Advertisement

ಸಿಂಚನ ಕಾವ್ಯ ರತ್ನ ಪುರಸ್ಕೃತ ಉಮೇಶ್‌ ಗೌತಮ್‌ ನಾಯಕ್‌

04:03 PM Jul 07, 2017 | Team Udayavani |

ಅಷ್ಟಾವಧಾನಿ ಮಾತ್ರ ಅಲ್ಲದೆ ಬಹುಮುಖೀ ಪ್ರತಿಭೆಯ ಆಗರವಾಗಿರುವ ಉಮೇಶ್‌ ಗೌತಮ್‌ ನಾಯಕರ ವ್ಯಕ್ತಿತ್ವ ಕುತೂಹಲಕಾರಿ, ಪ್ರೇರಣಾದಾಯಿ. ಇವರಿಗೆ ಮಂಗಳೂರಿನ ರಥಬೀದಿಯ ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಅಂಗಸಂಸ್ಥೆ ಸಿಂಚನ ಸೇವಾ ಸಂಸ್ಥೆ ಕೊಡಮಾಡುವ “ಸಿಂಚನ ಕಾವ್ಯ ರತ್ನ – 2017′ ಗೌರವ ಪ್ರಶಸ್ತಿ ಒಲಿದಿದೆ. ಜುಲೈ 9ರ ಪೂರ್ವಾಹ್ನ ಮಂಗಳೂರಿನ ವಿ.ಟಿ. ರಸ್ತೆಯ ನಳಂದಾ ಶಾಲೆಯ ಸಭಾಂಗಣದಲ್ಲಿ ನಡೆಯುವ “ಸಿಂಚನೋತ್ಸವ – 2017′ ಕಾರ್ಯಕ್ರಮದಲ್ಲಿ ರಾಜ್ಯ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್‌ ಡಾ| ದೇವದಾಸ್‌ ಪೈ, ಕರ್ನಾಟಕ ರಾಜ್ಯ ಕೊಂಕಣಿ ಭಾಷಾ ಮಂಡಳದ ಉಪಾಧ್ಯಕ್ಷ ಎಂ. ಆರ್‌. ಕಾಮತ್‌, ಮಂಗಳೂರು ವಿ.ವಿ. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ| ಜಯಂತ್‌ ನಾಯಕ್‌ ಸಹಿತ ಹಲವು ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Advertisement

59 ವರ್ಷ ವಯಸ್ಸಿನ ಉಮೇಶ್‌ ಗೌತಮ್‌ ನಾಯಕ್‌ ಕಾರ್ಕಳ ನಿವಾಸಿ. ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ವಿದ್ಯಾಲಯದ ನಿವೃತ್ತ ಅಧ್ಯಾಪಕರಾಗಿರುವ ಇವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ 39ನೇ ವಯಸ್ಸಿನಲ್ಲಿ ಶತಾವಧಾನಿ ಡಾ| ಆರ್‌. ಗಣೇಶರ ಮಾರ್ಗದರ್ಶನದಲ್ಲಿ ಅವಧಾನ ಕ್ಷೇತ್ರ ಪ್ರವೇಶಿಸಿದರು. ಕನ್ನಡ ಅವಧಾನ ನಡೆಸಿ, ಅನಂತರ ಹಿಂದಿ ಭಾಷೆಯ ಅವಧಾನ ಗೈದು, ತದನಂತರ ವೃಂದಾವನಸ್ಥ ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸುಧೀಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದದಿಂದ ಕೊಂಕಣಿಯಲ್ಲಿ ಅವಧಾನ ನಡೆಸಿ ತ್ರಿಭಾಷಾ ಅವಧಾನಿ ಎಂಬ ಮನ್ನಣೆಗೆ ಪಾತ್ರರಾದರು. ಇವರು ಕೊಂಕಣಿಯ ಏಕೈಕ ಅವಧಾನಿಯಾದರೆ, ಹಿಂದಿಯ ವಿರಳ ಅವಧಾನಿಗಳಲ್ಲಿ ಇವರೋರ್ವರು. ಈ ತನಕ ಮೂರು ಭಾಷೆಗಳಲ್ಲಿ 101 ಅವಧಾನ ಮಾಡಿದ್ದಾರೆ, ಅವಧಾನಗಳಲ್ಲಿ ಸಂಗೀತವನ್ನೂ ಬಳಸಿ ಹೊಸ ಪ್ರಯೋಗ ಮಾಡಿ ಯಶ ಸಾಧಿಸಿರುವುದು ಇವರ ಹೆಚ್ಚುಗಾರಿಕೆ.

ಇನ್ನು ಕಾವ್ಯ ಚಿತ್ರಗೀತೆ ನರ್ತನ ಎಂಬ ಕಾವ್ಯ – ಚಿತ್ರರಚನೆ, ಭರತನಾಟ್ಯ, ಯಕ್ಷ ನರ್ತನ ಒಳಗೊಂಡ ವಿಶಿಷ್ಟ ಅಶು ಕಾರ್ಯಕ್ರಮಗಳನ್ನು ಕನ್ನಡ, ಹಿಂದಿ ಮತ್ತು ಕೊಂಕಣಿ ಭಾಷೆಗಳಲ್ಲಿ ನಡೆಸಿದ್ದಾರೆ. “ನವಭಾವಸುಮ’ ಇವರ ಪ್ರಕಟಿತ ಕವನ ಸಂಕಲನ. “ಶ್ರೀ ಶ್ರೀನಿವಾಸ ಕಲ್ಯಾಣ’ – ಇವರ ಪಿರಿಯಕ್ಕನ ಛಂದಸ್ಸಿನ ಕೊಂಕಣಿ ಕಾವ್ಯ. ಪತ್ರಿಕೆ – ದೂರದರ್ಶನ – ಕವಿಗೋಷ್ಠಿಯಲ್ಲಿ ಕಟ್ಟಿದ ಹಲವಾರು, ಪ್ರಕಟಿತ ಕತೆ-ಕವನಗಳು ಅಸಂಖ್ಯಾತ. 26 ನಾಟಕಗಳ ರಚನೆ – ನಿರ್ದೇಶನ – ಅಭಿನಯ, ಆಕಾಶವಾಣಿ ಭದ್ರಾವತಿಯ ನಾಟಕ ಕಲಾವಿದ, ಕರ್ಣಾಟಕ-ಹಿಂದೂಸ್ತಾನಿ ಸಂಗೀತಗಳ ಅಧ್ಯಯನ-ಅಧ್ಯಾಪನ, ಹಲವು ಕೀರ್ತನೆಗಳ ರಚನೆ, ತಮ್ಮ “”ಸುನಿನಾದ ಕಲಾ ಸದನ” ಸಂಗೀತ ಶಾಲೆಯ ಮೂಲಕ ಕಲಾ ಪೋಷಕರ ಸಮ್ಮಾನ, ಹಲವು ಭಕ್ತಿಗೀತೆಗಳ ಕ್ಯಾಸೆಟ್‌ – ಸಿಡಿಗಳಿಗೆ ಸಾಹಿತ್ಯ – ಸಂಗೀತ, ಟಿ.ವಿ. ಧಾರಾವಾಹಿ, ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ -ಹಿನ್ನೆಲೆ ಗಾಯನ, ಹಲವೆಡೆ ಗಮಕ ಕಲೆಯ ಮೂಲಕ ವಾಚನ-ವ್ಯಾಖ್ಯಾನ, 70ಕ್ಕೂ ಅಧಿಕ ಹರಿಕೀರ್ತನೆ, ಸಾಹಿತ್ಯ – ಸಂಗೀತದ ಕಮ್ಮಟ ಪ್ರಾತ್ಯಕ್ಷಿಕೆಗಳಲ್ಲಿ ಉಪನ್ಯಾಸ ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಕಲಾ ಸೇವಾ ಕೈಂಕರ್ಯ ಕೈಗೊಳ್ಳುತ್ತಿದ್ದಾರೆ.

ಇವರು ಸದಾ ಅಧ್ಯಯನಶೀಲೆಯಾಗಿದ್ದು, ಹಲವಾರು ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದಾರೆ. ಮೇಲಿನ ತನ್ನ ಸೇವೆಯ ಮೂಲಕ ಅನಂತ ಕಲಾ-ಶಿಕ್ಷಣಾರ್ಥಿ-ರಸಿಕರಿಗೆ ಸವಿಜ್ಞಾನದ ಸುಧಾರಸ ಉಣಬಡಿಸಿ ಕೃತಕೃತ್ಯರಾಗಿದ್ದಾರೆ. ಇವರ ವ್ಯಾಖ್ಯಾನಿಸುವ ಪರಿ, ನಿರೂಪಣಾ ಶೈಲಿ ಅಮಾನ್ಯವಾದುದು.

ಇವರ ಅಗಾಧ ಪ್ರತಿಭೆ/ಸಾಧನೆಗೆ, “ಅವಧಾನ ಶ್ರೇಷ್ಠ’, ಕಾರ್ಕಳದ ಜಿಎಸ್‌ಬಿ ಸಭಾದಿಂದ “ಕೊಂಕಣಿ ಭಾಷಾ ಸಾರಥಿ’, ರಾಜ್ಯ ಕೊಂಕಣಿ ಅಕಾಡೆಮಿಯಿಂದ 2016ರ ಪುರಸ್ಕಾರ, ಗಮಕ ಸೇವೆಗಾಗಿ ಗದುಗಿನ ಕುಮಾರವ್ಯಾಸ ಪ್ರತಿಷ್ಠಾನದಿಂದ “ಕುಮಾರವ್ಯಾಸ ಗೌರವ ಪ್ರಶಸ್ತಿ’ ಹೀಗೆ ಪಟ್ಟಿ ಮುಂದುವರಿಯುತ್ತಾ, ಅನೇಕಾನೇಕ ಸಮ್ಮಾನಗಳು ಲಭಿಸಿವೆ.

Advertisement

ಮೇಲಿನ ಕಲಾ ಸೇವಾ ಕೈಂಕರ್ಯಗಳ ಮೂಲಕ ಬಹುಮಾನ್ಯರಾಗಿರುವ ಉಮೇಶ್‌ ಗೌತಮ್‌ ನಾಯಕ್‌ ಅವರ ಸಾಧನೆ – ಸಾಹಸಗಳೆಲ್ಲವೂ ಶ್ಲಾಘನಾರ್ಹವಾದುದಾಗಿದೆ. ಕಲಾ ಮಾತೆಯ ಅನುಗ್ರಹದಿಂದ ಅನವರತ ಇವರ ಈ ಯಾತ್ರೆ ಸಾಗಲಿ.

ಸಂದೀಪ್‌ ನಾಯಕ್‌ ಸುಜೀರ್‌

Advertisement

Udayavani is now on Telegram. Click here to join our channel and stay updated with the latest news.

Next