Advertisement

ವಿಶಿಷ್ಟ ಪ್ರಮಾ ಸಂಸ್ಮರಣ

04:30 PM Dec 08, 2017 | |

ಪಳ್ಳತ್ತಡ್ಕ ಕೇಶವ ಭಟ್‌ ಅವರು ಅಂತಾರಾಷ್ಟ್ರೀಯ ಸಸ್ಯವಿಜ್ಞಾನಿಯಾಗಿದ್ದವರು. ಅಪರೂಪದ ಮತ್ತು ಅಪ್ರತಿಮ ಚಿಂತನೆಯ ಡಾ| ಭಟ್ಟರ ಒಬ್ಟಾಕೆ ಪುತ್ರಿ ಡಾ| ಸುಮಾ ಭಟ್‌ ಸದ್ಯ ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಸುಪ್ರಸಿದ್ಧ ಅಂತಾರಾಷ್ಟ್ರೀಯ ವಿಜ್ಞಾನಿ ಮತ್ತು ಅಪೂರ್ವ ಚಿಂತನೆಯ ಬಹುಭಾಷಾ ತತ್ವಜ್ಞಾನಿ. ಆಕೆಯ ಪುತ್ರಿ ಪ್ರಮಾ, ಬಾಲ್ಯದಲ್ಲೇ ತನ್ನ ಸಾಧನೆಯ ಹಲವಾರು ಪ್ರತಿಭಾ ಸೋಜಿಗಗಳನ್ನು ತೋರಿ ಎಲ್ಲರನ್ನೂ ನಿಬ್ಬೆರಗಾಗಿಸಿದವಳು. ವಿಧಿಯ ಆದೇಶದಂತೆ ಹೈಸ್ಕೂಲು ಮುಗಿಸುವ ಮುನ್ನವೇ ತನ್ನ ಜೀವನದ ಪ್ರಯಾಣವನ್ನೂ ಮುಗಿಸಿ ಎಲ್ಲರನ್ನೂ ನಿಸ್ಸಹಾಯಕರನ್ನಾಗಿಸಿದವಳು. ಮುಗ್ಧತೆ, ವೈಜ್ಞಾನಿಕ ಕುತೂಹಲ ಮತ್ತು ಹಲವು ವಿಶೇಷ ಪ್ರತಿಭೆಗಳ ಗನಿ ಪ್ರಮಾ. “ಪ್ರಮಾ’ ಅಂದರೇ ವಿಶೇಷ ಜ್ಞಾನ ಎಂದರ್ಥ. ಹೆಸರಿಗೆ ತಕ್ಕಹಾಗಿನ ಅರಿವು, ಜ್ಞಾನ ಆಕೆಯದಾಗಿತ್ತು.

Advertisement

ಇದೀಗ ಕಳೆದ ಮೂರು ವರ್ಷಗಳಿಂದ ಮಣಿಪಾಲದ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಅಪ್ರತಿಮ ಸಾಧನೆ ಮಾಡುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಚಿಕ್ಕ ವಯಸ್ಸಿನಲ್ಲೇ  ನಮ್ಮ ಜಿಲ್ಲೆಯಲ್ಲಿ ಪ್ರಾಡಿಜಿ ಅಂತ ಕರೆಯಿಸಿಕೊಳ್ಳುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹಾಗೂ ಬೆಂಬಲವನ್ನು ನೀಡಿ ಪ್ರೋತ್ಸಾಹಿಸುವ ಸಾತ್ವಿಕ ಉದ್ದೇಶ ಇದರದು. ವೇದ, ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ, ಯಕ್ಷಗಾನ, ನಾಟಕವೇ ಮುಂತಾದ ವಿವಿಧ ಕಲಾಪ್ರಕಾರಗಳಲ್ಲಿ ಸಾಧನೆಗೈಯುವ ಮಕ್ಕಳನ್ನು ಗುರುತಿಸಿ ಪ್ರಮಾ ಪ್ರಶಸ್ತಿ ನೀಡಿ ಸಾರ್ವಜನಿಕರ ಎದುರು ಸಾದರಪಡಿಸುವ ಕೈಂಕರ್ಯವನ್ನು ಈ ಟ್ರಸ್ಟ್‌ ಮಾಡಿಕೊಂಡು ಬರುತ್ತಿದೆ. “ಚೈಲ್ಡ್‌ ಪ್ರಾಡಿಜಿ’ಗಳು “ಅಡಲ್ಟ್ ಟ್ರಾಜೆಡಿ’ಯಾಗಿ ರೂಪಾಂತರಗೊಳ್ಳದ ಹಾಗೆ ಕಾಯ್ದುಕೊಳ್ಳಲು ಅವರ ಪೋಷಕರಿಗೆ ಹೆಚ್ಚಿನ ಜವಾಬ್ದಾರಿಯ ಅರಿವಿನ ಕಾಳಜಿಯನ್ನು ಮೂಡಿಸುವ ಪ್ರಯತ್ನ ಇದು. ಡಾ| ಸುಮಾ ಭಟ್ಟರ ಚಿಂತನೆಯಂತೆ ಪ್ರಮಾ ಪ್ರಶಸ್ತಿ ಪಡೆದ ಮಕ್ಕಳ ಮುಂದಿನ ಪ್ರಗತಿಯನ್ನೂ ಕಾಲಕಾಲಕ್ಕೆ ಗಮನಿಸುತ್ತಾ ಇರಲಾಗುತ್ತದೆ ಮತ್ತು ಬೇಕಿದ್ದಲ್ಲಿ ಸೂಕ್ತ ಮಾರ್ಗದರ್ಶಕರ ಸಲಹೆ ಸೂಚನೆಗಳನ್ನೂ ಅಂತಹ ಮಕ್ಕಳಿಗೆ ಸಿಗುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ. ನಮ್ಮ ಪ್ರಸ್ತುತ ಸಮಾಜದಲ್ಲಿ ಪ್ರತಿಭಾಶಾಲಿ ಮಕ್ಕಳನ್ನು ಸಾಕುವ ಮತ್ತು ಸಲಹುವ ಕೆಲಸ ಅದೆಷ್ಟು ಕಷ್ಟಕರವಾದದ್ದು ಮತ್ತು ಅದೆಷ್ಟು ಸೂಕ್ಷ್ಮಮಾನವೀಯತೆಗೆ ಸಂಬಂಧಿಸಿದ್ದು ಎಂಬುದನ್ನು ಈ ಟ್ರಸ್ಟ್‌ ಚೆನ್ನಾಗಿ ತಿಳಿದು ಕೆಲಸವನ್ನು ಮಾಡುತ್ತಿದೆ. ನಿಜಕ್ಕೂ ಇದೊಂದು ಸ್ತುತ್ಯರ್ಹವಾದ ಅಪೂರ್ವ ಕಾರ್ಯಕ್ರಮ.

ಈ ವರ್ಷ ಪ್ರಮಾ ಪ್ರಶಸ್ತಿಗೆ ಪಾತ್ರರಾದವರು: ವಿಷ್ಣುರಾತ ಆಚಾರ್ಯ (ಋಗ್ವೇದ); ಕೋಟ ಅನಿಕೇತ ಶೆಣೈ (ವಿಜ್ಞಾನ), ಸದ್ಗುಣ ಐತಾಳ (ವಾದ್ಯ ಸಂಗೀತ) ಆರತಿ ಬಾಗ್ಲೋಡಿ (ಇಂಗ್ಲಿಷ್‌ ಸಾಹಿತ್ಯ) ಮತ್ತು ದಿವ್ಯಶ್ರೀ (ಕರ್ನಾಟಕ ಸಂಗೀತ). ತನ್ನ ತಂದೆಯಿಂದ ಚ್ಯುತಿಯಿಲ್ಲದೆ ಕಲಿತುಕೊಂಡ ವೇದ ಪಾಠಗಳನ್ನು, ತನ್ನ ಅಸ್ಖಲಿತ ಸ್ಪಷ್ಟ ಉಚ್ಛಾರಗಳೊಂದಿಗೆ ಕೆಲವಾರು ಋಕ್ಕುಗಳನ್ನು ಅರ್ಥ ಸಹಿತ ವಿವರಿಸುತ್ತಾ ಸಾಗಿದ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿಷ್ಣುರಾತನ ವೇದ ವಿದ್ಯೆಯ ಸಾಮರ್ಥ್ಯ ಸಂಸ್ಕೃತ ಪಂಡಿತ ವೇದಕೋವಿದರನ್ನು ತಲೆದೂಗಿಸಿತ್ತು. ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಕೋಟ ಅನಿಕೇತ ಶೆಣೈ ತಾನು ಸಂಶೋಧಿಸಿದ ಸೌರ ಶಕ್ತಿ ಬಳಕೆಯ ವೈಜ್ಞಾನಿಕ ಮಾದರಿಯೊಂದರ ಜತೆಗೆ ಜಪಾನ್‌ ಮೊದಲಾದ ದೇಶಗಳಿಗೆ ಹೋಗಿ ಉಪನ್ಯಾಸ ನೀಡಿದ್ದಲ್ಲದೆ ನೊಬೆಲ್‌ ವಿಜ್ಞಾನಿಗಳ ಒಡನಾಟ ಸಂಪಾದಿಸಿದ ಓರ್ವ ಅಪರೂಪದ ಬಾಲ ವಿಜ್ಞಾನಿ. ಆತನ ಆತ್ಮವಿಶ್ವಾಸದ ಮಾತುಗಳು ಸಭೆಯನ್ನು ಚಕಿತಗೊಳಿಸಿದ್ದಲ್ಲದೆ, ತೀರಾ ಕಡಿಮೆ ವೆಚ್ಚದಲ್ಲಿ ಗರಿಷ್ಠ ಸೌರ ಶಕ್ತಿಯ ಕೊಯ್ಲು ಮಾಡುವುದರ ಬಗೆಗೆ ಆತ ತೋರಿದ ಸಾಧನೆ ಸಂಶೋಧನೆ ರಾಷ್ಟ್ರಮಟ್ಟದ ಗರಿಮೆ ಸಾಧಿಸುವುದಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಎಲ್ಲರಿಗೂ ವಿದಿತವಾಯಿತು. ಹೈಸ್ಕೂಲಿನ ವಿದ್ಯಾಭ್ಯಾಸದ ಜತೆ ಜತೆಗೇ ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿಯವರೆಗೆ ಮ್ಯಾಂಡೊಲಿನ್‌ ವಾದನವನ್ನು ನೀಡಿ ಪ್ರಖ್ಯಾತಿಗೆ ಬಂದಿರುವ ಸದ್ಗುಣ ಐತಾಳನ ಸಾಧನೆ ಆತನ ಪ್ರಸ್ತುತಿಯಲ್ಲೇ ವ್ಯಕ್ತವಾಯಿತು. ಇಂಗ್ಲಿಷ್‌ ಕಥೆ, ಕವನ, ಪ್ರಬಂಧಗಳನ್ನು ನಿರ್ಭಿಡೆಯಿಂದ ಏನೇನೂ ಅಳುಕಿಲ್ಲದ ಪ್ರಸ್ತುತಪಡಿಸಿದವರು ಕಟ್ಟುಮಸ್ತಾದ ಎತ್ತರದ ಗಂಭೀರ ಸ್ವಭಾವದ ಯುವತಿ, ಎರಡನೆಯ ಪಿಯುಸಿಯಲ್ಲಿ ಓದುತ್ತಿರುವ ಆರತಿ ಬಾಗ್ಲೋಡಿ. ಕಾರ್ಯಕ್ರಮದ ನಿರೂಪಣೆಯನ್ನು ತನ್ನ ನಿರರ್ಗಳ ಇಂಗ್ಲಿಷ್‌ ಭಾಷೆಯಲ್ಲಿ ಲೀಲಾಜಾಲವಾಗಿ ನೀಡುತ್ತಿದ್ದ ಹಾಗೂ ಮಾತನಾಡುತ್ತಿದ್ದ ಮೇಧಾ ಭಟ್‌ ಅವರು ವಾಚಿಸಿದ ಸ್ವರಚಿತ ಕವನ ಸಭಾಸದರನ್ನು ಬೆಚ್ಚಿಬೀಳಿಸಿತೆಂದರೆ ಉತ್ಪ್ರೇಕ್ಷೆಯಲ್ಲ. ತನ್ನ ಸುಲಲಿತ ಕಂಠದಲ್ಲಿ ಸೊಗಸಾಗಿ ಕರ್ನಾಟಕ ಸಂಗೀತದ ಸೊಗಡನ್ನು ಹಿಂಡಿ ಹಿಂಜಿದ ಮಣಿಪಾಲದ ದಿವ್ಯಶ್ರೀ ತನ್ನ ಅಂದವಾದ ಚಿತ್ರಕಲೆಯ ಕುಸುರಿಗಳನ್ನೂ ಪ್ರದರ್ಶಿಸಿ ಮೆರೆದರು. 

ಒಬ್ಬೊಬ್ಬರದು ಒಂದೊಂದು ಮೇಲುಗೈ. ಎಲ್ಲರಲ್ಲೂ ಮಕ್ಕಳ ಮುಗ್ಧತೆ. ಅವಿರತ ಸಾಧನೆ ಮಾಡಿದ ದೃಷ್ಟಿ. ತಮ್ಮೆಲ್ಲ ಸಹಪಾಠಿಗಳಂತೆ ಆಟವಾಡದೆ ತಮ್ಮ ತಮ್ಮ ಕಸುಬುಗಾರಿಕೆಯಲ್ಲೇ ತೊಡಗಿಸಿಕೊಂಡು ತೃಪ್ತಿಪಟ್ಟವರು ಇವರು. ಈ ಸಾಧಕರ ಹಿಂದೆ ಪೂರ್ಣ ಪೋಷಣೆಗಾಗಿ ನಿಂತ ತಂದೆ ತಾಯಿಯರು ಮತ್ತು ಗುರುವರ್ಯರು ಅಭಿನಂದನೀಯರು. ಸಕಾಲಿಕವಾಗಿ ಪೋಷಕರೆಲ್ಲರಿಗೆ ಎಚ್ಚರಿಕೆಯ ಹಾಗೂ ಅರಿವನ್ನು ಮೂಡಿಸುವ ಮಾತನ್ನಾಡಿದ ಮನೋವಿಜ್ಞಾನಿ ಡಾ| ವಿರೂಪಾಕ್ಷ ದೇವರಮನೆಯವರ ನಲು°ಡಿಗಳು ಎಲ್ಲ ತಂದೆ ತಾಯಂದಿರಿಗೆ ಹಾಗೂ ಮಕ್ಕಳನ್ನು ಬೆಳೆಸುವ ಶಿಕ್ಷಕರಿಗೆ ದಾರಿದೀಪವಾಗಿದ್ದವು. ಉತ್ಸಾಹದ ಚಿಲುಮೆಯೇ ಆಗಿದ್ದ ಮಂಗಳೂರಿನ ಡಿವಿಜಿ ಬಳಗದ ಸಿ. ಕನಕರಾಜು ಅವರ ಚಿಂತನೆ ಹಾಗೂ ಪ್ರೋತ್ಸಾಹದ ನುಡಿಗಳು ಮಾರ್ಗದರ್ಶಕವಾಗಿದ್ದವು. ಡಾ| ಸುಮಾ ಅವರ ಸೋದರಿಯರಾದ ಡಾ| ಅನಸೂಯ ಹಾಗೂ ಪವನ ಕುಮಾರಿಯವರ  ಸಂಘಟನಾ ಚಾತುರ್ಯ ಮತ್ತು ಪ್ರಾಮಾಣಿಕ ಮಾತುಗಳು ಹಾಗೂ ಪಳ್ಳತ್ತಡ್ಕ ದೇವಕಿ ಭಟ್‌ ಅವರ ಹಿರಿ ಉಪಸ್ಥಿತಿ ತುಂಬಿದ ಸಭಾಸದರೆಲ್ಲರನ್ನು ಕಾರ್ಯಕ್ರಮದ ಕೊನೆಯವರೆಗೂ ಹಿಡಿದು ನಿಲ್ಲಿಸಿತ್ತು. ಶಶಿಕಲಾ ಎನ್‌. ಭಟ್‌ ಮತ್ತು ನರಸಿಂಹ ಭಟ್‌ ಅವರ ಆಶ್ರಯದಲ್ಲಿ ಮಣಿಪಾಲ ಡಾಟ್‌ ನೆಟ್‌ ಸಭಾಂಗಣದಲ್ಲಿ ನವೆಂಬರ್‌ 12ರಂದು ನಡೆದ ಈ ಸಮಾರಂಭವು ಪರಿಸರದ ಹಲವು ಪ್ರಾಜ್ಞ ಶ್ರೋತೃ ವರ್ಗದಿಂದ ತುಂಬಿ ಪ್ರಶಂಸೆಗೆ ಒಳಗಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ.

ವೀ. ಅರವಿಂದ ಹೆಬ್ಟಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next