Advertisement

ಜನಪರ ಮತ್ತು ದೂರದೃಷ್ಟಿಯಿಂದ ಕೂಡಿದ ಬಜೆಟ್‌: ಸಚಿವರುಗಳ ಬಣ್ಣನೆ

08:47 PM Feb 01, 2022 | Team Udayavani |

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎಂದು ಸಚಿವರಾದ ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ, ಸುನಿಲ್‌ ಕುಮಾರ್‌, ಡಾ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಹಲವು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

2002-23ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ, ಶಿಕ್ಷಣ, ಆರೋಗ್ಯ, ಕೃಷಿ, ವಿದ್ಯುತ್‌ ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು ಇದೊಂದು ಜನಪರವಾದ ದೂರ ದೃಷ್ಟಿಯಿಂದ ಕೂಡಿದ ಬಜೆಟ್‌ ಆಗಿದೆ ಎಂದು ಬಣ್ಣಿಸಿದ್ದಾರೆ.

ಪ್ರತಿ ಮನೆಗೂ ಕುಡಿಯ ನೀರು ನೀಡಲು ಬಜೆಟ್‌ನಲ್ಲಿ ಸುಮಾರು 60 ಲಕ್ಷ ಕೋಟಿ ರೂ.ಅನುದಾನ ಮೀಸಲಿಡುವ ಮೂಲಕ ಕೇಂದ್ರ ಸರ್ಕಾರ ಜನ ಪರವಾದ ಉತ್ತಮ ಬಜೆಟ್‌ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಜೆಟ್‌ನಲ್ಲಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನ ಮೇಲ್ದರ್ಜೆಗೆ ಏರಿಸುವ ವಾಗ್ಧಾನ ಮಾಡಲಾಗಿದೆ.ಜತೆಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ. ಸೋಲಾರ್‌ ವಿದ್ಯುತ್‌ ಯೋಜನೆಗೆ ಒತ್ತು ನೀಡಿದ್ದು 80ಲಕ್ಷ ಮನೆಕೂಡುವ ಸಂಕಲ್ಪ ತೊಡಲಾಗಿದೆ.ನದಿ ಜೋಡಣೆ ಯೋಜನೆ ಇತಿಹಾಸ ಪುಟ ಸೇರುವ ಘೋಷಣೆ ಆಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ ಭವಿಷ್ಯದ ಭಾರತದ ಸಮಗ್ರ ಅಭಿವೃದ್ಧಿಯ ಸ್ಪಷ್ಟ ಪರಿಕಲ್ಪನೆ ಮತ್ತು ಯೋಜನೆ ಹೊಂದಿದೆ. ಇದೊಂದು ಐತಿಹಾಸಿಕ ಬಜೆಟ್‌. ಎಲ್ಲ ವರ್ಗ ಹಾಗೂ ವಲಯದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನಲ್ಲಿ ಭಾರತವನ್ನು ಸರ್ವಶಕ್ತಿ ರಾಷ್ಟ್ರವನ್ನಾಗಿ ರೂಪಿಸಲು ಶ್ರಮವಹಿಸುತ್ತಿದ್ದು ಅದಕ್ಕೆ ತಕ್ಕಂತೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಕಾರ್ಯಕ್ರಮ ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಡವರ ಅನುಕೂಲಕ್ಕಾಗಿ 400 ಹೊಸ ರೈಲುಗಳ ಘೋಷಣೆ ಮಾಡಲಾಗಿದ್ದು ಈ ಬಜೆಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮೋದಿಯವರ ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್‌ ಹೇಳಿದ್ದಾರೆ.

ಬಜೆಟ್‌ನಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಯೋಜನೆಗೆ ಹಣ ಬಿಡುಗಡೆಯಾಗಿದೆ. ರೈತರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರು ಬಜೆಟ್‌ ಅತ್ಯುತ್ತಮ ಬಜೆಟ್‌ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ:ರಾಜ್ಯದ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ : ಪಾಸಿಟಿವಿಟಿ ದರ 13.45%

ದೂರದೃಷ್ಟಿಯ ಸ್ಪರ್ಶ
ಭವಿಷ್ಯದ ಭಾರತಕ್ಕೆ ಪೂರಕವಾದ ನೀತಿ-ನಿರೂಪಕ ಅಂಶಗಳನ್ನು ಬಜೆಟ್‌ ಹೊಂದಿದ್ದು ಇಂಧನ ಕ್ಷೇತ್ರಕ್ಕೆ ದೂರದೃಷ್ಟಿಯ ಸ್ಪರ್ಶ ನೀಡಲಾಗಿದೆ ಎಂದು ಕನ್ನಡ ಸಂಸðತಿ ಮತ್ತು ಇಂಧನ ಸಚಿವ ವಿ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಯಾವುದೇ ಒಂದು ವರ್ಗದ ಓಲೈಕೆಗೆ ಸೀಮಿತವಾಗಿರದೇ ಫಾಲಿಸಿ ಆಧರಿತ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಆದ್ಯತೆ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ” ಸ್ವಚ್ಚ ಇಂಧನ” ಕ್ಕೆ ಬಜೆಟ್‌ ನಲ್ಲಿ ಒತ್ತು ನೀಡಿದ್ದಾರೆ. ಕೇಂದ್ರ ಸರ್ಕಾರದ ಆದ್ಯತಾ ವಲಯದಲ್ಲಿ ಇಂಧನ ಕ್ಷೇತ್ರ ಸೇರಿದ್ದು, ವಿದ್ಯುತ್‌ ಪ್ರಸರಣ ಮತ್ತು ಆಧುನೀಕರಣಕ್ಕೆ ಒತ್ತು ನೀಡಿದ್ದಾರೆ ಎಂದಿದ್ದಾರೆ.

ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿ, ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್‌ ಇದಾಗಿದೆ. ಗ್ರಾಮೀಣಾಭಿವೃದ್ಧಿ, ನದಿಗಳ ಜೋಡಣೆ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ಪ್ರತಿ ಗ್ರಾಮಕ್ಕೂ 5ಜಿ ಸಂಪರ್ಕ, ಮೂಲ ಸೌಕರ್ಯ ಸೇರಿದಂತೆ ಎಲ್ಲಾ ವಲಯಕ್ಕೂ ಆದ್ಯತೆ ನೀಡುವ ಮೂಲಕ ಎಲ್ಲಾ ವರ್ಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ಜನಪರ ನೀಡಲಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗ ಸೃಷ್ಟಿ
ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ವರ್ಗದ ಜನರ ಜೀವನಮಟ್ಟ ಸುಧಾರಣೆಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಬಂಡವಾಳ ಸೃಷ್ಟಿ ಹಾಗೂ ಉದ್ಯೋಗ ಸೃಷ್ಠಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇಕ್‌ ಇನ್‌ ಇಂಡಿಯಾ, ಆತ್ಮ ನಿರ್ಬರ್‌ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದರಿಂದ 60 ಲಕ್ಷ ಹೊಸ ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತಿ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ.ರೈತರ ಉತ್ಪನ್ನಗಳಿಗೆ ಎಂದಿನಂತೆ ಉತ್ತೇಜನ ನೀಡಿದ್ದು, ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ (ಎಂ.ಎಸ್‌.ಪಿ) 2.37 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ.ಕಾವೇರಿ ನದಿ ಸೇರಿದಂತೆ 5 ನದಿಗಳ ಜೋಡಣೆಗೆ ಯೋಜನೆ ರೂಪಿಸುವ ಬಗ್ಗೆ ಘೋಷಿಸಿರುವುದು ಜನತೆಗೆ ನೀಡಿದ ಕೊಡುಗೆ ಆಗಿದೆ ಎಂದಿದ್ದಾರೆ.

ಸಹಕಾರಿ ಕ್ಷೇತ್ರಕ್ಕೆ ಆದ್ಯತೆ:
ಸಹಕಾರ ಸಂಘಗಳ ತೆರಿಗೆಯನ್ನು ಇಳಿಕೆ ಮಾಡುವುದರ ಜತೆಗೆ ಸಹಕಾರಿ ಕ್ಷೇತ್ರದ ಏಳ್ಗೆಗಾಗಿ ಬಜೆಟ್‌ನಲ್ಲಿ ಅನುದಾನವನ್ನು ಘೋಷಣೆ ಮಾಡಲಾಗಿದ್ದು ಇದೊಂದು ಸಹಕಾರ ಸ್ನೇಹಿ ಬಜೆಟ್‌ ಆಗಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ ಶೇ.18 ರಷ್ಟು ತೆರಿಗೆಯನ್ನು ಶೇ.15ಕ್ಕೆ ಇಳಿಕೆ ಮಾಡಲಾಗಿದೆ.1 ಕೋಟಿ ರೂ.ಗಿಂತ ಹೆಚ್ಚು ಮತ್ತು 10 ಕೋಟಿ ರೂ. ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್‌ ಚಾರ್ಜ್‌ ಅನ್ನು ಶೇ.12ರಿಂದ 7ಕ್ಕೆ ಇಳಿಕೆ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ಉಳಿವಿಗೆ ಶ್ರಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಬಜೆಟ್‌ ಇದಾಗಿದೆ. ಜನ ಸಾಮಾನ್ಯರ ಜೀವನ ಮಟ್ಟ ಸುಧಾರಿಸುವಂತಹ ಬಜೆಟ್‌ ನಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಯಾರಿಗೂ ಹೊರೆ ಆಗದ ರೀತಿಯಲ್ಲಿ ಬಜೆಟ್‌ ಮಂಡನೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ 48,000 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.ಇದೊಂದು ಜನಪರವಾದ ಅತ್ಯುತ್ತಮ ಬಜೆಟ್‌ ಆಗಿದೆ ಎಂದು ತಿಳಿಸಿದ್ದಾರೆ.

ಡಿಜಿಟಲ್‌ ಕಲಿಕೆಗೆ ಒತ್ತು: ಡಿಜಿಟಲ್‌ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್‌ ಇದಾಗಿದೆ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸಂತಸವ್ಯಕ್ತಪಡಿಸಿದ್ದಾರೆ.

ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ “ಒಂದು ತರಗತಿ, ಒಂದು ಟಿವಿ ಚಾನೆಲ್‌’ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಹುದು. ಇದು ಎನ್‌ಇಪಿ ಆಶಯಗಳಿಗೆ ತಕ್ಕಂತಿದೆ ಎಂದಿದ್ದಾರೆ.

ಮುಂದಿನ 25 ವರ್ಷಗಳ ಅಭಿವೃದ್ದಿಯ ನೀಲಿನಕ್ಷೆಯನ್ನು ವಿತ್ತ ಸಚಿವರು ನೀಡಿದ್ದಾರೆ. ಹೆದ್ದಾರಿ ಜಾಲವನ್ನು 25 ಸಾವಿರ ಕಿಲೋಮೀಟರ್‌ಗಳಷ್ಟು ವಿಸ್ತರಿಸುವುದು, ದೇಶದ 5 ನದಿಗಳನ್ನು ಜೋಡಿಸುವ ಯೋಜನೆಯನ್ನು ಅಂತಿಮಗೊಳಿಸಿರುವುದು, ನೈಸರ್ಗಿಕ ಕೃಷಿಗೆ ಒತ್ತು ನೀಡುವಂತಹ ಮಹತ್ವದ ಅಂಶಗಳನ್ನು ಆಯವ್ಯಯದಲ್ಲಿ ತಿಳಿಸಿದ್ದಾರೆ. ಜತೆಗೆ ಮಹಿಳಾ ಮತ್ತು ಮಕ್ಕಳ ಅಭ್ಯದಯಕ್ಕೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಆರ್ಥಿಕ ನೀತಿ ಸುಧಾರಿಸುವ ಬಜೆಟ್‌: ಸಚಿವ ಉಮೇಶ್‌ ಕತ್ತಿ
ಕೃಷಿಕರು, ಉದ್ಯಮಿದಾರರು ಮತ್ತು ಯುವಕರು ಸೇರಿದಂತೆ ಎಲ್ಲ ವರ್ಗದ ಜನರ ಏಳ್ಗೆಯ ಜತೆಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಪರಿಪೂರ್ಣ ಬಜೆಟ್‌ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ ಎಂದು ಸಚಿವ ಉಮೇಶ್‌ ಕತ್ತಿ ಬಣ್ಣಿಸಿದ್ದಾರೆ.

ಈ ಸಾಲಿನ ಬಜೆಟ್‌ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಪುಷ್ಠಿ ನೀಡುವ ರೀತಿಯಲ್ಲಿ ಇದೆ.ಒಂದು ದೇಶ ಒಂದು ನೋಂದಣಿ, ದೇಶದ ಪ್ರತೀ ಹಳ್ಳಿಗೆ ಆಪ್ಟಿಕಲ್‌ ಫೈಬರ್‌ ವ್ಯವಸ್ಥೆ ಸೇರಿದಂತೆ ಅನುಮ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ ಸರ್ವರ ಕಲ್ಯಾಣದ, ಸುಸ್ಥಿರ ಅಭಿವೃದ್ಧಿಯ ಬಜೆಟ್‌ ಆಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ಇ ವಿದ್ಯಾ ಕಾರ್ಯಕ್ರಮ “ಒನ್‌ ಕ್ಲಾಸ್‌ ಒನ್‌ ಟಿವಿ ಚಾನಲ್‌’ ಯೋಜನೆಯನ್ನು 12 ಚಾನಲ್‌ಗ‌ಳಿಂದ 200 ಚಾನಲ್‌ ಗಳಿಗೆ ವಿಸ್ತರಣೆ ಮಾಡುವ ನಿರ್ಧಾರ ತೆಗೆದು ಕೊಂಡಿರುವುದು ಸ್ವಾಗತಾರ್ಹವಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಮತ್ತು ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಮಕ್ಕಳು ಪಾಠ ಕೇಳಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

2022 -23ನೇ ಸಾಲಿನ ಬಜೆಟ್‌ ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುವ ಜನಪರ ಬಜೆಟ್‌ ಆಗಿದೆ ಎಂದು ಸಚಿವ ಎಂಟಿಬಿ ನಾಗರಾಜು ಹೇಳಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 130ಲಕ್ಷಕ್ಕೂ ಅಧಿಕ ಹಣವನ್ನು ನಿಗದಿಪಡಿಸಿರುವುದು ಅತ್ಯಂತ ಸ್ವಾಗತಾರ್ಹ.ಇದರಿಂದ ಕೊರೊನಾ ಪೂರ್ವ ಸ್ಥಿತಿಗೆ ಸಣ್ಣ ಕೈಗಾರಿಕಾ ವಲಯ ಮರಳಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next