Advertisement

ಏಕತ್ರವಾಗಿಸಿದ ಸಮಾನತೆಯ ಸಂಹಿತೆ

11:51 PM Feb 14, 2022 | Team Udayavani |

ಆಚಾರಃ ಪರಮೋ ಧರ್ಮ.. ಸದಾಚಾರವೇ ನಮ್ಮ ಧರ್ಮವೆಂದು ನಂಬಿದ, ಆಚರಿಸಿದ, ಅನುಸರಿಸಿದ ದೇಶ ನಮ್ಮದು. ನಿಯಮ ನಿಬಂಧನೆಗಳ ಚೌಕಟ್ಟಿನಲ್ಲಿ ಬದುಕನ್ನು ಸಹ್ಯವಾಗಿಸಿ ತನ್ಮೂಲಕ ಪರಮ ಗುರಿಯನ್ನು ಮುಟ್ಟುವ ಗುಣವಿಶೇಷ ನಮ್ಮ ಭಾರತದ್ದು. ಎಲ್ಲರನ್ನೂ ಎಲ್ಲವನ್ನೂ ತನ್ನೊಳಗೆ ಐಕ್ಯವಾಗಿಸಿಕೊಂಡು ಏಕಮುಖವಾಗುವ ಅನನ್ಯತೆಯನ್ನು ಕಲಿಸಿದ ಪ್ರಕೃತಿಯಿಂದ ಸ್ಪೂರ್ತಿ ಗೊಂಡ ಜೀವನಶೀಲತೆ ನಮ್ಮೆಲ್ಲರದು.
ಸತತ ಅಧ್ಯಯನ, ನಿರಂತರ ಪ್ರಯೋಗ ಶೀಲತೆ, ಪರ್ಯಾಪ್ತ ವಿಚಾರ ಮಂಡನೆ ಜತೆಗೆ ಆತ್ಯಂತಿಕ ವಿಧಿನಿಷೇಧದ ಮೇಳೈಸುವಿಕೆ ಯಾವುದೇ ಒಂದು ಸಿದ್ಧಾಂತದ ಪರಿಪೂರ್ಣ ಪರಿಕಲ್ಪನೆಯ ಹಿಂದಿರುವ ಪ್ರೇರಣೆ. ಸಮಾಜಕ್ಕೊ, ವಿಜ್ಞಾನಕ್ಕೊ, ಗಣಿತಕ್ಕೊ, ವೈದ್ಯಕೀಯ ಕ್ಷೇತ್ರಕ್ಕೊ ಅಥವಾ ಇನ್ನಿತರ ವಿಭಾಗಗಳಿಗೋ ಇದು ವಿಧಿತ.

Advertisement

ಯಾವುದೇ ಒಂದು ವ್ಯವಸ್ಥೆ ಆಕಾಶದಿಂದ ಪಕ್ಕನೆ ಉದುರಿ ಬಿದ್ದು ಆಚರಿಸಲ್ಪಡುವು ದಿಲ್ಲವಲ್ಲ. ಸುದೀರ್ಘ‌ ಕಾಲಕ್ರಮದಲ್ಲಿ ಸಾಗಿ ಬರುವಾಗ ಒಳಿತು- ಕೆಡುಕುಗಳ ಮಿಶ್ರಣದಲ್ಲಿ ಕೆಡುಕುಗಳನ್ನು ಕಡಿಮೆ ಮಾಡುತ್ತಾ ಬಂದು ಕೊನೆಗೆ ಜನಹಿತವನ್ನೇ ಲಕ್ಷ್ಯವಾಗಿಟ್ಟು, ಅತ್ಯಂತ ಪಕ್ವವಾದ ಅವಸ್ಥೆಗೆ ಆತುಕೊಳ್ಳುತ್ತೇವೆ. ಅದನ್ನೇ ನಾವು ಸುವ್ಯವಸ್ಥೆ ಎನ್ನುತ್ತೇವೆ. ಯಾವುದೋ ಒಂದು ರೋಗಕ್ಕೆ ಆ ಕಾಲದಲ್ಲಿ ಕಂಡುಹಿಡಿದ ಔಷಧ ಮುಂದೆ ಹತ್ತು ಹಲವು ಮಜಲುಗಳಲ್ಲಿ ಸಂಶೋಧನೆಗಳಿಗೆ ಒಳಪಟ್ಟು ಉನ್ನತ ಶ್ರೇಣಿಯ ಔಷಧವಾಗಿ ಬಳಸಲ್ಪಡುತ್ತದೆ. ಹಾಗೆಯೇ ಒಂದು ವ್ಯವಸ್ಥೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ ಎಂದರೆ ಅದರ ಹಿಂದೆ ಸುದೀರ್ಘ‌ವಾದ ಇತಿಹಾಸವಿದೆ, ಸಾವಿರಾರು ಬಾರಿ ಮೌಲ್ಯದ ನಿಕಷದಲ್ಲಿ ಮಿಂದೆದ್ದು ಬಂದಿದೆ. ಮತ್ತೆ ತಾನೆ ಅದು ಪರಂಪರೆ ಯಾಗಿ ಜನಮಾನಸ ಒಪ್ಪಿಕೊಳ್ಳುವುದು. ಹೌದು, ಪ್ರತಿಯೊಂದರಲ್ಲೂ ಶಿಸ್ತಿನ ಮಾದರಿಯನ್ನು, ವ್ಯವಸ್ಥಿತ ಶಿಸ್ತನ್ನು, ಶಿಸ್ತಿನ ವ್ಯವಸ್ಥೆಯನ್ನು ರೂಪುಗೊಳಿಸಬೇಕಾದರೆ ಅಲ್ಲಿ ಎಲ್ಲವನ್ನೂ ಅಳೆದು ತೂಗಿ ಸಂತುಲಿತ ಮಾನದಂಡದಲ್ಲಿ ನೇರ್ಪುಗೊಳಿಸಿರುತ್ತಾರೆ. ಒಬ್ಬೊಬ್ಬರ ಮಾನಸಿಕತೆಗನುಗುಣವಾಗಿ ದಿನಕ್ಕೊಂದು ವ್ಯವಸ್ಥೆಯನ್ನು ಸಿನಿಕತನದಿಂದ ಬದಲಾಯಿಸಲಾಗುವುದಿಲ್ಲ. ಪರಿಶುದ್ಧ ಪರಿಮಾಣದ ಮಾನಕೀಕರಣದ ಮಾನದಂಡದ ಮೂಸೆಯಲ್ಲಿ ಸಿದ್ಧವಾದ ಸ್ಥಾಪಿತ ವ್ಯವಸ್ಥೆಯನ್ನೇ ಪ್ರತಿಯೊಬ್ಬರೂ ಅನುಸರಿಸಬೇಕು, ಅನುಕರಿಸಬೇಕು ಮತ್ತು ಆಚರಿಸಬೇಕು.

ಅನೇಕತೆಯಲ್ಲಿ ಏಕತೆಯನ್ನು ಸಾರುವ ಹೆಗ್ಗಳಿಕೆ, ಆಚರಣೆಯಲ್ಲಿ ಅನುಷ್ಠಾನಗೊಳಿಸಿಕೊಂಡ ಏಕೈಕ ರಾಷ್ಟ್ರ ನಮ್ಮ ಭಾರತ. ಜಾತಿ, ಮತ, ಪಂಥ, ಭಾಷೆ, ವೇಷ, ಆಚಾರ, ವಿಚಾರ…ಹೀಗೆ ವಿವಿಧತೆಯಲ್ಲಿ, ವಿಭಿನ್ನತೆಯಲ್ಲಿ ವಿಶಿಷ್ಟವಾಗಿ ತೋರುವ ನಮ್ಮನ್ನು ಏಕಸೂತ್ರದಲ್ಲಿ ಕಟ್ಟಿ, ಸುಸೂತ್ರವಾಗಿ ಮುನ್ನಡೆಯುವಂತೆ ಮಾಡಿದ್ದು ಭಾರತೀಯತೆ ಎನ್ನುವ ದೇಶಾಭಿಮಾನ. ಶತಮಾನಗಳ ಕಷ್ಟ-ಸಂಕಷ್ಟಗಳ ಸಂಕೋಲೆಯಿಂದ ಹೊರಬಂದು ಇಂದು ಭವ್ಯ ಭಾರತ ಸಾಧ್ಯವಾಗುವಾಗಿನ ಈ ದಿವ್ಯಕ್ಷಣಕ್ಕೆ ಕಾರಣವಾದದ್ದು ಅದೇ ಏಕರೂಪತೆ. ಸರ್ವತ್ರವನ್ನು ಏಕತ್ರವಾಗಿಸುವಲ್ಲಿ ಸಮಾನತೆಯ ಸಂಹಿತೆ ಕೈಹಿಡಿದು ಮುನ್ನಡೆಸಿದ್ದು.

ಜೀವನಯಾತ್ರೆಯಲ್ಲಿ ನಮ್ಮ ಬದುಕಿನ ಪಥವನ್ನು ನಿರ್ದೇಶಿಸುವಲ್ಲಿ ಹಲವಾರು ವ್ಯಕ್ತಿ – ಶಕ್ತಿಗಳ ಪಾತ್ರ ಪ್ರಮುಖವಾಗಿದೆಯೆಂಬುದು ನಿಜ ತಾನೆ. ಜ್ಞಾನ-ವಿಜ್ಞಾನದ ಮುಖೇನ ಸಂಸ್ಕರಿಸಿ ಜಂತುವಾಗಿ ಬೆಳಕು ಕಂಡ ನಮ್ಮನ್ನು ಯೋಗ್ಯ-ಸಭ್ಯ ಮನುಷ್ಯನನ್ನಾಗಿ ರೂಪಿಸಿದ ಶ್ರೇಯ ಗುರುವಿನದ್ದು. ಭಾವ ಪ್ರಪಂಚವೆಲ್ಲ ಶೂನ್ಯದತ್ತ ದಾಪುಗಾಲಿಕ್ಕುತ್ತಾ ವ್ಯವಹಾರದ ಸಂಬಂಧ ಪ್ರಬಲವಾಗಿ ಗುರು-ಶಿಷ್ಯರ ನಡುವಿನ ಅನನ್ಯ ಬಂಧನದ ಹಾದಿ ಪಾಠಶಾಲೆಗಳಲ್ಲಿ ಹದಗೆಡುವ ಹಂತಕ್ಕೆ ತಲುಪಲು ನಾವೇ ಹೇತುವಾಗುತ್ತಿದ್ದೇವೆ. ಶಿಕ್ಷಕರ ಜ್ಞಾನ, ತಾಳ್ಮೆ, ಕೌಶಲ, ಸಮರ್ಪಣೆ, ಅನ್ವೇಷಣೆ, ಸಹಯೋಗ, ನಿರೂಪ, ನಿರ್ದೇಶ…ಗುಣಲಕ್ಷಣಗಳ ಪಾಲನೆ, ನಾವು ಅನುಸರಿಸಬೇಕಾದ ತುರ್ತು. ಹೊಸ ಪೀಳಿಗೆಗೆ ನವರಸದ ಜೀವನ ಸೌಂದರ್ಯವನ್ನು ಉಣಬಡಿಸುತ್ತಿದ್ದ, ರಾಷ್ಟ್ರ ನಿರ್ಮಾಣದ ಉನ್ನತ ಧ್ಯೇಯಕ್ಕೆ ಅಣಿಗೊಳಿಸುತ್ತಿದ್ದ ಗುರುಗಳನ್ನು ಮತ್ತು ಅವರ ಆದೇಶ-ನಿರ್ದೇಶಗಳನ್ನು ಧಿಕ್ಕರಿಸುತ್ತಿದ್ದೇವೆ. ಭಯ ಗೌರವಗಳಿಂದ ನೋಡುತ್ತಿದ್ದ ಶಿಕ್ಷಕರ ಮಾತು ಕೃತಿಗಳಿಗೆ ಅಗೌರವ ತೋರುತ್ತಾ ಅವಮಾನಿಸುವ ಹಂತಕ್ಕೆ ದಾಷ್ಟéì ಬೆಳೆದುನಿಂತಿದೆ.

ಮಾನವನ ಆಚಾರಕ್ಕೊಂದು ಆಕೃತಿ ನೀಡುವ, ಯಶಸ್ಸು, ಭೋಗ ಭಾಗ್ಯವನ್ನು ಕರುಣಿಸುವ, ಬದುಕಿನ ಹಾದಿಯಲ್ಲಿ ಅರಿವಿನ ಕಂದೀಲನ್ನು ಬೆಳಗುವ ತನ್ಮೂಲಕ ದಿವ್ಯತ್ವಕ್ಕೆ ಕೊಂಡೊಯ್ಯುವ ಏಕೈಕ ಸಾಧನವೆಂದರೆ ಅದು ವಿದ್ಯೆ. ಸಾಧಕನ ಸಾಧನಾ ಪಥದಲ್ಲಿ ಪರಾಪರ ವಿದ್ಯೆ ಸಿದ್ಧಿಸಬೇಕಾದರೆ ಆತ ಕೆಲವು ಅನಿವಾರ್ಯ ಅರ್ಹತೆ ಹೊಂದಿ ರಬೇಕು, ಕನಿಷ್ಠ ನಿಯಮ, ಸಂಯಮಗಳಿಗೆ ಬದ್ಧನಾಗಿರಬೇಕು ಮತ್ತು ವಿದ್ಯಾರ್ಜನೆಯನ್ನು ಅರ್ಚನೆಯನ್ನಾಗಿ ಪರಿಗಣಿಸಬೇಕು. ವಿದ್ಯಾಮಂದಿರಗಳು, ಅಲ್ಲಿರುವ ಶೈಕ್ಷಣಿಕ ಮಾನದಂಡಗಳು, ಶಿಸ್ತಿನ ಆಚಾರಕ್ಕೊಪ್ಪುವ ಕಟ್ಟುಪಾಡುಗಳು, ಸುವ್ಯವಸ್ಥೆಗೆ ಒದಗುವ ಉಪಕ್ರಮಗಳು, ಪ್ರಮಾಣಿತ ಬೋಧನ ಪರಿಕರಗಳು, ಪರಿಣತ ಮಾನವ ಸಂಪನ್ಮೂಲಗಳು ಪರಿಪುಷ್ಟವಾಗಿರಬೇಕು. ಜ್ಞಾನದ ಹಸಿವು ನೀಗಿಸುವಂತಿರಬೇಕು. ನಾವುಗಳು ಅಂತಹ ವಿಚಾರಗಳಲ್ಲಿ ಹಠ ಹಿಡಿಯಬೇಕು. ಉನ್ನತ ಗುಣಮಟ್ಟದ ಶಿಕ್ಷಣವನ್ನು ನಮ್ಮ ಮಕ್ಕಳು ಪಡೆಯುವ ಹಾಗೆ ನೋಡಿಕೊಳ್ಳಬೇಕು. ಬದಲಾಗಿ ಶಿಸ್ತುಬದ್ಧ ಏಕತಾನತೆಯಲ್ಲಿ ಗುಲ್ಲೆಬ್ಬಿಸಬಾರದು.

Advertisement

ಮಕ್ಕಳ ಶಿಸ್ತು, ಸಂಯಮ,ಪಠ್ಯಕ್ರಮ, ಬೋಧನೆ, ಪಠ್ಯೇತರ ಚಟುವಟಿಕೆ, ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಗೆ ಸಜ್ಜುಗೊಳಿಸುವಿಕೆ, ಉನ್ನತ ವ್ಯಾಸಂಗಕ್ಕಾಗಿನ ಅರ್ಹತೆ ಗಳಿಸುವಿಕೆ, ತಾವೇ ಪೋಷಕರಾಗಿ ಮಕ್ಕಳ ಸರ್ವಾಂಗೀಣ ಮೇಲುಸ್ತುವಾರಿ…ಹೀಗೆ ಹತ್ತಾರು ಜವಾಬ್ದಾರಿಯನ್ನು ಹೊತ್ತು ಸಮಾಜಕ್ಕಾಗಿ ದುಡಿಯುವ, ದುಡಿದು ದಣಿಯುವ ಶಿಕ್ಷಕ ವೃಂದ, ಅಡಳಿತ ಮಂಡಳಿ, ಖಾಸಗಿ ಮತ್ತು ಸರಕಾರಿ ವ್ಯವಸ್ಥೆ ನಿಜಕ್ಕೂ ಅಭಿನಂದನಾರ್ಹ. ನಾವು ಎಂದೆಂದೂ ಇವರೆಲ್ಲರಿಗೆ ಋಣಿಯಾಗಿರಬೇಕು. ಸಾಧ್ಯವಾದರೆ ಅವರ ಬೆನ್ನುತಟ್ಟಿ ಬೆಂಬಲಿಸಿ ಸ್ಫೂರ್ತಿ ತುಂಬಿ ಇನ್ನೂ ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸಬೇಕು.

ನಾಗರಿಕತೆಯ ವಿಕಾಸದೊಂದಿಗೆ ಹೊಸ ವಿನ್ಯಾಸ ಗಳು ಬದುಕಿನ ಪ್ರತೀ ಹೆಜ್ಜೆಯಲ್ಲೂ ಗೋಚರವಾಗುತ್ತಾ ಅದನ್ನೇ ರೂಢಿಯಲ್ಲಿ ಬಳಸುತ್ತಾ ಮುಂದೆ ಪರಿ ಪಕ್ವಗೊಂಡು ಸತ್ಸಂಪ್ರದಾಯದ ಬೀಜವಾಗಿ ಅದೇ ಸಂಸ್ಕೃತಿ ಎಂಬ ನಾಮರೂಪದ ಹೆಮ್ಮರವಾಗಿ ಬೆಳೆದು ಸಮಸ್ತ ಭಾರತೀಯರಿಗೆ ನೆರಳಾಯಿತು. ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಂತೆ ಮೃದು. ಮೆತ್ತನೆಯ ಚಿತ್ತಭಿತ್ತಿಯಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತಿ ಶ್ರೇಷ್ಠ ಫ‌ಲ ಪಡೆಯಬೇಕು. ಉದಾರತೆ, ಸಮಾನತೆ, ಏಕತೆ, ಸಮಗ್ರತೆ, ಭಾವೈಕ್ಯತೆ, ಸಹೋದರತೆ, ಸೌಶೀಲ್ಯತೆ… ಹೀಗೆ ಉದಾತ್ತ ಗುಣಗಳನ್ನು ನಮ್ಮ ಮಕ್ಕಳ ನೆತ್ತರ ಕಣಕಣಗಳಲ್ಲೂ ಸು#ರಿಸುವಂತೆ ತ್ರಿಕರಣಶುದ್ಧರಾಗಿ ಪ್ರವೃತ್ತರಾಗಬೇಕು. ಯುವಪೀಳಿಗೆಯ ಅಸಾಧಾರಣ ಶಕ್ತಿ ಸಾಮರ್ಥ್ಯವನ್ನು ಹರಿದು ಹಂಚಿ ಹೋಗಲು ಬಿಡಬಾರದು. ಅದನ್ನು ಗುರಿಯೆಡೆಗೆ ಅಖಂಡವಾಗಿ ಪ್ರವಹಿಸುವಂತೆ ನೋಡಿ ಕೊಳ್ಳಬೇಕು. ಯುವಶಕ್ತಿಯನ್ನು ವೈಯಕ್ತಿಕ ಹಿತಾಸಕ್ತಿಗೆ ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ. ಇಂತಹ ಪಾತಕ ಪ್ರವೃತ್ತಿ ಆ ವಿದ್ಯಾರ್ಥಿಗಳ ಸುಂದರ ಬಾಳಿನಲ್ಲಿ ಆಡುವ ಚೆಲ್ಲಾಟ ಮಾತ್ರವಲ್ಲ ಭವಿಷ್ಯದ ಬೆಳವಣಿಗೆಗೆ ಕೊಡಲಿ ಏಟು.

ಪ್ರಶಾಂತ ವಾತಾವರಣದಲ್ಲಿ ಆಗಾಗ ತಲ್ಲಣ, ಆಂದೋಲನ ಸಹಜ. ಆದರೆ ಅದು ನಮ್ಮ ಸಂಕುಚಿತ ಮನೋಭೂಮಿಕೆಯಲ್ಲಿ ವಿಷವೃಕ್ಷವಾಗಬಾರದು. ಮುಂದಿನ ತಲೆಮಾರಿನ ಕಂದಮ್ಮಗಳ ಹಾದಿಗೆ ಮುಳ್ಳಾಗಬಾರದು. ಶ್ರೇಷ್ಠವಾದ ಸಿದ್ಧಾಂತಗಳ ಅಡಿಪಾಯದಲ್ಲಿ ಕಟ್ಟಲ್ಪಟ್ಟ ನಮ್ಮ ಶೈಕ್ಷಣಿಕ ಮೌಲ್ಯಗಳು ಕುತ್ಸಿತ ಕುಯುಕ್ತಿಗಳಿಗೆ ಬಲಿಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹೊಸ ಜನಾಂಗವು ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ನಮ್ಮ ಉತ್ತರದಾಯಿತ್ವವಿದೆ. ಪ್ರತಿಯೊಬ್ಬರು ಅಂತಃಶೋಧ ಮಾಡಿ ಕೊಳ್ಳಬೇಕಾದ ಜರೂರು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

– ಡಾ| ಬುಡ್ನಾರು
ವಿನಯಚಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next