Advertisement

“ಉ.ಕ.ನಾಯಕರು 2ನೇ ಸಾಲಿಗೆ ತಳ್ಳಲ್ಪಟ್ಟಿದ್ದೇವೆ’ 

06:00 AM Dec 18, 2018 | Team Udayavani |

ಬೆಳಗಾವಿ: ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರು ಎರಡನೇ ಸಾಲಿನಲ್ಲಿ ಕೂಡುವಂತಾಗಿದ್ದು,
ಜೆಡಿಎಸ್‌ನವರ ಕೈಯಲ್ಲಿ ಸಿಕ್ಕು ಕಾಂಗ್ರೆಸ್‌ ಪಕ್ಷ ಹೈರಾಣಾಗುತ್ತಿದೆ. ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೆಳಗಾವಿ ಅಧಿವೇಶನದ ನಂತರ ಉತ್ತರ ಕರ್ನಾಟಕ ಭಾಗದ ನಾಯಕರು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸಭಾಪತಿ ಸ್ಥಾನ ವಂಚಿತ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ್‌ ಹೇಳಿದ್ದಾರೆ. “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾವುದೇ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡರೆ ಬೆಳಗಾವಿ ಅಧಿವೇಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಅಧಿವೇಶನದ ನಂತರ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕೆಂದು ಚಿಂತಿಸಿದ್ದೇನೆ ಎಂದರು. 

Advertisement

ಸಂದರ್ಶನದ ಸಾರ ಹೀಗಿದೆ: ನಾನು ಯಾವಾಗಲೂ ಅಧಿಕಾರ ಮತ್ತು ಹುದ್ದೆಗಾಗಿ ಲಾಬಿ ಮಾಡಿದವನಲ್ಲ. ಪರಿಷತ್‌ ಸಭಾಪತಿ ಹುದ್ದೆಯ ವಿಷಯದಲ್ಲೂ ನಾನು ಯಾರ ಮನೆಯ ಬಾಗಿಲನ್ನೂ ತಟ್ಟಿಲ್ಲ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ನೇರವಾಗಿ ಯಾವತ್ತೂ ಇದರ ಪ್ರಸ್ತಾಪ ವಾಗಿಲ್ಲ. ಪಕ್ಷದ ವರಿಷ್ಠರು ಮತ್ತು ಮುಖಂಡರು ಬೇರೆ, ಬೇರೆ ಕಡೆ ನನ್ನ ಹೆಸರನ್ನು ಪ್ರಸ್ತಾಪಿಸಿದ್ದರಿಂದ ಮಾಧ್ಯಮಗಳಲ್ಲಿ ನನ್ನ ಮತ್ತು ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಹೆಸರು ಚರ್ಚೆಯಲ್ಲಿ ಮುಂಚೂಣಿಯಲ್ಲಿತ್ತು.
ಸಹಜವಾಗಿ ನನ್ನ ಹಿತೈಷಿಗಳು ಹಾಗೂ ಶಾಸಕ ಮಿತ್ರರಲ್ಲಿ ಈ ಬಗ್ಗೆ ಬಹಳ ನಿರೀಕ್ಷೆ ಇತ್ತು. ಸಭಾಪತಿ ಸ್ಥಾನದ ಅವಕಾಶ ತಪ್ಪಿದ್ದಕ್ಕೆ ನನಗೆ ವೈಯಕ್ತಿಕವಾಗಿ ಯಾವುದೇ ನೋವಾಗಿಲ್ಲ. ಆದರೆ, ಒಂದು ಗೌರವಾನ್ವಿತ ಸ್ಥಾನ ಉತ್ತರ ಕರ್ನಾಟಕದವರೊಬ್ಬರಿಗೆ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂಬುದು ನನ್ನ ಭಾವನೆ. ಈಗಾಗಲೇ ಪರಿಷತ್‌ ಕಲಾಪದಲ್ಲಿಯೇ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ನಾನು ವಿಶೇಷವಾಗಿ ಪ್ರಯತ್ನ, ಲಾಬಿ ಮಾಡದೆ ಇರುವುದರಿಂದ ತೆರೆಯ ಹಿಂದಿನ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಮ್ಮೆ ಪಕ್ಷದ ವರಿಷ್ಠರು ನಿಲುವು ತೆಗೆದುಕೊಂಡ ಮೇಲೆ ಅದಕ್ಕೆ ಬದ್ದರಿರಬೇಕು ಎನ್ನುವುದು ನನ್ನ ಅಭಿಪ್ರಾಯ.

ನಾನು ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಕರೆ ತಂದು ಅವರ ಪರವಾಗಿ ಕೆಲಸ ಮಾಡುವಾಗ ಯಾವುದೇ ವೈಯಕ್ತಿಕ ಅಪೇಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಯಶಸ್ವಿ ಆಡಳಿತ ನಡೆಸಿ, ಕಾಂತ್ರಿಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದ ಸಿದ್ದರಾಮಯ್ಯ ಅವರನ್ನು ನನ್ನ ಜಿಲ್ಲೆಯಿಂದ ಆಯ್ಕೆ ಮಾಡಿ ಕಳುಹಿಸಿದರೆ ನಮ್ಮ ಜಿಲ್ಲೆ ಹಾಗೂ ಉತ್ತರ ಕರ್ನಾಟಕಕ್ಕೆ ಅನುಕೂಲವಾಗುತ್ತದೆ ಎಂಬ ಆಶಯ ನನ್ನದು. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಸಂಪುಟ ಸೇರುವ ಅಪೇಕ್ಷೆ ಮತ್ತು ಆಕಾಂಕ್ಷೆಗಳಿಲ್ಲ. ನನ್ನದು ಜನಸೇವೆಗಾಗಿ ರಾಜಕಾರಣ. ರಾಜಕಾರಣಕ್ಕಾಗಿ ಜನಸೇವೆಯಲ್ಲ. ಅಲ್ಲದೆ, ಸದ್ಯ ಸಂಪುಟ ವಿಸ್ತರಣೆಯಾಗುವುದಿಲ್ಲ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಸಮ್ಮಿಶ್ರ ಸರ್ಕಾರ ಹಾಗೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ನನಗೆ ಬೇಸರವಿದೆ. ಇದನ್ನೇ ಸದನದಲ್ಲಿಯೂ ಪ್ರಸ್ತಾಪಿಸಿದ್ದೆ. ಸಭಾಪತಿ ಸ್ಥಾನ ಬಸವರಾಜ ಹೊರಟ್ಟಿಯವರಿಗೆ ಸಿಕ್ಕಿದ್ದರೂ ಸಮಾಧಾನ
ಇರುತ್ತಿತ್ತು. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಿಂದಲೂ ಉತ್ತರ ಕರ್ನಾಟಕದ ನಾಯಕರು ವಂಚಿತರಾಗಿದ್ದೇವೆ. ಕೆಪಿಸಿಸಿಯ ಅಧಿಕಾರದಲ್ಲಿ ನಾವು ಹಿಂದಿನ ಕುರ್ಚಿಯಲ್ಲಿ ಕುಳಿತಿದ್ದೇವೆ. ಎಐಸಿಸಿಯಲ್ಲಂತೂ ನಮ್ಮ ಪರಿಸ್ಥಿತಿಯನ್ನು ಕೇಳುವುದೇ ಬೇಡ. 
ಒಂದಿಬ್ಬರನ್ನು ಹೊರತುಪಡಿಸಿ 20- 30 ವರ್ಷ ರಾಜಕಾರಣ ಮಾಡಿದ ಅನೇಕ ನಾಯಕರು ಎಐಸಿಸಿ ಕಚೇರಿಗೆ ಹೋಗುವಾಗ, ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡುವಾಗ ಯಾರಾದರೂ ನಾಯಕರನ್ನು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತಾರತಮ್ಯ ನೇರವಾಗಿ ನಮ್ಮ ಭಾಗದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ. ಉದಾಹರಣೆಗೆ ಎಂ.ಬಿ.
ಪಾಟೀಲರು ನೀರಾವರಿ ಸಚಿವರಾಗಿದ್ದಾಗ ನಮ್ಮ ಭಾಗದ ಅನೇಕ ನೀರಾವರಿ ಯೋಜನೆಗಳಿಗೆ ವೇಗ ದೊರೆತಿತ್ತು. ಎಚ್‌.ಕೆ. ಪಾಟೀಲರು ಪಂಚಾಯತ್‌ ರಾಜ್‌ ಸಚಿವರಾಗಿದ್ದಾಗ ನಮ್ಮ ಗ್ರಾಮೀಣ ಭಾಗದ ಅಭಿವೃದಿಟಛಿ ಕಾಮಗಾರಿಗಳಿಗೆ ವಿಶೇಷ ಆದ್ಯತೆ ದೊರೆತಿತ್ತು.

ಬಸವರಾಜ ರಾಯರೆಡ್ಡಿ, ಸತೀಶ್‌ ಜಾರಕಿಹೊಳಿ, ಪ್ರಕಾಶ್‌ ಹುಕ್ಕೇರಿಯಂತಹ ಅನೇಕರು ನಮ್ಮ ಭಾಗದ ಸಮಸ್ಯೆಗಳನ್ನು ಅತಿ
ಸುಲಭವಾಗಿ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತಿದ್ದೆವು. ಮುಖ್ಯಮಂತ್ರಿಗಳು ಅಷ್ಟೇ ವೇಗವಾಗಿ ಸ್ಪಂದಿಸುತ್ತಿದ್ದರು. ಈಗ ರಾಜಕೀಯ ಪ್ರಾತಿನಿಧ್ಯ ಇಲ್ಲದಿರುವುದರಿಂದ ಯಾವುದೇ ಕೆಲಸಗಳಿಗೂ ಆದ್ಯತೆ ದೊರೆಯುತ್ತಿಲ್ಲ. ಮಹಾ ರಾಷ್ಟ್ರದಲ್ಲಿ ರಾಜಧಾನಿ ಮುಂಬೈ ಹೊರತುಪಡಿಸಿ ಪುಣೆ, ಕೊಲ್ಲಾಪುರ, ನಾಗ್ಪುರ, ಅಹಮದ್‌ನಗರ, ಸತಾರಾ ನಗರಗಳನ್ನು ಅಭಿವೃದ್ಧಿಪಡಿಸಲಾಗಿದೆ.
ನಮ್ಮ ಜೀವನಾಡಿಯಾದ ಕೃಷ್ಣೆಯ ನೀರಾವರಿ ಯೋಜನೆಗಳಿಗೆ ಯುಧ್ದೋಪಾದಿಯಲ್ಲಿ ಒತ್ತು ನೀಡದೆ ಹೋದರೆ, ಹುಬ್ಬಳ್ಳಿ, ಬೆಳಗಾವಿ,
ಕಲಬುರಗಿಯಂತಹ ನಗರಗಳಲ್ಲಿ ಉದ್ಯೋಗ ಸಮಸ್ಯೆ ಬಗ್ಗೆ ಗಮನ ಹರಿಸದಿದ್ದರೆ ಮುಂದೆ ಭಿಕ್ಷೆ ಬೇಡಲೂ ಕೂಡ ನಾವು ಬೆಂಗಳೂರು, ಮಂಗಳೂರಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ನೋವಿನಿಂದ ಹೇಳಬೇಕಾದ ಪರಿಸ್ಥಿತಿ ಬಂದಿದೆ.
ಈಗ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಬೇಕೆಂದು ಉತ್ತರ ಕರ್ನಾಟಕ ಭಾಗದ ಅನೇಕ ಹಿರಿಯ
ಮುಖಂಡರು, ಮಾಜಿ ಸಚಿವರು, ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕೆಲವೇ ಜನರ ಮುಷ್ಠಿಯಲ್ಲಿದೆ ಎಂಬ ಆತಂಕ ಹಲವರಲ್ಲಿದೆ. ಎಚ್‌.ಕೆ. ಪಾಟೀಲ್‌, ವೀರಣ್ಣ ಮತ್ತಿಕಟ್ಟಿ, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿಯಂತಹ ಶಕ್ತಿಯುತ ನಾಯಕರಿಗೆ ಆಗುತ್ತಿರುವ ಹಿನ್ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ನಿಜ ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ, ಎಲ್ಲರೂ ಒಟ್ಟಾಗಿ ಚರ್ಚಿಸುವ ಅಗತ್ಯವಿದ್ದು, ಅಧಿವೇಶನದ ನಂತರ ಈ ಬಗ್ಗೆ ಚರ್ಚಿಸುವ ಚಿಂತನೆಗೆ ನಾನೇ ಚಾಲನೆ ಕೊಡಬೇಕೆಂಬುದು ಹಲವರ ಆಶಯ. ಹೀಗಾಗಿ, ಉತ್ತರ ಕರ್ನಾಟಕದ ನಾವು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ದಿಟ್ಟ
ನಿರ್ಧಾರ ತೆಗೆದುಕೊಂಡ ಉದಾಹರಣೆಗಳಿವೆ.

ಶಂಕರ ಪಗೋಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next