Advertisement

Udupi Paryaya: ಸಂಗಮ ಕ್ಷೇತ್ರದಲ್ಲಿ ಮಧ್ವ ಪರಂಪರೆಯ ಉಗಮ

09:44 AM Jan 06, 2024 | Team Udayavani |

ಉಡುಪಿ ಕ್ಷೇತ್ರ ಪರಶುರಾಮ, ಶಿವ ಸಂಗಮ ಕ್ಷೇತ್ರವಲ್ಲದೆ ಭಗವಂತನ ಅವತಾರಗಳಲ್ಲಿ ತೀರಾ ಇತ್ತೀಚಿನ ಅವತಾರ ವೆನಿಸಿದ ಶ್ರೀಕೃಷ್ಣನ ರೂಪ ನೆಲೆ ನಿಂತ ಕ್ಷೇತ್ರವೂ ಹೌದು. ಇದೆಲ್ಲ ದೇವತಾಶಕ್ತಿಗಳಿಗೆ ಸಂಬಂಧಿಸಿದ್ದಾದರೆ ವೇದಾಂತ ಕ್ಷೇತ್ರ ಕ್ಕಾಗಿಯೂ ಇದು ಮಹತ್ವದ ಸ್ಥಾನ ಪಡೆದಿದೆ. ಅದುವರೆಗೆ ಲೋಕದಲ್ಲಿ ಪ್ರಚಲಿತದಲ್ಲಿದ್ದ ಎರಡು ವೇದಾಂತ ಕ್ರಮಗಳ ಜತೆ ಮೂರನೆಯದೊಂದು ಪ್ರಚಲಿತಕ್ಕೆ ಬಂದು ಇದೇ ಸ್ಥಳವನ್ನು ಕರ್ಮಭೂಮಿಯನ್ನಾಗಿ ಅರಸಿದ್ದೂ ಮಹತ್ತಿಕೆಗೆ ಇನ್ನೊಂದು ಸೇರ್ಪಡೆ.

Advertisement

ಅವತಾರತ್ರಯ

ಆಂಜನೇಯ, ಭೀಮಸೇನ, ಮಧ್ವಾಚಾರ್ಯರು ವಾಯು ದೇವರ ಅವತಾರ ಎಂಬ ನಂಬಿಕೆ ಇದೆ. ಅಂದರೆ ಈ ಮೂರೂ ಅವತಾರಗಳ ಮೂಲರೂಪ ವಾಯುದೇವತೆ. ರಾಮಾವತಾರ ದಲ್ಲಿ ಆಂಜನೇಯನಾಗಿ, ಕೃಷ್ಣಾವತಾರದಲ್ಲಿ ಭೀಮಸೇನನಾಗಿ ಸೇವೆ ಸಲ್ಲಿಸಿದ ವಾಯು ದೇವನಿಗೆ ವೇದಾಂತ ಜಿಜ್ಞಾಸೆಯಲ್ಲಿ ಮೂಲಪುರುಷರಂತಿರುವ ಭಗವಂತನದೇ ಇನ್ನೊಂದು ಅವತಾರ ವಾದ ವೇದವ್ಯಾಸರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಬೇಕಿತ್ತು. ಇಂತಹ ಸತ್ವಶಾಲಿ ಭಗವತ್ಕಾರ್ಯದ ಅವತರಣಿಕೆಗಾಗಿ ಆಯ್ಕೆ ಮಾಡಿಕೊಂಡ ಪ್ರದೇಶ ತುಳುನಾಡಿನ ಭೂಮಿ ಎನ್ನುವುದು ತುಳುನಾಡಿನ ಮಹತ್ತಿಕೆಯನ್ನು ಹೆಚ್ಚಿಸುತ್ತದೆ. ಮಧ್ವಾವತಾರ ನಡೆದದ್ದು 1238ರಲ್ಲಿ, ಅಂದರೆ 785 ವರ್ಷಗಳ ಹಿಂದೆ, ಉಡುಪಿಯಿಂದ 8 ಕಿ.ಮೀ. ದೂರದ ಪಡುಬೆಳ್ಳೆ ಗ್ರಾಮದ ಪಾಜಕದಲ್ಲಿ.

ಪುತ್ರೋತ್ಪತ್ತಿಗೆ ಶರಣು

ಎಲ್ಲ ಘಟನೆಗಳಲ್ಲಿ ಕಾರ್ಯಕಾರಣ ಸಂಬಂಧ ಇರುತ್ತದೆ. ಆದರೆ ಬಹುತೇಕ ಸಂದರ್ಭ ನಾವದನ್ನು ಗಮನಿಸುವುದಿಲ್ಲ. ಘಟನೋತ್ತರದಲ್ಲಿ ತಾಳೆ ಹಾಕಿದರೆ ಹೌದೆಂದು ಕಾಣುತ್ತದೆ. ಇಲ್ಲಿಯೂ ಹಾಗೇ ಕಂಡುಬರುತ್ತದೆ. ಪಾಜಕದಲ್ಲಿದ್ದ ನಡಿಲ್ಲಾಯ ಮನೆತನದ ಮಧ್ಯಗೇಹ ಭಟ್ಟರ ವೃತ್ತಿ ಪುರಾಣ ಪ್ರವಚನ. ಇವರು ಪಾಜಕದಿಂದ ಉಡುಪಿಗೆ ಬಂದು ಶ್ರೀಅನಂತೇಶ್ವರನ ಸನ್ನಿಧಾನದಲ್ಲಿ ಪುರಾಣಪ್ರವಚನ ಮಾಡುತ್ತಿದ್ದರು. ಪಾಜಕದ ಆ ಮನೆಯಲ್ಲಿಯೂ ಅನಂತ ಪದ್ಮನಾಭನ ಸನ್ನಿಧಿ ಇತ್ತು. ಉಡುಪಿಯ ಅನಂತೇಶ್ವರ ನನ್ನೂ ಅನಂತಾಸನ, ಅನಂತಪದ್ಮನಾಭ ಎಂದು ಕರೆಯುವುದೂ ಇದೆ. ಹುಟ್ಟಿದ ಇಬ್ಬರು ಗಂಡು ಮಕ್ಕಳು ಅಸುನೀಗಿದ್ದರು. ದೇವರ ಅಸ್ತಿತ್ವದ ಬಗ್ಗೆ ಸಂಶಯವಿಲ್ಲದಿದ್ದರೂ ವೇದಗಳ ನಿರೂಪಣೆಗೂ ದರ್ಶನಗಳ ಚಿಂತನಸರಣಿಗೂ ಹೊಂದಾಣಿಕೆಯಾಗಿ ಸುಲಲಿತ ಉಪಾಸನಕ್ರಮಕ್ಕೆ ಅವರ ಮನಸ್ಸು ಹಾತೊರೆಯುತ್ತಿತ್ತು ಎನ್ನುವುದು ಅವರ ಜೀವನ ಚರಿತ್ರೆಯಲ್ಲಿ ಕಂಡುಬರುತ್ತದೆ. ಪುತ್ರೋತ್ಪತ್ತಿಯೂ, ವೇದಾಂತ ಸಂಶಯಗಳ ಇತ್ಯರ್ಥಕ್ಕೂ ಅವರು ಶರಣಾದದ್ದು ಅನಂತೇಶ್ವರನನ್ನು. ಈಗಲೂ ಪರಶುರಾಮ ಸನ್ನಿಹಿತನಾದ ಈ ಲಿಂಗರೂಪಿ ಅನಂತೇಶ್ವರನಲ್ಲಿ ಪುತ್ರೋತ್ಸವ ಪ್ರಾಪ್ತಿಗೆ ಬೇಡುವುದು ಇದೆ.

Advertisement

ವಾಸುದೇವ ಪರಮಹಂಸನಾಗಿ

ತಂದೆ ನಡಿಲ್ಲಾಯರು ಮಗನಿಗೆ ಇಟ್ಟ ಹೆಸರು ವಾಸುದೇವ. ಇವರಿಗೆ ಸನ್ಯಾಸಾಶ್ರಮ ನೀಡಿದ ಶ್ರೀಅಚ್ಯುತಪ್ರಜ್ಞತೀರ್ಥರು ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಸನ್ಯಾಸ ಬೇರೆ, ವೇದಾಂತ ಸಾಮ್ರಾಜ್ಯ ಬೇರೆ. ಸನ್ಯಾಸಿಗಳಾದವರೆಲ್ಲ ಸಂಸ್ಥೆಯ ಮುಖ್ಯಸ್ಥರಾಗಬೇಕಿಲ್ಲ. ವೇದಾಂತ ಸಂಸ್ಥೆಯ ಉತ್ತರಾಧಿಕಾರಿಯಾಗಿ ನೇಮಿಸುವಾಗ ಗುರುಗಳು ಇಟ್ಟ ನಾಮಧೇಯ ಆನಂದತೀರ್ಥ. ಇದು 1249ರಲ್ಲಿ ಘಟಿಸಿದ ಘಟನೆ ಎಂದು ಕಾಲ ನಿರ್ಣಯವನ್ನು ಮಾಡಿದ್ದಾರೆ ವಿದ್ವಾಂಸ ದಿ| ಡಾ| ಬನ್ನಂಜೆ ಗೋವಿಂದಾಚಾರ್ಯರು. ಆಗ ವಾಸುದೇವನಿಗೆ 11-12ರ ವಯಸ್ಸು. ಮುಂದೆ ಇವರು ಮಧ್ವ ಎಂಬ ಸ್ವಯಂವ್ಯಕ್ತ ನಾಮದಿಂದ ಪ್ರಸಿದ್ಧರಾಗುತ್ತಾರೆ.

ಅಚ್ಯುತಪ್ರಜ್ಞರು ಯಾರು?

ಅಚ್ಯುತಪ್ರಜ್ಞರು ಆಗ ಅನಂತೇಶ್ವರ ದೇವ ಸ್ಥಾನದಲ್ಲಿ ವಾಸವಿದ್ದರು. ಮಧ್ವಾಚಾರ್ಯರನ್ನು ಶಿಷ್ಯರಾಗಿ ಸ್ವೀಕರಿಸಬೇಕಾದರೆ ಗುರುಗಳ ಮೂಲ ರೂಪ ಏನಿದ್ದಿರಬಹುದು ಎಂಬ ಕುತೂಹಲ ಮೂಡುವುದು ಸಹಜ. ನಾರಾಯಣ ಪಂಡಿತಾಚಾರ್ಯರು ಬರೆದ “ಮಧ್ವವಿಜಯ’ ಕೃತಿಯಲ್ಲಿ “ಪುರೈಷ ಕೃಷಾVರಸಿದ್ಧಶುದ್ಧಿದ್‌| ವರಾನ್ನಭುಕಾö ಕಿಲ ಪಾಂಡವಾಲಯೇ| ವಿಶೋಧಿತಾತ್ಮಾ ಮಧುಕೃತಿ ಪ್ರವೃತ್ತಿಮಾನ್‌| ಚಚಾ ಕಾಂಶ್ಚಿತ್‌ ಪರಿವತ್ಸರಾನ್‌ ಮುದಾ|’ ಎಂದು ತಿಳಿಸಲಾಗಿದೆ. ಅಚ್ಯುತಪ್ರಜ್ಞರು ಹಿಂದೆ ಪಾಂಡವರ ಮನೆಯಲ್ಲಿ ಭೋಜನ ಸ್ವೀಕರಿಸಿದವರು. ಹಲವು ವರ್ಷ ಮಧುಕರವೃತ್ತಿ (ಭಿಕ್ಷೆ) ಮಾಡಿದವರು. ಪಾಂಡವರು ಅನೇಕ ಯತಿಗಳಿಗೆ ಹಾಕಿದವರು. ಇವರಲ್ಲಿ ಒಬ್ಬರು ಅಚ್ಯುತ ಪ್ರಜ್ಞರು. ಈ ಕಾರಣದಿಂದಲೇ ಭೀಮನಾಗಿದ್ದ ವಾಯು ದೇವರು ಮಧ್ವರಾಗಿ ಜನಿಸಿದಾಗ ಅವರಿಗೇ ಗುರುವಾಗುವ ಭಾಗ್ಯ ಬಂತು ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

ಸನಕಾದಿಗಳ ಪರಂಪರೆ

ಇದು ಮೂಲರೂಪದ ವಿಶೇಷತೆಯಾದರೆ ಯತಿ ಪರಂಪರೆಯು ಸನಕಾದಿಗಳ ವರೆಗೆ ನಮ್ಮನ್ನು ಒಯ್ಯುತ್ತದೆ. ಸನಕಾದಿ ಋಷಿಗಳು ಚತುರ್ಮುಖಬ್ರಹ್ಮನ ಮಕ್ಕಳು. ಬ್ರಹ್ಮನೇ ಜಗತ್ತನ್ನು ಸೃಷ್ಟಿಸಿದಾತ. ಬ್ರಹ್ಮನನ್ನು ಸೃಷ್ಟಿಸಿದವ ಭಗವಂತ. ಇಲ್ಲಿ ಪರಮಾತ್ಮನೆಂದರೆ ಹಂಸನಾಮಕ ಪರಮಾತ್ಮ. ಇದು ಭಗವಂತನ ಹಂಸರೂಪ. ದೇವತೆಗಳಿಗೆ ನಾಲ್ಕೂ ಆಶ್ರಮಗಳಿರುವುದರಿಂದ ಇದು ಹಂಸರೂಪ (ಪರಮಹಂಸರೆಂದು ಕರೆಯುವುದು ಇದೇ ಕಾರಣಕ್ಕೆ). ಇದನ್ನು ಪುರಾತನವಾದ ಗುರುಪರಂಪರೆಯ ಶ್ಲೋಕದಲ್ಲಿ ಕಾಣಬಹುದು. ವಂಶಸ್ಯಾ ದೀನ್‌ ಸನಕಾದೀನುಪಾಸೇ| ದೂರ್ವಾಸನಂ ಪರತೀರ್ಥಾಖ್ಯಭಿಕ್ಷುಮ್‌| ಸತ್ಯಪ್ರಜ್ಞಂ ಪ್ರಾಜ್ಞತೀರ್ಥಂಚ ಪಶ್ಚಾತ್‌| ಪಶ್ಚಾಚ್ಛಿಷ್ಯಾನಚ್ಯುತಪ್ರಜ್ಞ ಮಧೌÌ|| ಎಂಬ ಗುರುಪರಂಪರೆಯ ಶ್ಲೋಕದಲ್ಲಿ ದೂರ್ವಾಸರ ಉಲ್ಲೇಖವೂ ಇದೆ. ದೂರ್ವಾಸಮುನಿಗಳು ಪಾಂಡವರು ವನವಾಸದಲ್ಲಿದ್ದಾಗ ಶಿಷ್ಯಸಮೂಹ ಸಹಿತವಾಗಿ ಭೋಜನಕ್ಕೆ ಬಂದ ಕಥೆ ಗೊತ್ತಿದೆ. ಅಚ್ಯುತಪ್ರಜ್ಞರು ಪಾಂಡವರಿಂದ ಭಿಕ್ಷೆಯನ್ನು ಸ್ವೀಕರಿಸಿದವರು ಎಂದಾಗ ದೂರ್ವಾಸಮುನಿಗಳ ಶಿಷ್ಯಸಮೂಹದಲ್ಲಿ ಅಚ್ಯುತಪ್ರಜ್ಞರು (ಜನ್ಮಾಂತರದಲ್ಲಿ) ಇದ್ದರು ಎಂಬುದನ್ನು ತಿಳಿಯಬಹುದು. ದೂರ್ವಾಸರ ಬಳಿಕ ಪರತೀರ್ಥರು, ಸತ್ಯಪ್ರಜ್ಞರು, ಪ್ರಾಜ್ಞತೀರ್ಥರ ಪರಂಪರೆಯಲ್ಲಿ ಬಂದವರು ಅಚ್ಯುತಪ್ರಜ್ಞರು. ಪ್ರಾಜ್ಞತೀರ್ಥರ ಬಳಿಕ ಪಶ್ಚಾತ್‌ ಪಶ್ಚಾತ್‌ ಎಂದಿರುವುದು ಬಹಳ ಮಂದಿ ಆಗಿ ಹೋಗಿದ್ದಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪರಮಾತ್ಮನಿಂದ ಹರಿದುಬಂದ ಈ ಪರಂಪರೆಯ ಪ್ರವಾಹ ಮಧ್ವರಿಂದ ಹೊಸ ಇತಿಹಾಸದೊಂದಿಗೆ ಮುಂದುವರಿದಿದೆ. ಸನಕಾದಿಗಳ ಪರಂಪರೆಯಿಂದಾಗಿಯೋ ಏನೋ ಶ್ರೀಕೃಷ್ಣಮಠದಲ್ಲಿ ಮಧ್ಯಾಹ್ನ ಪರ್ಯಾಯ ಶ್ರೀಗಳು ಮಹಾಪೂಜೆ ಮಾಡುವ ಮುನ್ನ ಗರ್ಭಗುಡಿಯ ಬಾಗಿಲು ಹಾಕಿ ಹೊರಗೆ ಬಂದು ನಿಲ್ಲುತ್ತಾರೆ. ಸನಕಾದಿ ಋಷಿಗಳು ಬಂದು ಆ ಹೊತ್ತಿನಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುತ್ತಾರೆಂಬ ನಂಬಿಕೆ ಇರುವುದರಿಂದ ಈ ಪದ್ಧತಿ ಬಂದಿದೆ.

ಉಪೇಂದ್ರತೀರ್ಥರ ಪರಂಪರೆ

ಮಧ್ವಾಚಾರ್ಯರು ಚಿಕ್ಕ ಪ್ರಾಯದಿಂದಲೇ ಪಾಜಕ, ಉಡುಪಿ ಮೊದಲಾದೆಡೆ ತೋರಿದ ಬಾಲಲೀಲೆಗಳ ಕೆಲವು ಕುರುಹುಗಳು ಇವೆ. ಮುಂದೆ ಇವರು ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಎಂಟು ಶಿಷ್ಯರನ್ನು ನೇಮಿಸಿದರು. ಆ ಪರಂಪರೆ ಈಗಲೂ ಮುಂದುವರಿದುಕೊಂಡು ಬರುತ್ತಿದೆ. ಇದಲ್ಲದೆಯೂ ಘಟ್ಟದ ಮೇಲೆ ಮಧ್ವ ಪರಂಪರೆ ಮುಂದುವರಿಯುತ್ತಿದೆ. ಪ್ರಸ್ತುತ ಶ್ರೀಕೃಷ್ಣಮಠದಲ್ಲಿ ನಡೆಯುವ ಪರ್ಯಾಯ ಪೂಜೆಯು ಮಧ್ವರ ಎಂಟು ಶಿಷ್ಯರಲ್ಲಿ ಒಬ್ಬರಾದ ಶ್ರೀಉಪೇಂದ್ರತೀರ್ಥರ ಪರಂಪರೆಗೆ ಸಂಬಂಧಿಸಿದ್ದು. ಆರಂಭದಲ್ಲಿ ಆದ್ಯ ಯತಿಗಳ ಹೆಸರಿನ ಪರಂಪರೆಯಲ್ಲಿ ಗುರುತಿಸಲಾಗುತ್ತಿತ್ತು. ಬಳಿಕ ಮಠಗಳ ಹೆಸರಿನ ಮೂಲಕ ಸಂವಹನ ಮಾಡುವ ಕ್ರಮ ರೂಢಿಗೆ ಬಂತು. ಉಪೇಂದ್ರತೀರ್ಥರ ಪರಂಪರೆಯನ್ನು ಪುತ್ತಿಗೆ ಮಠ ಎಂದು ಗುರುತಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next