Advertisement

ವಾಡಿಕೆಯನ್ನು ಮೀರಲಿ ಮುಂಗಡಪತ್ರ

12:33 AM Feb 01, 2022 | Team Udayavani |

ಒಂದು ಉತ್ತಮ ಬಜೆಟ್‌ ಸಮಾಜದ ದೊಡ್ಡ ವರ್ಗಕ್ಕೆ ಸ್ವಲ್ಪವಾದರೂ ಅನುಕೂಲವಾಗುವ ಮತ್ತು ಅದು ಕಣ್ಣಿಗೆ ಕಾಣುವ ರೀತಿಯಲ್ಲಿ ಇರಬೇಕು. ಮಧ್ಯಮ ವರ್ಗ ಮತ್ತು ಸಂಬಳದ ಮೇಲೆ ಜೀವಿಸುವ ವರ್ಗದ ಜನರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಅನುಕೂಲಗಳು ಸಿಕ್ಕಿಲ್ಲ. ಅಲ್ಪಸ್ವಲ್ಪ ಒಂದೆಡೆ ಕೊಟ್ಟಂತೆ ಮಾಡಿ , ಬೇರೆಡೆ ಅದಕ್ಕಿಂತ ದುಪ್ಪಟ್ಟು ವಸೂಲಿ ಮಾಡುವ ತಂತ್ರವನ್ನ ಎಲ್ಲಾ ಸರಕಾರಗಳೂ ಮಾಡುತ್ತಲೇ ಬಂದಿವೆ. ಇದು ನಿಲ್ಲಬೇಕು.

Advertisement

ಬಜೆಟ್‌ ಎಂದರೆ ಅದೊಂದು ಫೈನಾನ್ಸಿಯಲ್‌ ಪ್ಲಾನ್‌. ನಿಗದಿತ ಸಮಯದಲ್ಲಿ ಇರುವ ಹಣದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡ ಬೇಕು ಎನ್ನುವುದನ್ನು ಮುಂದಾಗಿ ನಿಗದಿಪಡಿಸಿಕೊಳ್ಳುವ ಕ್ರಿಯೆ. ಉದಾ ಹರಣೆಗೆ ಸರಕಾರಕ್ಕೆ ಈ ವರ್ಷ ಒಟ್ಟು ಆದಾಯ ನೂರು ರೂಪಾಯಿ ಇದ್ದು , ಅದನ್ನು ಕೃಷಿ ಕ್ಷೇತ್ರಕ್ಕೆ ಇಷ್ಟು, ಗ್ರಾಮೀಣಾಭಿವೃದ್ಧಿಗೆ ಇಷ್ಟು, ರಸ್ತೆ ಇನ್ನಿತರ ಮೂಲ ಸೌಲಭ್ಯಕ್ಕೆ ಇಷ್ಟು, ಹೀಗೆ ಹಲವಾರು ಕ್ಷೇತ್ರಗಳಿಗೆ
ಹಣವನ್ನು ವಿಂಗಡಿಸುವ ಕ್ರಿಯೆ. ಇದು ಸಮಾಜದ ಎಲ್ಲ ಕಾರ್ಯ ಕ್ಷೇತ್ರಗಳನ್ನು, ಸಮಾಜದ ಎಲ್ಲ ವರ್ಗಗಳ ಜನರನ್ನು ಗಮನದಲ್ಲಿ ಇಟ್ಟುಕೊಂಡು ಮಂಡಿಸಬೇಕಾಗುತ್ತದೆ.

ಗಮನಿಸಿ ಇಂತಹ ಬಜೆಟ್‌ನಲ್ಲಿ ಮೂರು ವಿಧ
1) ಬ್ಯಾಲೆನ್ಸ್‌ಡ್‌ ಬಜೆಟ್‌ ಅಥವಾ ಸಮತೋಲಿತ ಬಜೆಟ್‌: ಆದಾಯ ನೂರಿದ್ದು ಖರ್ಚು ಕೂಡ ನೂರು ಇರುವ ಬಜೆಟ್‌ ಇದಾಗಿರುತ್ತದೆ.
2) ಡೆಫಿಸಿಟ್‌ ಅಥವಾ ಕೊರತೆ ಬಜೆಟ್‌: ಆದಾಯ ನೂರು ರೂಪಾಯಿಯಿದ್ದು ಖರ್ಚು ನೂರಕ್ಕಿಂತ ಹೆಚ್ಚಿದ್ದರೆ, ಹೆಚ್ಚುವರಿ ಖರ್ಚನ್ನು ಡೆಫಿಸಿಟ್‌(ಕೊರತೆ) ಎನ್ನಲಾಗುತ್ತದೆ.
3) ಸರ್‌ಪ್ಲಸ್‌ ಅಥವಾ ಮಿಗತೆ ಬಜೆಟ್‌: ಇಲ್ಲಿ ಖರ್ಚಿಗಿಂತ ಆದಾಯ ಹೆಚ್ಚಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಎನ್ನುವುದಕ್ಕಿಂತ ದಶಕಗಳಿಂದ ಸಾಮಾನ್ಯ ಜನ ಬಜೆಟ್‌ನಲ್ಲಿ ಆಸಕ್ತಿಯನ್ನು ಕಳೆದುಕೊಂಡಿ¨ªಾರೆ. ಸರಕಾರ ನೂರಾರು ಮತ್ತು ಸಾವಿರಾರು ಕೋಟಿ ರೂ.ಗಳಲ್ಲಿ ಮಾತನಾಡುತ್ತದೆ. ಅಲ್ಲಿಗೆ ಇಷ್ಟು, ಇಲ್ಲಿಗೆ ಇಷ್ಟು ಎನ್ನುತ್ತದೆ, ಆದರೆ ದಿನದ ಕೊನೆಗೆ ನನಗೇನೂ ಲಾಭವಾಗಲೇ ಇಲ್ಲ ಎನ್ನುವುದು ಜನ ಸಾಮಾನ್ಯನ ಅಂಬೋಣ. ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆ ಯಲ್ಲಿರುವುದು ಮಧ್ಯಮ ಮತ್ತು ಕೆಳ ಮಧ್ಯಮವರ್ಗದ ಜನ ಮತ್ತು ತೀರಾ ಸಾಮಾನ್ಯ ಜನ, ಆದರೆ ನೀವು ಇಲ್ಲಿಯ ತನಕ ಮಂಡಿಸಿರುವ ಯಾವುದೇ ಬಜೆಟ್‌ ನೋಡಿ. ಅದರಲ್ಲಿ ಇವರಿಗೆ ಲಾಭವಾಗುವ ಅಥವಾ ಸಹಾಯವಾಗುವ ಯಾವುದೇ ಮಂಡನೆಗಳು ಇರುವುದಿಲ್ಲ. ಇದ್ದರೂ ಅವುಗಳು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದಿರುವ ಉದಾಹರಣೆ ಇಲ್ಲ. ಇದರ ಜತೆಗೆ ನಾಗರಿಕನಾದವನಿಗೆ ನಾನು ಕೂಡ ಇದರಲ್ಲಿ ಭಾಗಿ ಎನ್ನುವ ಭಾವನೆ ಮೂಡು ವಂತಹ ವಾತಾವರಣ ಸೃಷ್ಟಿಯಾಗಬೇಕು.

ನೀವು ಒಂದು ಕುಟುಂಬವನ್ನು ಉದಾ ಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ರುವ ಎಲ್ಲ ಸದಸ್ಯರೂ ಮನೆಯ ಆದಾಯ ಮತ್ತು ವ್ಯಯ ದಲ್ಲಿ ಭಾಗಿಯಾಗುತ್ತಾರೆ. ಮುಂದಿನ ಅಭಿವೃದ್ಧಿ ಹೇಗೆ ಎನ್ನುವುದರ ಕುರಿತು ಮಾತನಾಡುತ್ತಾರೆ, ಏಕೆಂದರೆ ಅಲ್ಲಿ “ನಮ್ಮದು’ ಎನ್ನುವ ಭಾವನೆಯಿದೆ. ಇದು ದೇಶದ ವಿಷಯ ಬಂದಾಗ ಇಲ್ಲವಾಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ಸರಕಾರಕ್ಕೆ ಒಂದು ರೂಪಾಯಿ ಎಲ್ಲಿಂದ ಬಂತು ಮತ್ತು ಅದನ್ನ ಎಲ್ಲಿ ಮತ್ತು ಹೇಗೆ ಖರ್ಚು ಮಾಡಲಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ಮಾಹಿತಿ ತಿಳಿದಾಗ ಎಲ್ಲಿ ತಪ್ಪಾಗುತ್ತಿದೆ ಅಥವಾ ಪೋಲಾಗುತ್ತಿದೆ, ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು? ಎನ್ನುವ ಪ್ರಶ್ನೆಗಳನ್ನು ಎತ್ತಲು ಸಾಧ್ಯ. ಒಟ್ಟಿನಲ್ಲಿ ಇಂದಿನ ಯುವ ಜನತೆಯಂತೂ ಬಜೆಟ್‌ ಬಗ್ಗೆ ಯಾವುದೇ ರೀತಿಯ ಆಕರ್ಷಣೆ ಹೊಂದಿಲ್ಲ ಎನ್ನುವುದು ಸರ್ವವೇದ್ಯ.

ಯಾವುದೇ ಬಜೆಟ್‌ನಲ್ಲಿ ಕೆಳಗಿನ ಒಂದಷ್ಟು ಅಂಶಗಳು ಇದ್ದಾಗ ಅದನ್ನ ಒಂದೊಳ್ಳೆ ಬಜೆಟ್‌ ಎನ್ನಬಹುದು
1) ಬಜೆಟ್‌ ಉತ್ತಮವಾಗಿ ಯೋಜಿತವಾಗಿರಬೇಕು: ಅಂದರೆ ಸಮಾಜದ ಎಲ್ಲ ವರ್ಗದ ಜನರ, ಕಾರ್ಯ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡಿರಬೇಕು. ಬಜೆಟ್‌ ಮಂಡಿಸಿದ ಆಜುಬಾಜಿನಲ್ಲಿ ಒಂದಲ್ಲ ಒಂದು ವರ್ಗದ ಜನ ಈ ಬಜೆಟ್‌ನಲ್ಲಿ ನಮಗೇನೂ ಇಲ್ಲ ಎಂದು ಗೊಣಗುವುದು ಕೇಳಿಯೇ ಇರುತ್ತೇವೆ. ಇದು ಕಡಿಮೆಯಾಗಬೇಕು.

Advertisement

2) ತಿದ್ದಿಕೊಳ್ಳುವ ಬಜೆಟ್‌ ಆಗಿರಬೇಕು: ಜನ ಸಾಮಾನ್ಯರು ಮತ್ತು ಕಾರ್ಯಕ್ಷೇತ್ರದ ಪರಿಣಿತರು ಇದು ಸರಿಯಿಲ್ಲ, ಹೀಗಿರಬೇಕು ಎಂದಾಗ ಮತ್ತು ಸಮಾಜದಲ್ಲಿ ಅದಕ್ಕೆ ಮನ್ನಣೆ ದೊರೆತಾಗ ಸರಕಾರ ಬಜೆಟ್‌
ತಿದ್ದುಪಡಿ ಮಾಡುವಂತಿರಬೇಕು. ಕೊನೆಗೂ ಬಜೆಟ್‌ ಮಂಡಿಸುವುದು ಜನರಿಗಾಗಿ ಅಲ್ಲವೇ?

3) ಸತ್ಯಕ್ಕೆ ಹತ್ತಿರವಾದ ಬಜೆಟ್‌ ಆಗಿರಬೇಕು: ಇಂಗ್ಲಿಷ್‌ನಲ್ಲಿ ಇದಕ್ಕೆ ರಿಯಲಿಸ್ಟಿಕ್‌ ಬಜೆಟ್‌ ಎನ್ನುತ್ತಾರೆ. ಸಾಮಾನ್ಯವಾಗಿ ಬಜೆಟ್‌ ಮಂಡಿಸುವಾಗ ಹಿಂದಿನ ಇತಿಹಾಸದ ಜತೆಗೆ ಮುಂದಿನ ದಿನಗಳ ಬಗ್ಗೆ ಒಂದಷ್ಟು ಊಹೆಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಬಜೆಟ್‌ ಎಂದರೆ ಅದೊಂದು ಅಂದಾಜು ಲೆಕ್ಕಾಚಾರ, ಹೀಗಾಗಿ ಆದಷ್ಟೂ ಇದು ಸತ್ಯಕ್ಕೆ ಹತ್ತಿರವಾಗಿದ್ದರೆ ಆಗ ಅದು ಜನ ಮನ್ನಣೆ ಗಳಿಸುತ್ತದೆ.

4) ಪಾರದರ್ಶಕ ಬಜೆಟ್‌ ಮಂಡಿಸಬೇಕು: ಮೊದಲೇ ಹೇಳಿದಂತೆ ಜನರಿಗೆ ಅರ್ಥವಾಗುವಂತೆ ಸರಳವಾಗಿ ಹೇಳಬೇಕು. ಸ್ಪಷ್ಟತೆ ಇರಬೇಕು. ಅಡ್ಡಗೋಡೆಯ ಮೇಲೆ ದೀಪವಿಟ್ಟ, ವಿವಿಧ ರೀತಿಯ ವಿಶ್ಲೇಷಣೆ ಅಥವಾ ಅರ್ಥೈಸುವಿಕೆಗೆ ದಾರಿಯಾಗುವ ಬಜೆಟ್‌ ಎಂದೂ ಜನರಲ್ಲಿ ಖುಷಿ ಮೂಡಿಸುವುದಿಲ್ಲ. ನಿಖರವಾಗಿ ಇದರಿಂದ ಇಷ್ಟು ಲಾಭ, ಇಂತಹ ವರ್ಗಕ್ಕೆ ಎಂದು ಹೇಳುವಂತಿರಬೇಕು.

ಒಂದು ಉತ್ತಮ ಬಜೆಟ್‌ ಸಮಾಜದ ದೊಡ್ಡ ವರ್ಗಕ್ಕೆ ಸ್ವಲ್ಪವಾದರೂ ಅನುಕೂಲವಾಗುವ ಮತ್ತು ಅದು ಕಣ್ಣಿಗೆ ಕಾಣುವ ರೀತಿಯಲ್ಲಿ ಇರಬೇಕು. ಮಧ್ಯಮ ವರ್ಗ ಮತ್ತು ಸಂಬಳದ ಮೇಲೆ ಜೀವಿಸುವ ವರ್ಗದ ಜನರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಅನುಕೂಲಗಳು ಸಿಕ್ಕಿಲ್ಲ. ಅಲ್ಪಸ್ವಲ್ಪ ಒಂದೆಡೆ ಕೊಟ್ಟಂತೆ ಮಾಡಿ, ಬೇರೆಡೆ ಅದಕ್ಕಿಂತ ದುಪ್ಪಟ್ಟು ವಸೂಲಿ ಮಾಡುವ ತಂತ್ರವನ್ನು ಎಲ್ಲ ಸರಕಾರಗಳೂ ಮಾಡುತ್ತಲೇ ಬಂದಿವೆ. ಇದು ನಿಲ್ಲಬೇಕು. ಸಾಮಾನ್ಯ ಮನುಷ್ಯ ಜೀವಿತಾವಧಿಯಲ್ಲಿ ಕೋಟಿ ರೂಪಾಯಿ ಒಮ್ಮೆಲೇ ನೋಡುವುದು ಕಷ್ಟಸಾಧ್ಯ. ಹೀಗಾಗಿ ಬಜೆಟ್‌ ಮಂಡನೆಯ ಕೋಟಿ ಕೋಟಿಗಳ ರಾಗ ಅವನಿಗೆ ಇಷ್ಟವಾಗುವುದಿಲ್ಲ. ಆತನಿಗೆ ಬೇಕಿರುವುದು ಉತ್ತಮ ಕೆಲಸ, ಸ್ಥಿರತೆ ಮತ್ತು ಶಾಂತಿ. ಭಾರತದಂತಹ ಅತೀ ದೊಡ್ಡ ದೇಶದಲ್ಲಿ ಎಲ್ಲರನ್ನೂ ಮೆಚ್ಚಿಸುವ ಬಜೆಟ್‌ ಮಂಡಿಸುವುದು ಕಷ್ಟವೂ ಹೌದು. ಹೀಗಾಗಿ ಬಜೆಟ್‌ ಎನ್ನುವುದು ಸಾಂಪ್ರದಾಯಿಕವೂ, ವಾಡಿಕೆಯೂ ಆಗಿ ಬದಲಾಗಿ ಹೋಗಿದೆ. ಯಾವ ಪಕ್ಷ ಆಡಳಿತದಲ್ಲಿರುತ್ತದೆ ಅವರು ಬಜೆಟ್‌ ಹೊಗಳು ವುದು, ವಿಪಕ್ಷ ತೆಗಳುವುದು ಕೂಡ ಸಾಮಾನ್ಯವಾಗಿ ಹೋಗಿದೆ. ಇದು ಈ ಬಾರಿಯಾದರೂ ಬದಲಾದೀತೇ? ಕಾದು ನೋಡೋಣ.

-ರಂಗಸ್ವಾಮಿ ಮೂಕನಹಳ್ಳಿ,
ಆರ್ಥಿಕ ವಿಶ್ಲೇಷಕರು

Advertisement

Udayavani is now on Telegram. Click here to join our channel and stay updated with the latest news.

Next