ಮಂಗಳೂರು: ಭಾರತವು ಬಹು ಭಾಷೆ, ಬಹು ನಂಬಿಕೆ, ಆಹಾರಪದ್ಧತಿ, ಬಹು ಸಂಸ್ಕೃತಿಯ ವೈವಿಧ್ಯತೆಯಲ್ಲಿ ಏಕತೆ ಸಾರಿದ ದೇಶ. ಭಾರತೀಯ ಪರಂಪರೆಯ ಆಧಾರವೇ ವೈವಿಧ್ಯತೆಯಲ್ಲಿ ಏಕತೆ ಎಂದು ಉಡುಪಿ ಡಾ| ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಸಂಯೋಜಕ ಡಾ| ಮಹಾಬಲೇಶ್ವರ ರಾವ್ ಹೇಳಿದರು.
ಶಕ್ತಿನಗರದ ಶಕ್ತಿ ವಸತಿ ಶಾಲೆ, ಶ್ರೀಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ಪಿಯು ಕಾಲೇಜು,ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾ ಧಿಕಾರಿ ಡಾ| ಪ್ರಶಾಂತ್ ಕುಮಾರ್ ಅವರ ಸಹಯೋಗದೊಂದಿಗೆ ನಡೆದ “ಹೊಸ ಶಿಕ್ಷಣ ನೀತಿ’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತ ರಾಜಕೀಯ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರ. ನಮ್ಮ ದೇಶದಲ್ಲಿ ನೀಡುವ ಶಿಕ್ಷಣವನ್ನು ಪಡೆದು ಹಲವು ಭಾರತೀಯರು ತಮ್ಮ ಜ್ಞಾನ ಹಾಗೂ ಸೇವೆಯನ್ನು ವಿದೇಶಗಳಿಗೆ ಧಾರೆ ಎರೆಯುತ್ತಿದ್ದಾರೆ ಎಂದರು.
ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಪ್ರಶಾಂತ್ ಕುಮಾರ್ ಮಾತನಾಡಿದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾೖಕ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ., ಶಕ್ತಿ ಪಿಯು ಕಾಲೇಜು ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಶಕ್ತಿ ಎಜುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿಗಳಾದ ಪ್ರಖ್ಯಾತ್ ರೈ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರಿಯಾಂಕಾ ವಂದಿಸಿದರು. ಶಿಕ್ಷಕಿ ರೇಖಾ ನಿರೂಪಿಸಿದರು.
ಮೌಲ್ಯಯುತ ಶಿಕ್ಷಣ
ಮಗುವಿನ ಮೆದುಳಿನ ವಿಕಾಸವು 0-6 ವರ್ಷದವರೆಗೆ ಆಗಿದ್ದು ಶೇ. 85ರಷ್ಟು ಭಾಗವನ್ನು ಈ ಹಂತದಲ್ಲಿ ಕಲಿತು ಉಳಿದ ಶೇ. 15ರಷ್ಟನ್ನು ಮುಂದಿನ ಹಂತದಲ್ಲಿ ಕಲಿಯುತ್ತದೆ. 6 ವರ್ಷದ ವರೆಗೆ ಮಗುವಿಗೆ ಮೌಲ್ಯಯುತ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯ. ಪೌಷ್ಟಿಕ ಆಹಾರವೂ ಮಗುವಿನ ಮಾನಸಿಕಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾಗಿರುವುದರಿಂದ ಶಾರೀರಿಕ ಚಟುವಟಿ ಕೆಯೂ ಅಗತ್ಯ. ಇಂತಹ ಗಟ್ಟಿ ತಳಪಾಯ ಮಗುವಿಗೆ ಸಿಕ್ಕಿದಾಗ ಆ ಮಗು ಯೋಗ್ಯ ವ್ಯಕ್ತಿಯಾಗಿ ಸಮಾಜಕ್ಕೆ ಉಪಯುಕ್ತ ವಾತಾವರಣ ಕಲ್ಪಿಸುವಲ್ಲಿ ಸಹಕಾರಿಯಾಗುವನು. ಇದು ಆಗಬೇಕಾದರೆ ನಮ್ಮ ಶಿಕ್ಷಣ ನೀತಿಯಲ್ಲಿ ಹೊಸ ಬದಲಾವಣೆ ಆಗಬೇಕು ಎಂದು ಡಾ| ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟರು.