Advertisement

ಅನುದಾನವಿಲ್ಲದೆ ಸೊರಗುತ್ತಿವೆ ವಿಶ್ವವಿದ್ಯಾನಿಲಯಗಳು

11:10 PM Jul 23, 2023 | Team Udayavani |

ಹಿಂದಿನ ಬಿಜೆಪಿ ಸರಕಾರ ಪ್ರತಿ ಜಿಲ್ಲೆಯಲ್ಲೂ ಒಂದು ವಿಶ್ವವಿದ್ಯಾನಿಲಯ ಇರಬೇಕೆಂಬ ಉದ್ದೇಶದಿಂದ ರಾಜ್ಯದ ಏಳು ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಏಳು ವಿಶ್ವವಿದ್ಯಾನಿಲಯಗಳು ಅಗತ್ಯ ಅನುದಾನ, ಮೂಲ ಸೌಕರ್ಯ ಮತ್ತು ಬೋಧಕ, ಬೋಧಕೇತರ ಸಿಬಂದಿಯಿಲ್ಲದೆ ಸೊರಗುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರದ ಮಟ್ಟದಲ್ಲಿ ಒತ್ತಡ ತಂದು ಅನುದಾನ ಬಿಡುಗಡೆಗೊಳಿಸಬೇಕಾಗಿದೆ. ಸಿಬಂದಿಯ ನೇಮಕಾತಿಯೂ ನಡೆಯದಿದ್ದರೆ ನೂತನ ವಿವಿಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ನೂತನ ವಿವಿಗಳ ಸ್ಥಿತಿಗತಿಯ ಪಕ್ಷಿ ನೋಟ ಇಲ್ಲಿದೆ.

Advertisement

ಬೀದರ್‌ ವಿವಿಗೆ ಕಾಡುತ್ತಿದೆ ಅನುದಾನ, ಸವಲತ್ತು
ಬೀದರ್‌: ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಬೀದರ್‌ ಸಹಿತ ರಾಜ್ಯದ ಏಳು ಜಿಲ್ಲಾ ಕೇಂದ್ರಗಳಲ್ಲಿ ವರ್ಷದ ಹಿಂದೆ ಹೊಸ ವಿಶ್ವವಿದ್ಯಾನಿಲಯಗಳ ಕಾರ್ಯಾರಂಭಕ್ಕೆ ಉತ್ಸುಕತೆ ತೋರಿ ದ್ದ ರಾಜ್ಯ ಸರಕಾರ, ವಿವಿಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಅನುದಾನ ನೀಡುವ ವಿಷಯದಲ್ಲಿ ಹಿಂದೆ ಬಿದ್ದಿದೆ. ಹೆಚ್ಚುವರಿ ಸಂಪನ್ಮೂಲಗಳನ್ನು ಉಪಯೋಗಿಸದೆ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳೊಂದಿಗೆ, ವಾರ್ಷಿಕ ತಲಾ ಎರ ಡು ಕೋಟಿ ರೂ. ಆವರ್ತಕ ವೆಚ್ಚ ಬಳಸಿ ವಿವಿಗಳು ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ಷರತ್ತು ಹಾಕಲಾಗಿದೆ. ಯಾವುದೇ ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಪಿಜಿ ಕೇಂದ್ರಗಳಲ್ಲಿ ಮಂಜೂರಾಗಿರುವ ಹುದ್ದೆಗಳನ್ನೇ ಬಳಸಿಕೊಂಡು ಹೊಸ ವಿವಿ ಸ್ಥಾಪಿಸಬೇಕು. ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ನಡೆಸಬೇಕು ಎಂಬುದು ಸಹ ಷರತ್ತಿನಲ್ಲಿವೆ.


ಹೊಸ ಬೀದರ್‌ ವಿವಿ ವ್ಯಾಪ್ತಿಗೆ ಜಿಲ್ಲೆಯ ಸುಮಾರು 140 ಪ್ರಥಮ ದರ್ಜೆ ಕಾಲೇಜುಗಳು ಸೇರಿವೆ. ಒಂದು ವಿವಿಯಲ್ಲಿ 35-40 ಸ್ನಾತಕೋತ್ತರ ವಿಭಾಗಗಳು, ಅದಕ್ಕಾಗಿ ಪ್ರತ್ಯೇಕ ಮುಖ್ಯಸ್ಥರ ಕೋಣೆ ಮತ್ತು ಕಚೇರಿ ಇರಬೇಕು. ಆದರೆ ಈ ವಿವಿಯಲ್ಲಿ ಸದ್ಯ ಈ ಹಿಂದೆ ಪಿಜಿ ಸೆಂಟರ್‌ನಲ್ಲಿ ನಡೆಯುತ್ತಿದ್ದ 13 ವಿಭಾಗಗಳನ್ನಷ್ಟೇ ಮುಂದುವರಿಸಲಾಗಿದೆ. ಇಲ್ಲಿ ಒಟ್ಟು 650 ವಿದ್ಯಾರ್ಥಿಗಳಿದ್ದು, ಪ್ರಸಕ್ತ ಸಾಲಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ.

ಸಿಬಂದಿ ಕೊರತೆ
ಹೊಸ ವಿವಿಯಲ್ಲಿ ಈವರೆಗೂ ಪೂರ್ಣಾವಧಿಯ ಒಬ್ಬ ಪ್ರಾಧ್ಯಾ ಪಕರೂ ಇಲ್ಲ. 55 ಅತಿಥಿ ಉಪನ್ಯಾಸಕರು ಮತ್ತು 12 ಜನ ಬೋಧಕೇತರ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರಕಾರದ ಷರತ್ತಿನಂತೆ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಜತೆಗೆ ಎರಡು ಕೋಟಿ ರೂ. ಆವರ್ತ ನಿಧಿ ಬಹುತೇಕ ಸಿಬಂದಿಯ ವೇತನಕ್ಕಷ್ಟೇ ಖರ್ಚಾಗಲಿದೆ. ಹೀಗಾಗಿ ಯಾವುದೇ ಮೂಲ ಸೌಲತ್ತುಗಳು ಮತ್ತು ಹಣಕಾಸಿನ ಸೌಲಭ್ಯ ಇಲ್ಲದೇ ಹೊಸ ವಿವಿ ಆರಂಭಿಸಿರುವುದು ವಿದ್ಯಾರ್ಥಿಗಳಿಗೆ ಯಾವ ಪ್ರಯೋಜನ ಆಗುತ್ತದೆ ಎಂಬುದು ಗೊಂದಲ ಮೂಡಿಸಿದೆ.

ಮಂಡ್ಯ: ರಚನೆಯಾಗಿಲ್ಲ ಸಿಂಡಿಕೇಟ್‌ ಸಮಿತಿ
ಮಂಡ್ಯ: ಮೈಸೂರು ವಿಶ್ವವಿದ್ಯಾ ನಿಲಯ ಮಾದರಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಿವಿಧ ಕೋರ್ಸ್‌ಗಳಿಗೆ ಬೇರೆಡೆ ಹೋಗುವುದನ್ನು ತಪ್ಪಿಸಲು ಸರಕಾರಿ ಮಹಾವಿದ್ಯಾಲಯ ಕಾಲೇಜನ್ನು ಮಂಡ್ಯ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಿ ಮೂರು ವರ್ಷಗಳಾಗಿವೆ. ಆದರೆ ವಿವಿ ಉದ್ದೇಶ ಇನ್ನೂ ಸಮರ್ಪಕವಾಗಿ ಈಡೇರಿಲ್ಲ.


ಮಂಡ್ಯ ಸರಕಾರಿ ಮಹಾ ವಿದ್ಯಾಲಯ ಕಟ್ಟಡವನ್ನೇ 2019ರ ಅಕ್ಟೋಬರ್‌ 10ರಲ್ಲಿ ಏಕೀಕೃತ ವಿಶ್ವವಿದ್ಯಾನಿಲಯ ವಾಗಿ ಘೋಷಿಸಿದ ಸರಕಾರ ಯಾವುದೇ ಸೌಲಭ್ಯವನ್ನು ಈವರೆಗೂ ನೀಡಿಲ್ಲ. ಮೇಲ್ನೋಟಕ್ಕೆ ವಿಶ್ವವಿದ್ಯಾನಿಲಯ ವಾಗಿದ್ದರೂ ಇನ್ನೂ ವಿವಿ ಕ್ಯಾಂಪಸ್‌ ಬದಲಾಗಿಲ್ಲ. ಅಗತ್ಯ ಸೌಲಭ್ಯ ಸೇರಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಂಭವಾಗುತ್ತಿರುವ ವಿವಿಗಳ ಪೈಕಿ ಅರಂಭವಾದ ಮಂಡ್ಯ ವಿವಿಯಲ್ಲಿ ಕುಲಪತಿ ನೇಮಕಾತಿ ಬಿಟ್ಟರೆ ಎಲ್ಲವೂ ಹಂಗಾಮಿಗಳನ್ನೇ ನೇಮಕ ಮಾಡಲಾಗಿದೆ.

Advertisement

ಬಿಡುಗಡೆಯಾಗದ ಅನುದಾನ
ಮಂಡ್ಯ ವಿವಿಗೆ ಸರಕಾರ 55 ಕೋಟಿ ರೂ. ಅನುದಾನ ನೀಡಿ, ಆಡಳಿತ ಭವನ ಸೇರಿ ಇತರ ಎರಡು ಕಟ್ಟಡ ನಿರ್ಮಿಸಲಾಗಿದೆ. ವಿವಿ ಕ್ಯಾಂಪಸ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣ 2014-15ರಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಅರ್ಧಕ್ಕೆ ಕಾಮಗಾರಿಯಾಗಿ ನಿಂತಿದ್ದು, ಅದನ್ನು ಪೂರ್ಣಗೊಳಿಸಲು ಅನುದಾನ ಇನ್ನೂ ಬಿಡುಗಡೆಯಾಗಿಲ್ಲ.

ಚಾಮರಾಜನಗರ ವಿವಿಗೂ ಅನುದಾನ ಕೊರತೆ
ಚಾಮರಾಜನಗರ: ತಾಲೂಕಿನ ಬೇಡರಪುರ ಸಮೀಪ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಸ್ತರಣೆ ಕೇಂದ್ರವನ್ನು 2010ರಲ್ಲಿ ಸ್ಥಾಪಿಸಲಾಗಿತ್ತು. ಅದೇ ಕೇಂದ್ರವನ್ನು ಈಗ ಚಾಮರಾಜನಗರ ವಿಶ್ವ ವಿದ್ಯಾನಿಲಯ ಎಂದು ಮಾರ್ಪಡಿಸಲಾಗಿದೆ.


ಪ್ರಸ್ತುತ ಸ್ನಾತಕೋತ್ತರ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ನೂತನ ವಿವಿಗೆ ಮೂಲಸೌಕರ್ಯ ಕಲ್ಪಿಸುವ ಅಗತ್ಯ ಕಡಿಮೆಯಾಗಿದೆ. ಜಿಲ್ಲೆಯ ಮಕ್ಕಳಿಗೆ ಇಲ್ಲಿಯೇ ಸ್ನಾತಕೋತ್ತರ ಪದವಿ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2010ರಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ನಗರದಲ್ಲಿ ಸ್ಥಾಪಿಸಲಾಗಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಬೇಡರಪುರದ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸಮೀಪ ಸ್ನಾತಕೋತ್ತರ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿತ್ತು. 2017ರ ಡಿಸೆಂಬರ್‌ 30ರಂದು ಉದ್ಘಾಟಿಸಲಾಗಿತ್ತು. ಹೊಸ ವಿವಿಗೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಈಗ ಪ್ರಸ್ತುತ 13 ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಈ 13 ಕೋರ್ಸ್‌ ಗಳಿಗೂ ಕಟ್ಟಡವಿದೆ. ಒಂದು ಮಹಿಳಾ ಹಾಸ್ಟೆಲ್‌, ಒಂದು ಕ್ಯಾಂಟೀನ್‌ ಇದೆ. ಹೊಸ ಕೋರ್ಸ್‌ಗಳನ್ನು ಮಾಡಿದಾಗ ಕಟ್ಟಡ ಬೇಕಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಸರಕಾರದಿಂದ ವಿಜ್ಞಾನ ವಿಭಾಗ ಕೂಡ ಮಂಜೂರಾಗಿದೆ. ಪ್ರಸ್ತುತ ಇಲ್ಲಿ ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರು ಮತ್ತು ಸಿಬಂದಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ವೇತನವನ್ನು ಮೈಸೂರು ವಿವಿಯೇ ಭರಿಸುತ್ತಿದೆ.

ಹಾಸನ ವಿವಿಗೂ ಅನುದಾನದ ಕೊರತೆ
ಹಾಸನ: ಹೊಸದಾಗಿ ಅಸ್ತಿತ್ವಕ್ಕೆ ಬಂದ ಹಾಸನ ವಿಶ್ವ ವಿದ್ಯಾನಿಲಯವು ಮೂಲ ಸೌಕರ್ಯಗಳಿಗಾಗಿ ಅನು ದಾನದ ನಿರೀಕ್ಷೆಯಲ್ಲಿದೆ. ಆದರೆ ವೇತನಾನುದಾನ ಹೊರತು ಪಡಿಸಿ ಮೂಲ ಸೌಕರ್ಯಗಳಿಗೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. 4 ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾದ ವಿವಿ ಚಿಕ್ಕ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದೆ. ಕುಲಪತಿ ಮತ್ತು ಕುಲಸಚಿವರನ್ನು ಬಿಟ್ಟರೆ ಹೊಸ ಸಿಬಂದಿ ನೇಮಕ ಆಗಿಲ್ಲ.


ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಹಾಸನ ಜಿಲ್ಲೆಯನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಹಾಸನ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿರುವ ವಿಭಜನೆಯ ಆದೇಶವೂ ಇನ್ನೂ ಆಗಿಲ್ಲ. ಆದರೆ 2023 -24ನೇ ಸಾಲಿನ ಪ್ರಥಮ ಪದವಿ ತರಗತಿಗಳ ವಿದ್ಯಾರ್ಥಿಗಳನ್ನು ಹಾಸನ ವಿವಿ ದಾಖಲಿಸಿಕೊಳ್ಳುತ್ತಿದೆ. ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಹೇಮ ಗಂಗೋತ್ರಿ 33 ವರ್ಷಗಳ ಹಿಂದೆ ಹಾಸನದಲ್ಲಿ ಪ್ರಾರಂಭ ವಾಯಿತು. ಅಂದೇ ಸ್ನಾತಕೋತ್ತರ ಕೇಂದ್ರಕ್ಕೆ ಮಂಜೂರಾಗಿದ್ದ 70 ಎಕ್ರೆ ಪ್ರದೇಶದಲ್ಲಿಯೇ ಹಾಸನ ವಿವಿ ಕ್ಯಾಂಪಸ್‌ ನಿರ್ಮಾಣವಾಗಿದೆ. ಹೇಮಗಂಗೋತ್ರಿಯಲ್ಲಿ ಇದುವರೆಗೂ ವಾಣಿಜ್ಯ ಶಾಸ್ತ್ರ, ಸಸ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಿತಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್‌ ಸಹಿತ 8 ಸ್ನಾತಕೋತ್ತರ ಕೋರ್ಸ್‌ಗಳ ಬೋಧನೆ ನಡೆಯುತ್ತಿತ್ತು. ಹಾಸನ ವಿವಿ ಆರಂಭವಾದ ಬಳಿಕ ಎಂಬಿಎ, ಎಂಎಸ್‌ಡಬ್ಲೂé, ಕಂಪ್ಯೂಟರ್‌ ಸೈನ್ಸ್‌, ಭೌತಶಾಸ್ತ್ರ, ರಸಾಯನಶಾಸ್ತ್ರದ ಸ್ನಾತಕೋತ್ತರ ಕೋರ್ಸ್‌ಗಳ ಮಂಜೂ ರಾತಿಗೆ ಪ್ರಸ್ತಾವನೆಯನ್ನು ವಿವಿ ಸರಕಾರಕ್ಕೆ ಸಲ್ಲಿಸಿದ್ದು, ಇದುವರೆಗೂ ಮಂಜೂರಾಗಿಲ್ಲ. 2023-24ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ ಆರಂಭವಾದಾಗ ಮಂಜೂರಾತಿ ಸಿಗುವ ವಿಶ್ವಾಸ ಕುಲಪತಿಗಳದ್ದು.

ಸ್ವಂತ ನೆಲೆ ಇಲ್ಲದ ಕೊಪ್ಪಳ ವಿಶ್ವವಿದ್ಯಾನಿಲಯ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಎಲ್ಲ ಸರಕಾರಿ ಹಾಗೂ ಖಾಸಗಿ ಕಾಲೇಜುಗಳು ಬಳ್ಳಾರಿ-ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ವ್ಯಾಪ್ತಿಯಲ್ಲಿಯೇ ಈವರೆಗೂ ಕಾರ್ಯ ನಿರ್ವಹಿಸುತ್ತಿದ್ದವು. ಈ ಭಾಗದಲ್ಲಿ ಹೊಸ ವಿವಿ ಆರಂಭ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುವ ಬಹು ವರ್ಷಗಳ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ಬಿಜೆಪಿ ಸರಕಾರದ ಕೊನೆಯ ಅವಧಿ ಯಲ್ಲಿ ಹೊಸ ವಿವಿಯನ್ನು ಘೋಷಿಸಲಾಗಿದೆ. ಆದರೆ ಇದುವರೆಗೂ ಈ ವಿವಿಗೆ ಪೂರ್ಣ ಪ್ರಮಾಣದ ಸೌಕರ್ಯವನ್ನು ಕಲ್ಪಿಸಲಾಗಿಲ್ಲ.


ಕೊಪ್ಪಳದಲ್ಲಿ ವಿವಿ ಆರಂಭಿಸಬೇಕೆನ್ನುವ ಉದ್ದೇಶ ಈಡೇರಿದೆಯಾದರೂ ತೃಪ್ತಿದಾಯಕವಾಗಿಲ್ಲ. ರಾಜ್ಯ ಸರಕಾರ ವಿವಿಗೆ ಕುಲಪತಿಯನ್ನು ನೇಮಿಸಿದೆ. ಆದರೆ ಇತರ ಸಿಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಬಳ್ಳಾರಿ ವಿಎಸ್‌ಕೆ ವಿಶ್ವವಿದ್ಯಾನಿಲಯದಿಂದ ಅನುಪಾತದ ಅನುಸಾರ ಜಿಲ್ಲೆಗೆ ಕಾಲೇಜುಗಳು, ಹುದ್ದೆಗಳು, ಸಾಮಗ್ರಿಗಳ ವರ್ಗೀಕರಣ ಪ್ರಕ್ರಿಯೆ ನಡೆಯಬೇಕಿದೆ. ಇನ್ನೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಜಾಗವೂ ಮಂಜೂರಾಗಿಲ್ಲ
ಹೊಸ ವಿವಿಯನ್ನು ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿಯೇ ಆರಂಭಿಸಬೇಕೆನ್ನುವ ಬೇಡಿಕೆ ಈ ಭಾಗದ ಜನರ ಬಹು ಒತ್ತಾಯವಾಗಿದೆ. ಆದರೆ ಕಾಂಗ್ರೆಸ್‌ ಸರಕಾರವು ಕುಕನೂರು ತಾಲೂಕಿನ ತಳಕಲ್‌ನಲ್ಲಿನ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡದ ಮೇಲ್ಭಾಗದಲ್ಲಿ ವಿವಿ ಕೇಂದ್ರ ಕಚೇರಿ ಕಾರ್ಯಚಟುವಟಿಕೆಗೆ ತಾತ್ಕಾಲಿಕ ಅವಕಾಶ ನೀಡಿದೆ. ಕೊಪ್ಪಳದ ಮಳೆ ಮಲ್ಲೇಶ್ವರ ಬೆಟ್ಟದ ಜಾಗದಲ್ಲಿ ವಿವಿ ಆರಂಭಿಸಬೇಕು. ಅದಕ್ಕೆ ಜಾಗ ಮಂಜೂರು ಮಾಡಬೇಕೆನ್ನುವ ಒತ್ತಾಯ ಈ ಹಿಂದೆಯೇ ಕೇಳಿ ಬಂದಿತ್ತು. ಸ್ಥಳಕ್ಕೆ ಜನಪ್ರತಿನಿಧಿ ಗಳ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಸರಕಾರದ ಮಟ್ಟದಲ್ಲಿ ವಿವಿಗೆ ಜಮೀನು ಮಂಜೂರಾಗಿ ಸ್ವಂತ ನೆಲೆ ಕಂಡುಕೊಳ್ಳಲು ಅನುವು ಮಾಡಿಕೊಡಬೇಕಿದೆ.

ಬಾಗಲಕೋಟೆ ವಿವಿಗೂ ಬಂದಿಲ್ಲ ಅನುದಾನ
ಬಾಗಲಕೋಟೆ: ರಾಜ್ಯದ 23 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ, ದೇಶದ 7 ತೋಟಗಾರಿಕೆ ವಿವಿಗಳಲ್ಲೇ ಬಾಗಲಕೋಟೆಯ ತೋಟಗಾರಿಕೆ ವಿವಿ ಮೊದಲ ಸ್ಥಾನದಲ್ಲಿದ್ದು, ಅದೇ ದಾರಿಯಲ್ಲಿ ನೂತನ ವಿಶ್ವ ವಿದ್ಯಾನಿಲಯವೂ ಸಾಗುತ್ತಿದೆ. ಆದರೆ ಸರಕಾರದಿಂದ ಅನುದಾನ ಬಾರದೆ ಸಂಕಷ್ಟ ಎದುರಿಸುವಂತಾಗಿದೆ.


ಕಾಲೇಜು ಗಾತ್ರಗಳಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿರುವ ಬಾಗಲಕೋಟೆ ವಿವಿಯ ಕೇಂದ್ರ ಸ್ಥಾನ ಜಮಖಂಡಿ ಯಲ್ಲಿದೆ. ಈ ವಿವಿ ವ್ಯಾಪ್ತಿಯಲ್ಲಿ ಒಟ್ಟು 71 ಪದವಿ ಕಾಲೇಜುಗಳಿವೆ. ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಅಡಿಯಲ್ಲಿ ಬರುತ್ತಿದ್ದ ಬಾಗಲಕೋಟೆ ಜಿಲ್ಲೆಯ ಕಾಲೇಜುಗಳನ್ನು ಹೊಸ ವಿವಿಯಡಿ ಸೇರಿಸಲಾಗಿದೆ. ಬಾಗಲಕೋಟೆ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ರಬಕವಿ-ಜಮಖಂಡಿ ಸಹಿತ 9 ತಾಲೂಕು ವ್ಯಾಪ್ತಿಯ 71 ಪ್ರಥಮ ದರ್ಜೆ ಕಾಲೇಜುಗಳನ್ನು ಈ ನೂತನ ವಿವಿ ವ್ಯಾಪ್ತಿಗೆ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ವಿವಿಯಡಿ ಮೊದಲ ವರ್ಷದ ಪದವಿ ತರಗತಿಗಳ ಪ್ರವೇಶ ಕೂಡ ಆರಂಭವಾಗಿದ್ದು, ಈವರೆಗೆ ಒಟ್ಟಾರೆ ಸುಮಾರು 9 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಆಡಳಿತ ಸಿಬಂದಿ ನೇಮಕ
ನೂತನ ವಿವಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಪ್ರಾಧ್ಯಾಪಕರಾಗಿದ್ದ ಡಾ| ಆನಂದ ದೇಶಪಾಂಡೆ ಕುಲಪತಿ
ಯಾಗಿ ಹಾಗೂ ಡಾ| ಕುಲಕರ್ಣಿ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಗೆ ಮಲ್ಲಿಕಾರ್ಜುನ ಮರಡಿ ವಿಶೇಷ ಅಧಿಕಾರಿ ಜತೆಗೆ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಮುಖ ಆಡಳಿತ ನಿರ್ವಹಣೆಯ ಹುದ್ದೆಗಳು ಬಿಟ್ಟರೆ ಬೇರೆ ಯಾವುದೇ ಹುದ್ದೆಗಳನ್ನು ಅಥವಾ ಹೆಚ್ಚುವರಿ ಸಿಬಂದಿಯನ್ನು ನೇಮಿಸಿಲ್ಲ. ಈಗಾಗಲೇ ಜಮಖಂಡಿಯ ಹಳೆಯ ಮಿನಿ ವಿಧಾನಸೌಧದಲ್ಲಿ ಇದ್ದ ರಾಣಿ ಚೆನ್ನಮ್ಮ ವಿವಿಯ ಬಾಗಲಕೋಟೆಯ ಸ್ನಾತಕೋತ್ತರ ಕೇಂದ್ರವನ್ನೇ ಈಗ ನೂತನ ವಿವಿಯ ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದೆ.

ಹಾವೇರಿ ವಿವಿಗೆ ಸಿಕ್ಕಿಲ್ಲ ಪ್ರತ್ಯೇಕತೆ ಆದೇಶ!
ಹಾವೇರಿ: ನಗರದ ಹೊರವಲ ಯದ ಕೆರಿಮತ್ತಿಹಳ್ಳಿ ಗ್ರಾಮದ ಬಳಿ 42 ಎಕ್ರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ವನ್ನೇ ಈಗ ನೂತನ ಹಾವೇರಿ ವಿಶ್ವವಿದ್ಯಾನಿಲಯವನ್ನಾಗಿ ಪರಿ ವರ್ತಿಸಲಾಗಿದೆ. ಈ ವಿವಿ ವ್ಯಾಪ್ತಿಗೆ ಜಿಲ್ಲೆಯ 23 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಖಾಸಗಿ ಕಾಲೇಜುಗಳು ಸೇರಿ ಒಟ್ಟು 40 ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ. ಪ್ರತ್ಯೇಕ ವಿವಿ ಸ್ಥಾಪನೆಗೊಂಡಿದ್ದರಿಂದ
ಗ್ರಾಮೀಣ ಮತ್ತು ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.


ಖಾಯಂ ಸಿಬಂದಿ ಕೊರತೆ
ಹಾವೇರಿ ವಿವಿ ಅಧಿಕೃತವಾಗಿ ಆರಂಭಗೊಂಡಿದ್ದರೂ ಖಾಯಂ ಸಿಬಂದಿ ಕೊರತೆ ಇದೆ. ಕೇವಲ ಇಬ್ಬರು ಬೋಧಕ ಹಾಗೂ ಮೂವರು ಬೋಧಕೇತರ ಖಾಯಂ ಸಿಬಂದಿ ಇದ್ದಾರೆ. ಉಳಿದಂತೆ 21 ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ 10 ಬೋಧಕೇತರ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೇಕು ಮೂಲ ಸೌಕರ್ಯ
ಈ ವಿವಿಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಪ್ರಸ್ತುತ ಆ ರು ವಿಭಾಗಗಳು ಕಾರ್ಯನಿರ್ವ ಹಿಸುತ್ತಿದ್ದು, 12 ಕೊಠಡಿಗಳಿವೆ. ಹೊಸ ದಾಗಿ ಕೋರ್ಸ್‌ಗಳನ್ನು ಆರಂಭಿಸಿದರೆ ಕೊಠಡಿಗಳ ಕೊರತೆ ಎದುರಾಗಲಿದೆ. ಜತೆಗೆ ಪ್ರತ್ಯೇಕ ಗ್ರಂಥಾಲಯ, ಪ್ರತ್ಯೇಕ ಆಡಳಿತ ಕಚೇರಿ, ಸುಸಜ್ಜಿತ ಆಟದ ಮೈದಾನ, ಕ್ಯಾಂಟೀನ್‌, ಗೆಸ್ಟ್‌ ಹೌಸ್‌, ಸಿಬಂದಿಗೆ ವಸತಿ ಗೃಹಗಳು, ವಿಶ್ವವಿದ್ಯಾನಿಲಯಕ್ಕೆ ಸಮರ್ಪಕ ಬಸ್‌ ಸೌಲಭ್ಯ ಮುಂತಾದ ಮೂಲ ಸೌಕರ್ಯಗಳ ಕೊರತೆಯಿದೆ.

ನೂತನ ವಿವಿ ಕಾರ್ಯಾರಂಭ ಮಾಡಿದ್ದು, ರಾಜ್ಯದ ಹೊಸ ವಿವಿಗಳಲ್ಲೇ ನಮ್ಮ ವಿವಿಯಲ್ಲಿ ಅತಿ ಹೆಚ್ಚು ಪ್ರವೇಶ ದಾಖಲಾಗಿದೆ. 2 ಕೋಟಿ ಅನುದಾನ ಘೋಷಣೆಯಾಗಿದ್ದು ಇನ್ನೂ ಬಂದಿಲ್ಲ. ಟಾಪ್‌ ವಿವಿಗಳಲ್ಲಿ ನಮ್ಮ ವಿವಿಗೆ ಮೊದಲ ಸ್ಥಾನವಿದೆ.
– ಡಾ| ಆನಂದ ದೇಶಪಾಂಡೆ, ಕುಲಪತಿಗಳು, ಬಾಗಲಕೋಟೆ ವಿವಿ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಹಾವೇರಿ ವಿಶ್ವವಿದ್ಯಾನಿಲಯ ಕಾರ್ಯಚಟುವಟಿಕೆ ಆರಂಭಿಸಿದೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಹಾವೇರಿ ವಿವಿ ಪ್ರತ್ಯೇಕಗೊಂಡ ಬಗ್ಗೆ ಶೀಘ್ರದಲ್ಲಿಯೇ ಆದೇಶ ಬರು ವ ಸಾಧ್ಯತೆಯಿದೆ. ಹಂತ ಹಂತವಾಗಿ ಮೂಲ ಸೌಕರ್ಯ ಕಲ್ಪಿಸಿಕೊಂಡು ನೂತನ ವಿವಿ ಕಾರ್ಯನಿರ್ವಹಿಸಲಿದೆ.
– ಪ್ರೊ| ಸುರೇಶ ಜಂಗಮಶೆಟ್ಟಿ, ಕುಲಪತಿಗಳು, ಹಾವೇರಿ ವಿವಿ

ಕಡಿಮೆ ಮೂಲ ಸೌಕರ್ಯ, ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು ಇಂಟರ್ನೆಟ್‌, ತಂತ್ರಜ್ಞಾನ ಆಧಾರಿತವಾಗಿ ಉನ್ನತ ಶಿಕ್ಷಣ ನೀಡಬೇಕು ಎಂಬುದು ಸರಕಾರದ ಉದ್ದೇಶ. ವಿದ್ಯಾರ್ಥಿಗಳಿಗೆ ಬಹುಬೇಗ ಉದ್ಯೋಗ ಸಿಗುವ, ಅವರನ್ನು ಕೌಶಲ ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸುವ ಶಿಕ್ಷಣ ನೀಡಬೇಕು ಎಂಬುದು ಆಶಯ.
-ಡಾ| ಎಂ.ಆರ್‌. ಗಂಗಾಧರ್‌, ಕುಲಪತಿ, ಚಾಮರಾಜನಗರ ವಿವಿ

ಹೊಸ ವಿ.ವಿ.ಯಲ್ಲಿ 6 ಕೋರ್ಸ್‌ ಆರಂಭಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದ್ದು, 2 ತಿಂಗಳೊ ಳಗೆ ಮಂಜೂರಾಗುವ ವಿಶ್ವಾಸವಿದೆ. ಹಾಸನ ಜಿಲ್ಲೆಯ ಪದವಿ ಕಾಲೇಜುಗಳನ್ನು ಹಾಸನ ವಿ.ವಿ. ಸಂಯೋಜನೆ ಹಾಗೂ ಪ್ರವೇಶಾತಿಯ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿವೆ. ಹೊಸ ವಿವಿ ಕ್ಯಾಂಪಸ್‌ ನಿರ್ಮಾಣ ಹಾಗೂ ಮೂಲ ಸೌಕರ್ಯಗಳ ನೀಲನಕ್ಷೆ ಸಿದ್ಧಪಡಿಸಲಾಗಿದೆ.
-ಪ್ರೊ| ತಾರಾನಾಥ್‌,
ಕುಲಪತಿ, ಹಾಸನ ವಿ.ವಿ.

ಸದ್ಯ ವಿವಿಯಲ್ಲಿ ಸಿಬಂದಿ ಕೊರತೆ ಇಲ್ಲ. ಅನುದಾನ ಸಿಗಬೇಕಿದೆ. ಸಿಂಡಿಕೇಟ್‌ ರಚನೆ ಶೀಘ್ರದಲ್ಲೇ ಆಗಲಿದೆ. ವಿವಿಯಲ್ಲಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ತಿಳಿಸಲಾಗಿದೆ. ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ.
– ಡಾ| ಪುಟ್ಟರಾಜು,
ಕುಲಪತಿ, ಮಂಡ್ಯ ವಿವಿ

ಹಾಲಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೂತನ ವಿವಿ ಚಟುವಟಿಕೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಪ್ರವೇಶಕ್ಕೂ ಚಾಲನೆ ನೀಡಲಾಗಿದೆ. ಸದ್ಯ ಲಭ್ಯ ಕಟ್ಟಡ ಮತ್ತು ಸಿಬಂದಿಯನ್ನು ಬಳಸಿಕೊಂಡು ವಿವಿ ಕಾರ್ಯನಿರ್ವಹಿಸುತ್ತಿದೆ. ವಿವಿಗೆ ಈವರೆಗೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ.
-ಪ್ರೊ| ಬಿ. ಎಸ್‌. ಬಿರಾದಾರ,
ಕುಲಪತಿ, ಬೀದರ್‌ ವಿಶ್ವವಿದ್ಯಾನಿಲಯ

ಹಾಸನ ವಿವಿಯಲ್ಲಿ ಇನ್ನು 3 ವರ್ಷಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿ ಮಾದರಿ ವಿ.ವಿ.ಯಾಗಿ ರೂಪುಗೊಳ್ಳುವ ವಿಶ್ವಾಸವಿದೆ. ಯುಜಿಸಿ ಅನುದಾನ ಸಿಗಲು ಕನಿಷ್ಠ 15 ಸ್ನಾತಕೋತ್ತರ ಕೋರ್ಸ್‌ಗಳ ಬೋಧನೆ ನಡೆಯಬೇಕು. ಆ ಹಿನ್ನೆಲೆಯಲ್ಲಿ 15ರಿಂದ 20 ಸ್ನಾತಕೋತ್ತರ ಕೋರ್ಸ್‌, ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ಪ್ರಯತ್ನ ನಡೆದಿದೆ.
-ಡಾ| ಪುಟ್ಟಸ್ವಾಮಿ, ಕುಲಸಚಿವ, ಹಾಸನ ವಿವಿ

Advertisement

Udayavani is now on Telegram. Click here to join our channel and stay updated with the latest news.

Next