Advertisement

ಕಾರ್ಯರೂಪಕ್ಕೆ ಬಾರದ ಸುಸಜ್ಜಿತ ಟ್ರಕ್‌ ಟರ್ಮಿನಲ್‌

12:51 PM Dec 03, 2017 | Team Udayavani |

ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ಟ್ರಕ್‌ ಟರ್ಮಿನಲ್‌ ಬಹುಕಾಲದ ಬೇಡಿಕೆ. ಈ ನಿಟ್ಟಿನಲ್ಲಿ ಒಂದಷ್ಟು ಪ್ರಸ್ತಾವನೆಗಳು ರೂಪುಗೊಂಡಿದ್ದರೂ ಇನ್ನೂ ಸಾಕಾರಗೊಂಡಿಲ್ಲ. ಟ್ರಕ್‌ ಟರ್ಮಿನಲ್‌ ಕೊರತೆಯಿಂದ ನಗರದ ರಸ್ತೆಗಳೇ ಲಾರಿ ನಿಲುಗಡೆ ತಾಣವಾಗಿ ಪರಿಣಮಿಸಿದ್ದು, ಸಂಚಾರ ಸಮಸ್ಯೆಗೆ ಕಾರಣವಾಗಿದೆ.

Advertisement

ಮಂಗಳೂರು ಪ್ರಮುಖ ವಾಣಿಜ್ಯ ಕೇಂದ್ರ. ಜಿಲ್ಲೆಯಲ್ಲಿ ನಿತ್ಯ ಸುಮಾರು 1800 ಟ್ಯಾಂಕರ್‌ಗಳು ಓಡಾಟ ನಡೆಸುತ್ತಿವೆ. ಎಂಆರ್‌ಪಿಎಲ್‌, ಬಿಎಎಸ್‌ ಎಫ್‌, ಎಚ್‌ಪಿಸಿಎಲ್‌, ಎಂಸಿಎಫ್, ಬಿಪಿಸಿಎಲ್‌, ಇಂಡಿಯಲ್‌ ಆಯಿಲ್‌ ಕಾರ್ಪೊರೇಶನ್‌, ಎಸ್‌ಇಝೆಡ್‌ ಸಹಿತ ಬೃಹತ್‌ ಉದ್ದಿಮೆಗಳಿವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿವೆ. ರಾಜ್ಯದ ಏಕೈಕ ಮತ್ತು ಭಾರತ ಪ್ರಮುಖ ನವ ಮಂಗಳೂರು ಬಂದರು ಇದೆ. ನಾಲ್ಕು ಕೈಗಾರಿಕ ಪ್ರದೇಶಗಳಿವೆ. ಮಂಗಳೂರು ಹಳೇ ಬಂದರು ಜಿಲ್ಲೆಯ ರಖಂ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ ಗಳಲ್ಲದೆ ದಿನವೊಂದಕ್ಕೆ ಸಾವಿರಾರು ಸರಕು ಸಾಗಾಟ ಲಾರಿಗಳು ಮಂಗಳೂರು ನಗರಕ್ಕೆ ಆಗಮಿಸುತ್ತಿವೆ. ಅವೆಲ್ಲ ಸರಕು ಖಾಲಿ ಮಾಡಿದ ಬಳಿಕ ಮತ್ತೆ ಲೋಡ್‌ ಮಾಡಿಸಿಕೊಳ್ಳಲು ಒಂದೆರಡು ದಿನ ಕಾಯಬೇಕಾಗುತ್ತದೆ. ಇದಲ್ಲದೆ ಮಂಗಳೂರು ಮೂಲಕ ಹೊರರಾಜ್ಯಗಳಿಗೆ ಸಾಗುವ ಲಾರಿಗಳು ತಂಗಿದ, ಬಳಿಕ ಸಂಚಾರ ಆರಂಭಿಸುತ್ತವೆ. ಸರಿಯಾದ ಹಾಗೂ ನಿರ್ದಿಷ್ಟ ಜಾಗವಿಲ್ಲದೆ ರಸ್ತೆ ಬದಿಗಳಲ್ಲೇ ಲಾರಿಗಳನ್ನು ನಿಲ್ಲಿಸಬೇಕಾಗುತ್ತದೆ.

ಸಂಚಾರಕ್ಕೆ ಅಡ್ಡಿ
ಲಾರಿ, ಟ್ಯಾಂಕರ್‌ಗಳನ್ನು ರಸ್ತೆ ಬದಿಯಲ್ಲೇ ನಿಲುಗಡೆ ಮಾಡುವುದರಿಂದ ಹಲವು ಸಮಸ್ಯೆಗಳಾಗುತ್ತಿವೆ. ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಹೆದ್ದಾರಿ ಗಳಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಆಗುತ್ತಿದೆ. ರಾತ್ರಿ ಹೊತ್ತು ಅಪಘಾತಗಳಿಗೂ ಕಾರಣವಾಗುತ್ತವೆ. ಆರೋಗ್ಯ ಮತ್ತು ಶುಚಿತ್ವ ಸಮಸ್ಯೆಗಳೂ ತಲೆದೋರುತ್ತವೆ. ಚಾಲಕರು, ನಿರ್ವಾಹಕರು ಲಾರಿಗಳ ಪಕ್ಕದಲ್ಲೇ ಅಡುಗೆ ಮಾಡಿಕೊಳ್ಳುತ್ತಾರೆ. ರಸ್ತೆ ಬದಿಗಳೇ ಬಯಲು ಶೌಚಾಲಯಗಳಾಗಿ ಮಾರ್ಪಡುತ್ತವೆ. ಚಾಲಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ಜಾಗವಿಲ್ಲದೆ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ, ಕಳ್ಳತನ – ದರೋಡೆಗಳಿಗೂ ಆಸ್ಪದವಾಗುತ್ತಿದೆ.

ಪ್ರಸ್ತಾವನೆಯಲ್ಲೇ ಉಳಿದ ಯೋಜನೆ
ಮಂಗಳೂರು ನಗರ ವ್ಯಾಪ್ತಿ ಮತ್ತು ಹೊರಭಾಗದಲ್ಲಿ ಟ್ರಕ್‌ ಟರ್ಮಿನಲ್‌ಗ‌ಳ ನಿರ್ಮಾಣ ಪ್ರಸ್ತಾವನೆ ರೂಪಿಸಿ ದಶಕಗಳೇ
ಕಳೆದಿವೆ. ಮಂಗಳೂರಿನಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣದ ಪ್ರಸ್ತಾವನೆಗೆ ಜಿಲ್ಲಾಡಳಿತ ರೂಪಿಸಿಸಿದ್ದ ಸಮಿತಿ 2003ರಲ್ಲಿ ಸುರತ್ಕಲ್‌ ಭಾಗದಲ್ಲಿ ದೊಡ್ಡ, ತೊಕ್ಕೊಟ್ಟು ಮತ್ತು ಆಡ್ಯಾರ್‌ನಲ್ಲಿ ಸಣ್ಣ ಟ್ರಕ್‌ ಟರ್ಮಿನಲ್‌ಗಳನ್ನು ನಿರ್ಮಿಸಲು ಸಲಹೆ ಮಾಡಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕುಳಾಯಿ ಬಳಿ 35 ಎಕರೆ ಜಾಗದಲ್ಲಿ ಟ್ರಕ್‌ ಟರ್ಮಿನಲ್‌ ಪ್ರಸ್ತಾವನೆಯನ್ನು ರೂಪಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಯಾವುದೇ ಪ್ರಗತಿ ಕಾಣದೆ ಮೂಲೆ ಸೇರಿತು. ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಂಗಳೂರು ನಗರದ 2 ಕಡೆಗಳಲ್ಲಿ ಹಾಗೂ ಹೊರಪ್ರದೇಶದಲ್ಲಿ ಕನಿಷ್ಠ 2 ಟ್ರಕ್‌ ಟರ್ಮಿನಲ್‌ಗ‌ಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಮಾಡಲಾಯಿತು. ಹೊರವಲಯದ ಟ್ರಕ್‌ ಟರ್ಮಿನಲ್‌ಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಸಮೀಪ ಗೋಳಿತೊಟ್ಟಿನಲ್ಲಿ ಸ್ಥಳ ಗುರುತಿಸಲಾಗಿದೆ. ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿ ಕನಿಷ್ಠ ಎಕ್ರೆ 2 ಜಾಗ ಗುರುತು ಮಾಡಿ ಲಾರಿಗಳ ನಿಲುಗಡೆಗೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಬೈಕಂಪಾಡಿಯ ಎಪಿ ಎಂಸಿ ಪ್ರಾಂಗಣವನ್ನು ಟ್ರರ್ಕ್‌ ಟರ್ಮಿನಲ್‌ ಆಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಮಾಡಲಾಯಿತು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ದೇವರಾಜ ಟ್ರಕ್‌ ಟರ್ಮಿನಲ್‌ ಪ್ರಾಧಿಕಾರದ ಆಡಳಿತ ನಿರ್ದೇಶಕರ ಉಪಸ್ಥಿತಿಯೊಂದಿಗೆ ಸಭೆ ನಡೆದು ಚರ್ಚೆ ಮಾಡಲಾಗಿತ್ತು. ಆದರೆ ಇಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತೀವ್ರ ವಿರೋಧ ವ್ಯಕ್ತಪಡಿಸಿದೆ.

ನವಮಂಗಳೂರು ಬಂದರಿಗೆ ಬರುವ ಲಾರಿಗಳ ಆವಶ್ಯಕತೆಗಳನ್ನು ಪರಿಗಣಿಸಿ ಎನ್‌ಎಂಪಿಟಿಯು ಬೈಕಂಪಾಡಿಯಲ್ಲಿ ಬಂದರಿಗೆ ಸೇರಿದ ಜಾಗದಲ್ಲಿ ಒಂದು ಟ್ರಕ್‌ ಟರ್ಮಿನಲ್‌ನ್ನು ಕೆಲವು ವರ್ಷಗಳ ಹಿಂದೆ ಸ್ಥಾಪಿಸಿದೆ. ಇದರಲ್ಲಿ 600ಕ್ಕೂ ಅಧಿಕ ಲಾರಿ ನಿಲ್ಲಿಸಲು ಸ್ಥಳಾವಕಾಶವಿದೆ. ಆದರೂ ಇಲ್ಲಿ ಲಾರಿಗಳ ದಟ್ಟಣೆ ಕಡಿಮೆ ಆಗಿಲ್ಲ.

Advertisement

ಟ್ರಕ್‌ ಟರ್ಮಿನಲ್‌ಗೆ ಸೂಕ್ತ ಪ್ರದೇಶಗಳು
ಮಂಗಳೂರು ಉತ್ತರ (ಸುರತ್ಕಲ್‌) ಭಾಗದಲ್ಲಿ ಬಹುತೇಕ ಉದ್ದಿಮೆಗಳು ಕೇಂದ್ರೀಕೃತಗೊಂಡಿದ್ದು, ಅಲ್ಲಿ ದೊಡ್ಡದಾದ
ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡುವ ಆವಶ್ಯಕತೆ ಇದೆ. ಕೇರಳ ಭಾಗದಿಂದ ಉತ್ತರ ಭಾರತದ ಕಡೆಗೆ ಹೋಗುವ
ಲಾರಿಗಳು ತಂಗಲು ತೊಕ್ಕೊಟ್ಟು ಅಥವಾ ತಲಪಾಡಿ ಪರಿಸರದಲ್ಲಿ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಕಡೆಯಿಂದ ಬರುವ ಲಾರಿಗಳು ತಂಗಲು ಅಡ್ಯಾರ್‌ನಲ್ಲಿ ಟ್ರಕ್‌ ಟರ್ಮಿನಲ್‌ಗ‌ಳನ್ನು ನಿರ್ಮಿಸ ಬಹುದಾಗಿದೆ. ಇವುಗಳನ್ನು ಸಾರಿಗೆ ಇಲಾಖೆಯಿಂದ ಅಥವಾ ಖಾಸಗಿ ಸಹ ಭಾಗಿತ್ವದಲ್ಲೂ ಸ್ಥಾಪಿಸಬಹುದಾಗಿದೆ

ಟ್ರಕ್‌ ಟರ್ಮಿನಲ್‌ ಸೌಲಭ್ಯಗಳು
ಟ್ರಕ್‌ ಟರ್ಮಿನಲ್‌ಗ‌ಳು ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಶೌಚಾಲಯ, ಪಾರ್ಕಿಂಗ್‌, ಚಾಲಕರಿಗೆ ವಿಶ್ರಾಂತಿ ಕೊಠಡಿ, ಉಪಾಹಾರ ಗೃಹಗಳು, ದೂರವಾಣಿ ಸೌಲಭ್ಯ, ಗೋದಾಮು, ಪೊಲೀಸ್‌ ಚೌಕಿ, ಪೆಟ್ರೋಲ್‌ ಬಂಕ್‌, ಸರ್ವಿಸ್‌ ಸೆಂಟರ್‌, ಫೈರ್‌ ಸ್ಟೇಷನ್‌, ಅಟೋಮೊಬೈಲ್‌ ಬಿಡಿಭಾಗಗಳ ಮಳಿಗೆ, ತೂಕ, ಆರೋಗ್ಯ ಸೌಲಭ್ಯಗಳಿರುತ್ತವೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next