉನ್ನಾವೋದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ದುಷ್ಕರ್ಮಿಗಳು ಈಕೆಯ ಮೇಲೆ ಬೆಂಕಿ ಹಚ್ಚಿದ ಪರಿಣಾಮ ಈಕೆಯ ದೇಹಭಾಗ ಸುಮಾರು 90 ಪ್ರತಿಶತ ಸುಟ್ಟುಹೋಗಿತ್ತು.

ಘಟನೆಯ ಬಳಿಕ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಮೊದಲಿಗೆ ಲಕ್ನೋದಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಸಾಯಂಕಾಲದಂದು ಏರ್ ಲಿಫ್ಟ್ ಮಾಡಿ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಸಂತ್ರಸ್ತೆಗೆ ಹೃದಯ ಸ್ತಂಭನವಾಗಿದೆ ಮತ್ತು 11.40ರ ಸುಮಾರಿಗೆ ಈಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂಬ ಮಾಹಿತಿಯನ್ನು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳು ಮತ್ತು ಪ್ಲಾಸ್ಟಿಕ ಸರ್ಜರಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶಲಭ್ ಕುಮಾರ್ ಅವರು ಎ.ಎನ್.ಐ. ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Advertisement

ಸಂತ್ರಸ್ತೆಯು ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿರುವ ನ್ಯಾಯಾಲಯದಲ್ಲಿ ಗುರುವಾರ ನಡೆಯಲಿದ್ದ ಪ್ರಕರಣದ ವಿಚಾರಣೆಗೆಂದು ಬೆಳಗಿನ ಜಾವ ಬೈಸ್ವಾರ ಬಿಹಾರ ರೈಲ್ವೇ ನಿಲ್ದಾಣಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯದಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಆಕೆಯನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ದುಷ್ಕರ್ಮಿಗಳು ಮೊದಲಿಗೆ ಸಂತ್ರಸ್ತೆಯ ತಲೆ ಮೇಲೆ ಹೊಡೆದು ಬಳಿಕ ಆಕೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ಕೆಳಗೆ ಬಿದ್ದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ಸಂತ್ರಸ್ತೆಯು ಈ ಘಟನೆಯ ಬಳಿಕ ಉನ್ನಾವೋ ಜಿಲ್ಲಾಸ್ಪತ್ರೆಯಲ್ಲಿ ಉಪವಿಭಾಗೀಯ ಜಿಲ್ಲಾಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಳು.

ಮೈಯೆಲ್ಲಾ ಬೆಂಕಿಯ ಜ್ವಾಲೆಗಳಿಂದ ಆವರಿಸಲ್ಪಟ್ಟಿದ್ದ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬಿಡುತ್ತಾ ಸುಮಾರು ಒಂದು ಕಿಲೋಮೀಟರ್ ದೂರ ಓಡಿ ಬಂದಿದ್ದಳು. ಇದನ್ನು ಕಂಡ ಕೆಲವರು ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಹೆಸರಿಸಿದ ಎಲ್ಲಾ ಐವರನ್ನು ಬಂಧಿಸಲಾಗಿದೆ ಎಂದು ಉನ್ನಾವೋ ಎಸ್.ಪಿ. ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next