Advertisement

8 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ

05:00 PM Feb 09, 2020 | Team Udayavani |

ಗಜೇಂದ್ರಗಡ: ಬಯಲುಸೀಮೆ ನಾಡಿನ ಜನತೆಗೆ ಜೀವಜಲವಾಗಬೇಕಿದ್ದ ಬಹು ನಿರೀಕ್ಷಿತ ಜಿಗಳೂರ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭವಾಗಿ ಎಂಟು ವರ್ಷ ಕಳೆದರು ಇನ್ನೂ ಪೂರ್ಣಗೊಂಡಿಲ್ಲ. ರೋಣ ತಾಲೂಕಿನ ಜಿಗಳೂರ ಗ್ರಾಮ ಬಳಿ 310 ಎಕರೆ ವಿಸ್ತೀರ್ಣ ಜಮೀನಿನಲ್ಲಿ 115 ಕೋಟಿ ರೂ. ಅಧಿಕ ವೆಚ್ಚದಲ್ಲಿ ಕೇಂದ್ರ ಪರಿಷ್ಕೃತ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ.

Advertisement

ರೋಣ, ಗಜೇಂದ್ರಗಡ, ನರೇಗಲ್‌ ಸೇರಿ ಸುತ್ತಲಿನ 7 ಹಳ್ಳಿಗಳಿಗೆ ಮಲಪ್ರಭಾ ನದಿ ಬಲದಂಡೆ ಕಾಲುವೆಯಿಂದ ನೀರು ಪೂರೈಸುವ ಶೇಖರಣಾ ಜಲ ಸಂಗ್ರಹಗಾರ ಕಾಮಗಾರಿ ಇದಾಗಿದ್ದು, ಇನ್ನೂ ಪ್ರಗತಿ ಹಂತದಲ್ಲಿದೆ. ಗಜೇಂದ್ರಗಡ ಮತ್ತು ರೋಣ ತಾಲೂಕಿನ ಜನತೆಗೆ ಶಾಶ್ವತ ಕುಡಿಯುವ ನೀರು ಸಿಗಬೇಕೆಂಬ ಉದ್ದೇಶದಿಂದ ರೋಣ ಭಾಗದ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಸರಕಾರ ನಿಗದಿಪಡಿಸಿದ ದರಕ್ಕೆ ಒಪ್ಪಿಗೆ ನೀಡಿ ಜಮೀನು ನೀಡಿದ್ದಾರೆ. ಆದರೆ ರೈತರು ಯಾವ ಉದ್ದೇಶಕ್ಕಾಗಿ ಜಮೀನು ನೀಡಿದ್ದರೋ ಅದು ಈವರೆಗೂ ಸಾಕಾರಗೊಂಡಿಲ್ಲ.

ಶುದ್ಧ ನೀರು ಪೂರೈಕೆ: ಯೋಜನೆಗೆ ಒಳಪಡುವ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಸವದತ್ತಿ ತಾಲೂಕಿನ ನವಿಲು ತೀರ್ಥ ಅಣೆಕಟ್ಟಿನಿಂದ ನರಗುಂದ ಮಾರ್ಗವಾಗಿ ಹೊನ್ನಾಪುರ ಗ್ರಾಮ ಮೂಲಕ ರೋಣ ತಾಲೂಕು ಪ್ರವೇಶಿಸುವ ಮಲಪ್ರಭಾ ಮುಖ್ಯ ನಾಲೆ ಕದಡಿ, ಬೆಳವಣಿಕಿ, ಸವಡಿ, ರೋಣ ಮೂಲಕ 310 ಎಕರೆ ವಿಸ್ತಿರ್ಣದ ಬೃಹತ್‌ ಕೆರೆ ಸೇರಲಿದೆ. ಬಳಿಕ ನೀರನ್ನು ಶುದ್ಧಿಕರಿಸಿ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುವುದು. ಈಗಾಗಲೇ ಗಜೇಂದ್ರಗಡ ಪಟ್ಟಣದಲ್ಲಿ 5 ಲಕ್ಷ ಲೀ. ಸಾಮರ್ಥ್ಯದ 2 ಓವರ್‌ಹೆಡ್‌ ಟ್ಯಾಂಕ್‌ಗಳು, ರೋಣದಲ್ಲಿ 10 ಲಕ್ಷ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕಗಳು ಮತ್ತು ನರೇಗಲ್‌ನಲ್ಲಿ ಎರಡು ಜಲ ಸಂಗ್ರಹಗಾರಗಳನ್ನು ನಿರ್ಮಾಣ ಮಾಡಲಾಗಿದೆ.

ಕಾಲಮಿತಿ ತಪ್ಪಿದ ಯೋಜನೆ : ಕಳೆದ ನಾಲ್ಕೈದು ವರ್ಷಗಳಿಂದ ಮಳೆಯ ಪ್ರಮಾಣ ಈ ಭಾಗದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಕುಡಿಯುವ ನೀರಿನ ಸಮಸ್ಯೆ ಬರಗಾಲದ ಸಂದರ್ಭದಲ್ಲಿ ತೀವೃತರವಾಗಿ ಎದುರಿಸಲಾಗುತ್ತಿದೆ. ಇದನ್ನು ಹೋಗಲಾಡಿಸಿ ಬರದ ನಾಡಿಗೆ ಶಾಶ್ವತ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಆರಂಭವಾಗಿ ಹಲವು ವರ್ಷಗಳು ಗತಿಸಿದರೂ ಯೋಜನೆ ಮುಖ್ಯ ಘಟ್ಟವಾದ ನೀರು ಶುದ್ಧೀಕರಣ, ಪಂಪಿಂಗ್‌ ಸೇರಿ ಹಲವು ಯಂತ್ರಗಳ ಅಳವಡಿಕೆ ಕಾರ್ಯ ಇನ್ನು ಮುಗಿದಿಲ್ಲ.

ಯೋಜನೆ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಾಲಮಿತಿ ನಿಗದಿಗೊಳಿಸಿಲ್ಲ. ಇದರಿಂದಾಗಿ ತಮಗೆ ತೋಚಿದಂತೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಪ್ರಸಕ್ತ ವರ್ಷ ಕುಡಿಯುವ ನೀರಿನ ಸಮಸ್ಯೆ ತೀವೃತರವಾಗಿ ಉಲ್ಬಣಿಸುವುದರಲ್ಲಿ ಸಂದೇಹವೇ ಇಲ್ಲ. ನೂರಾರು ಕೋಟಿ ವೆಚ್ಚದ ಬೃಹತ್‌ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಯೋಜನೆಗೆ ಕೋಟ್ಯಂತರ ಹಣ ವಿನಿಯೋಗಿಸಲಾಗಿದೆ. ಕಳಪೆಯಿಂದ ಕೂಡಿದೆ ಎಂದು ಜನ ಆರೋಪಿಸುತ್ತಿದ್ದಾರೆ.

Advertisement

ರೋಣ ತಾಲೂಕಿನ ಜಿಗಳೂರ ಗ್ರಾಮ ಬಳಿಯ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕೆರೆ ನಿರ್ಮಾಣ ಕಾಮಗಾರಿಗೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಯೋಜನೆ ವ್ಯಾಪ್ತಿಯ ಪುರಸಭೆಗಳಿಂದ 2.5 ಕೋಟಿ ಹಣ ನೀಡಲಾಗಿದೆ. ನಿರ್ಮಾಣ ಕಾರ್ಯ ವಿಳಂಬ ಜೊತೆ ಕಳಪೆ ಕಾಮಗಾರಿ ನಡೆದ ಬಗ್ಗೆ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಾಮಗಾರಿ ಸ್ಥಳಕ್ಕೆ ಶೀಘ್ರದಲ್ಲೆ ಭೇಟಿ ನೀಡಲಾಗುವುದು.  –ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next