Advertisement

Udupi ತಾಂತ್ರಿಕ ಸಮಸ್ಯೆ: ಏರುತ್ತಿಲ್ಲ ಗೃಹಲಕ್ಷ್ಮೀ ನೋಂದಣಿ ಪ್ರಮಾಣ

11:02 PM Sep 23, 2023 | Team Udayavani |

ಉಡುಪಿ: ಮನೆಯ ಯಜಮಾನಿಗೆ ರಾಜ್ಯ ಸರಕಾರದಿಂದ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಉಭಯ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡವರ ಸಂಖ್ಯೆ ಕಳೆದ ಒಂದು ತಿಂಗಳಿಂದ ಹೆಚ್ಚುತ್ತಲೇ ಇಲ್ಲ. ತಾಂತ್ರಿಕ ಕಾರಣದಿಂದ ನೋಂದಣಿ ಪ್ರಕ್ರಿಯೆ ಮುಂದೆ ಸಾಗುತ್ತಿಲ್ಲ ಮತ್ತು ಇಲಾಖೆಯ ಮೇಲಾಧಿಕಾರಿಗಳಿಗೆ ಇದರ ಅರಿವಿದ್ದರೂ ಸಮಸ್ಯೆಗೆ ಪರಿಹಾರ ಹುಡುಕುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಇದೇ ಕಾರಣಕ್ಕಾಗಿ ಸರಕಾರ ಹೊಸ ಪಡಿತರ ಕಾರ್ಡ್‌ ನೋಂದಣಿ ಮತ್ತು ಹಳೇ ಕಾರ್ಡ್‌ ತಿದ್ದುಪಡಿಗೂ ಅವಕಾಶ ನೀಡುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 2,56,850 ಪಡಿತರ ಚೀಟಿಗಳಿದ್ದು, ಈವರೆಗೆ 2,12,861 ಮಂದಿ ಅಂದರೆ ಶೇ. 82.87ರಷ್ಟು ಕಾರ್ಡ್‌ ಯೋಜನೆಗೆ ನೋಂದಣಿಯಾಗಿದ್ದು, ಶೇ. 17.13ರಷ್ಟು ಕಾರ್ಡ್‌ದಾರರಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ. ದ.ಕ.ದಲ್ಲಿ 4,03,333 ಕಾರ್ಡ್‌ದಾರರಿದ್ದು, 3,38,393 ಮಂದಿ ನೋಂದಾಯಿಸಿಕೊಂಡಿದ್ದಾರೆ ಮತ್ತು 64,940 ಕಾರ್ಡ್‌ದಾರರ ನೋಂದಣಿ ಬಾಕಿಯಿದೆ. ಈವರೆಗೆ ನೋಂದಣಿ ಪ್ರಮಾಣ ಶೇ. 83.90ರಷ್ಟಾಗಿದ್ದು ಶೇ. 16.01ರಷ್ಟು ಮಂದಿಯ ನೋಂದಣಿ ಸಾಧ್ಯವಾಗುತ್ತಿಲ್ಲ. 15 ದಿನಗಳ ಹಿಂದೆಯೂ ನೋಂದಣಿ ಪ್ರಮಾಣ ಇಷ್ಟೇ ಇತ್ತು.
ರೇಷನ್‌ ಕಾರ್ಡ್‌ ಇರುವವರು ಗ್ರಾಮ್‌ ಒನ್‌ ಅಥವಾ ಕರ್ನಾಟಕ ಒನ್‌ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಆದರೆ ಬಹುತೇಕರಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ. ಕಾರಣ ಇದಕ್ಕಾಗಿ ರೂಪಿಸಿರುವ ಕುಟುಂಬ ಆ್ಯಪ್‌/ವೆಬ್‌ಸೈಟ್‌ನಲ್ಲಿರುವ ಮಾಹಿತಿಗೂ ಅರ್ಜಿ ಸಲ್ಲಿಸುವಾಗ ನೀಡುವ ಮಾಹಿತಿಗೂ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದಾಗಿಯೇ ಬಹುಪಾಲು ಕಾರ್ಡ್‌ಗಳು ನೋಂದಣಿಯಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಇ-ಕೆವೈಸಿ ಮಾಡದೆ ಇರುವುದೂ ಸಮಸ್ಯೆ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಿಂದ ಕಾರ್ಡ್‌ದಾರರ ಮಾಹಿತಿಯನ್ನು ಆನ್‌ಲೈನ್‌ ಹಾಗೂ ಆಫ್ಲೈನ್‌ ವ್ಯವಸ್ಥೆಯಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ರೂಪಿಸಿರುವ ಕುಟುಂಬ ವೆಬ್‌ಸೈಟ್‌ಗೆ ನೀಡಲಾಗಿದೆ. ಇ-ಕೆವೈಸಿ ಮಾಡದ ಕಾರ್ಡ್‌ಗಳು ಹೆಚ್ಚಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಬಿಪಿಎಲ್‌ ಕಾರ್ಡ್‌ದಾರರು ಬಹುಪಾಲು ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಎಪಿಎಲ್‌ ಕಾರ್ಡ್‌ದಾರರಲ್ಲಿ ಅನೇಕರು ಮಾಡಿಸಿಲ್ಲ.

ಹತ್ತಾರು ಅಹವಾಲು
ಯೋಜನೆಗೆ ರೇಷನ್‌ ಕಾರ್ಡ್‌ ಮಾಹಿತಿಯೇ ಮುಖ್ಯವಾಗಿರುವುದರಿಂದ ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ನಿತ್ಯವೂ ಹತ್ತಾರು ಅಹವಾಲುಗಳು ಬರುತ್ತಿವೆ. ಇದರಲ್ಲಿ ಇ-ಕೆವೈಸಿ ಒಂದು ಭಾಗವಾದರೆ, ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಿದ್ದುಪಡಿಗೂ ಅವಕಾಶ ನೀಡಿಲ್ಲ. ವಿಳಾಸ ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆಧಾರ್‌- ಬ್ಯಾಂಕ್‌ ಖಾತೆ ಲಿಂಕ್‌ ಆಗಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮನೆಯ ಯಜಮಾನಿ ಹೆಸರು ಬದಲಿಸಬೇಕು, ಅವರು ಈಗ ಬೇರೆ ಮನೆಯಲ್ಲಿದ್ದಾರೆ ಎಂಬ ಹಲವು ಅಹವಾಲುಗಳೊಂದಿಗೆ ಇಲಾಖೆಗೆ ಬರುತ್ತಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next