Advertisement

ಸಂತಸ ಹೊತ್ತು ತರುವ ಯುಗಾದಿ

03:48 PM Mar 21, 2023 | Team Udayavani |

ಹರುಷದ ಹರಿಕಾರನಾಗಿ ಕವಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ! ಎಂದು ಹೇಳಿದ್ದು ಹೀಗೆ . ಕವಿ ನುಡಿಯುವಂತೆ ಅದೆಷ್ಟೋ ಯುಗಾದಿಗಳು ಬಂದು ಹೋಗಿವೆ, ಅಷ್ಟು ಸಲ ಬಂದರೂ ಅದು ಬರುವುದನ್ನು ನಿಲ್ಲಿಸಿಲ್ಲ. ನಿಯಮಿತವಾಗಿ ಬರುತ್ತಲೇ ಇದೆ. ಜತೆಗೆ ಹರುಷವನ್ನು ತರುತ್ತಿದೆ. ಇದರಲ್ಲೂ ಬದಲಿಲ್ಲ, ಪ್ರತೀ ಬಾರಿ ಬರುವಾಗಲೂ ಅದು ಸಂತಸ ಹೊತ್ತೇ ಬಂದಿದೆ.

Advertisement

ಹೌದು, ಇನ್ನೇನು ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಹೊಸ ವರ್ಷ ಎಂದು ಆಚರಣೆ ಮಾಡುವ ಯುಗಾದಿ ಹಬ್ಬ ಬರಲಿದೆ. ಪ್ರಭವ ನಾಮ ಸಂವತ್ಸರದಲ್ಲಿ ಆರಂಭವಾಗುವ ಯುಗಾದಿ ಮುಂದಿನ ಅರವತ್ತು ಸಂವತ್ಸರಗಳವರೆಗೂ ತಿರುತಿರುಗಿ, ಸುತ್ತು ಹಾಕಿ ಕ್ಷಯ ನಾಮ ಸಂವತ್ಸರದಲ್ಲಿ ಕೊನೆಗೊಂಡು ಮತ್ತೆ ಪ್ರಭವದಿಂದಲೇ ಹೊಸ ಚಕ್ರವನ್ನು ಆರಂಭಿಸುತ್ತದೆ. ಪ್ರತೀ ಸಂವತ್ಸರವೂ ಹೊಸತೇ. ಆದರೆ ಈ ಹೊಸತು ನಾವು ಕಾಣುವ ನೋಟದಲ್ಲಿ, ಬದುಕುವ ರೀತಿಯಲ್ಲಿ, ಆಡುವ ಮಾತಿನಲ್ಲಿ ಹುಟ್ಟುವುದು, ಬೆಳೆಯುವುದು, ವಿಸ್ತಾರಗೊಳ್ಳುವುದು.

ದೇವನೊಬ್ಬ ನಾಮ ಹಲವು ಇದ್ದಂತೇ ಚೈತ್ರ ಮಾಸದ ಮೊದಲ ದಿನದಂದು ಸಾಮಾನ್ಯವಾಗಿ ಆಚರಣೆ ಮಾಡುವ ಈ ಹಬ್ಬಕ್ಕೆ ನಮ್ಮ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿವೆ. ಮಹಾರಾಷ್ಟ್ರದಲ್ಲಿ “ಗುಡಿ ಪಾಡ್‌’, ಸಿಂಧಿಗಳಲ್ಲಿ “ಚೇಟಿ ಚಾಂದ್‌’, ಅಸ್ಸಾಂನಲ್ಲಿ ಆಚರಿಸುವ “ಬಿಹು’, ಕೇರಳದಲ್ಲಿ “ವಿಷು’   ಹೀಗೆ ಭಿನ್ನ ಹೆಸರುಗಳುಳ್ಳ, ತಮ್ಮದೇ ಆದ ಪ್ರಾದೇಶಿಕ ಆಚರಣೆಗಳಿಂದ ವೈವಿಧ್ಯಮಯವಾದ ಹಬ್ಬವೂ ಇದಾಗಿದೆ. “ಯುಗ’ ಎಂದರೆ ವಯಸ್ಸು ಅಥವಾ ಸಮಯ “ಆದಿ” ಎಂದರೆ ಆರಂಭ. ಬ್ರಹ್ಮನು ಈ ದಿನ ದಂದು ಇಡೀ ಜಗತ್ತನ್ನು ನಿರ್ಮಿಸಲು ಪ್ರಾರಂಭಿಸಿ ವರ್ಷಗಳು, ತಿಂಗಳುಗಳು, ದಿನಗಳು ಮತ್ತು ಇನ್ನೂ ಅನೇಕವನ್ನು ರೂಪಿಸಿ ಈ ಭೂಮಿಯಲ್ಲಿ ವಾಸಿಸಲು ಜನ್ಮ ನೀಡಿದನು ಎಂದು ನಂಬಲಾಗಿದೆ.

ತಳಿರು ತೋರಣವನ್ನು ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ಕಟ್ಟಿ, ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನು ಹಾಕಿ, ಮುಂಜಾನೆ ಬೇಗನೆದ್ದು ಪುಣ್ಯಾಹ ಮಂತ್ರ ಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಲಶದ ನೀರನ್ನು ಸಿಂಪಡಿಸಿ ಅನಂತರ ಹೊಸ ಬಟ್ಟೆ ಧರಿಸಿ ಮನೆಯ ಹಿರಿಯರು ಪಂಚಾಂಗವನ್ನು ಓದುವಾಗ ಮತ್ತೆಲ್ಲರೂ ಅದನ್ನು ಕೇಳುವುದು ಸಂಪ್ರದಾಯ. ಪ್ರತೀ ದಿವಸ ಊಟ ತಯಾರಿಸುವ ಅದೇ ಮಾಮೂಲಿ ಅಡುಗೆಗಳ ನಡುವೆ 2 ಬಗೆ ವಿಶೇಷ ಭಕ್ಷ್ಯವನ್ನು ತಯಾರಿಸಿ ಒಟ್ಟಿಗೆ ಕುಳಿತು ತಿನ್ನುವಾಗ ಸಿಗುವ ಆನಂದವನ್ನು ಸೆರೆಹಿಡಿಯಬಹುದೇ? ಹೂ ಬಿಡಲು ಕಾತರಿಸುವ ಸಸಿಗೆ ಒಂದು ಪುಟ್ಟ ಮಳೆಯ ನೆಪವೇ ಸಾಕು. ಅದೇ ರೀತಿ ಹೊಸ ವರ್ಷದ ಆರಂಭವಿದು ಪ್ರಫ‌ುಲ್ಲ ಮನಸ್ಸಿನಿಂದ ಸ್ವಾಗತಿಸಿ, ಸಂಭ್ರಮಿಸೋಣ ಎಂಬ ಭಾವವೊಂದೇ ಸಾಕು. ಮನದಲ್ಲಿ ನವಚೈತ್ಯನ್ಯ ತುಂಬಿಕೊಂಡರೆ ದೇಹದಲ್ಲೂ ಹೊಸತರ ಹುರುಪು ಮೂಡಿಬಿಡುವುದು.

ಹಬ್ಬಗಳೆಂದರೆ ಸಾರ್ವತ್ರಿಕವಾಗಿ, ಸಾಮೂಹಿಕವಾಗಿ ಆಚರಿಸುವಂಥವು. ವ್ರತಗಳ್ಳೋ ವೈಯಕ್ತಿಕ ಆಚರಣೆಗೆ ಸೀಮಿತ. ಯುಗಾದಿ ಹಬ್ಬದ ಆಚರಣೆ ದೇಶದ ವಿವಿಧೆಡೆ ಭಿನ್ನವಾಗಿಯೇ ಇದ್ದರೂ ಅವುಗಳು ಹೊರಹೊಮ್ಮಿಸುವ ಧನಾತ್ಮಕ ಭಾವಗಳು ಏಕರೀತಿಯಲ್ಲಿರುತ್ತವೆ. ಹೀಗಾಗಿ ಬೇವು-ಬೆಲ್ಲ ತಿನ್ನುತ್ತಾ, ನಮ್ಮೆಲ್ಲರ ಜೀವನ ಯಾನಕ್ಕೆ ಉಸಿರಾಗಿರುವ ಪ್ರಕೃತಿಗೆ ಶಿರಬಾಗುತ್ತಾ, ಶುಭಕೃತ್‌ ಜಗತ್ತಿಗೆ ಸನ್ಮಂಗಲವನ್ನುಂಟು ಮಾಡಲಿ, ಚಂದ್ರನ ಶೀತಲತೆಯನ್ನು ಮನದೊಳಗೆ ತುಂಬಿ, ಸೂರ್ಯದ ತೇಜಸ್ಸ ಬದುಕಲ್ಲಿ ಬೀರಲಿ, ಕುದಿವ ಕೊಪ್ಪರಿಗೆಯಂತಾಗಿರುವ ಜಗತ್ತು ಶಾಂತವಾಗಲಿ ಎಂದು ಹಾರೈಸೋಣ.

Advertisement

ಸಂತಸ, ನೆಮ್ಮದಿಯನ್ನು ತರುವ ಹಬ್ಬಗಳ ಆಚರಣೆಯು ಬದುಕಿನೊಂದಿಗೆ ಅವಿನಾಭಾವ ಸಂಬಂ ಧವನ್ನು ಹೊಂದಿದೆ. ಇಂತಹ ಹಬ್ಬಗಳಲ್ಲಿ ಯುಗಾದಿ ಹಿಂದೂ ಸಂಪ್ರದಾಯದ ಮೊದಲ ಹಬ್ಬವಾಗಿದೆ. ಬದುಕಿನ ಹಳೆಯ ನೋವುಗಳನ್ನು ಮನಸ್ಸಿನಿಂದ ತೊಡೆದು ಹಾಕಿ ನವೋಲ್ಲಾಸದಿಂದ ಹೊಸ ವರ್ಷವನ್ನು ಹೊಸ ಉತ್ಸಾಹದಿಂದ ಸ್ವಾಗತಿಸುವಸುವ ದಿನ ಇದಾಗಿದೆ. ಎಲೆಗಳನ್ನು ಕಳಚಿಕೊಂಡು ಮತ್ತೆ ಚಿಗೊರೆಡೆದು ಮರುಜೀವ ಪಡೆಯುವ ಮರಗಳು ಪ್ರಕೃತಿಗೆ ಮತ್ತೆ ಹೊಸ ರೂಪ, ನವೋತ್ಸಾಹ ತರುವ ಕಾಲವಾದರೆ, ಚೈತ್ರ-ವಸಂತರ ಆಗಮನದಿಂದ ಪ್ರಕೃತಿ ಹೊಸ ರೂಪವನ್ನು ತಂದು ಎಲ್ಲೆಡೆ ಸಂಭ್ರಮ ಉಲ್ಲಾಸವನ್ನು ತರುವ ಹಬ್ಬವೂ ಹೌದು.

ಪ್ರತೀ ವರ್ಷ ಯುಗಾದಿಯಂದೂ ನಾವು ಬೇವು ಬೆಲ್ಲ ತಿನ್ನುವ ಸಮಯದಲ್ಲಿ ಬಾಯೆಲ್ಲ ಒಗರಾಗಿ, ನಾಲಿಗೆಗೆ ಅಪ್ರಿಯವಾಗುವ ಬೇವು ನಮಗೆ ಸದಾ ಬೇಡವಾಗಿರುತ್ತದೆ. ಮನಸ್ಸಿಗೆ ಅಹಿತ, ದೇಹಕ್ಕೆ ಹಿತ ವಾಗಿರುವುದು ಯಾರಿಗೆ ಸುಲಭದಲ್ಲಿ ಬೇಕೆನ್ನಿಸುತ್ತದೆ? ಅದರಲ್ಲೂ ಮಕ್ಕಳಾದ ನಮಗಂತೂ ದೊಡ್ಡ ದೊಡ್ಡ ಬೆಲ್ಲದ ತುಂಡನ್ನು ಆರಿಸಿ ಮೆಲ್ಲುವುದೆಂದರೆ ಪರಮ ಖುಷಿಯ ಸಂಗತಿ. ಅದೇನೋ ಎಂತೋ ಸಾಮಾನ್ಯ ದಿನಗಳಲ್ಲೂ ಬೇಕೆನಿಸಿದಾಗೆಲ್ಲ ಬೆಲ್ಲವನ್ನು ತಿನ್ನಬಹುದಾಗಿದ್ದರೂ ಯುಗಾದಿಯ ದಿನದಂದೇ ಬೇವಿನ ನಡುವೆ ಹುದುಗಿ ಅಡಗಿರುವ ಬೆಲ್ಲದ ತುಣುಕುಗಳನ್ನು ಆಯ್ದು ತಿನ್ನುವುದರಲ್ಲಿ ಒಂದು ರೀತಿ ಬೇರೆಯೇ ತೃಪ್ತಿ ಅಲ್ಲವೇ!?

ಜೀವನ ಎಂಬುದು ಕೇವಲ ಸುಖದ ಕಲ್ಪನೆಯಲ್ಲ. ಹಾಗಂತ ಕಷ್ಟದ ಕೋಟಲೆಯೂ ಅಲ್ಲ. ಹಗಲು-ರಾತ್ರಿಗಳಂತೆ, ಗಿಡದಲ್ಲಿರುವ ಹೂವು ಮುಳ್ಳುಗಳಂತೆ ಮನುಷ್ಯನ ಬದುಕು ನೋವು ನಲಿವುಗಳ ಸಂಗಮ ಎನ್ನುವುದನ್ನು ಎಷ್ಟೋ ವರ್ಷಗಳ ಹಿಂದೆ ಜನರು ಅರಿತಿದ್ದರು. ಜೀವನದಲ್ಲಿ ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದಾಗ ಬದುಕು ಸುಂದರವಾಗಲು ಸಾಧ್ಯ. ಈ ಅಂಶವನ್ನು ಜನರಿಗೆ ಸಾರಲೆಂದೇ ಯುಗಾದಿಯಂದು ಬೆಲ್ಲವನ್ನು ಹಂಚಲಾಗುತ್ತದೆ ಎನ್ನುವುದು ಬಲ್ಲವರ ಅನಿಸಿಕೆ. ಯುಗಾದಿ ಮತ್ತೆ ಬಂದಿದೆ. ಈ ಹಬ್ಬದ ಬೇವು-ಬೆಲ್ಲ ಸಮರಸದ ಬದುಕಿಗೆ ಬುನಾದಿಯಾಗಲಿ ಈ ದಿನದಲ್ಲಿ ಹೊಸಭರವಸೆಯ ಕನಸುಗಳು ನನಸಾಗಲಿ ಎನ್ನುವುದು ನಮ್ಮ ಹಾರೈಕೆ.

ಮಿಥುನಾ ಭಂಡಾರ್ಕಾರ್ ಕಾಲೇಜು ಕುಂದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next