Advertisement

ವಿಪಕ್ಷಗಳಿಗೆ ಮುಖಭಂಗ;ಫೆ.1ರಂದೇ ಬಜೆಟ್,2012ರಲ್ಲಿ BJP ವಿರೋಧಿಸಿತ್ತು

03:51 PM Jan 23, 2017 | Team Udayavani |

ನವದೆಹಲಿ: ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಫೆ.1ರ ಕೇಂದ್ರ ಬಜೆಟ್ ದಿನಾಂಕವನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದ್ದು, ನಿಗದಿಯಂತೆ ಫೆ.1ರಂದೇ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಆದರೆ ಈ ತೀರ್ಪು ವಿಪಕ್ಷಗಳಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ.

Advertisement

ದೆಹಲಿ ಮೂಲದ ವಕೀಲ ಎಂಎಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ, ಅಲ್ಲದೇ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಘೋಷಣೆ ಮತದಾರನ ಮೇಲೆ ಪ್ರಭಾವ ಬೀರುತ್ತೆ ಎಂಬ ವ್ಯಾಖ್ಯಾನ ಅರ್ಥಹೀನ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

ಒಂದು ವೇಳೆ ವರ್ಷವಿಡೀ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ, ಆಗಲೂ ಕೇಂದ್ರ ಸರ್ಕಾರ ಬಜೆಟ್ ಮಂಡಿಸಬಾರದೇ ಎಂದು ಸುಪ್ರೀಂಕೋರ್ಟ್ ಕಟುವಾಗಿ ಪ್ರಶ್ನಿಸಿದೆ. ಕಳೆದ ವಾರದಿಂದ ವಿತ್ತ ಸಚಿವಾಲಯ ಬಜೆಟ್ ದಾಖಲೆಗಳ ಮುದ್ರಣವನ್ನು ಪ್ರಾರಂಭಿಸಿದೆ.

ಫೆ.4ರಂದು ಪಂಚರಾಜ್ಯಗಳ ಚುನಾವಣೆ ಆರಂಭಗೊಳ್ಳಲಿದೆ. ಹಾಗಾಗಿ ಕೇಂದ್ರ ಬಜೆಟ್ ಘೋಷನೆ ಮತದಾರನ ಮೇಲೆ ಪ್ರಭಾವ ಬೀರುತ್ತೆ. ಇದರಿಂದಾಗಿ ಫೆ.1ರ ಕೇಂದ್ರ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡಬೇಕೆಂದು ಕೋರಿ ವಿಪಕ್ಷಗಳು ಅರ್ಜಿ ಸಲ್ಲಿಸಿದ್ದವು.

2012ರಲ್ಲಿ ಬಿಜೆಪಿ ಬಜೆಟ್ ಮಂಡನೆಗೆ ಆಕ್ಷೇಪಿಸಿತ್ತು!
2012ರಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಅನ್ನು ಯುಪಿಎ ಸರ್ಕಾರ ಮಂಡಿಸಬಾರದೆಂದು ಬಿಜೆಪಿ ಅಕ್ಷೇಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆಗ ಯುಪಿಎ ಸರ್ಕಾರ ಕೇಂದ್ರ ಬಜೆಟ್ ಅನ್ನು ಫೆ.28ರ ಬದಲು ಮಾರ್ಚ್ 16ಕ್ಕೆ ಮಂಡಿಸಿತ್ತು. ವಿಪರ್ಯಾಸ ಅಂದರೆ ಆಗ ವಿಪಕ್ಷದಲ್ಲಿದ್ದು ವಿರೋಧಿಸಿದ್ದ ಬಿಜೆಪಿ ಈಗ ಆಡಳತ ಪಕ್ಷದಲ್ಲಿದೆ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿದೆ, ಕೋರ್ಟ್ ಆದೇಶ ವಿಪಕ್ಷದ ವಿರುದ್ಧವಾಗಿ ಬಂದಿದೆ!
 

Advertisement
Advertisement

Udayavani is now on Telegram. Click here to join our channel and stay updated with the latest news.

Next