Advertisement

ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ

10:21 AM Oct 18, 2022 | Team Udayavani |

ಬೆಳ್ತಂಗಡಿ : ಶಿರಾಡಿ ರಸ್ತೆಯಾಗಿ ಪೆರಿಯ ಶಾಂತಿಯಿಂದ ಕೊಕ್ಕಡ ಮೂಲಕ ಧರ್ಮಸ್ಥಳವನ್ನು ಸೇರುವ ಹಾಗೂ ಚಾರ್ಮಾಡಿ ಮಾರ್ಗವಾಗಿ ಬಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯು ಶೀಘ್ರ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ.

Advertisement

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಬಾರಿ ಧರ್ಮಸ್ಥಳ ನೇತ್ರಾವತಿ ವರೆಗಿನ ಚತುಷ್ಪಥ ರಸ್ತೆ ಉದ್ಘಾಟನೆ ವೇಳೆ ಉಜಿರೆ-ಪೆರಿಯಶಾಂತಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯದ ಬಗ್ಗೆ ಪ್ರಸ್ತಾವವನ್ನು ಸರಕಾರದ ಮುಂದಿಟ್ಟಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯನ್ನು ಸಂಪರ್ಕಿಸುವ ಉಜಿರೆಯಿಂದ ಪೆರಿಯಶಾಂತಿ ವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ರಾ.ಹೆ.-73ರ ಸ್ಪರ್‌ ರಸ್ತೆಯಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ರಸ್ತೆಯನ್ನು ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಸ್ಪರ್‌ ಯೋಜನೆಯಡಿ ಮೇಲ್ದರ್ಜೆಗೆ
ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಅಥವಾ ಒಂದು ಪ್ರಮುಖ ರಸ್ತೆಯಿಂದ ಇನ್ನೊಂದು ಪ್ರಮುಖ ರಸ್ತೆಗೆ ಸಂಪರ್ಕಿಸುವ, ಒಳದಾರಿಗಳು ಅಥವಾ ಸಮೀಪದ ದಾರಿಗಳನ್ನು ಮೇಲ್ದರ್ಜೆ ಗೇರಿಸಿಕೊಂಡು ಅವುಗಳಿಗೆ ಸಮರ್ಪಕವಾದ ಅನು ದಾನ ಒದಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮಾದರಿಯ ರಸ್ತೆಯಂತೆ ಸುಸಜ್ಜಿತ ವಾಗಿ ನಿರ್ಮಾಣ ಮಾಡು ವುದು ಈ ಸ್ಪರ್‌ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇತಿಹಾಸ ಪ್ರಸಿದ್ಧ ದೇವಾಲಯಗಳು, ತೀರ್ಥ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಈಗಾಗಲೇ ರಾಜ್ಯದ ಹಲವೆಡೆ ಈ ರೀತಿಯ ಯೋಜನೆಯನ್ನು ಅನ್ವಯಿಸಲಾಗಿದೆ.
ಉಜಿರೆಯಿಂದ ಧರ್ಮಸ್ಥಳ ವರೆಗೆ ಚತುಷ್ಪಥದ ಬೇಡಿಕೆಯಿದ್ದು, ಧರ್ಮಸ್ಥಳ – ನಿಡ್ಲೆ – ಕೊಕ್ಕಡ ಮಾರ್ಗವಾಗಿ ಪೆರಿಯಶಾಂತಿ ವರೆಗೆ 10 ಮೀಟರ್‌ ಅಗಲದ ರಸ್ತೆ ನಿರ್ಮಾಣ ಸಾಧ್ಯತೆಯಿದೆ. ಪ್ರಸ್ತುತ ಲೋಕೋಪ‌ಯೋಗಿ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯು ಧರ್ಮಸ್ಥಳದಿಂದ ಪೆರಿಯ ಶಾಂತಿ ವರೆಗಿನ ದುರಸ್ತಿ ಕಾರ್ಯಕ್ಕೆ ಪ್ರಸಕ್ತ ವರ್ಷದಲ್ಲಿ ಅನುದಾನ ದೊರೆತಿದ್ದು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಧರ್ಮಸ್ಥಳ – ಸುಬ್ರಹ್ಮಣ್ಯ – ಮಂಗಳೂರು – ಬೆಂಗಳೂರು – ಉಡುಪಿ – ಸೋಲಾಪುರ ಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಈ ರಸ್ತೆ ವಿಸ್ತರಣೆಯಿಂದ ಅನುಕೂಲವಾಗಲಿದೆ.

ಉಜಿರೆ – ಧರ್ಮಸ್ಥಳ ಚತುಷ್ಪಥ
ಧರ್ಮಸ್ಥಳ ಕ್ಷೇತ್ರದ ಭಕ್ತರ ಅನುಕೂಲ ಹಾಗೂ ಸ್ಥಳೀಯ ಜನರ ಅಗತ್ಯ ಮನಗಂಡು ಈಗಿರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸಲಾಗಿದೆ. ಉಜಿರೆಯಿಂದ ಧರ್ಮಸ್ಥಳ ವರೆಗೆ ಚತುಷ್ಪಥ ನಿರ್ಮಾಣವಾಗಲಿದ್ದು ಉಳಿದಂತೆ ದ್ವಿಪಥವಾಗಿ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಹರೀಶ್‌ ಪೂಂಜ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 73ನ್ನು ಸಂಪಕಿಸುವ ಉಜಿರೆ- ಪೆರಿಯಶಾಂತಿ ರಸ್ತೆ ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಸ್ಪರ್‌ ಯೋಜನೆಯಲ್ಲಿ ಮೇಲ್ದರ್ಜೆಗೆ ಏರಿಸುವ ಕುರಿತು ಅಧಿಕೃತ ಆದೇಶ ಬಿಡುಗಡೆಯಾಗಿ ನೋಟಿಫಿಕೇಶನ್‌ ಹಂತದಲ್ಲಿದೆ.
– ಮಹಾಬಲ ನಾಯ್ಕ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

Advertisement

ಇದನ್ನೂ ಓದಿ : ಸುರತ್ಕಲ್ ಟೋಲ್ ತೆರವಿಗೆ ಹೋರಾಟಗಾರರು ಸಜ್ಜು: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Advertisement

Udayavani is now on Telegram. Click here to join our channel and stay updated with the latest news.

Next