Advertisement

ಉಳ್ಳೂರು-74: ಸಿಡಿಲಿನಿಂದ ಮನೆಗಳಿಗೆ ಹಾನಿ

12:31 AM Oct 13, 2019 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದ ಕುಂಬ್ರಿಜೆಡ್ಡು, ಹೆದ್ದಾನಬೇರು ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಶನಿವಾರ ಬೆಳಗಿನ ಜಾವ ಸುರಿದ ಭಾರೀ ಗಾಳಿ, ಮಳೆ ಮತ್ತು ಸಿಡಿಲಿಗೆ ನಾಲ್ಕು ಮನೆಗಳು ಜಖಂಗೊಂಡು ಅಪಾರ ನಷ್ಟ ಸಂಭವಿಸಿದೆ. ಓರ್ವ ಮಹಿಳೆ ಸಿಡಿಲಿನ ಆಘಾತ‌ಕ್ಕೆ ಸಿಲುಕಿ ಗಾಯಗೊಂಡಿದ್ದಾರೆ.

Advertisement

ಉಳ್ಳೂರು-74 ಗ್ರಾಮದ ಕುಂಬ್ರಿಜೆಡ್ಡು ಬಸವ ಬೆಳಾರಿ ಅವರ ಮನೆಗೆ ಸಿಡಿಲು ಬಡಿದು ಸಿಮೆಂಟ್‌ ಶೀಟಿನ ಛಾವಣಿ ಸಂಪೂರ್ಣ ಹಾನಿಗೊಂಡು ನೆಲಕ್ಕುರುಳಿದೆ. ಹಳೆಯ ಮನೆಯ ಗೋಡೆಗಳು ಧರಾಶಾಯಿಯಾಗಿವೆ. ವಿದ್ಯುತ್‌ ಉಪಕರಣ ಮತ್ತು ಇನ್ನಿತರ ಸಾಮಗ್ರಿಗಳು ನಾಶಗೊಂಡಿವೆ. ಛಾವಣಿ ನಾಶವಾದ್ದರಿಂದ ಮನೆಯಲ್ಲಿದ್ದ ಬಟ್ಟೆ ಬರೆ ಮತ್ತು ದಿನ ಬಳಕೆ ಮತ್ತು ಆಹಾರ ಸಾಮಗ್ರಿಗಳು ಒದ್ದೆಯಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಉಳ್ಳೂರು-74 ಗ್ರಾ.ಪಂ.ನಿಂದ ತುರ್ತು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರಿಂದ ಮನೆಯವರು ಅಲ್ಲಿ ವಾಸವಾಗಿದ್ದಾರೆ. ಲಕ್ಷ್ಮೀ ಎಂಬವರಿಗೆ ಸಿಡಿಲಿನ ಆಘಾತದಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕುಂಬ್ರಿಜೆಡ್ಡು ಸುಬ್ಬ ಮೊಗವೀರ, ಹೆದ್ದನಬೇರಿನ ದೇವೇಂದ್ರ ನಾಯ್ಕ ಮತ್ತು ಭುಜಂಗ ಕುಲಾಲ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಇವರೆಲ್ಲರ ಮನೆಗಳ ಛಾವಣಿ, ಗೋಡೆಗಳು ಮತ್ತು ವಿದ್ಯುತ್‌ ಉಪಕರಣಗಳು ಜಖಂಗೊಂಡಿವೆ.

ಬೆಳಗಿನ ಜಾವ ಸಿಡಿಲು ಅಪ್ಪಳಿಸಿದ್ದರಿಂದ ನಿದ್ದೆಯ ಮಂಪರಿನಲ್ಲಿದ್ದ ಮನೆಯವರು ಬೆಚ್ಚಿಬಿದ್ದು ಹೊರಗೋಡಿ ಬಂದಿದ್ದಾರೆ.

Advertisement

ಸ್ಥಳಕ್ಕೆ ಜಿ.ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಭಾರತಿ ಕೋಟಿ ಪೂಜಾರಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಪ್ರಸಾದ ಶೆಟ್ಟಿ ಕಟ್ಟಿನಬೈಲು, ಯು. ಸುಧಾಕರ ಶೆಟ್ಟಿ, ಪಿಡಿಒ ಶ್ರೀಧರ ಕಾಮತ್‌, ವಿಎ ಕಿರಣ್‌, ಊರಿನ ಮುಖಂಡ ಸಂಪಿಗೇಡಿ ಸಂಜೀವ ಶೆಟ್ಟಿ ಭೇಟಿ ನೀಡಿ, ಪರಿಶಿಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next