Advertisement

ರಾಜ್ಯದ ವಿವಿಧೆಡೆ ಮತ್ತೆ ಅಕಾಲಿಕ ಮಳೆ

06:15 AM Feb 10, 2018 | Team Udayavani |

ಬೆಂಗಳೂರು: ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಶುಕ್ರವಾರ ಮತ್ತೆ ಅಕಾಲಿಕ ಮಳೆಯಾಗಿದ್ದು, ಇನ್ನೂ ಎರಡು ದಿನಗಳು ಇದೇ ವಾತಾವರಣ ಇರುವ ಸಾಧ್ಯತೆ ಇದೆ.

Advertisement

ಅರಬ್ಬೀ ಸಮುದ್ರದ ಮಾಲ್ಡವೀಸ್‌ನಿಂದ ಕರ್ನಾಟಕದ ಕರಾವಳಿವರೆಗೆ ವಾಯುಭಾರ ಕುಸಿತ ಕಂಡುಬಂದಿದೆ. ಅದೇ ರೀತಿ, ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ವಾಯುಭಾರ ಕುಸಿತ ಇದೇ ರೀತಿ ಇದ್ದರೆ, ಇನ್ನೂ ಎರಡು ದಿನ ಹಗುರವಾದ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್‌.ಎಂ. ಮೇತ್ರಿ ತಿಳಿಸಿದ್ದಾರೆ.

ವಾಯುಭಾರ ಕುಸಿತದ ಜತೆಗೆ ಉಷ್ಣಾಂಶ ಕೂಡ ಏರಿಕೆಯಾಗಿದೆ. ಬೆಂಗಳೂರಿನಲ್ಲೇ ಚಳಿಗಾಲದಲ್ಲಿ ಸಾಮಾನ್ಯವಾಗಿ ಇರುವ ಗರಿಷ್ಠ ಉಷ್ಣಾಂಶ 28ರಿಂದ 30 ಡಿಗ್ರಿ ಸೆಲ್ಸಿಯಸ್‌. ಆದರೆ, ಕಳೆದೆರಡು ದಿನಗಳಿಂದ ಇದು 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಅದು ತೇವಾಂಶವನ್ನೂ ಹೊತ್ತುತರುತ್ತದೆ. ಇದರಿಂದ ಮಳೆಯಾಗುತ್ತದೆ ಎಂದು ಅವರು ಹೇಳಿದರು.

ಈ ಮಧ್ಯೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next